ಖ್ಯಾತ ಗಡಿನಾಡ ಲೇಖಕಿ (ಕಾಸರಗೋಡು) ವಿಜಯಲಕ್ಷ್ಮಿ ಶಾನುಭೋಗ್ ಅವರ ಎಂಟನೆಯ ಕೃತಿ ಇತ್ತೀಚೆಗೆ ಪೈವಳಿಕೆ ಸಮೀಪದ ಬಾಯಿಕಟ್ಟೆ ಅಯ್ಯಪ್ಪ ಸಭಾಮಂದಿರದಲ್ಲಿ ಬಿಡುಗಡೆಯಾದ ‘ವ್ಯೂಹ’ ಎನ್ನುವ ಕಥಾಸಂಕಲನ. ಇದು ಹದಿನೈದು ಮನೋಜ್ಞ ಕಥೆಗಳನ್ನು ಒಳಗೊಂಡಿದೆ. ಸುತ್ತಮುತ್ತಲ ಸಾಮಾಜಿಕ ಬದುಕಿನಲ್ಲಿ ತಾವು ಕಂಡ ವೈವಿಧ್ಯಮಯ ವಸ್ತುಗಳನ್ನಾಧರಿಸಿ ವಿವಿಧ ರಚನಾತಂತ್ರಗಳನ್ನು ಬಳಸಿ ವಿಜಯಲಕ್ಷ್ಮಿಯವರು ಈ ಕಥೆಗಳನ್ನು ಸುಂದರವಾಗಿ ಹೆಣೆದಿದ್ದಾರೆ.
ಇಲ್ಲಿನ ಕಥೆಗಳನ್ನು ಮುಖ್ಯವಾಗಿ ಸ್ತ್ರೀಶೋಷಣೆ, ಪರಂಪರೆ ಮತ್ತು ಆಧುನಿಕತೆಗಳ ನಡುವಣ ಮುಖಾಮುಖಿ, ಭಾರತೀಯ ಸಂಸ್ಕೃತಿಯ ಬಗೆಗಿನ ಅಭಿಮಾನ ಮುಂತಾಗಿ ವಿಂಗಡಿಸಬಹುದು. ವ್ಯೂಹ ಎಂಬ ಕಥೆಯಲ್ಲಿ ಕಥಾನಾಯಕ ವಿಧವೆಯನ್ನು ಪ್ರೀತಿಸಿ ಮದುವೆಯಾಗ ಬಯಸುತ್ತಾನೆ. ಆದರೆ ಸಂಪ್ರದಾಯಸ್ಥ ಹಿರಿಯರು ಅದನ್ನು ವಿರೋಧಿಸುತ್ತಾರೆ. ಪರಿಣಾಮವಾಗಿ ಕಥಾನಾಯಕ ಮನೆ ಬಿಟ್ಟು ಹೋಗಿ ಸನ್ಯಾಸಿಯಾಗುತ್ತಾನೆ ಮತ್ತು ಹೆಣ್ಣು ಅತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ‘ಮಾತೆಲ್ಲ ಮುಗಿದ ಮೇಲೆ’ ಕಥೆಯಲ್ಲಿ ಕಥಾನಾಯಕ ಚಿಕ್ಕವನಿದ್ದಾಗ ಊರಿನಲ್ಲಿ ಅನ್ಯ ಜಾತಿಯ ಹುಡುಗಿಯನ್ನು ಪ್ರೀತಿಸಿ ಅವಳನ್ನು ಮದುವೆಯಾಗುತ್ತೇನೆಂದು ಮಾತು ಕೊಟ್ಟಿರುತ್ತಾನೆ. ಆದರೆ ಬೆಂಗಳೂರಿನಲ್ಲಿ ಕೆಲಸ ಸಿಕ್ಕಿ ಊರು ಬಿಟ್ಟು ಹೋದ ಮೇಲೆ ಅಪ್ಪ ಹೇಳಿದ ಹುಡುಗಿಯನ್ನು ಭಯದಿಂದ ಮದುವೆಯಾಗುತ್ತಾನೆ. ಕೆಲವು ವರ್ಷಗಳ ನಂತರ ಊರಿಗೆ ಬಂದಾಗ ಅವಳು ಗಂಡನನ್ನು ಕಳೆದುಕೊಂಡು ಕಡು ಬಡತನದಿಂದ ಕಷ್ಟ ಪಡುವುದನ್ನು ನೋಡಲಾಗದೆ ಅವಳಿಗೆ ಆರ್ಥಿಕ ಸಹಾಯ ಮಾಡುತ್ತಾನೆ. ‘ತಿರುವು’ ಕಥೆಯಲ್ಲಿ ಕಥಾನಾಯಕ ಬೇರೆ ಜಾತಿಯ ಹುಡುಗಿಯನ್ನು ಪ್ರೀತಿಸಿ ಮದುವೆಯಾಗುತ್ತೇನೆಂದು ವಾಗ್ದಾನ ಮಾಡುತ್ತಾನೆ. ಅಪ್ಪ ಸ್ವಜಾತಿಯ ಹುಡುಗಿಯನ್ನು ಮದುವೆಯಾಗೆಂದು ಹೇಳಿದರೂ ಅವನ ಮನಸ್ಸು ಒಪ್ಪುವುದಿಲ್ಲ. ಆದರೆ ಆ ಸಮಯದಲ್ಲಿ ಆ ಊರಿನ ಗೇರು ತೋಟಗಳಿಗೆ ಸರಕಾರವು ಹೆಲಿಕಾಪ್ಟರ್ ನಿಂದ ಕೀಟನಾಶಕಗಳನ್ನು ಸಿಂಪಡಿಸಿದ ಪರಿಣಾಮವಾಗಿ ಜನರು ಗುಣವಾಗದ ವಿಚಿತ್ರ ಕಾಯಿಲೆಗಳಿಂದ ನರಳುತ್ತಾರೆ. ಕಥಾನಾಯಕ ಪ್ರೀತಿಸಿದ ಹುಡುಗಿಯೂ ಅದೇ ಕಾರಣದಿಂದ ಸಾಯುತ್ತಾಳೆ. ಆದ್ದರಿಂದ ಇಲ್ಲಿ ಖಳನಾಯಕನಾಗುವುದು ವಿಧಿ.
‘ಹಾರಿ ಮರಳಿದ ಹಕ್ಕಿ’ ಒಂದು ರೀತಿಯಲ್ಲಿ ಹೆಣ್ಣಿನ ಶೋಷಣೆಯೂ ಹೌದು, ಲವ್ ಜಿಹಾದ್ ಕಥೆಯೂ ಹೌದು. ಬುದ್ಧಿವಂತ ಹುಡುಗಿ ಧೃತಿಯ ಮದುವೆ ವಯಸ್ಸು ಮೀರಿತೆಂದು ಅವಳ ಹೆತ್ತವರು ಚಿಂತೆ ಮಾಡುತ್ತಿರಬೇಕಾದರೆ ಅವಳು ಆಫೀಸಿಗೆ ಬರುವ ಸೇಲ್ಸ್ ರೆಪ್ ಅನ್ವರ್ ಎಂಬ ಮುಸಲ್ಮಾನನಿಂದ ಆಕರ್ಷಿತಳಾಗಿ ಅವನನ್ನು ಮದುವೆಯಾಗುವ ಆಲೋಚನೆ ಮಾಡುತ್ತಾಳೆ. ಕೊನೆಯಲ್ಲಿ ಅವಳಿಗೆ ಅವನು ತನ್ನ ಧರ್ಮಯುದ್ಧಕ್ಕೋಸ್ಕರ ಅಡ್ಡದಾರಿ ಹಿಡಿದವನೆಂದು ಗೊತ್ತಾಗುತ್ತದೆ. ತನ್ನ ತಪ್ಪಿನ ಅರಿವು ಮೂಡಿದಾಗ ಅವಳು ಅಪ್ಪ ನೋಡಿದ ಹುಡುಗನನ್ನು ಮದುವೆಯಾಗಿ ಊರಿಗೆ ಬಂದು ನೆಲೆಸಲು ಒಪ್ಪಿಗೆ ಸೂಚಿಸುತ್ತಾಳೆ. ‘ಮೊಗ್ಗಿನೊಳಗಣ ಘಮ’ದಲ್ಲಿ ಹಳ್ಳಿಯ ಹಲವು ಹೆಣ್ಣುಮಕ್ಕಳು