Subscribe to Updates
Get the latest creative news from FooBar about art, design and business.
Author: roovari
ಬದಿಯಡ್ಕ : ನೀರ್ಚಾಲಿನ ಎಂ.ಎಸ್.ಸಿ. ಎ.ಎಲ್.ಪಿ. ಶಾಲೆಯಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆ ಇವುಗಳ ಜಂಟಿ ಆಶ್ರಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನಪಿನಲ್ಲಿ ಗ್ರಾಮ ಪರ್ಯಟನೆಯ 4ನೇ ಸರಣಿ ಕಾರ್ಯಕ್ರಮದಲ್ಲಿ ಯಕ್ಷಗಾನ ಬಣ್ಣಗಾರಿಕಾ ಶಿಬಿರ ದಿನಾಂಕ : 11-06-2023ರಂದು ನಡೆಯಿತು. ಈ ಶಿಬಿರದ ನೇತೃತ್ವ ವಹಿಸಿದ ಯಕ್ಷಗಾನ ಹಿಮ್ಮೇಳ ಮತ್ತು ಮುಮ್ಮೇಳ ಶಿಕ್ಷಕ ಬಾಯಾರು ಸೂರ್ಯನಾರಾಯಣ ಪದಕಣ್ಣಾಯ ಅವರು ಮಾತನಾಡುತ್ತಾ “ಯಕ್ಷಗಾನದ ಬಣ್ಣಗಾರಿಕೆಯು ಅತ್ಯಂತ ಆಳ ಹಾಗೂ ವಿಸ್ತಾರವಾಗಿದ್ದು, ಪ್ರತಿಯೊಂದು ಪಾತ್ರದ ಚಿತ್ರಣಕ್ಕೂ ವಿಶೇಷ ಅರ್ಥವಿದೆ. ಮುಖದ ಬಣ್ಣಗಾರಿಕೆಯ ಮೂಲಕ ಪಾತ್ರದ ಸ್ವಭಾವವನ್ನು ತಿಳಿಯಬಹುದು. ಆದ್ದರಿಂದ ಬಣ್ಣಗಾರಿಕೆಯು ಸಣ್ಣ ಅವಧಿಯಲ್ಲಿ ಕಲಿಯುವಷ್ಟು ಸಣ್ಣ ವಿಷಯವಲ್ಲ. ಅದು ಯಕ್ಷಗಾನ ಕ್ಷೇತ್ರದಲ್ಲಿ ವಿಶೇಷವಾದ ಬೃಹತ್ ಮಾಹಿತಿ ಕೋಶ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಹಿರಿಯ ಪ್ರಸಾದನಾ ಕಲಾವಿದ ಕೇಶವ ಕಿನ್ಯ ಮಾತನಾಡಿ, “ಕಲಾವಿದರು ತಮ್ಮ ಕಲೋಪಾಸನೆಯಲ್ಲಿ ಶಿಸ್ತು ಅಳವಡಿಸಿಕೊಳ್ಳಬೇಕು. ತಮ್ಮ ಕಲಾ…
ಮುಡಿಪು : ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಅಧ್ಯಯನ ಪೀಠ ಮತ್ತು ಕನಕದಾಸ ಸಂಶೋಧನಾ ಕೇಂದ್ರ ಮತ್ತು ಶ್ರೀ ರಾಮಕುಂಜೇಶ್ವರ ಪ್ರಥಮ ದರ್ಜೆ ಕಾಲೇಜಿನ ಸಹಯೋಗದೊಂದಿಗೆ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಸಭಾಂಗಣದಲ್ಲಿ ದಿನಾಂಕ : 14-06-2023ರಂದು ನಡೆದ ಒಂದು ದಿನದ ‘ಕನಕ ಕೀರ್ತನ ಗಾಯನ ಕಮ್ಮಟ’ವನ್ನು ಮುಂಬಯಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತ ಕುಮಾರ್ ಇವರು ಉದ್ಘಾಟಿಸಿ ಮಾತನಾಡುತ್ತಾ “ತಮಿಳುನಾಡಿನಿಂದ ಮೊದಲ್ಗೊಂಡು ಕನ್ನಡ ನಾಡಿನ ಮೂಲಕ ಉತ್ತರ ಭಾರತ ಕಡೆಗೆ ವ್ಯಾಪಿಸಿದ ಭಕ್ತಿಲತೆ ಭಾರತದ ಬದುಕನ್ನು ಪೋಷಿಸಿದೆ. ಈ ಭಕ್ತಿ ಪರಂಪರೆಯ ವಿಶಿಷ್ಟ ಕವಿ ಕನಕ. ತನ್ನ ಆಧ್ಯಾತ್ಮಿಕ ಮತ್ತು ಸಾಮಾಜಿಕ ರಚನೆಗಳಲ್ಲಿ ಕನಕದಾಸರು ಚಿಕಿತ್ಸಕ ಗುಣದ ಕವಿಯಾಗಿ ಮೂಡಿಬಂದಿದ್ದಾರೆ. ವಿಜಯನಗರ ಸಾಮ್ರಾಜ್ಯದ ಪಾಳೆಯಗಾರ, ಶುದ್ಧಾಂಗ ಸೈನಿಕನಾಗಿದ್ದ ಕನಕ, ತಿರುಪತಿ ತಿಮ್ಮಪ್ಪ, ವಿಶಿಷ್ಟಾದ್ವೈತ ಮತ್ತು ದ್ವೈತ ಸಿದ್ಧಾಂತದ ಮೂಲಕ ಕಂಡುಕೊಂಡ ದಿವ್ಯಾನುಭವ ಅವರ ಕೀರ್ತನೆಗಳಲ್ಲಿ ಅಭಿವ್ಯಕ್ತಗೊಂಡಿದೆ” ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ರಾಮಕುಂಜೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ…
ಬೆಂಗಳೂರು: ದಿನಾಂಕ 18-06-2023ರಂದು ಬೆಂಗಳೂರಿನ ಜೆ. ಪಿ. ನಗರದ ರಂಗಶಂಕರದಲ್ಲಿ ಸಂಚಯ ಪ್ರಸ್ತುತ ಪಡಿಸುವ ‘ ಕಾಮ ರೂಪಿಗಳ್ ‘ನಾಟಕವು ಪ್ರದರ್ಶನಗೊಳ್ಳಲಿದೆ. ಹಲವು ರಾಮಾಯಣ ಕೃತಿಗಳನ್ನು ಆಧರಿಸಿರುವ ಈ ನಾಟಕವನ್ನು ಖ್ಯಾತ ರಂಗನಿರ್ದೇಶಕ ಗಣೇಶ್ ಮಂದಾರ್ತಿಯವರು ರಂಗರೂಪಕ್ಕೆ ತರುವುದರೊಂದಿಗೆ ನಿರ್ದೇಶನವನ್ನೂ ಮಾಡಿದ್ದಾರೆ. ನಾಟಕದ ಬಗ್ಗೆ: ರಾಮಾಯಣದ ಪಂಚವಟಿಯ ಭಾಗದ ಕಥೆಯನ್ನೊಳಗೊಂಡ ನಾಟಕ ಇದು. ಶೂರ್ಪನಖಿಯ ಮಾನಭಂಗದಿಂದ ಹಿಡಿದು ಜಟಾಯು ಮೋಕ್ಷದವರೆಗಿನ ಕಥೆಯನ್ನು ಆರಿಸಿ ಕಟ್ಟಲಾಗಿದೆ. ರಾಮಾಯಣದಲ್ಲೇ ಬಹು ರಂಜಕವೂ ನಾಟಕೀಯವೂ ಆದ ಈ ಭಾಗವನ್ನು ತುಸು ಆಧುನೀಕರಣಗೊಳಿಸಿ ಪ್ರೇಕ್ಷಕರ ಮುಂದಿಡುತ್ತಿದ್ದಾರೆ. ಬದುಕಿಗೊಂದು ಚೌಕಟ್ಟಿದೆ, ಕಾಮಕ್ಕೊಂದು ಎಲ್ಲೆ ಇದೆ. ಮಿತಿಮೀರಿದರೆ ಏನೆಲ್ಲ ಆಪತ್ತು ಘಟಿಸಬಹುದೆಂಬುದಕ್ಕೆ ಈ ಪಂಚವಟಿಯ ಕಥೆಯು ನಮ್ಮನ್ನು ಸದಾ ಎಚ್ಚರಿಸುತ್ತಿರುತ್ತದೆ
“ಮಾತಾ” ಇದು ಕೇವಲ ನಾಟಕವಲ್ಲ ಸಮಾಜದ ಅವಮಾನಕ್ಕೆ ಬೆಂದು ಬಳಲಿದ ಆಂತರಾತ್ಮದ ಕಿಡಿ ಜಗತ್ತನ್ನೇ ತನ್ನ ಸಾಧನೆಯ ಮೂಲಕ ಬೆಳಗಿದ ಪ್ರಜ್ವಲತೆಯ ಛಲದ ದಿವ್ಯ ಬೆಳಕಿನ ಸತ್ಯ ಕಥೆ… “ಮಾತಾ” ಇಡೀ ನಾಟಕದ ಅವಧಿ 1 ಗಂಟೆ 20 ನಿಮಿಷಗಳು. ನಾಟಕ ಪ್ರಾರಂಭದಿಂದ ಕೊನೆಯವರೆಗೂ ನಿಮ್ಮತನ ಮರೆತು ಮಾತೆಯ ಸಾಧನೆಯ ಹೆಜ್ಜೆ ಗುರುತುಗಳ ನಡೆಯಲ್ಲಿ ನೀವು ನಿಂತು ನೋಡುತ್ತಿರುವಿರಿ ಎಂಬ ಅನುಭವ ಮೂಡುತ್ತೆ… ಪಾತ್ರ ಪರಕಾಯ ಪ್ರವೇಶ ಆದ ಗಳಿಗೆಯಿಂದ ಅದೆಷ್ಟು ಬಾರಿ ನಗುತ್ತೇವೆ ಅದಕ್ಕಿಂತ ಹೆಚ್ಚು ಬಾರಿ ನಮ್ಮ ಕಣ್ಣುಗಳು ತೇವಗೊಳ್ಳುತ್ತವೆ. ಅಷ್ಟೊಂದು