Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಗುರು ವಿದುಷಿ ಶ್ರೀಮತಿ ದೀಪ ಭಟ್ ಅವರ ನೃತ್ಯ ಸಂಸ್ಥೆ ನೃತ್ಯಕುಟೀರದ 19ನೇ ವಾರ್ಷಿಕೋತ್ಸವ ಅಂಗವಾಗಿ ‘ನೃತ್ಯ ಮಿಲನ’ ಕಾರ್ಯಕ್ರಮವು ದಿನಾಂಕ 30-07-2023ರಂದು ಅತ್ಯಂತ ರಮಣೀಯವಾಗಿ ನಗರದ ಪ್ರಸಿದ್ಧ ಸಭಾಭವನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರೇಕ್ಷಕರ ಕಣ್ಮನ ಸೂರೆಗೊಳ್ಳುವಂತೆ ಮಾಡಿತು. ಪುಟಾಣಿ ಮಕ್ಕಳಿಂದ ಹಿಡಿದು ವಿದ್ವತ್ ವಿದ್ಯಾರ್ಥಿಗಳವರೆಗಿನ ಕಲಾವಿದರೆಲ್ಲ ಒಟ್ಟಾಗಿ ಸೇರಿ ಸಂಭ್ರಮದಿಂದ, ಅಚ್ಚುಕಟ್ಟಾಗಿ, ಲಯಬದ್ಧವಾಗಿ, ವೈವಿಧ್ಯಮಯ ನೃತ್ಯಗಳನ್ನು ಪ್ರದರ್ಶಿಸಿ ಕಿಕ್ಕಿರಿದು ಸೇರಿದ ಕಲಾ ರಸಿಕರ ಕರತಾಡನಕ್ಕೆ ಪಾತ್ರರಾದರು. ಪುಟ್ಟ ಮಕ್ಕಳ ‘ರಾಮ ಭಜನೆ’ ನೃತ್ಯಕ್ಕೆ ಮನಸೋತ ಪ್ರೇಕ್ಷಕರು ಸಹ ‘ರಾಮ ರಾಮ’ ಉದ್ಗಾರ ಹೇಳುತ್ತ ಮನಸೋತರು. ಪುಷ್ಪಾಂಜಲಿ, ಗಣೇಶ ಸ್ತುತಿ, ಅಲಾರಿಪು, ಜತಿಸ್ವರ, ಜಾನಕೀ ಕೌತ್ವಂ, ಸ್ವಾಗತಂ ಕೃಷ್ಣ, ರಾರ ವೇಣು, ಹರಿ ಕುಣಿದ, ಮಹಿಳಾ ಮಣಿಗಳಿಂದ ಸುಬ್ರಮಣ್ಯನ ಕುರಿತಾದ ಶಬ್ದಂ ಹಾಗೂ ಅಠಾಣರಾಗದಲ್ಲಿ ಹಾಗೂ ಆದಿತಾಳದಲ್ಲಿನ ಕೃಷ್ಣನ ಕುರಿತಾದ ವರ್ಣಂ ಅನ್ನು ವೈವಿಧ್ಯಮಯ ರೀತಿಯಲ್ಲಿ ಸಂಯೋಜಿಸಿ ಶಾಸ್ತ್ರಬದ್ಧವಾಗಿ ಪ್ರದರ್ಶಿಸಲಾಯಿತು. ಗ್ರಾಮೀಣ ಪರಿಸರದ ‘ಕೋಳೂರ ಕೊಡಗೂಸು’ ಎಂಬ ನೃತ್ಯ…
ಮಂಗಳೂರು : ಮಂಗಳೂರಿನ ಕೊಡಿಯಾಲ್ ಬೈಲ್ ಬಿಷಪ್ ನಿವಾಸದಲ್ಲಿ ರಾಕ್ಣೊ ವಾರಪತ್ರಿಕೆಯ ಆಶ್ರಯದಲ್ಲಿ ಭಾನುವಾರ ದಿನಾಂಕ 30-07-2023ರಂದು, ದೆಹಲಿಯ ಸಾಹಿತ್ಯ ಅಕಾಡೆಮಿ ಆಯೋಜಿಸಿದ ‘ಕಥಾಸಂಧಿ ಕಾರ್ಯಕ್ರಮ’ ನಡೆಯಿತು. ಈ ಕಾರ್ಯಕ್ರಮದಲ್ಲಿ ಹಿರಿಯ ಕಥೆಗಾರ ಡಾಲ್ಪಿ ಕಾಸ್ಸಿಯಾ ಅವರು ಮಾತನಾಡುತ್ತಾ “ಸಾದ್ಯವಾದಷ್ಟು ಭಾಷಾ ಬಳಕೆ ಮತ್ತು ನಿರೂಪಣೆಯಲ್ಲಿ ಶುದ್ಧತೆಯನ್ನು ಕಾಪಾಡಿಕೊಂಡು ಬರುವುದರ ಜತೆಗೆ, ಪ್ರತಿ ಕಥೆಯಲ್ಲಿ ಸಾಮಾಜಿಕ ಸಮಸ್ಯೆಯನ್ನು ಬಿಂಬಿಸುವ ಪ್ರಾಮಾಣಿಕ ಪ್ರಯತ್ನ ಮಾಡಿರುತ್ತೇನೆ” ಎಂದು ಅಭಿಪ್ರಾಯಪಟ್ಟರು. ಅವರು ತಮ್ಮ ಆಯ್ದ ಕಥೆ ‘ಮಾಂಯ್ ಕಿತ್ಯಾಕ್ ರಡ್ತಾ?’ (ಅಮ್ಮ ಯಾಕೆ ಅಳುತ್ತಾರೆ?) ಪ್ರಸ್ತುತ ಪಡಿಸಿ, ಕಥನ ಕಲೆಯ ಬಗ್ಗೆ ಮಾತನಾಡಿದರು. ದೆಹಲಿಯ ಸಾಹಿತ್ಯ ಅಕಾಡೆಮಿ, ಕೊಂಕಣಿ ಭಾಷಾ ಸಲಹಾ ಮಂಡಳಿಯ ಸದಸ್ಯ, ಪತ್ರಕರ್ತ ಎಚ್ಚೆಮ್ ಪೆರ್ನಾಲ್ ಸಾಹಿತ್ಯ ಅಕಾಡೆಮಿಯ ವಿವಿಧ ಯೋಜನೆಗಳ ಬಗ್ಗೆ ವಿಸ್ತೃತ ಪರಿಚಯ ನೀಡಿ, ಕೊಂಕಣಿ ಭಾಷಿಕರು ಪ್ರತ್ಯೇಕವಾಗಿ ಸಾಹಿತಿ ಮತ್ತು ಬರಹಗಾರರು ಸಾಹಿತ್ಯ ಅಕಾಡೆಮಿಯ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿಸಿದರು. ಸಾಹಿತ್ಯ ಅಕಾಡೆಮಿ ದೆಹಲಿ ಜನರಲ್ ಕೌನ್ಸಿಲ್ ಸದಸ್ಯರೂ,…
ಬೆಳ್ತಂಗಡಿ : ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ, ಶ್ರೀಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಬೆಳ್ತಂಗಡಿ ಮತ್ತು ರೋಟರಿ ಕ್ಲಬ್ ಬೆಳ್ತಂಗಡಿ ಇವರ ವತಿಯಿಂದ ದಿನಾಂಕ ಆಗಸ್ಟ್ 7ರಿಂದ 13ರವರೆಗೆ ಯಕ್ಷಸಾಂಗತ್ಯ ಸಪ್ತಕ ತಾಳಮದ್ದಳೆ ಕಾರ್ಯಕ್ರಮವು ಬೆಳ್ತಂಗಡಿ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾಭವನದಲ್ಲಿ ನಡೆಯಲಿದೆ. ಪ್ರತಿ ದಿನ ಸಂಜೆ 6ರಿಂದ 9ರವರೆಗೆ ನಡೆಯುವ ಯಕ್ಷಾವತರಣ 4ರಲ್ಲಿ ವಿದ್ವಾನ್ ಉಮಾಕಾಂತ ಭಟ್ಟ ಕೆರೇಕೈ ಅವರ ಪ್ರಧಾನ ಭೂಮಿಕೆಯ ಅರ್ಥ ಪ್ರಸ್ತುತಿಯೊಂದಿಗೆ ರಾಮ, ವಸಿಷ್ಠ, ಕರ್ಣ, ಕೃಷ್ಣ, ವಿದುರ, ಅತಿಕಾಯ, ಕೃಷ್ಣ ಕೇಂದ್ರಿತ ಪ್ರಸಂಗಗಳು ನಡೆಯಲಿವೆ. ಈ ಕಾರ್ಯಕ್ರಮದಲ್ಲಿ ತೆಂಕು ಬಡಗಿನ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಶ್ರೀ ಅಶೋಕ ಭಟ್ ಎನ್. ಉಜಿರೆ, ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾದ ಅಧ್ಯಕ್ಷರಾದ ಶ್ರೀ ಶಿವಾನಂದ ರಾವ್ ಕಕ್ಕಿನೇಜಿ, ರೋಟರಿ ಕ್ಲಬ್ ಬೆಳ್ತಂಗಡಿ ಅಧ್ಯಕ್ಷರಾದ ರೊ. ಅನಂತ ಭಟ್ ಮಚ್ಚಿಮಲೆ ತಿಳಿಸಿದ್ದಾರೆ.
