ಮಂಗಳೂರು : ಬ್ರಹ್ಮಶ್ರೀ ನಾರಾಯಣ ಗುರು ಸಮೂಹ ಶಿಕ್ಷಣ ಸಂಸ್ಥೆಗಳು ಕಾಟಿಪಳ್ಳ ಹಾಗೂ ‘ನಿನಾದ’ ತುಳು ಸಂಸ್ಕೃತಿ ಅಧ್ಯಯನ ಕೇಂದ್ರ, ಪಾವಂಜೆ ಇವರ ಸಂಯೋಜನೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನೆಲಸಂಸ್ಕೃತಿ ಹಾಗೂ ಜಲಸಂಸ್ಕೃತಿ ಪರಿಚಯಿಸುವ ‘ಯುವ ನಿನಾದ’ – ನಿನಾದ ನೆನಪು ಕಾರ್ಯಕ್ರಮವು ದಿನಾಂಕ 6-4-2024ರ ಶನಿವಾರ ಬೆಳಿಗ್ಗೆ 9.30ರಿಂದ ಪಾವಂಜೆಯ ನಿನಾದ ರಂಗಮಂದಿರದಲ್ಲಿ ನಡೆಯಲಿದೆ.
ಕಾಟಿಪಳ್ಳದ ಬ್ರಹ್ಮಶ್ರೀ ನಾರಾಯಣಗುರು ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಪಿ. ದಯಾಕರ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಶ್ರೀಮತಿ ಶಕುಂತಲಾ ರಮಾನಂದ ಭಟ್ ಇಡ್ಯಾ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಅನುರಾಧಾ ರಾಜೀವ್ ಸುರತ್ಕಲ್ ಇವರ ‘ಭಾವ ಘಮಲು’ ಮತ್ತು ‘ಅಂತರಂಗ ಸಂವಾದ’ ಎರಡು ಕೃತಿಗಳ ಲೋಕಾರ್ಪಣೆಗೊಳ್ಳಲಿದ್ದು, ಶ್ರೀ ಕಡಂಬೋಡಿ ಮಹಾಬಲ ಪೂಜಾರಿ, ಶ್ರೀಮತಿ ಕುಸುಮ ಮಹಾಬಲ ಪೂಜಾರಿ, ಅಡ್ವಕೇಟ್ ಮತ್ತು ನೋಟರಿಯಾದ ಲಯನ್ ಮಧುಕರ ಅಮೀನ್ ಕೃತಿ ಬಿಡುಗಡೆ ಗೊಳಿಸಲಿದ್ದಾರೆ. ಉಡುಪಿ ಸಮೂಹ ಶಿಕ್ಷಣ ಸಂಸ್ಥೆಗಳು ಮಣಿಪಾಲ ಇದರ ಸಹ ಪ್ರಾಧ್ಯಾಪಕರಾದ ಶ್ರೀಮತಿ ಅರ್ಪಿತಾ ಶೆಟ್ಟಿ ಕಟಪಾಡಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಒರಿಯಂಟಲ್ ಇನ್ಸೂರೆನ್ಸ್ ಕಂಪೆನಿ (ಲಿ.) ಸುರತ್ಕಲ್ ಇದರ ವಲಯ ಪ್ರಬಂಧಕರಾದ ಲಯನ್ ಯಾದವ ದೇವಾಡಿಗ ಹಾಗೂ ಪಿ.ಡಬ್ಲ್ಯು.ಡಿ ಇದರ ಕಾಂಟ್ರಾಕ್ಟರ್ ಆದ ಶ್ರೀ ಅಂಬಿಕಾ ಪ್ರಸಾದ್ ಶೆಟ್ಟಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಖ್ಯಾತ ವಿಮರ್ಶಕರಾದ ಗಣೇಶ್ ಪ್ರಸಾದ್ ಪಾಂಡೇಲು, ಎಂ.ಆರ್.ಪಿ.ಎಲ್. ಇದರ ವಿಶ್ರಾಂತ ಪ್ರಬಂಧಕರಾದ ಶ್ರೀಮತಿ ವೀಣಾ ಶೆಟ್ಟಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸುರತ್ಕಲ್ ಇದರ ಅಧ್ಯಕ್ಷರಾದ ಶ್ರೀಮತಿ ಗುಣವತಿ ರಮೇಶ್ ಉಪಸ್ಥಿತರಿರುವರು.
