ಮಂಗಳೂರು : ತೆಂಕುತಿಟ್ಟಿನ ಯಕ್ಷಗಾನ ವೇಷಧಾರಿ ಮುಂಡಾಜೆ ಸದಾಶಿವ ಶೆಟ್ಟಿ (67 ವರ್ಷ) ದಿನಾಂಕ 07 ಜೂನ್ 2025ರಂದು ಹೃದಯಾಘಾತದಿಂದ ನಿಧನರಾದರು. ಧರ್ಮಸ್ಥಳ, ಕರ್ನಾಟಕ, ಸಸಿಹಿತ್ಲು ಮೇಳಗಳಲ್ಲಿ ತುಳು – ಕನ್ನಡ ಪ್ರಸಂಗಗಳಲ್ಲಿ ಎಲ್ಲಾ ಸ್ವರೂಪದ ಪಾತ್ರಗಳನ್ನು ನಿರ್ವಹಿಸಿದ್ದರು. ‘ವಿದ್ಯುನ್ಮತಿ ಕಲ್ಯಾಣ’ ಪ್ರಸಂಗ ಪುಸ್ತಕದಲ್ಲಿ ಮುಂಡಾಜೆಯವರ ಸ್ತ್ರೀ ವೇಷದ ಚಿತ್ರ ಮುಖಪುಟದಲ್ಲಿದ್ದು ಅವರ ವೇಷದ ಸರಣಿಯ ದಾಖಲಾತಿ ಒದಗಿಸುತ್ತದೆ.
ಸದಾಶಿವ ಶೆಟ್ಟಿ ಕಟೀಲು ಮೇಳದಲ್ಲಿ ಕಳೆದ 23 ವರ್ಷಗಳಿಂದ ವೇಷಧಾರಿಯಾಗಿ ಹಾಗೂ 5ನೇ ಮೇಳದ ಪ್ರಬಂಧಕರಾಗಿ ಸೇವೆ ಸಲ್ಲಿಸಿದ್ದು, ಯಕ್ಷಗಾನ ಕ್ಷೇತ್ರದಲ್ಲಿ ಸುಮಾರು 56 ವರ್ಷಗಳ ಸುದೀರ್ಘ ಅನುಭವ ಹೊಂದಿದ್ದರು. ಕಟೀಲಿನ 5ನೇ ಮೇಳದಲ್ಲಿದ್ದ ಅವರು ಪ್ರಬಂಧಕರಾಗಿ, ಎಲ್ಲ ಕಲಾವಿದರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು, ತಿರುಗಾಟ ಆರಂಭವಾದರೆ ಮೇಳದ ಆರಂಭದಿಂದ ಕೊನೆಯವರೆಗೆ ಮನೆಗೂ ಬಾರದೆ ಸಮರ್ಪಣಾಭಾವದಿಂದ ಸದಾಶಿವ ಶೆಟ್ಟಿ ಅವರು ಮೇಳವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಿದ್ದರು. ಪುಂಡು, ರಾಜವೇಷ, ನಾಟಕೀಯ ವೇಷಗಳಲ್ಲಿ ನುರಿತ ಕಲಾವಿದರಾಗಿದ್ದ ಮುಂಡಾಜೆ ಅವರಿಗೆ ಕಳೆದ ವರ್ಷವಷ್ಟೇ ಕದ್ರಿ ಕಂಬಳ ‘ಬಾಲಕೃಷ್ಣ ಶೆಟ್ಟಿ ಪ್ರಶಸ್ತಿ’ ನೀಡಿ ಗೌರವಿಸಲಾಗಿತ್ತು.
ಸದಾಶಿವ ಶೆಟ್ಟಿ ಅವರು ತಮ್ಮ 11 ವರ್ಷದಲ್ಲೇ ಶ್ರೀ ಧರ್ಮಸ್ಥಳ ಯಕ್ಷಗಾನ ಕೇಂದ್ರದ ಪ್ರಥಮ ತಂಡದ ಕಲಾವಿದನಾಗಿ ಯಕ್ಷ ನಾಟ್ಯ ಕಲಿತು, ಧರ್ಮಸ್ಥಳ ಮೇಳದಲ್ಲಿ ಹಂತ ಹಂತವಾಗಿ ಬೆಳೆದು ಪುಂಡು, ಸ್ತ್ರೀ, ರಾಜವೇಷ, ಎದುರು ವೇಷಗಳಲ್ಲಿ ಪ್ರಬುದ್ಧತೆ ಸಾಧಿಸಿ, ಕದ್ರಿ, ಕುಂಬ್ಳೆ, ಮಧೂರು, ಸಸಿಹಿತ್ಲು, ಬಪ್ಪನಾಡು ಮೇಳಗಳಲ್ಲಿ ತುಳು ಕನ್ನಡ ಪ್ರಸಂಗಗಳಲ್ಲಿ ವೈವಿಧ್ಯ ಪಾತ್ರಗಳಲ್ಲಿ ಮೆರೆದಿದ್ದರು. ಮಾನಿಷಾದ ಪ್ರಸಂಗದಲ್ಲಿ ಸದಾಶಿವ ಶೆಟ್ಟಿಯವರ ವಾಲ್ಮೀಕಿ ಪಾತ್ರ, ಸುಧನ್ವಾರ್ಜುನ ಪ್ರಸಂಗದಲ್ಲಿ ಅರ್ಜುನ ಪಾತ್ರ, ಮಧು, ಕೈಟಭ, ಕಂಸ ವಧೆಯಲ್ಲಿ ಕಂಸನ ಪಾತ್ರ, ಜಾಂಬವತಿ ಕಲ್ಯಾಣದಲ್ಲಿ ಜಾಂಬವ ಪಾತ್ರ ಹೀಗೆ ಹಲವು ಪಾತ್ರಗಳ ಮೂಲಕ ಜನಾನುರಾಗಿದ್ದರು.
ಮುಂಡಾಜೆ ಸದಾಶಿವ ಶೆಟ್ಟಿ ಹಾಗೂ ಮುಂಡಾಜೆ ಬಾಲಕೃಷ್ಣ ಶೆಟ್ಟಿ ಸಹೋದರರಾಗಿದ್ದು, ಇಬ್ಬರೂ ಯಕ್ಷಗಾನ ಕ್ಷೇತ್ರದಲ್ಲಿ ಅಮೋಘ ವಾಕ್ ಚಾತುರ್ಯ ಹಾಗೂ ನಟನೆಯ ಮೂಲಕ ಗುರುತಿಸಿಕೊಂಡಿದ್ದರು. ಈ ವರ್ಷದ ಕಟೀಲಿನ ತಿರುಗಾಟದ ಕೊನೆಯ ಯಕ್ಷಗಾನ ಸೇವೆಯಲ್ಲಿ ಸದಾಶಿವ ಶೆಟ್ಟಿ ಅವರೇ ಮಂಗಳ ಹಾಡಿ ಬಂದಿದ್ದರು. ಅದೇ ಅವರ ಯಕ್ಷಗಾನ ಪಯಣದ ಕೊನೆಯ ವೇದಿಕೆಯಾಗಿತ್ತು.