ಮಂಗಳೂರು : ಉಭಯ ತಿಟ್ಟುಗಳ ಖ್ಯಾತ ಹಾಸ್ಯಗಾರರಾದ ಕಿನ್ನಿಗೋಳಿ ಮುಖ್ಯಪ್ರಾಣ (84) ದಿನಾಂಕ 21 ಜೂನ್ 2025ರಂದು ನಿಧನರಾದರು. ಕಟೀಲು, ಮಂದಾರ್ತಿ, ಸಾಲಿಗ್ರಾಮ, ಪೆರ್ಡೂರು, ಕುಮಟಾ, ಇರಾ, ಕದ್ರಿ, ಸುಬ್ರಹ್ಮಣ್ಯ, ಮಂತ್ರಾಲಯ ಹೀಗೆ ವಿವಿಧ ಮೇಳಗಳಲ್ಲಿ 58 ವರ್ಷಗಳ ಕಾಲ ನಿರಂತರವಾಗಿ ಕಲಾಸೇವೆಗೈದ ಅಪೂರ್ವ, ಪ್ರತಿಭಾವಂತ ಹಾಸ್ಯ ಕಲಾವಿದರಾಗಿದ್ದರು.
ರುಕ್ಮಯ್ಯ ಶೆಟ್ಟಿಗಾರ್ ಮತ್ತು ಸೇಸಿ ಶೆಟ್ಟಿಗಾರ್ ಇವರ ಪುತ್ರರಾದ ಮುಖ್ಯಪ್ರಾಣ 1941ರಲ್ಲಿ ಜನಿಸಿದ್ದರು. ಶೀಮಂತೂರಿನಲ್ಲಿ ವಾಸವಾಗಿದ್ದ ಇವರು ಕಿನ್ನಿಗೋಳಿಯ ಗೋಳಜೋರದ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾ ಸಂಘದಲ್ಲಿ ಹವ್ಯಾಸಿ ವೇಷಧಾರಿಯಾಗಿ ಸೇವೆ ಆರಂಭಿಸಿದ್ದರು. ಶೀಮಂತೂರು ನಾರಾಯಣ ಶೆಟ್ಟಿ ಇವರ ಗುರುಗಳು. ತೆಂಕು ತಿಟ್ಟಿನ ಹೆಸರಾಂತ ಹಾಸ್ಯಗಾರ ಮಿಜಾರು ಅಣ್ಣಪ್ಪ ಇವರ ಮಾರ್ಗದರ್ಶನದಲ್ಲಿ ಪಾತ್ರಾಭಿನಯ ಪಡೆದುಕೊಂಡಿದ್ದರು. ‘ಚೆಲುವೆ ಚಿತ್ರಾವತಿ’ಯ ಅಡುಗೂಲಜ್ಜಿ, ‘ಶೂದ್ರ ತಪಸ್ವಿನಿ’ಯ ರಂಗಾಚಾರಿ, ‘ಕಾಂಚನಶ್ರೀ’ಯ ಪ್ರೇತ, ‘ಸ್ವಪ್ನ ಸಾಮ್ರಾಜ್ಯ’ದ ಶೂರಸೇನ, ‘ಕಲಿ ಕ್ರೋಧನ’ದ ಮಡಿವಾಳ ಮೊದಲಾದ ವೇಷಗಳು ಇವರಿಗೆ ಖ್ಯಾತಿ ತಂದುಕೊಟ್ಟ ಪಾತ್ರಗಳು. ರಾಜ್ಯೋತ್ಸವ ಸಹಿತ ನೂರಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದ ಇವರಿಗೆ ಯಕ್ಷಗಾನ ಕಲಾರಂಗವೂ ಪ್ರಶಸ್ತಿ ನೀಡಿ ಗೌರವಿಸಿತ್ತು. ಕಳೆದ 25 ವರ್ಷಗಳಿಂದಲೂ ಮೇ 31ರಂದು ನಡೆಯುತ್ತಿದ್ದ ಯಕ್ಷನಿಧಿ ಸಮಾವೇಶದಲ್ಲಿ ಸಂತಸದಿಂದ ಪಾಲ್ಗೊಳ್ಳುತ್ತಿದ್ದ ಇವರು, ಈ ಬಾರಿ ಅನಾರೋಗ್ಯದ ಹಿನ್ನೆಲೆಯಲ್ಲಿ ಭಾಗವಹಿಸಿರಲಿಲ್ಲ. ಪತ್ನಿ, ಪುತ್ರ ಹಾಗೂ ಅಪಾರ ಸಂಖ್ಯೆಯ ಕಲಾಭಿಮಾನಿಗಳನ್ನು ಅಗಲಿದ್ದಾರೆ.