ಗಂಡನ ಮನೆಯಲ್ಲಿ ಶೋಷಣೆಗೆ ಗುರಿಯಾಗುವ ಚಿತ್ರಣವಿದೆ. ‘ಮಳ್ಳಿ ಬಸವಿ’ಯಲ್ಲೂ ಪುರುಷ ಪ್ರಧಾನ ಸಮಾಜವು ಹೆಣ್ಣನ್ನು ಬಸವಿ ಬಿಡುವ ಹೆಸರಿನಲ್ಲಿ ತಮಗೆ ಬೇಕಾದಂತೆ ಬಳಸಿಕೊಂಡು ಅವಳ ಬದುಕನ್ನೇ ನಾಶ ಮಾಡುವ ಅಮಾನುಷತೆಯ ಚಿತ್ರಣವಿದೆ. ‘ಜೈಲಿನ ಪತ್ರ’ದಲ್ಲೂ ಗರ್ಭಸ್ಥ ಶಿಶುವು ಹೆಣ್ಣೆಂದು ಸ್ಕ್ಯಾನಿಂಗ್ ನಲ್ಲಿ ಗೊತ್ತಾದಾಗ ಗಂಡ ಮತ್ತು ಅತ್ತೆ ಸೇರಿ ಮೂರು ಬಾರಿ ಸೊಸೆಗೆ ಬಲವಂತವಾಗಿ ಅಬಾರ್ಷನ್ ಮಾಡಿಸುವ ಕ್ರೌರ್ಯವಿದೆ. ನಾಲ್ಕನೇ ಬಾರಿಯೂ ಅಬಾರ್ಷನ್ ಮಾಡಿಸ ಹೊರಟಾಗ ಅವಳ ಲಾಯರ್ ಗೆಳತಿ ಸಹಾಯಕ್ಕೆ ಬಂದು ಗಂಡ-ಅತ್ತೆಯರಿಗೆ ಶಿಕ್ಷೆ ಸಿಗುವಂತೆ ಮಾಡುತ್ತಾಳೆ. ಇಲ್ಲಿ ವಿಪರ್ಯಾಸವೆಂದರೆ ಅಬಾರ್ಷನ್ ಮಾಡಿಸಿದ ಡಾಕ್ಟರ್ ಗೆ ಮೊದಲ ಮೂರು ಬಾರಿ ಗರ್ಭದೊಳಗೆ ಇದ್ದದ್ದು ಗಂಡು ಮಕ್ಕಳೇ ಎಂದು ಗೊತ್ತಿದ್ದರೂ ದುಡ್ಡಿಗೋಸ್ಕರ ಸುಳ್ಳು ಹೇಳಿರುವುದು.
‘ಗಾಳಿ ಸೇರದ ಗಂಧ’ದಲ್ಲೂ ಹೆಣ್ಣನ್ನು ನಂಬಿಸಿ ಪ್ರೀತಿಯ ನಾಟಕವಾಡಿ ಹೊಸ ಅವಕಾಶಗಳು ಸಿಕ್ಕಾಗ ಹಿಂದಿನದೆಲ್ಲವನ್ನೂ ಮರೆತಂತೆ ನಟಿಸುವ ಪುರುಷರ ಗೋಸುಂಬೆತನದ ಚಿತ್ರಣವಿದೆ. ಅದರೆ ಇಲ್ಲಿನ ವಸ್ತು ಪುರಾಣದ್ದು. ಇದು ಅರ್ಜುನ-ಚಿತ್ರಾಂಗದೆಯರ ಕಥೆ. ಚಿತ್ರಾಂಗದೆಯ ಸಖಿ ಪೃಥಾಳ ಪ್ರಿಯತಮ ಅವಳಿಗೆ ಮಾಡಿದ ಅನ್ಯಾಯದ ಕಥೆಯನ್ನು ಕೇಳಿ ತನ್ನ ಪತಿ ಅಂತವನಲ್ಲ ಎಂದು ದೃಢವಾಗಿ ನಂಬಿದ ಚಿತ್ರಾಂಗದೆ ಕೊನೆಯಲ್ಲಿ ಮೋಸಹೋಗುತ್ತಾಳೆ. ಪೌರಾಣಿಕ ಕಥೆಯನ್ನು ಅಧುನಿಕ ಸಮಾಜಕ್ಕೆ ಅನ್ವಯಿಸುವಂತೆ ಇಲ್ಲಿ ಹೆಣೆಯಲಾಗಿದೆ.
