ಉಡುಪಿ : ಪ್ರಸ್ತುತ ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ಅಗ್ರಮಾನ್ಯ ವಿದ್ವಾಂಸರೂ, ಗುರುಗಳೂ ಆಗಿರುವ ಬೆಂಗಳೂರಿನ ಗಾನಕಲಾಭೂಷಣ ಡಾ. ಆರ್.ಕೆ. ಪದ್ಮನಾಭರ ನವ ಪರಿಕಲ್ಪನೆಯಂತೆ ಉಡುಪಿಯ ಗುಂಡಿಬೈಲಿನಲ್ಲಿರುವ ಶ್ರೀ ಅಭಿರಾಮಧಾಮ ಸಂಕೀರ್ತನ ಮಂದಿರದಲ್ಲಿ ದಿನಾಂಕ 27, 28 29 ಮಾರ್ಚ್ 2026ರಂದು ಮೂರು ದಿನಗಳ ಕಾಲ ‘ಅಭಿರಾಮಗಾನ ಹಬ್ಬ’ ಹಮ್ಮಿಕೊಳ್ಳಲಾಗಿದೆ.
ದಿನಾಂಕ 27 ಮಾರ್ಚ್ 2026ರ ಶುಕ್ರವಾರ ಸಂಜೆ 4-00 ಗಂಟೆಗೆ ಶ್ರೀವಾದಿರಾಜ ಗುರು ಸಾರ್ವಭೌಮರ ಬಹು ವಿಶಿಷ್ಟ ಕೃತಿಗಳ ಅಧ್ಯಯನ-ಪ್ರಸ್ತುತಿ ಕುರಿತಾದ ನಾಲ್ಕು ತಾಸಿನ ಕಮ್ಮಟವನ್ನು ಆರ್.ಕೆ.ಪಿ. ಗುರುಗಳು ನಡೆಸಿಕೊಡಲಿದ್ದಾರೆ. ಈ ಅಪರೂಪದ ಸಂಗೀತ-ಸಾಹಿತ್ಯ ಕಲಿಕಾ ಕಾರ್ಯಗಾರಕ್ಕೆ ಸಂಗೀತದಲ್ಲಿ ಜೂನಿಯರ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸೀನಿಯರ್ ತರಗತಿಗಳಲ್ಲಿ ಸಂಗೀತಾಭ್ಯಾಸ ಮಾಡುತ್ತಿರುವ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳೂ, ಮತ್ತವರ ಸಂಗೀತ ಶಿಕ್ಷಕರೂ-ಗುರುಗಳೂ ಭಾಗವಹಿಸಿ ಉತ್ತಮ ಪ್ರಯೋಜನ ಪಡೆಯಲು ಕೋರಲಾಗಿದೆ.
ದಿನಾಂಕ 28 ಮತ್ತು 29 ಮಾರ್ಚ್ 2026ರ ಶುಕ್ರವಾರ ಮತ್ತು ಶನಿವಾರ ಮುಂಜಾನೆ 9ರಿಂದ ಸಂಜೆ 8ರ ತನಕ ಸರಿಸುಮಾರು 20 ಯುವ ಸಂಗೀತಗಾರರ ಸಂಗೀತ ಸಮ್ಮೇಳನವನ್ನೇ ಶ್ರೀ ಅಭಿರಾಮ್ ಭರತವಂಶಿ ಸುಜ್ನ್ಯಾನ ಮಂಟಪದಲ್ಲಿ ಆಯೋಜಿಸಲಾಗಿದೆ. ಶನಿವಾರ ಸಂಜೆ 6-30ಕ್ಕೆ ಗುರುಗಳಾದ ಡಾ. ಆರ್.ಕೆ. ಪದ್ಮನಾಭ ದಾಸರಿಗೆ 2023-24ನೇ ಸಾಲಿನ ಸ್ವರ ಸಾಮ್ರಾಟ್ ‘ವಿದ್ವಾನ್ ಅಭಿರಾಮ್ ಭರತವಂಶಿ’ ರಾಜ್ಯ ಪುರಸ್ಕಾರವನ್ನಿತ್ತು, ‘ಅಭಿರಾಮ ಗಾನಗುರು ಶ್ರೇಷ್ಠ’ ಎಂಬ ಬಿರುದನ್ನು ಅರ್ಪಿಸಿ ಸನ್ಮಾನಿಸಲಾಗುತ್ತಿದೆ. ಆದಿತ್ಯವಾರ ಸಂಜೆ 6-00ಕ್ಕೆ ಕರ್ನಾಟಕ ಶಾಸ್ತ್ರೀಯ ಸಂಗೀತದ ತ್ರಿಮೂರ್ತಿಗಳಲ್ಲೊಬ್ಬರಾದ ಮಹಾಮಹಿಮಸಂತ, ಶ್ರೀ ತ್ಯಾಗರಾಜ ಸ್ವಾಮಿ ವಿರಚಿತ ಪಂಚರತ್ನ ಕೃತಿಗಳ ಗೋಷ್ಠಿ ಗಾಯನವನ್ನು ಏರ್ಪಡಿಸಲಾಗಿದೆ. ಇವೆಲ್ಲಕ್ಕೂ ಮುಕುಟಪ್ರಾಯವೆಂಬಂತೆ ಅಂದು ರಾತ್ರಿ 7-00ರಿಂದ ನಡೆಯಲಿರುವ ವಿಶೇಷ ಸಂಗೀತ- ಸಂವಾದದಲ್ಲಿ ಗುರು-ವಿದ್ವಾನ್ ಆರ್.ಕೆ. ಪದ್ಮನಾಭ ದಾಸರು ಮುಕ್ತವಾಗಿ ಸಭಿಕರ ಸಮಸ್ತ ಜಿಜ್ನ್ಯಾಸೆಗಳಿಗೆ, ಸಂಗೀತ ಸಂಬಂಧೀ ಸಂಶಯಗಳಿಗೆ, ರಹಸ್ಯಗಳಿಗೆ ಸೂಕ್ತ ಉತ್ತರ ನೀಡಲಿದ್ದಾರೆ. ಸಂಗೀತಾಸಕ್ತರಿಗೆ ಇದೊಂದು ರಸದೌತಣವೆಂದಿರುವ ಅಭಿರಾಮಧಾಮದ ಸಂಸ್ಥಾಪಕ- ಅಧ್ಯಕ್ಷರಾದ ಪರ್ಲತ್ತಾಯ ಡಾ. ಸುದರ್ಶನ ಭಾರತೀಯ ಈ ‘ಅಭಿರಾಮಗಾನ ಹಬ್ಬ’ಕ್ಕೆ ಸಕಲ ಸಂಗೀತಾಸಕ್ತರನ್ನೂ ಸ್ವಾಗತಿಸಿದ್ದಾರೆ.