ಮಣಿಪಾಲ : ಪರ್ಕಳದ ‘ಸರಿಗಮ ಭಾರತಿ ಸಂಗೀತ ವಿದ್ಯಾಲಯ’ ಇದರ ಆಶ್ರಯದಲ್ಲಿ ‘ಸಂಗೀತ ಕಾರ್ಯಕ್ರಮ’ ದಿನಾಂಕ 01-08-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಗೀತದ ಹಿರಿಯ ವಿದ್ವಾಂಸ, ಸಂಗೀತ ಗುರು, ಕಾಸರಗೋಡಿನ ಕಲ್ಮಾಡಿ ಶ್ರೀ ಸದಾಶಿವ ಆಚಾರ್ಯ ಇವರನ್ನು ಸರಿಗಮ ಭಾರತಿ ಸಂಗೀತ ವಿದ್ಯಾಲಯ ಪರ್ಕಳದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ನಂತರ ಅವರ ಸಂಗೀತ ಕಛೇರಿ ನಡೆಯಿತು. ವಯೊಲಿನ್ ನಲ್ಲಿ ಶ್ರೀ ಪೂರ್ಣಪ್ರಜ್ಞ ಹಾಗೂ ಮೃದಂಗದಲ್ಲಿ ಶ್ರೀ ಬಾಲಚಂದ್ರ ಭಾಗವತ್ ಸಹಕರಿಸಿದರು. ಕಾರ್ಯಕ್ರಮದ ಮೊದಲು ಕುಮಾರಿ ಮನಸ್ವಿನಿ ಹಾಗೂ ಕುಮಾರಿ ಸ್ವಸ್ತಿ ಎಂ.ಭಟ್ ಇವರ ಹಾಡುಗಾರಿಕೆ ನಡೆಯಿತು.
ಉಡುಪಿ : ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆಯೋಜಿಸುತ್ತಿರುವ ಸಾಪ್ತಾಹಿಕ ನೃತ್ಯ ಸರಣಿ ಕಾರ್ಯಕ್ರಮವಾದ ‘ನೃತ್ಯಶಂಕರ’ದ ಆಗಸ್ಟ್ ತಿಂಗಳ ಸರಣಿ ಕಾರ್ಯಕ್ರಮವು ಆಗಸ್ಟ್ 7,14,21,28ರ ಸೋಮವಾರದಂದು ಕೊಡವೂರಿನ ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ದಿನಾಂಕ 07-08-2023 ರಂದು ವಿದ್ವಾನ್ ಸುಧೀರ್ ರಾವ್ ಹಾಗೂ ವಿದುಷಿ ಮಾನಸಿ ಸುಧೀರ್ ಇವರ ಶಿಷ್ಯೆಯಾದ ವಿದುಷಿ ಅನಘಶ್ರೀ ಕಾರ್ಯಕ್ರಮ ನೀಡಲಿದ್ದು, ದಿನಾಂಕ 14-08-2023 ರಂದು ಶಾಂತಲಾ ಪ್ರಶಸ್ತಿ ಪುರಸ್ಕೃತ ನಾಟ್ಯಗುರು ಉಳ್ಳಾಲ ಮೋಹನ್ ಕುಮಾರ್, ವಿದುಷಿ ರಾಜಶ್ರೀ ಉಳ್ಳಾಲ, ವಿದುಷಿ ಶಾರದಾಮಣಿ ಶೇಖರ್ ಹಾಗೂ ಬೆಂಗಳೂರಿನ ವಿದ್ವಾನ್ ಪ್ರವೀಣ್ ಇವರ ಶಿಷ್ಯ ವಿದ್ವಾನ್ ಪ್ರಮೋದ್ ಉಳ್ಳಾಲ ಕಾರ್ಯಕ್ರಮ ನೀಡಲಿದ್ದಾರೆ. ದಿನಾಂಕ 21-08-2023ರಂದು ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಇವರ ಶಿಷ್ಯೆಯಾದ ಕುಮಾರಿ ಮೇಘ ಮಲಾರ್ ಪ್ರಭಾಕರ್ ಕಾರ್ಯಕ್ರಮ ನೀಡಲಿದ್ದು, ದಿನಾಂಕ 28-08-2023 ರಂದು ವಿದುಷಿ ವಿದ್ಯಾಮನೋಜ್ ಇವರ ಶಿಷ್ಯೆಯಾದ ಡಾ.ಮಹಿಮಾ ಎಂ.ಪಣಿಕ್ಕರ್ ಕಾರ್ಯಕ್ರಮ ನೀಡಲಿದ್ದಾರೆ.
