ಮಂಗಳೂರು: ಸನಾತನ ನಾಟ್ಯಾಲಯ ವತಿಯಿಂದ ಆಯೋಜಿಸಿದ ಸ್ವರುಣ್ ಸ್ಮರಣಾಂಜಲಿ ಕಾರ್ಯಕ್ರಮ ದಿನಾಂಕ 15 ಜೂನ್ 2025ರಂದು ಮಂಗಳೂರಿನ ಪುರಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕಿಯಾಗಿ ಭಾಗವಹಿಸಿದ ವಾಗ್ಮಿ ಹಾರಿಕಾ ಮಂಜುನಾಥ್ ಮಾತನಾಡಿ “ಭಾರತದ ಜ್ಞಾನಪುಂಜ ಎಂದರೆ ಅದು ಕಾಶ್ಮೀರ. ಆದ್ದರಿಂದ ಅದು ಭಾರತ ಮಾತೆಯ ಸಿಂಧೂರವೇ ಹೊರತು ಕೇವಲ ಪ್ರವಾಸಿ ತಾಣ ಎಂದು ಸೀಮಿತ ಮಾಡುವುದು ಸರಿಯಲ್ಲ. ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆ ಆಳಿದ ಊರು ಕಾಶ್ಮೀರ. ಅಗಾಧ ಗ್ರಂಥಗಳು ರೂಪುಗೊಂಡ, ತಪಸ್ವಿಗಳು ಋಷಿಗಳು ಇದ್ದ ನಾಡು ಕಾಶ್ಮೀರ. ಜಗತ್ತಿನಲ್ಲಿ ಪ್ರಾಚೀನ ಎಂದು ಕರೆಸಿಕೊಂಡ ಗ್ರೀಕ್, ರೋಮನ್, ಲೆಬನಾನ್ ಸೇರಿದಂತೆ ಅನೇಕ ಜನಾಂಗಗಳು ಅಳಿಸಿ ಹೋದವು. ಆದರೆ ಸನಾತನ ಧರ್ಮದ ಮೇಲೆ ಸಾವಿರಕ್ಕೂ ಹೆಚ್ಚು ವರ್ಷ ದಾಳಿ ನಡೆಯಿತು. ಆದರೆ ಸನಾತನ ಹಿಂದೂ ಧರ್ಮ ಜಾಗೃತವಾಗಿದೆ. ತಾಯಿ ಭಾರತಿಯ ಸಿಂಧೂರ ಕಾಪಾಡಲು ಆಕೆಯ ಮಕ್ಕಳು ಸದಾ ಜಾಗೃತರಾಗಿದ್ದರು. ಇಂದಿಗೂ ಜಾಗೃತರಾಗಿದ್ದಾರೆ” ಎಂದು ವಿವರಿಸಿದರು.
ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ “ಸಣ್ಣ ವಯಸ್ಸಿನಲ್ಲಿ ಜನರ ಮನಸ್ಸಿನಲ್ಲಿ ಛಾಪೊತ್ತಿದ ಸ್ವರುಣ್ ಅವರ ಸ್ನೇಹವನ್ನು ಮರೆಯಲು ಸಾಧ್ಯವಿಲ್ಲ” ಎಂದು ಹೇಳಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ನುಡಿನಮನ ಸಲ್ಲಿಸಿದರು.
ಸನಾತನ ನಾಟ್ಯಾಲಯದ ನಿರ್ದೇಶಕರಾದ ಚಂದ್ರಶೇಖರ ಶೆಟ್ಟಿ ಸ್ವಾಗತಿಸಿದರು. ನೃತ್ಯಗುರು ವಿದುಷಿ ಶಾರದಾ ಮಣಿ ಶೇಖರ್, ವಿದುಷಿ ಶ್ರೀಲತಾ ನಾಗರಾಜ್ ಸ್ವರುಣ್ ಅವರ ತಂದೆ ಸುರೇಶ್ ರಾಜ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ವಿದುಷಿ ಶುಭಾಮಣಿ ಮತ್ರು ವಿಜಯಕುಮಾರ್ ಎಸ್. ಚೆನ್ನೈ ಇವರಿಂದ ನೃತ್ಯ ಪ್ರದರ್ಶನ ನಡೆಯಿತು.