ಹೊಸಪೇಟೆ : ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದ ಷಡ್ಜ ವೇದಿಕೆಯಲ್ಲಿ 15 ದಿನಗಳ ಕಾಲ ನಡೆದ ನಾಟಕ ರಚನೆ ನಟನೆ ಹಾಗೂ ನಿರ್ದೇಶನ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 15 ಫೆಬ್ರವರಿ 2025 ರಂದು ನಡೆಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಂಗಭೂಮಿ ಹಾಗೂ ಚಲನಚಿತ್ರ ನಟ, ನಿರ್ದೇಶಕ, ನಿರ್ಮಾಪಕ ಶ್ರೀ ಚಿಂದೋಡಿ ಬಂಗಾರೇಶ್ ಮಾತನಾಡಿ “ನಾಟಕ ಸಮಾಜವನ್ನು ತಿದ್ದುವ, ಎಚ್ಚರಿಸುವ ಹಾಗೂ ಎಲ್ಲಾ ಕ್ಷೇತ್ರಗಳಲ್ಲಿ ಜಾಗೃತಿ ಮೂಡಿಸುವ ಅದ್ಭುತ ಶಕ್ತಿಯಾಗಿದೆ. ನಾಟಕ ಮತ್ತು ಸಂಗೀತಕ್ಕೆ ಮೂಲ ನೆಲೆಗಟ್ಟು ಶ್ರದ್ದೆ. ಪಾತ್ರ ಪರಕಾಯ ಪ್ರವೇಶ ಮಾಡಬೇಕು, ಗ್ರಹಿಸುವ ಶಕ್ತಿ ಬೇಕು. ಸಂಗೀತದಿಂದಲೇ ನಾಟಕ, ಸಂಗೀತವಿಲ್ಲದೆ ನಾಟಕವಿಲ್ಲ. ನಮ್ಮನ್ನು ಸ್ವರ ಚೇತನಗೊಳಿಸಿದರೆ ಅಕ್ಷರ ಜಾಗೃತಗೊಳಿಸುತ್ತದೆ. ನಾಟಕದಲ್ಲಿ ಸಂಭಾಷಣೆಗೆ ಶುದ್ಧ ಕನ್ನಡಬೇಕು. ನಾಟಕ, ಸಂಗೀತ, ಸಾಹಿತ್ಯವನ್ನು ಅರಿತು ನಟಿಸುವವನೇ ನಿಜವಾದ ನಟನಾಗುತ್ತಾನೆ. ಸಾಹಿತ್ಯದ ಸೊಗಡು ಬಿಡಬೇಡಿ” ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.
ಶಿಬಿರಾರ್ಥಿಗಳಾದ ಮಂಜುನಾಥ ಕರಲಿಂಗಣ್ಣ, ಹೆಚ್. ಮಲ್ಲಿಕಾರ್ಜುನ, ಮುಮ್ತಾಜ್ ರಾಟಿ, ಹರೀಶ್ ಭಂಡಾರಿ, ಬೋರಯ್ಯ ಡಿ.ಕೆ. ತಮ್ಮ ಅನಿಸಿಕೆ ಮತ್ತು ಅನುಭವಗಳನ್ನು ವ್ಯಕ್ತಪಡಿಸಿ, ನಾಟಕ ನಮ್ಮ ಅಹಂಕಾರವನ್ನು ಅಳಿಸಿ ಮನಸ್ಸಿನ ಅಲಂಕಾರವನ್ನು ಹೆಚ್ಚಿಸಿದೆ. 10 ದಿನಗಳಲ್ಲಿ ನಾಟಕ ಕಲಿತು ಪ್ರದರ್ಶನ ನೀಡುತ್ತೇವೆಯೇ ಎಂಬ ಅನುಮಾನವಿತ್ತು. ಆದರೆ ಇಂದು ನಾಟಕ ಪ್ರದರ್ಶನ ನೀಡುತ್ತಿದ್ದೇವೆ. ನಾಟಕದಲ್ಲಿ ಮಾತ್ರವಲ್ಲ ನಿಜ ಜೀವನದಲ್ಲಿಯೂ ನಾವು ಎಚ್ಚರವಾಗಿರಬೇಕು. ದೃಢವಾಗಿರಬೇಕು, ಚಂದ್ರಶೇಖರ ಕಂಬಾರರ ಆನೇಕ ಕನಸುಗಳಲ್ಲಿ ನಾಟಕ ನಾಟಕ ಶಿಬಿರವೂ ಒಂದು ಎಂದು ಹೆಮ್ಮೆಯಿಂದ ಹೇಳಿದ್ದರು.