ಮಂಗಳೂರು : ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ ಇವರ ಆಶ್ರಯದಲ್ಲಿ ಆರನೇ ವರ್ಷದ ‘ಯಕ್ಷ ವೈಭವ’ ಹಾಗೂ ‘ಭ್ರಾಮರೀ ಯಕ್ಷಮಣಿ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 12-08-2023ರಂದು ಸಂಜೆ 7ರಿಂದ ಮಂಗಳೂರು ಕುದ್ಮುಲ್ ರಂಗರಾವ್ ಪ್ರರಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ಕೋಡಿ ಕೃಷ್ಣ (ಕುಷ್ಟ) ಗಾಣಿಗ ಇವರಿಗೆ ‘ಭ್ರಾಮರೀ ಯಕ್ಷಮಣಿ ಪ್ರಶಸ್ತಿ’ ಹಾಗೂ ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘ ಮಂಗಳೂರು ಮತ್ತು ಕಟೀಲು ಮೇಳದ ನೇಪಥ್ಯ ಕಲಾವಿದರಾದ ಶ್ರೀ ವಿಠಲ ಶೆಟ್ಟಿ ಇವರಿಗೆ ‘ಭ್ರಾಮರೀ ಯಕ್ಷಸೇವಾ ಪುರಸ್ಕಾರ” ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಅಡೂರು ಲಕ್ಷ್ಮೀನಾರಾಯಣ ರಾವ್ ಮತ್ತು ಕೌಶಿಕ್ ರಾವ್ ಪುತ್ತಿಗೆ ಇವರಿಂದ ಚೆಂಡೆ ಜುಗಲ್ ಬಂದಿ ಹಾಗೂ ತೆಂಕುತಿಟ್ಟನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಶರಣ ಸೇವಾರತ್ನ, ರಾಣಿ ಶಶಿಪ್ರಭೆ ಮತ್ತು ಶ್ರೀದೇವಿ ಕೌಶಿಕೆ ಎಂಬ ಯಕ್ಷಗಾನ ಪ್ರಸಂಗಗಳ ಪ್ರದರ್ಶನವಿದೆ.