ವಾಸ್ತವ ಸತ್ಯ ಚಿತ್ರ ನಮ್ಮನ್ನು ಇಡೀ ನಾಟಕದಲ್ಲಿ ಹಿಡಿದಿಟ್ಟುಕೊಳ್ಳುತ್ತೆ. ಒಬ್ಬ ಪದ್ಮಶ್ರೀ ಪುರಸ್ಕೃತೆಯ ಜೀವನ ಚರಿತ್ರೆಯನ್ನು ಒಂದಿಡೀ ನಾಟಕದಲ್ಲಿ ಎಲ್ಲಿಯೂ ಮೂಲ ಆಶಯ ಮತ್ತು ಸತ್ಯಕ್ಕೆ ಚ್ಯುತಿ ಬಾರದಂತೆ ಕಟ್ಟಿಕೊಡುವುದು ಸುಲಭದ ಮಾತಲ್ಲ. ಅದರಲ್ಲೂ ಇಡೀ ಸಮಾಜವೇ ಗೇಲಿಯಲ್ಲಿ ನೋಡುವ ಪರಶಿವಪಾರ್ವತಿಯ ಪರಮ ಅವತಾರಿ ಅರ್ಧನಾರೇಶ್ವರಿಯ ಸ್ವರೂಪಿ ತೃತೀಯ ಲಿಂಗಿ ಮಾತೆಯ ಬಗ್ಗೆ ಒಂದು ನಾಟಕ…
ಬೆಂಗಳೂರು: ದೇಶದ ವಿವಿಧ ಭಾಷೆಗಳ ಸಮಗ್ರ ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿದ ಕನ್ನಡಿಗ ಸಾಹಿತಿಗಳಿಗೆ ಕೊಡಮಾಡುವ 2022 ಹಾಗೂ 2023ನೇ ಸಾಲಿನ ‘ಮನೋಹರಿ ಪಾರ್ಥಸಾರಥಿ ಮನುಶ್ರೀ ದತ್ತಿ ಪ್ರಶಸ್ತಿ’ಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ. ಪ್ರಶಸ್ತಿಯು ರೂಪಾಯಿ 10,000/-(ಹತ್ತು ಸಾವಿರ) ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಅತ್ತಿಮಬ್ಬೆ ಪ್ರತಿಷ್ಠಾನ ಟ್ರಸ್ಟ್(ರಿ) ನವರು ಈ ದತ್ತಿ ನಿಧಿಯನ್ನು ಕನ್ನಡಿಗರ ಸಾರ್ವಭೌಮ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿದ್ದಾರೆ. 2022ನೆಯ ಸಾಲಿನ ಈ ಪ್ರಶಸ್ತಿಯನ್ನು ಮಂಡ್ಯದ ಶ್ರೀಮತಿ ಗುಣಸಾಗರಿ ನಾಗರಾಜ್ ಹಾಗೂ 2023ನೆಯ ಸಾಲಿನ ಪುರಸ್ಕಾರಕ್ಕೆ ಚಿಕ್ಕಮಗಳೂರಿನ ಶ್ರೀಮತಿ ಡಿ.ಎನ್.ಗೀತಾ ಇವರನ್ನು ಆಯ್ಕೆ ಸಮಿತಿ ಆಯ್ಕೆಮಾಡಿರುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಈ ದತ್ತಿ ಪ್ರಶಸ್ತಿಯುನ್ನು ಕಳೆದ 13 ವರ್ಷಗಳಿಂದ ನಿರಂತರವಾಗಿ ನೀಡುತ್ತಾ ಬಂದಿದೆ. ದಾನಿಗಳ ಮೂಲ ಉದ್ದೇಶದಂತೆ ದೇಶದ ವಿವಿಧ ಭಾಷೆಗಳ ಸಮಗ್ರ ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿದ ಕನ್ನಡಿಗ ಸಾಹಿತಿಯೊಬ್ಬರನ್ನು ಗುರುತಿಸಿ ಈ ದತ್ತಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಇದುವರೆಗೆ ರಾಜ್ಯದ 13…
