ಹಾಸನ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲೂಕು ಘಟಕ ಹಾಸನ ವತಿಯಿಂದ ಹಾಸನದ ರಿಂಗ್ ರಸ್ತೆಯಲ್ಲಿರುವ ಉಡುಪಿ ಹೋಟೆಲ್ ಮೊದಲ ಮಹಡಿ ಸಭಾಂಗಣದಲ್ಲಿ ದಿನಾಂಕ 13 ಜುಲೈ 2026ರಂದು ಕವಯಿತ್ರಿ ಹಾಗೂ ಯೋಗ ಶಿಕ್ಷಕಿ ಗಿರಿಜಾ ನಿರ್ವಾಣಿ ಇವರ ಪ್ರಾಯೋಜಕತ್ವದಲ್ಲಿ 42ನೇ ಸಾಹಿತ್ಯ ಪಯಣ ಹೆಜ್ಜೆ ಕಾರ್ಯಕ್ರಮದಲ್ಲಿ ಸಮುದ್ರವಳ್ಳಿ ವಾಸುರವರ ‘ಒಳಗಣ್ಣು ‘ಕೃತಿ ವಿಶ್ಲೇಷಣೆ ಮತ್ತು ಜಿಲ್ಲಾಮಟ್ಟದ ಕವಿಗೋಷ್ಠಿ’ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ “ಸಮುದ್ರವಳ್ಳಿ ವಾಸುರವರ ‘ಒಳಗಣ್ಣು’ ಕೃತಿ ಹಾಸನ ಜಿಲ್ಲೆಯ ಹಲವು ಸಾಹಿತಿಗಳ ಕೃತಿಗಳ ಮೇಲೆ ಬೆಳಕು ಚೆಲ್ಲುವುದರ ಜೊತೆಗೆ ಅಧ್ಯಯನ ಮಾಡಲು ಪ್ರೇರಣೆ ನೀಡುತ್ತದೆ. ವಾಸು ಒಬ್ಬ ಸರಳ ಮತ್ತು ಸ್ನೇಹ ಜೀವಿ. ನಿರಂತರ ಅಧ್ಯಯನಶೀಲ ಕವಿ. ಉತ್ತಮ ಓದುಗ, ಸಮರ್ಥ ಸಂಘಟಕ ಮಾತ್ರವಲ್ಲ ನಿಷ್ಠಾವಂತ ಸಾಹಿತ್ಯ ಸೇವಕ. ಕಳೆದ ಎರಡು ದಶಕಗಳಿಂದಲೂ ನಮ್ಮೊಟ್ಟಿಗೆ ಸಾಹಿತ್ಯ ಸಂಘಟನೆಯಲ್ಲಿ ತೊಡಗಿಸಿಕೊಂಡು ಹನ್ನೊಂದು ವಿವಿಧ ಪ್ರಕಾರದ ಅಮೂಲ್ಯ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯನ್ನು ರಾಜ್ಯಮಟ್ಟದಲ್ಲಿ ವಿಸ್ತರಿಸುವ ಹಿನ್ನೆಲೆಯಲ್ಲಿ ವಾಸುರವರ ಕೊಡುಗೆ ಅಪಾರವಾಗಿದೆ. ನಾವು ಸಹಜವಾಗಿ ನೂರಾರು ಕೃತಿಗಳನ್ನು ಕಣ್ಣಾಡಿಸುತ್ತೇವೆ, ಓದುತ್ತೇವೆ ಆದರೆ ದಾಖಲೀಕರಣ ಮಾಡುವುದಿಲ್ಲ. ವಿಮರ್ಶಾತ್ಮಕವಾಗಿ ಅಲ್ಲದಿದ್ದರೂ ಅಭಿಪ್ರಾಯವನ್ನಾದರೂ ದಾಖಲಿಸಿದರೆ ಒಂದೆಡೆ ಆ ಕೃತಿಗಳನ್ನು ಹಿಡಿದಿಡುವಲ್ಲಿ ಸಹಾಯವಾಗುತ್ತದೆ. ಇಂತಹ ಕೆಲಸವನ್ನು ಹತ್ತಾರು ವರ್ಷಗಳಿಂದಲೂ ವಾಸುರವರು ತಾವು ಓದಿದಂತಹ ಕೃತಿಗಳ ಕುರಿತು ಚಿಕ್ಕಪುಟ್ಟದಾಗಿ ದಾಖಲಿಕರಣ ಮಾಡಿದ ಸತ್ಫಲವೇ ನಮ್ಮೆಲ್ಲರ ಮುಂದಿರುವ ‘ಒಳಗಣ್ಣು’ ಕೃತಿ” ಎಂದರು.

