ಮುಂಬೈ: ಹಿರಿಯ ಶಿಲ್ಪಿ,ಶತಾಯುಷಿ ರಾಮ ಸುತಾರ್ ಅವರು ಮಹಾರಾಷ್ಟ್ರ ಸರಕಾರದ ಅತ್ಯುನ್ನತ ನಾಗರಿಕ ಗೌರವವಾಗಿರುವ ಪ್ರತಿಷ್ಠಿತ ’ಮಹಾರಾಷ್ಟ್ರ ಭೂಷಣ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಭಾರತದ ರಾಜಕೀಯ ಏಕೀಕರಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ದೇಶದ ಮೊದಲ ಉಪಪ್ರಧಾನಿ ಹಾಗೂ ಗೃಹಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಗೌರವಾರ್ಥ ವಿಶ್ವದಲ್ಲಿಯೇ ಅತ್ಯಂತ ಎತ್ತರದ ಗುಜರಾತಿನ ಏಕತಾ ವಿಗ್ರಹವನ್ನು ವಿನ್ಯಾಸಗೊಳಿಸಿದವರು ಸುತಾರ್. ಸಂಸತ್ತಿನಲ್ಲಿ ಕುಳಿತಿರುವ ಭಂಗಿಯಲ್ಲಿರುವ ಮಹಾತ್ಮಾ ಗಾಂಧಿಯವರ ಪ್ರತಿಮೆಯೂ ಸುತಾರ್ ಸೃಷ್ಟಿಯಾಗಿದ್ದು, ಬೆಂಗಳೂರಿನ ವಿಧಾನ ಸೌಧದಲ್ಲಿ ಅದರ ಬೃಹತ್ ಪ್ರತಿಕೃತಿಯನ್ನೂ ಅವರೇ ನಿರ್ಮಿಸಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ 108 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆ ಇವರ ಕೈಗಳಿಂದಲೇ ಮೂಡಿದ್ದು, ಭಾರತೀಯ ಸಂವಿಧಾನದ ಶಿಲ್ಪಿಯ ಗೌರವಾರ್ಥ ಮುಂಬೈನ ಇಂದು ಮಿಲ್ಸ್ನಲ್ಲಿಯ ಬೃಹತ್ ಸ್ಮಾರಕದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯನ್ನೂ ಸುತಾರ್ ವಿನ್ಯಾಸಗೊಳಿಸುತ್ತಿದ್ದಾರೆ.
ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರಕ್ಕಾಗಿ ಶ್ರೀರಾಮನ ಪ್ರತಿಮೆಯನ್ನೂ ಧುಲೆ ಸಂಜಾತ ಸುತಾರ್ ನಿರ್ಮಿಸುತ್ತಿದ್ದಾರೆ.