ಧಾರವಾಡದ ರಂಗಕರ್ಮಿ, ರಂಗರೂಪ ಮತ್ತು ನಿರ್ದೇಶನ ನೀಡಿದ ಶ್ರೀಕಾಂತ ನವಿಲುಗರಿ ಮಾತನಾಡಿ “ವಿಶ್ವವಿದ್ಯಾಲಯದಲ್ಲಿ ಒಳ್ಳೆಯ ಮುಗ್ಧ ಮನಸ್ಸುಗಳಿವೆ. ನಿಮ್ಮೆಲ್ಲರಿಂದ ಶಿಬಿರ ಸಾಧ್ಯವಾಗಿದೆ. ಪಾತ್ರ, ಭಾವ, ಭಾವದ ಏರಿಳಿತ, ಪರಕಾಯ ಪ್ರವೇಶ ಇವೆಲ್ಲವನ್ನು ಇನ್ನಷ್ಟು ನೀವು ಕಲಿಯಿರಿ. ಇಲ್ಲಿನ ಚರ್ಚೆಗಳು ನನ್ನನ್ನು ಬೆಳೆಸಿವೆ. ಜೀವಗಳ ಕಟ್ಟುವಿಕೆ, ಮನಸ್ಸುಗಳ ಕಟ್ಟುವಿಕೆ ಮಾಡಿದ್ದೇನೆ ಎನ್ನುವ ಸಾರ್ಥಕತೆ ನನ್ನಲ್ಲಿದೆ” ಎಂದರು.
ಹಿರಿಯ ರಂಗಕರ್ಮಿ ಮಾ. ವಿ. ಸೋಮಣ್ಣ ಮಾತನಾಡಿ “ಕನ್ನಡ ವಿಶ್ವವಿದ್ಯಾಲಯದ ಧೂಳಿನಲ್ಲಿ ಸ್ನಾನಮಾಡಿದವರಿಗೆ ಬೌದ್ಧಿಕ ಜ್ಞಾನದ ಬಡತನ ಹೋಗುತ್ತದೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಕುಲಸಚಿವ ಡಾ. ವಿಜಯ್ ಪೂಣಚ್ಚ ಮಾತನಾಡಿ ತಂಬಂಡ ಸಂಗೀತ, ನೃತ್ಯ, ನಾಟಕ ಇದೊಂದು ಭಾವ ಪ್ರಪಂಚದಲ್ಲಿ ನಮ್ಮನ್ನು ನಾವೇ ಮರೆಯುವ ಸಂದರ್ಭಗಳಿರುತ್ತವೆ. ವಿಶ್ವವಿದ್ಯಾಲಯವು ತನ್ನ ಇತರೆ ಕೇಂದ್ರಗಳಲ್ಲಿ ನೃತ್ಯ ತರಗತಿಗಳನ್ನು ಆರಂಭಿಸುವ ಯೋಚನೆ ಮಾಡಿದೆ. ಜೊತೆಗೆ ನಾಟಕದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ತರಗತಿಗಳನ್ನು ನಡೆಸುವ ಸಿದ್ದತೆಯಲ್ಲಿದೆ” ಎಂದು ಶಿಬಿರಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಗೀತ ವಿಭಾಗದ ಅಧ್ಯಾಪಕರಾದ ಡಾ. ವೆಂಕಟಗಿರಿ ದಳವಾಯಿ, ಡಾ. ಚೆನ್ನವೀರಪ್ಪ, ಬಾಗಲಕೋಟೆಯ ನಾಟಕ ರಚನಾಕಾರರಾದ ಶ್ರೀಹರಿ ಧೂಪದ, ಮಾಹಿತಿ ಕೇಂದ್ರದ ಡಾ. ಡಿ. ಮೀನಾಕ್ಷಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಎರಡು ವಿಭಾಗಗಳ ಮುಖ್ಯಸ್ಥರಾದ ಡಾ. ವೀರೇಶ ಬಡಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿ, ವಿದ್ಯಾರ್ಥಿ ಸತೀಶ್ ಗೌಡ ನಿರೂಪಿಸಿ, ಸುಮಾ ಕಮ್ಮಾರ ವಂದಿಸಿದರು.