‘ನೇತ್ರ ಗರ್ಭದ ನೋಟ’ ಪಾರ್ತಜ್ಜಿ ಎಂಬ 97 ವರ್ಷದ ಮುದುಕಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವಳು ಎಂಬ ಕಾರಣಕ್ಕೆ ಜಿಲ್ಲಾದಿಕಾರಿಗಳ ಸಮ್ಮುಖದಲ್ಲಿ ಸನ್ಮಾನ ಸಮಾರಂಭ ಏರ್ಪಟ್ಟಾಗ ಅವಳಿಗೆ ಜೀವನದ ಉದ್ದಕ್ಕೂ ತಾನು ಅನುಭವಿಸಿದ ಕಷ್ಟ ಪರಂಪರೆಗಳ ನೆನಪಾಗುವ ಕಥೆ. ಅಮ್ಮ ಸತ್ತ ನಂತರ ಮಲತಾಯಿಯ ಕಾಟ ತಡೆಯಲಾಗದೆ ಪಾರ್ವತಿ ದೂರದ ಬಂಧುಗಳ ಮನೆ ಸೇರುತ್ತಾಳೆ. ಅಲ್ಲಿನ ಯಜಮಾನ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವುದನ್ನು ನೋಡಿ ತಾನೂ ಹೋರಾಟಕ್ಕೆ ಧುಮುಕುತ್ತಾಳೆ. ಅದರೆ ಪೋಲಿಸರ ಲಾಠಿಯೇಟು ತಿನ್ನುವುದಲ್ಲದೆ ಓರ್ವ ಪೋಲಿಸನಿಂದ ಲೈಂಗಿಕ ಅತ್ಯಾಚಾರಕ್ಕೂ ಒಳಗಾಗಿ ಉಂಟಾದ ಆಘಾತದಿಂದ ಮಾನಸಿಕ ಅಸ್ವಸ್ಥಳಾಗುತ್ತಾಳೆ. ಅವಳ ಮೇಲಿನ ಸಹಾನುಭೂತಿಯಿಂದ ಅವಳ ಬಾಲ್ಯಸ್ನೇಹಿತ ಬಲರಾಮ ಅವಳಿಗೆ ಚಿಕಿತ್ಸೆ ಕೊಡಿಸಿ ಗುಣ ಪಡಿಸಿ ಅವಳನ್ನು ಮದುವೆಯಾಗುತ್ತಾನೆ. ಒಬ್ಬ ಮಗನೂ ಜನಿಸಿ ಅವಳಿಗೆ ತಾಯ್ತನದ ಸುಖವನ್ನೂ ಕೊಡುತ್ತಾನೆ. ಆದರೆ ಮಗನು ಓದಿಗೆಂದು ದೂರ ಹೋಗಿದ್ದಾಗ ಅವಳ ಕಾಯಿಲೆ ಮರುಕಳಿಸುತ್ತದೆ. ಅವಳನ್ನೀಗ ಅನಾಥಾಶ್ರಮಕ್ಕೆ ಸೇರಿಸುತ್ತಾರೆ. ಅಲ್ಲಿಂದ ಅವಳಿಗೆ ಮಗನ ಸಂಪರ್ಕ ಕಡಿದು ಹೋಗುತ್ತದೆ. ಈಗ ವೇದಿಕೆಯಲ್ಲಿ ಸನ್ಮಾನ ಕಾರ್ಯಕ್ರಮ ಏರ್ಪಟ್ಟ ಸಂದರ್ಭದಲ್ಲಿ ಅವಳ ಮಗನೇ ಜಿಲ್ಲಾಧಿಕಾರಿಯೆಂದು ಅವಳಿಗೆ ಗೊತ್ತಾಗುವ ಒಂದು ಸಿನಿಮೀಯ ಸನ್ನಿವೇಶ ಉಂಟಾಗುತ್ತದೆ.
‘ಚಪ್ಪಲಿ ಮಾರುವ ಹುಡುಗ’ ಒಂದು ಪುಟ್ಟ ಕಥೆ. ಶ್ರೀಮಂತಿಕೆಯ ಸೊಕ್ಕು ಮತ್ತು ಬಡತನದ ದೈನೇಸಿ ಸ್ಥಿತಿಗಳ ನಡುವಣ ಮುಖಾಮುಖಿ ಇಲ್ಲಿದೆ. ಕಾರಿನಲ್ಲಿ ಬರುವ ಧಿಮಾಕಿನ ಹೆಂಗಸು ಹುಡುಗನ ಹತ್ತಿರ ಚಪ್ಪಲಿ ರಿಪೇರಿ ಮಾಡಿಸಿ ಅವನು ಹೇಳಿದ ಇಪ್ಪತ್ತು ರೂಪಾಯಿಗೆ ಬದಲಾಗಿ ಹತ್ತೇ ರೂಪಾಯಿ ಎಸೆದು ಹೋಗುವ ಹೃದಯಹೀನತೆಯ ಕಥೆಯಿದು. ‘ಅಲೆಗಳು’ ಕಥೆಯಲ್ಲಿ ಮೀನುಗಾರರ ಬದುಕಿನ ವಿಸ್ತೃತ ವರ್ಣನೆಯಿದೆ. ಮಗಳ ಬದುಕಿನ ಸಂಭ್ರಮದಲ್ಲಿದ್ದ ಒಂದು ಬೆಸ್ತ ಕುಟುಂಬದ ಕನಸುಗಳು ಪ್ರಾಕೃತಿಕ ದುರಂತದ ಕ್ರೌರ್ಯದಡಿ ಸಿಕ್ಕಿ ನುಚ್ಚು ನೂರಾಗುವುದು ಇಲ್ಲಿನ ಕಥೆ. ‘ಆ ಮುಖ’ ಕಥೆಯ ಪರಿಸರ ಥೈಲ್ಯಾಂಡ್ ನ ಬ್ಯಾಂಕಾಕ್ ನಗರ. ಮೇಲು ದರ್ಜೆಯ ಹೋಟೆಲೊಂದಕ್ಕೆ ಹೋದ ಕಥಾನಾಯಕ ಮನು ಅಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಯುವಕನೊಂದಿಗೆ ಕ್ರೂರವಾಗಿ ವರ್ತಿಸುವುದನ್ನು ನೋಡಿದಾಗ ದುಃಖವಾಗುತ್ತದೆ. ಮುಂದೆ ಇನ್ನೊಂದು ಕಡೆ ಅದೇ ರೀತಿಯ ಮುಖವುಳ್ಳ ಒಬ್ಬ ಹೆಣ್ಣು ರಿಸೆಪ್ಷನಿಸ್ಟನ್ನು ನೋಡಿ ಅವನಿಗೆ ಆಶ್ಚರ್ಯವಾಗುತ್ತದೆ. ಅವರಿಬ್ಬರ ನಡುವೆ ಪ್ರೀತಿ ಉಂಟಾಗುತ್ತದೆ. ಆದರೆ ಅವಳ ವಿಚಿತ್ರ ವರ್ತನೆ ಅವನಲ್ಲಿ ಗೊಂದಲ ಹುಟ್ಟಿಸುತ್ತದೆ. ಕೊನೆಗೆ ಅವಳು ಲಿಂಗ ಪರಿವರ್ತನೆ ಮಾಡಿಸಿಕೊಂಡ ಅದೇ ಯುವಕ ಅನ್ನುವುದು ಮತ್ತು ಅಲ್ಲಿ ಪುರುಷರಿಗೆ ಕೆಲಸ ಸಿಗುವುದಿಲ್ಲ ಎಂಬ ಕಾರಣಕ್ಕೆ ಹಲವರು ಹಾಗೆಯೆ ಮಾಡುತ್ತಿದ್ದಾರೆ ಅನ್ನುವುದು ಗೊತ್ತಾಗುತ್ತದೆ.