ಕಿನ್ನಿಗೋಳಿ : ಮೂಲ್ಕಿ ತಾಲೂಕಿನ ಶಾಲೆಗಳ ಮಕ್ಕಳಲ್ಲಿ ಓದುವ ಹವ್ಯಾಸ ಹುಟ್ಟಿಸುವ ಉದ್ದೇಶದಿಂದ ಸಾಹಿತ್ಯ ಪುಸ್ತಕಗಳನ್ನು ವಿತರಿಸುವ ಯೋಜನೆಗೆ ದಿನಾಂಕ 01-08-2023ರಂದು ಪದ್ಮನೂರು ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಾಲನೆ ನೀಡಲಾಯಿತು. ಪದ್ಮನೂರು ಶಾಲೆಯ ಮಕ್ಕಳಿಗೆ ಏರ್ಪಡಿಸಿದ ಸಾಹಿತ್ಯ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕನ್ನಡ ಸಾಹಿತ್ಯ ಪರಿಷತ್ ಮೂಲ್ಕಿ ತಾಲೂಕು ಘಟಕದ ಅಧ್ಯಕ್ಷ ಮಿಥುನ ಕೊಡೆತ್ತೂರು ಬಹುಮಾನವನ್ನು ವಿತರಿಸಿದರು. ಗಾಯಕ ಪ್ರಕಾಶ್ ಆಚಾರ್ ಇವರಿಂದ ಕನ್ನಡದ ಹಾಡುಗಳ ಗಾಯನ ನಡೆಯಿತು. ಕಸಾಪ ಮೂಲ್ಕಿ ಘಟಕದ ಸಂಘಟನಾ ಕಾರ್ಯದರ್ಶಿ ಹೆರಿಕ್ ಪಾಯಸ್, ಮುಖ್ಯ ಶಿಕ್ಷಕಿ ಐರಿನ್ ಫೆರ್ನಾಂಡಿಸ್, ಬಯಲಾಟ ಸಮಿತಿಯ ಶೇಖರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದು. ಶಿಕ್ಷಕಿ ಪ್ರಜ್ವಲಾ ಶೆಣೈ ನಿರೂಪಿಸಿದರು.
ಮಂಗಳೂರು : ಕಳೆದ 23 ವರ್ಷಗಳಿಂದ ಸಾಹಿತ್ಯ ಮತ್ತು ಪೂರಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದು ನೂರಕ್ಕೂ ಅಧಿಕ ಪುಸ್ತಕ ಪ್ರಕಟಿಸಿರುವ ಮಂಗಳೂರಿನ ಕಲ್ಲಚ್ಚು ಪ್ರಕಾಶನ, ವಾರ್ಷಿಕವಾಗಿ ಕೊಡಮಾಡುವ 2023ರ 14ನೇ ಆವೃತ್ತಿಯ ಪ್ರತಿಷ್ಠಿತ ‘ಕಲ್ಲಚ್ಚು ಪ್ರಶಸ್ತಿ’ಗೆ ಹಿರಿಯ ಸಾಹಿತಿ, ಕಿರುತೆರೆ ಮತ್ತು ಚಲನಚಿತ್ರ ರಂಗದ ಚಿತ್ರಕಥೆ ಹಾಗೂ ಸಂಭಾಷಣೆಕಾರ ತುರುವೇಕೆರೆ ಪ್ರಸಾದ್ ಆಯ್ಕೆಯಾಗಿದ್ದಾರೆ. ಸೆಪ್ಟೆಂಬರ್ ತಿಂಗಳ 2ನೇ ತಾರೀಕಿನಂದು ವಿವಿಧ ಕ್ಷೇತ್ರಗಳ ಆತಿಥಿಗಣ್ಯರ ಸಮಕ್ಷಮದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಅದ್ದೂರಿಯಾಗಿ ನಡೆಯಲಿದೆ. ತುರುವೇಕೆರೆ ಪ್ರಸಾದ್ ಅವರು ಕಳೆದ ನಾಲ್ಕು ದಶಕಗಳಿಂದ ಸಾಹಿತ್ಯ ರಚನೆಯಲ್ಲಿ ಕ್ರಿಯಾಶೀಲರಾಗಿದ್ದು, ಹಾಸ್ಯ ಬರವಣಿಗೆಯಲ್ಲಿ ವಿಶೇಷ ಹೆಸರು ಗಳಿಸಿರುತ್ತಾರೆ. 20ಕ್ಕೂ ಅಧಿಕ ವಿವಿಧ ಕೃತಿಗಳನ್ನು ಹೊರತಂದಿರುವುದು ಇವರ ಹೆಗ್ಗಳಿಕೆ. ಕಿರುತೆರೆ ಹಾಗೂ ಸಿನಿಮಾರಂಗದ ಅನೇಕ ದಿಗ್ಗಜರೊಂದಿಗೆ ಕೆಲಸ ಮಾಡಿ ಧಾರಾವಾಹಿ, ಚಲನಚಿತ್ರಗಳಿಗೆ ಚಿತ್ರಕಥೆ, ಸಂಭಾಷಣೆ ರಚಿಸಿರುವ ಇವರು ವಿವಿಧ ಪತ್ರಿಕೆಗಳ ಅಂಕಣಕಾರರೂ ಆಗಿದ್ದು, ನಾಡಿನ ಚಿರಪರಿಚಿತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.
