ಆರ್.ಎಸ್. ರಾಜಾರಾಮ್ ಓರ್ವ ಪ್ರತಿಭಾವಂತ ಹವ್ಯಾಸಿ ರಂಗಭೂಮಿ ಕಲಾವಿದರು. ಕರ್ನಾಟಕ ಸರಕಾರದ ಸಚಿವಾಲಯದಲ್ಲಿ ಅಧೀನ ಕಾರ್ಯದರ್ಶಿ ಹುದ್ದೆಯನ್ನಲಂಕರಿಸಿ ಸಮರ್ಥ ಸೇವೆಗೈದು ನಿವೃತ್ತಿ ಹೊಂದಿದವರು. ಸರ್ಕಾರಿ ಹುದ್ದೆಯಲ್ಲಿದ್ದರೂ ರಂಗಭೂಮಿ ಕಲಾವಿದರಾಗಿ ಖ್ಯಾತರಾಗಿದ್ದಾರೆ. ಆರ್.ಎಸ್. ರಾಜಾರಾಮ್ ಕೋಲಾರ ಜಿಲ್ಲೆಯ ಕೆ.ಜಿ.ಎಫ್.ನಲ್ಲಿ 10 ಜುಲೈ 1934ರಂದು ಜಿ.ಎಸ್. ರಘುನಾಥ ರಾವ್ ಮತ್ತು ಶಾರದಾಬಾಯಿ ದಂಪತಿಗಳಿಗೆ ಸುಪುತ್ರರಾಗಿ ಜನಿಸಿದರು.
ರಂಗ ನಟರಾದ ಇವರು ಕಿರುತೆರೆ, ಹಿರಿತೆರೆಗಳಲ್ಲೂ ಅಭಿನಯ ಮಾಡಿದ್ದಾರೆ. ಸರಸ್ವತಿ ಕಲಾನಿಕೇತನ, ಪ್ರಧಾನ ಮಿತ್ರ ಮಂಡಳಿ, ಸುಪ್ರಭಾತ ಕಲಾವಿದರು, ಕಮಲ ಕಲಾ ಮಂದಿರ ಮುಂತಾದ ಸಂಸ್ಥೆಗಳೊಂದಿಗೆ ಒಡನಾಟ ಹೊಂದಿದ್ದ ರಾಜಾರಾಮ್, ಮಲ್ಲೇಶ್ವರದ ತಮ್ಮ ಗೆಳೆಯರೊಂದಿಗೆ ಸೇರಿ ‘ರಸಿಕ ರಂಜಿನಿ ಕಲಾವಿದರು’ ಎಂಬ ಸಂಘಟನೆಯನ್ನು ಸ್ಥಾಪಿಸಿದರು. ತಮ್ಮ ಸಹೋದ್ಯೋಗಿಗಳೊಂದಿಗೆ ಸೇರಿಕೊಂಡು 1964ರಲ್ಲಿ ‘ಸಚಿವಾಲಯ ಸಾಂಸ್ಕೃತಿಕ ಸಂಘ’ವನ್ನು ಸ್ಥಾಪಿಸಿ, ಆ ಮೂಲಕ ಸಚಿವಾಲಯದ ಕ್ಲಬ್ ನೌಕರರ ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಕರ್ನಾಟಕ ಸರಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯ ಸಂಗೀತ ಮತ್ತು ನಾಟಕ ವಿಭಾಗದ ಅನೇಕ ನಾಟಕಗಳಲ್ಲಿ ನಟಿಸುವ ಅವಕಾಶ ಇವರಿಗೆ ದೊರೆಯಿತು.