ಉಡುಪಿ : ಹಿರಿಯ ಸಾಹಿತಿ, ಸಂಶೋಧಕ ಪ್ರೊ. ಎ.ವಿ. ನಾವಡ ಅವರು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ನೀಡುವ 2023ನೇ ಸಾಲಿನ ‘ಸೇಡಿಯಾಪು ಕೃಷ್ಣ ಭಟ್ಟ ಪ್ರಶಸ್ತಿ’ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಕನ್ನಡ ಭಾಷೆ, ಸಾಹಿತ್ಯ, ವ್ಯಾಕರಣ, ಭಾಷಾ ಶಾಸ್ತ್ರ ಕಥನ ಕಾವ್ಯ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿರುವ ಸೇಡಿಯಾಪು ಕೃಷ್ಣ ಭಟ್ಟರ ನೆನಪಿನಲ್ಲಿ ಈ ಪ್ರಶಸ್ತಿ ನೀಡಲಾಗುವುದು. ಪ್ರಶಸ್ತಿ 10,000/- ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿರುತ್ತಾರೆ. 1980ರಿಂದ ವಿವಿಧ ಸಂಶೋಧನಾ ಯೋಜನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಪಾರ ಸಂಶೋಧನ ಅನುಭವ ಹೊಂದಿರುವ ಪ್ರೊಫೆಸರ್ ನಾವಡರು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು ಮತ್ತು ಹಂಪಿ ಕನ್ನಡ ವಿ.ವಿ.ಯಲ್ಲಿ ಒಟ್ಟು 38 ವರ್ಷಗಳ ಬೋಧನಾನುಭವ ಹೊಂದಿದ್ದಾರೆ. ಹಂಪಿ ಕನ್ನಡ ವಿ.ವಿ.ಯ ವಿಶ್ರಾಂತ ಪ್ರಾಧ್ಯಾಪಕ, ಪ್ರಸಾರಾಂಗ ನಿರ್ದೇಶಕ, ಡೀನ್, ಸಿಂಡಿಕೇಟ್ ಸದಸ್ಯರಾಗಿ ಹಾಗೂ ಸೆನೆಟ್ ಸದಸ್ಯರಾಗಿ…
ಬದಿಯಡ್ಕ: ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯು 2010ರಿಂದೀಚೆಗೆ ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಗಮನಾರ್ಹ ಸಾಧನೆಗೈದು ನಾಡಿನಾದ್ಯಂತ ಹೆಸರು ಪಡೆದಿದೆ. ಯಕ್ಷಗಾನ, ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಭಜನ್ ಸಂಗೀತ ತರಗತಿಗಳನ್ನೂ ನಡೆಸುತ್ತಾ ಬಂದಿದೆ. ಇಲ್ಲಿ ತರಬೇತಿ ಪಡೆದ ಹಲವು ಪ್ರತಿಭೆಗಳು ರಾಜ್ಯ, ಅಂತರಾಜ್ಯದ ಹಲವಾರು ಪ್ರತಿಷ್ಟಿತ ವೇದಿಕೆಗಳಲ್ಲಿ ಪ್ರದರ್ಶನ ನೀಡುತ್ತಿದ್ದಾರೆ . ಇದೀಗ ಯಕ್ಷಗಾನ ತರಬೇತಿ ಆರಂಭಗೊಳ್ಳಲಿದ್ದು ಯಾವುದೇ ಜಾತಿ, ಮತ, ವಯೋಮಾನದ ಯಕ್ಷಗಾನ ಕಲಿಕಾಸಕ್ತರೂ ತರಗತಿಗೆ ಸೇರಬಹುದು. ಪ್ರತೀ ಆದಿತ್ಯವಾರ ಸಂಜೆ 4.30ರಿಂದ ಬದಿಯಡ್ಕದ ನವಜೀವನ ವಿದ್ಯಾಲಯದಲ್ಲಿ (ಶ್ರೀಮೂಕಾಂಬಿಕಾ ಸರ್ವೀಸ್ ಸ್ಟೇಶನ್ ಎದುರು) ತರಗತಿ ನಡೆಯುತ್ತದೆ. ಯಕ್ಷಗಾನ ನಾಟ್ಯ, ಭಾಗವತಿಕೆ, ಚೆಂಡೆ, ಮದ್ದಳೆಗಳ ತರಗತಿಗಳೂ ನಡೆಯಲಿವೆ. ಆಸಕ್ತರು 18-6-2023 ಆದಿತ್ಯವಾರ ಸಂಜೆ 4.30ಕ್ಕೆ ಹಾಜರಿರಬೇಕು. ಹೆಚ್ಚಿನ ಮಾಹಿತಿಗೆ 9633876833ನ್ನು ಸಂಪರ್ಕಿಸಿರಿ.