ಮಂಗಳೂರು : ಮಂಗಳೂರು ದಸರಾ ಮಹೋತ್ಸವ ಅಕ್ಟೋಬರ್ 15ರಿಂದ ಅಕ್ಟೋಬರ್ 23ರವರೆಗೆ ವೈಭವದಿಂದ ನಡೆಯಲಿದ್ದು, ಈ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಕ್ಕೆ ರಾಷ್ಟ್ರ ಮತ್ತು ರಾಜ್ಯಮಟ್ಟದ ಕಲಾ ತಂಡಗಳನ್ನು ಆಹ್ವಾನಿಸಲಾಗಿದೆ. ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ನಾನಾ ಸಾಂಸ್ಕೃತಿಕ ತಂಡಗಳು, ಕಲಾವಿದರು ತಮ್ಮ ತಮ್ಮ ಅರ್ಜಿಗಳನ್ನು ಆಗಸ್ಟ್ 30ರೊಳಗೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕಚೇರಿಗೆ ಅಥವಾ [email protected] ಕಳುಹಿಸಬಹುದಾಗಿದೆ ಎಂದು ಕ್ಷೇತ್ರದ ಅಧ್ಯಕ್ಷ ಹೆಚ್.ಎಸ್. ಸಾಯಿರಾಂ ತಿಳಿಸಿದ್ದಾರೆ.
ಮಂಜೇಶ್ವರ : ಅಸೋಸಿಯೇಶನ್ ಆಫ್ ದಿ ಎಮರ್ಜೆನ್ಸಿ ವಿಕ್ಟಿಮ್ಸ್ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ವಿ.ರವೀಂದ್ರನ್ ಕುಂಬಳೆ ಬರೆದಿರುವ ‘ತುರ್ತು ಪರಿಸ್ಥಿತಿಯ ಕರಾಳ ದಿನಗಳು’ ಪುಸ್ತಕದ ಕನ್ನಡ ಆವೃತ್ತಿಯ ಬಿಡುಗಡೆ ಸಮಾರಂಭವು ಹೊಸಂಗಡಿಯ ಪ್ರೇರಣಾ ಸಭಾಂಗಣದಲ್ಲಿ ದಿನಾಂಕ 06-08-2023ರಂದು ಬೆಳಗ್ಗೆ 10 ಗಂಟೆಗೆ ಜರಗಲಿದೆ. ಕೇಂದ್ರದ ಮಾಜಿ ಸಚಿವ ಮತ್ತು ಹಾಲಿ ಸಂಸದ ಶ್ರೀ ಡಿ.ವಿ.ಸದಾನಂದ ಗೌಡ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಲಿರುವರು. ಖ್ಯಾತ ವೈದ್ಯ, ಸಾಹಿತಿ ಡಾ. ರಮಾನಂದ ಬನಾರಿ ಮಂಜೇಶ್ವರ ಅಧ್ಯಕ್ಷತೆ ವಹಿಸಲಿದ್ದು, ನಿವೃತ್ತ ಪ್ರಾಧ್ಯಾಪಿಕೆ ಡಾ. ಪ್ರಮೀಳಾ ಮಾಧವ್ ಪುಸ್ತಕವನ್ನು ಪರಿಚಯಿಸುವರು. ಕೃತಿಕಾರ ಶ್ರೀ ವಿ.ರವೀಂದ್ರನ್ ಕುಂಬಳೆ ಲೇಖಕರ ಮಾತುಗಳನ್ನಾಡುವರು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಶ್ರೀ ಪಿ.ಕೆ.ಕೃಷ್ಣದಾಸ್ ಪುಸ್ತಕವನ್ನು ಬಿಡುಗಡೆಗೊಳಿಸಲಿದ್ದು, ತುರ್ತು ಪರಿಸ್ಥಿತಿ ಸಂತ್ರಸ್ತ ಶ್ರೀ ಎಂ.ಕೆ.ಭಟ್ ಕಾಯರ್ಕಟ್ಟೆ ಪುಸ್ತಕವನ್ನು ಸ್ವೀಕರಿಸುವರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಆಮಂತ್ರಿತ ಸದಸ್ಯ ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಪ್ರಧಾನ ಭಾಷಣ ಮಾಡುವರು. ಈ ಸಂದರ್ಭದಲ್ಲಿ ವಿವಿಧ…