ನಟರಂಗ ವೇದಿಕೆಯ ಮೂಲಕ ಸಿ.ಆರ್. ಸಿಂಹ ನಿರ್ದೇಶನದ ಹಲವಾರು ನಾಟಕಗಳಲ್ಲಿ ಅಭಿನಯಿಸಿ ಜನರ ಮೆಚ್ಚುಗೆಗೆ ಪಾತ್ರರಾದರು. ಬಿ.ವಿ. ಕಾರಂತ, ಎಂ.ಎಸ್. ಸತ್ಯು, ಶ್ರೀನಿವಾಸ ಜಿ. ಕಪ್ಪಣ್ಣ, ಪ್ರಕಾಶ ಬೆಳವಾಡಿ ಹೀಗೆ ಹಲವು ಮಂದಿ ಶ್ರೇಷ್ಠ ನಿರ್ದೇಶಕರ ನಿರ್ದೇಶನದಲ್ಲಿ ‘ಮಂಡೋದರಿ’, ‘ವಿಗಡವಿಕ್ರಮರಾಯ’, ‘ರಕ್ತಾಕ್ಷಿ’, ‘ಸದಾರಮೆ’, ‘ಕಾಕನಕೋಟೆ’, ‘ಮೃಚ್ಛಕಟಿಕ’, ‘ಸಂಕ್ರಾಂತಿ’, ‘ಅಗ್ನಿ ಮತ್ತು ಮಳೆ’ ಇತ್ಯಾದಿ ನಾಟಕಗಳಲ್ಲಿ ಯಶಸ್ವಿ ಅಭಿನಯ ನೀಡಿ ಪ್ರೇಕ್ಷಕರಿಂದ ಸೈ ಅನ್ನಿಸಿಕೊಂಡವರು. ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ನಡೆದ ನಾಟಕಗಳ ಪ್ರದರ್ಶನಗಳಲ್ಲಿ ಅಭಿನಯಿಸಿ ಜನಮನ್ನಣೆ ಪಡೆದರು. ‘ಭಲೇ ಹುಚ್ಚ’ ಚಿತ್ರದ ಮೂಲಕ ಚಲನಚಿತ್ರ ಲೋಕಕ್ಕೆ ಪಾದಾರ್ಪಣೆ ಮಾಡಿದ ಇವರು ‘ಕೂಡಿ ಬಾಳಿದರೆ ಸ್ವರ್ಗ’ ಸಿನಿಮಾದಲ್ಲಿ ಜವಾಬ್ದಾರಿಯುತ ತಂದೆಯ ಪಾತ್ರ ನಿರ್ವಹಿಸಿ ಜನಮೆಚ್ಚುಗೆ ಪಡೆದರು.
ಹಾಸ್ಯಪ್ರಧಾನ ಪಾತ್ರಗಳನ್ನು ನಿರ್ವಹಿಸಿ ಪ್ರೇಕ್ಷಕರನ್ನು ನಕ್ಕು ನಗಿಸುವಲ್ಲಿಯೂ ಯಶಸ್ವಿಯಾಗಿರುವ ಇವರು ಝೀ ಕನ್ನಡದ ‘ಜೊತೆ ಜೊತೆಯಲಿ’ ಧಾರವಾಹಿಯಲ್ಲಿ ಅಜ್ಜನ ಪಾತ್ರ ನಿರ್ವಹಿಸಿ ಗಮನಾರ್ಹರಾಗಿದ್ದಾರೆ. ಅನೇಕ ಪ್ರಶಸ್ತಿ ಗೌರವಗಳಿಗೆ ಪಾತ್ರರಾದ ಇವರನ್ನು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಗೌರವಿಸಿವೆ. ಇವೆಲ್ಲವೂ ಇವರ ಪ್ರತಿಭೆಗೆ ಸಂದ ಗೌರವ. ಓರ್ವ ಸರಕಾರಿ ಉದ್ಯೋಗಿಯಾಗಿದ್ದರೂ ತಮ್ಮ ನಟನೆಯ ಮೂಲಕ ಪ್ರೇಕ್ಷಕರನ್ನು ನಕ್ಕು ನಗಿಸಿ, ಗಂಭೀರ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿ ಪ್ರೇಕ್ಷಕರ ಮನಸ್ಸಿನಲ್ಲಿ ನೆಲೆ ನಿಂತ ಆರ್.ಎಸ್. ರಾಜಾರಾಮ್ 10 ಮೇ 2021ರಲ್ಲಿ ಕೋವಿಡ್ ನಿಂದಾಗಿ ಇಹದ ಬಂಧನದಿಂದ ಮುಕ್ತರಾದರು.
ಅಪ್ರತಿಮ ಪ್ರತಿಭೆ ಆರ್.ಎಸ್. ರಾಜಾರಾಮ್ ಇವರ ಜನ್ಮದಿನವಾದ ಇಂದು ರಂಗಭೂಮಿಯಲ್ಲಿ ಅವರು ಮಾಡಿದ ಅಪೂರ್ವ ಸಾಧನೆಯನ್ನು ಸ್ಮರಿಸುತ್ತಾ ಅದ್ಭುತ ಪ್ರತಿಭೆಯ ಪವಿತ್ರ ಆತ್ಮಕ್ಕೆ ಅಂತರಾತ್ಮದ ನಮನ ಸಲ್ಲಿಸೋಣ.
– ಅಕ್ಷರೀ