ಮಂಗಳೂರು : ಹರಿಕಥಾ ಪರಿಷತ್ ಮಂಗಳೂರು ಹಮ್ಮಿಕೊಂಡಿರುವ ‘ಮನೆ-ಮನೆ ಹರಿಕಥೆ’ ಯೋಜನೆಯ ಆರನೇ ಕಾರ್ಯಕ್ರಮವು ಮಂಗಳಾದೇವಿಯ ಶ್ರೀ ಎ.ಜಿ. ಸದಾಶಿವ ದಂಪತಿಗಳ ನಿವಾಸ ‘ಶ್ರೀ ಅಮೃತಾ’ದಲ್ಲಿ ದಿನಾಂಕ 08-06-2023ರಂದು ಜರಗಿತು. ಕೀರ್ತನಕಾರರಾದ ಡಾ. ಎಸ್.ಪಿ. ಗುರುದಾಸ್ ‘ಶ್ರೀ ಕೃಷ್ಣ ಲೀಲೆ’ ಎಂಬ ವಿಷಯದಲ್ಲಿ ಹರಿಕಥೆಯನ್ನು ನಡೆಸಿಕೊಟ್ಟರು. ಶ್ರೀಮತಿ ಶಶಿರೇಖಾ ಹಾಗೂ ಶ್ರೀ ಎ.ಜಿ. ಸದಾಶಿವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಲವು ಕಲಾವಿದರು ಹಾಗೂ ಕಲಾಸಕ್ತರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಹಿಮ್ಮೇಳದಲ್ಲಿ ಮಂಗಲ್ ದಾಸ್ ಗುಲ್ವಾಡಿ ತಬ್ಲಾ ಹಾಗೂ ಎಂ. ರಮೇಶ್ ಹೆಬ್ಬಾರ್ ಹಾರ್ಮೋನಿಯಂನಲ್ಲಿ ಸಹಕರಿಸಿದರು. ಹರಿಕಥಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
ಬೆಂಗಳೂರು: ನಗರದ ಸಾಲಿಗ್ರಾಮ ಜೈನ ಮಿತ್ರ ಮಂಡಲಿಯವರು ನೀಡುವ ʻಸುಮಾವಸಂತ ಸಾಹಿತ್ಯ ದತ್ತಿ ಪ್ರಶಸ್ತಿʼಯನ್ನು ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಪ್ರೊ. ಬಿ.ಪಿ. ನ್ಯಾಮಗೌಡ ಇವರಿಗೆ ಮತ್ತು ʻಶ್ರೇಯೋಭದ್ರʼ ಪ್ರಶಸ್ತಿಯನ್ನು ಮಂಚೇನಹಳ್ಳಿ ಭಗವಾನ್ ಬಾಹುಬಲಿ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಕೆ.ಬಿ. ಅಶೋಕ ಕುಮಾರ ಇವರಿಗೆ ಇದೇ ಭಾನುವಾರ 18ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಸಭಾ ಮಂದಿರದಲ್ಲಿ ಪ್ರದಾನ ಮಾಡಲಾಗುವುದು. ಜೈನ ಸಾಹಿತ್ಯ ಕ್ಷೇತ್ರದಲ್ಲಿ ಮೌಲಿಕ ಸೇವೆ ಸಲ್ಲಿಸಿದ ಸಾಹಿತಿಗಳಿಗೆ ಕೊಡಮಾಡುವ ʻಸುಮಾವಸಂತ ಸಾಹಿತ್ಯ ದತ್ತಿ ಪ್ರಶಸ್ತಿʼ ಹಾಗೂ ಉತ್ತಮ ಧಾರ್ಮಿಕ ಹಾಗೂ ಸಾಮಾಜಿಕ ಸೇವೆಗಾಗಿ ನೀಡುವ ‘ಶ್ರೇಯೋಭದ್ರ’ ಪ್ರಶಸ್ತಿಯು ತಲಾ ರೂಪಾಯಿ10,000/-(ಹತ್ತು ಸಾವಿರ) ನಗದು, ಪ್ರಶಸ್ತಿ ಫಲಕ ಮತ್ತು ಫಲ ತಾಂಬೂಲಗಳನ್ನು ಒಳಗೊಂಡಿದೆ. ಸಾಲಿಗ್ರಾಮ ಜೈನ ಮಿತ್ರ ಮಂಡಲಿಯ 22ನೇ ವಾರ್ಷಿಕೋತ್ಸವ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ…
ಬೆಂಗಳೂರು : ಕಪ್ಪಣ್ಣ ಅಂಗಳ ಪ್ರಸ್ತುತ ಪಡಿಸುವ ಪ್ರತೀ ತಿಂಗಳ ಎರಡನೇ ಶನಿವಾರದಂದು ನಡೆಯುವ ಶಾಸ್ತ್ರೀಯ ಸಂಗೀತ ಸರಣಿ ಕಾರ್ಯಕ್ರಮ ‘ಆಲಾಪ್’ ಬೆಂಗಳೂರಿನ ಜೆ.ಪಿ. ನಗರದ ಕಪ್ಪಣ್ಣ ಅಂಗಳದಲ್ಲಿ ದಿನಾಂಕ 10-06-2023 ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ವಿದ್ವಾನ್ ಶ್ರೀಧರ್ ಸಾಗರ್ ರವರ ಸುಪುತ್ರರಾದ 9ನೇ ತರಗತಿಯ ವಿದ್ಯಾರ್ಥಿ ತ್ರಿಧಾತ್ ಸಾಗರ್ ಮತ್ತು ಸಂಗಡಿಗರಿಂದ ಕರ್ನಾಟಕ ಶೈಲಿಯ ಶಾಸ್ತ್ರೀಯ ಸಂಗೀತ ಸ್ಯಾಕ್ಸೊಫೋನ್ ವಾದನ ನಡೆಯಿತು. ಪಕ್ಕವಾದ್ಯ ಮೃದಂಗದಲ್ಲಿ ಅಮೋಘ ಕೈಪ, ವಯಲಿನ್ ನಲ್ಲಿ ಅರ್ಚನಾ ಮರಾಠೆ ಹಾಗೂ ಖಂಜೀರದಲ್ಲಿ ಅಶುತೋಷ್ ವಿಶ್ವೇಶ್ವರ ಸಹಕರಿಸಿದರು. ಯುವ ಪ್ರತಿಭೆ ತ್ರಿಧಾತ್ ಸಾಗರ್ ತನ್ನ ಪ್ರಾಥಮಿಕ ಅಭ್ಯಾಸವನ್ನು ತಂದೆಯವರಾದ ಶ್ರೀಧರ್ ಸಾಗರ್ ಹಾಗೂ ಮುಂದೆ ಪದ್ಮಭೂಷಣ ವಿದ್ವಾನ್ ಡಾ. ಕದ್ರಿ ಗೋಪಾಲನಾಥ್ ಬಳಿ ಅಭ್ಯಾಸ ಮಾಡಿದ್ದು ಪ್ರಸ್ತುತ ಕರ್ನಾಟಕ ಶಾಸ್ತ್ರೀಯ ಗಾಯನವನ್ನು ವಿದುಷಿ ಆರ್. ಎ. ರಮಾಮಣಿಯವರಲ್ಲಿ ಅಭ್ಯಾಸ ಮಾಡುತ್ತಿದ್ದಾನೆ , ಹಲವಾರು ಕಛೇರಿಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ವಯಲಿನ್ ನಲ್ಲಿ ಬಿ. ಇ. ಪದವೀಧರೆ ಹಾಗೂ…