ವಿಜಯಲಕ್ಷ್ಮಿಯವರು ಕಥೆಗಳಿಗೆ ಆಯ್ದುಕೊಂಡ ಹೆಚ್ವಿನ ವಸ್ತುಗಳಲ್ಲಿ ಅಂಥ ವೈಶಿಷ್ಟ್ಯವೇನೂ ಇಲ್ಲ. ಆದರೆ ಅವರ ಕಥನ ಶೈಲಿ ಮನಮುಟ್ಟುವಂತಿದೆ. ಬಳಸಿದ ಭಾಷೆಯಲ್ಲಿ ಸೌಂದರ್ಯವಿದೆ. ಕಥೆಗಳ ಮಧ್ಯೆ ಸಾಂದರ್ಭಿಕವಾಗಿ ಅವರು ಓದುಗನ ಕಣ್ಣಿಗೆ ಕಟ್ಟುವಂತೆ ನೀಡುವ ವಿವರಗಳು ಅವರ ಸೂಕ್ಷ್ಮ ಸಂವೇದನೆ, ಅವಲೋಕನ ಶಕ್ತಿ ಮತ್ತು ಅಗಾಧ ಲೋಕಜ್ಣಾನಗಳಿಗೆ ಸಾಕ್ಷಿಯಾಗಿ ನಿಲ್ಲುತ್ತವೆ. ಅದು ಯಕ್ಷಗಾನದಂಥ ಕಲೆಯ ಬಗ್ಗೆ ಇರಬಹುದು, ಕೃಷಿ-ತೋಟಗಾರಿಕೆಗಳ ಬಗ್ಗೆ ಇರಬಹುದು, ಸರಕಾರದ ನಿರ್ಲಕ್ಷ್ಯ ಧೋರಣೆ ಇರಬಹುದು, ಕಡಲತಡಿಯ ಮೀನುಗಾರರ ಬದುಕು ಇರಬಹುದು, ಬ್ಯಾಂಕಾಕ್-ಸಿಂಗಾಪುರಗಳಂತಹ ಹೊರದೇಶಗಳಲ್ಲಿ ಕಂಡ ಥಳಕು-ಬಳುಕಿನ ಜೀವನ ಶೈಲಿಯ ಹಿಂದಿನ ಕರಾಳ ವಾಸ್ತವ ಇರಬಹುದು- ಹೀಗೆ ಹದಿನೈದು ಕಥೆಗಳಲ್ಲಿ ಅನೇಕ ವಿಷಯಗಳ ಕುರಿತು ಅವರು ನೀಡುವ ವಿವರಗಳು ವಿಸ್ತಾರವಾಗಿ ಹಬ್ಬಿಕೊಂಡದ್ದನ್ನು ನಾವು ಕಾಣುತ್ತೇವೆ. ಯಾವುದೇ ಸಿದ್ಧಾಂತಕ್ಕೆ ಅಂಟಿಕೊಳ್ಳದೆ ಮನುಷ್ಯ ಸಂಬಂಧಗಳ ಬಗ್ಗೆ ಮಾನವೀಯ ನೆಲೆಯಿಂದ ಚಿಂತನೆ ಮಾಡಿ ಬರೆದ ಕಥೆಗಳಿವು.
ಪಾರ್ವತಿ ಜಿ. ಐತಾಳ್