ಮಂಗಲ್ಪಾಡಿ : ‘ಕಲಾಕುಂಚ’ ಕೇರಳ ಗಡಿನಾಡ ಶಾಖೆಯ ಪ್ರಾಯೋಜಕತ್ವದಲ್ಲಿ ಮಹಾಭಾರತದ ಗಮಕ ವಾಚನ ವ್ಯಾಖ್ಯಾನದ ಸಮಾರೋಪ ಸಮಾರಂಭ ಮಂಗಲ್ಪಾಡಿಯ ಶ್ರೀ ಶಾರದಾ ಭಜನಾ ಮಂದಿರದಲ್ಲಿ ದಿನಾಂಕ 01 ಫೆಬ್ರವರಿ 2026ರಂದು ನಡೆಯಿತು. ಕಳೆದ ಎರಡೂ ಮುಕ್ಕಾಲು ವರ್ಷಗಳಿಂದ ಪ್ರತಿ ಶನಿವಾರ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮವನ್ನು ಶ್ರೀಮತಿ ಜಯಲಕ್ಷ್ಮಿ ಕಾರಂತ್ ಹಾಗೂ ದಿವ್ಯಾ ಕಾರಂತ್ ನಡೆಸಿಕೊಂಡು ಬರುತ್ತಾ ಇದ್ದರು. ಜೊತೆಗೆ ಕೆಲವು ಸಂಧರ್ಭಗಳಲ್ಲಿ ಶ್ರೀ ಮುರಳಿ ಯಾದವ್, ಶ್ರೀ ಶಶಿರಾಜ ನೀಲಂಗಳ, ಶ್ರೀ ಗುರುಮೂರ್ತಿ, ಕುಮಾರಿ ಅನೂಷಾ, ರಾಧಾಮಣಿ ಮೀಯಪದವು, ಚಂದನ್ ಕಾರಂತ್ ಸಹಕರಿಸಿದ್ದರು.
ಗಮಕ ವಾಚನ ವ್ಯಾಖ್ಯಾನದ ಸಮಾರೋಪ ಸಮಾರಂಭದಲ್ಲಿ ಹಿರಿಯರಾದ ಶ್ರೀ ರಾಮಕಾರಂತರು ಮಹಾಭಾರತದ ಕರ್ನಾಟಕ ಭಾರತ ಕಥಾಮಂಜರಿ ಗ್ರಂಥಕ್ಕೆ ಆರತಿ ಬೆಳಗಿದರು. ಶ್ರೀಮತಿ ದಿವ್ಯಾ ಕಾರಂತ ಗ್ರಂಥವನ್ನು ವೇದಿಕೆಗೆ ತಂದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಾಕುಂಚ ಕೇರಳ ಗಡಿನಾಡ ಶಾಖೆಯ ಸಂಸ್ಥಾಪಕರಾದ ಶ್ರೀಮತಿ ಜಯಲಕ್ಷ್ಮಿ ಕಾರಂತ್ ವಹಿಸಿದರು. ಧರ್ಮತ್ತಡ್ಕ ಹೈಯರ್ ಸೆಕೆಂಡರೀ ಸ್ಕೂಲ್ ಪ್ರಾಂಶುಪಾಲರಾದ ರಾಮಚಂದ್ರ ಭಟ್ ಮತ್ತು ಶ್ರೀ ಶಾರದಾ ಏಕಾಹ ಭಜನಾ ಮಂದಿರ ಟ್ರಸ್ಟಿ ಶ್ರೀ ಲಿಂಗಪ್ಪ ಪಟೇಲ್ ಇವರು ಅತಿಥಿಗಳಾಗಿದ್ದರು. ವೇದಾಂತ್ ಕಾರಂತ್ ಪ್ರಾರ್ಥನೆ ಗೀತೆ ಹಾಡಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಸಭಾಧ್ಯಕ್ಷರು ಮತ್ತು ಅತಿಥಿಗಳು ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು. ಕೆ.ಗ. ಶಾಖೆಯ ಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಜಯಲಕ್ಷ್ಮಿ ಕಾರಂತರು ಸ್ವಾಗತ ಮತ್ತು ಪ್ರಸ್ಥಾವನೆಗೈದರು. ಕಲಾಕುಂಚ ಶಾಖೆಯ ಅಧ್ಯಕ್ಷೆ ರಾಧಾಮಣಿ ಮೀಯಪದವು ಉಪಸ್ಥಿತರಿದ್ದರು.
ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮಕ್ಕೆ ಪ್ರತಿ ಬಾರಿಯೂ ಆಗಮಿಸಿದ್ದ ಮಕ್ಕಳನ್ನು ಮತ್ತು ಪೋಷಕರನ್ನು ಗೌರವಿಸಲಾಯಿತು. ಪುರಸ್ಕೃತ ಮಕ್ಕಳು ತಮ್ಮ ಅಭಿಪ್ರಾಯ ಮಂಡಿಸಿದರು. ಭಜನಾ ಮಂದಿರದ ವತಿಯಿಂದ ಗಮಕ ವಾಚನ ವ್ಯಾಖ್ಯಾನ ನಡೆಸಿಕೊಂಡು ಬಂದ ಶ್ರೀಮತಿ ಜಯಲಕ್ಷ್ಮಿ ಕಾರಂತ್ ಹಾಗೂ ದಿವ್ಯಾ ಕಾರಂತರನ್ನು ಗೌರವಿಸಲಾಯಿತು. ಸಭೆಯಲ್ಲಿ ಉಪಸ್ಥಿತರಿದ್ದ ಶ್ರೀಮತಿ ತಾರಾ ಪ್ರವೀಣ್, ಶ್ರೀ ವಿಜಯ ರೈ, ಶ್ರೀ ಸುರೇಶ ಶೆಟ್ಟಿ ತಮ್ಮ ಅಭಿಪ್ರಾಯ ಮಂಡಿಸಿದರು. ಗಮಕ ಕಾರ್ಯಕ್ರಮ ಇಲ್ಲಿಗೇ ನಿಲ್ಲಿಸಬಾರದು. ಇದು ನಿರಂತರವಾಗಿ ಮುಂದುವರಿಯಬೇಕು ಎಂದು ಅಭಿಪ್ರಾಯಪಟ್ಟರು. ಶ್ರೀ ರಾಜಾರಾಮ ರಾವ್ ಮೀಯಪದವು, ಶ್ರೀ ರಾಮಕಾರಂತ್, ಶ್ರೀ ಚಂದನ ಕಾರಂತ್ ಉಪಸ್ಥಿತರಿದ್ದರು. ಶ್ರೀಮತಿ ಚೇತನಾ ಹೆಬ್ಬಾರ್, ಶ್ರೀ ಗಣೇಶ್, ಶ್ರೀಮತಿ ತಾರಾ ಪ್ರವೀಣ್ ಸಹಕರಿಸಿದರು. ಶ್ರೀಮತಿ ರಾಧಾಮಣಿಯವರು ವಂದನಾರ್ಪಣೆಗೈದರು. ಶ್ರೀಮತಿ ಜಯಲಕ್ಷ್ಮಿ ಆರ್. ಹೊಳ್ಳ ಕಾರ್ಯಕ್ರಮ ನಿರೂಪಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