ಕವಯಿತ್ರಿ ರೇಖಾ ಪ್ರಕಾಶ್ ‘ಒಳಗಣ್ಣು’ ಕೃತಿ ವಿಶ್ಲೇಷಣೆ ಮಾಡುತ್ತಾ.. ‘ಒಳಗಣ್ಣು’ ಒಟ್ಟು 14 ಅಧ್ಯಾಯಗಳನ್ನು ಗರ್ಭೀಕರಿಸಿಕೊಂಡಿದ್ದು, ಕೊಟ್ರೇಶ್ ಎಸ್. ಉಪ್ಪಾರ್ ಅವರ ‘ಪರಮಾಣು ಸಂಶೋಧನೆ ಮತ್ತು ವಿಜ್ಞಾನಿಗಳು’, ‘ಅವಳ ಮುಖಗಳು’, ‘ಶಿಕ್ಷಕ, ಮಗು ಮತ್ತು ಶಿಕ್ಷಣ’; ನವಾಬ್ ಬೇಲೂರುರವರ ‘ಮನದಾಳದ ಮಾತು’; ಜ.ಹೊ.ನಾರಾಯಣ ಸ್ವಾಮಿಯವರ ‘ಮನುಸ್ಮೃತಿ ಮತ್ತು ದಲಿತರು’; ಎನ್. ಶೈಲಜಾ ಹಾಸನರವರ ‘ಇಳಾ’; ಹೊ.ರಾ. ಪರಮೇಶ್ರವರ ‘ನಲಿಯುವ ನಕ್ಷತ್ರಗಳು’; ಜಯಂತಿ ಚಂದ್ರಶೇಖರ್ ಅವರ ‘ಮಮತೆಯ ಹಣತೆ’; ಪ್ರಭಾವತಿ ಎಸ್. ದೇಸಾಯಿಯವರ ‘ಮಧುಸಾರ’; ಗೊರೂರು ಅನಂತರಾಜುರವರ ‘ಚಾಮಯ್ಯ ಮೇಷ್ಟ್ರು; ಎಂ.ಜಿ. ಪರಮೇಶ್ ಮಡಬಲು ಅವರ ‘ಸಾಧಕರ ಹಾದಿಯಲ್ಲಿ’; ದೇಸು ಆಲೂರು ಅವರ ‘ಪಮ್ಮಿ’; ಸಿ. ವಾಣಿ ರಾಘವೇಂದ್ರರವರ ‘ಭರವಸೆಯ ಬದುಕು’ ಸೇರಿದಂತೆ ಮಹತ್ವದ ಕೃತಿಗಳ ಸ್ಥೂಲ ಪರಿಚಯವಿದೆ. ಮಾಣಿಕ್ಯ ಪ್ರಕಾಶನ ಹೊರತಂದಿರುವ ‘ಒಳಗಣ್ಣು’ ಕೃತಿ 48 ಪುಟಗಳ ಪುಟ್ಟ ಕೃತಿಯಾದರೂ ಆಳವಾದ ಜ್ಞಾನಾಭ್ಯಾಸಕ್ಕೆ ಆಹ್ವಾನ ನೀಡುತ್ತದೆ. ಸಮುದ್ರವಳ್ಳಿ ವಾಸುರವರ ಹದವಾದ ಭಾಷೆ, ಸರಳ ಹಾಗೂ ಮನೋಜ್ಞ ಓಘ ಓದುಗನನ್ನು ಆಕರ್ಷಿಸುತ್ತದೆ. ವಾಸುರವರು ಮಿತ ಭಾಷಿಕರಾದರೂ ಅವರ ವಿಧ್ವತ್ತು ಕೃತಿಯಲ್ಲಿ ಮೇಳೈಸಿದೆ. ಕೃತಿಗಳ ವಿಮರ್ಶೆ ಅನ್ನುವುದಕ್ಕಿಂತ ಪರಿಚಯಾತ್ಮಕ ಕೃತಿ ಎಂದರೆ ತಪ್ಪಾಗಲಾರದು” ಎಂದರು.
ಹಿರಿಯ ಸಾಹಿತಿ ಎನ್. ಶೈಲಜಾ ಹಾಸನ ಮಾತನಾಡಿ “ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕಳೆದ ಏಳೆಂಟು ವರ್ಷಗಳಿಂದಲೂ ಎಲೆಮರೆ ಕಾಯಿಯಂತಹ ಸಾಧಕರನ್ನು ಗುರುತಿಸುವ ಹಾಗೂ ಹೊಸ ಬರಹಗಾರರನ್ನು ಮುನ್ನೆಲೆಗೆ ತರುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾ ಬಂದಿದೆ. ಸಮುದ್ರವಳ್ಳಿ ವಾಸು ಹಾಸನ ಜಿಲ್ಲೆ ಕಂಡ ಸರಳ ಹಾಗೂ ಸ್ನೇಹಜೀವಿ. ನನ್ನ ‘ಇಳಾ’ ಕಾದಂಬರಿ ಬಗ್ಗೆಯೂ ಕೃತಿಯಲ್ಲಿ ಬರೆದಿರುವುದು ನನಗೆ ಸಂತಸ ತಂದಿದೆ” ಎಂದರು.
ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಗೌರವಾಧ್ಯಕ್ಷ ರವಿ ನಾಕಲಗೂಡು ಮಾತನಾಡಿ “ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕೊಟ್ರೇಶ್ ಎಸ್. ಉಪ್ಪಾರ್ ನಾಯಕತ್ವದಲ್ಲಿ ಪ್ರಾರಂಭಗೊಂಡು ವಾಸು ಸಮುದ್ರವಳ್ಳಿ, ನಾಗರಾಜ ದೊಡ್ಡಮನಿ, ಎಚ್.ಎಸ್. ಬಸವರಾಜ್, ದೇಸು ಆಲೂರು, ದಿವಾಕರ ನಾರಾಯಣ ಅವರುಗಳನ್ನೊಳಗೊಂಡ ಸಂಸ್ಥಾಪಕ ಟ್ರಸ್ಟಿಗಳ ನಿರಂತರ ಪ್ರಯತ್ನದಿಂದ ಇಂದು ಕೇವಲ ಹಾಸನ ಜಿಲ್ಲೆಯಷ್ಟೇಯಲ್ಲದೇ ರಾಜ್ಯ, ಹೊರರಾಜ್ಯ, ಹೊರದೇಶಗಳಲ್ಲಿಯೂ ತನ್ನ ಬಿಳಿಲುಗಳನ್ನು ಬಿಟ್ಟು ಸಾಹಿತ್ಯ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ” ಎಂದರು.
ಪ್ರಾಯೋಜಕತ್ವ ವಹಿಸಿದ್ದ ಕವಯಿತ್ರಿ ಹಾಗೂ ಯೋಗಶಿಕ್ಷಕಿ ಗಿರಿಜಾ ನಿರ್ವಾಣಿ ಮಾತನಾಡಿ “ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹೊಸಬರಿಗೆ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿಕೊಡುತ್ತಿದೆ. ಇಂತಹ ಮಹತ್ವದ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿರುವುದು ವೈಯಕ್ತಿಕವಾಗಿ ಸಂತಸ ತಂದಿದೆ” ಎಂದರು.
ನಂತರ ನಡೆದ ಜಿಲ್ಲಾಮಟ್ಟದ ಕವಿಗೋಷ್ಠಿಯಲ್ಲಿ ಎಚ್.ಎಸ್. ಬಸವರಾಜ್, ನಾಗರಾಜ ದೊಡ್ಡಮನಿ, ಗಿರೀಶ್ ಚನ್ನರಾಯಪಟ್ಟಣ, ವಾಣಿಮಹೇಶ್, ಎಚ್.ಎಸ್. ಭಾನುಮತಿ, ಜಯಂತಿ ಚಂದ್ರಶೇಖರ್, ಎಚ್.ಕೆ. ಯಮುನಾವತಿ, ಪದ್ಮಾವತಿ ವೆಂಕಟೇಶ್, ಸಂತೋಷ್ ಕುಮಾರಿ, ಎಚ್.ಬಿ. ಚೂಡಾಮಣಿ, ಹೇಮಲತಾ ಚನ್ನರಾಯಪಟ್ಟಣ, ಲಲಿತ ಎಸ್. ಸಕಲೇಶಪುರ, ಭಾರತಿ ಎಚ್.ಎನ್., ಚಂದ್ರಕಲಾ ಎಂ. ಆಲೂರು, ಚಂದ್ರಶೇಖರ ಹಾನಗಲ್ ಅರಕಲಗೂಡು, ಜಯರಮೇಶ್, ಮಲ್ಲೇಶ್ ಜಿ. ಹಾಸನ, ಹಿಮಜ ಸೇರಿದಂತೆ ಹಲವು ಕವಿಗಳು ಕವಿತೆ ವಾಚಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಕೋಶಾಧ್ಯಕ್ಷ ಎಚ್.ಎಸ್. ಬಸವರಾಜ್, ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜ ದೊಡ್ಡಮನಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಸಮುದ್ರವಳ್ಳಿ ವಾಸು, ಜಿಲ್ಲಾ ಉಪಾಧ್ಯಕ್ಷೆ ಎಚ್.ಎಸ್. ಭಾನುಮತಿ, ಹಿರಿಯ ಕವಯಿತ್ರಿ ಎನ್. ಶೈಲಜಾ ಹಾಸನ, ಬಿ.ಎಂ. ಭಾರತಿ ಹಾದಿಗೆ, ಕ.ಸಾ.ಪ. ನಿಕಟಪೂರ್ವ ಜಿಲ್ಲಾ ಗೌರವಾಧ್ಯಕ್ಷ ರವಿ ನಾಕಲಗೂಡು, ಪ್ರಾಯೋಜಕಿ ಗಿರಿಜಾ ನಿರ್ವಾಣಿ, ವಿಮರ್ಶಕಿ ರೇಖಾ ಪ್ರಕಾಶ್, ಯುವ ಕವಯಿತ್ರಿ ಅಹನಾ ಹಾದಿಗೆ ಸೇರಿಂದತೆ ಹಲವರು ಉಪಸ್ಥಿತರಿದ್ದರು.
