ಮಂಗಳೂರು : ಸಂತ ಅಲೋಶಿಯಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರ ಮತ್ತು ಕನ್ನಡ ವಿಭಾಗದಿಂದ ತುಮಕೂರು ವಿ.ವಿ. ಪ್ರಾಧ್ಯಾಪಕರಾಗಿರುವ ಡಾ. ನಿತ್ಯಾನಂದ ಬಿ. ಶೆಟ್ಟಿ ಇವರು ಬರೆದ ಯಕ್ಷಗಾನ ಮತ್ತು ಕರಾವಳಿಯ ಸಾಮಾಜಿಕ ಇತಿಹಾಸವನ್ನು ಮರು ನಿರೂಪಿಸಿದ ‘ಅಳವು ಅರಿಯದ ಭಾಷೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮವು ದಿನಾಂಕ 13 ಫೆಬ್ರವರಿ 2026ರಂದು ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯದ ಎಲ್.ಎಫ್. ರಸ್ಕಿನ್ಹ ಸಭಾಂಗಣದಲ್ಲಿ ನಡೆಯಿತು. ಹಿಂದೂಸ್ತಾನಿ ಗಾಯಕ ಕೀರ್ತನ್ ನಾಯಕ್ ಇವರು ಜೇಡರ ದಾಸಿಮಯ್ಯರ ವಚನದ ಸಾಲನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರಸಿದ್ಧ ಭಾಗವತ ಪಟ್ಲ ಸತೀಶ ಶೆಟ್ಟಿ ಜೇನಿನ ಪೆಟ್ಟಿಗೆಯಿಂದ ನೂತನ ಕೃತಿಯನ್ನು ಹೊರತೆಗೆಯುವ ಮೂಲಕ ಅನಾವರಣಗೊಳಿಸಿ ಮಾತನಾಡಿ “ಯಕ್ಷಗಾನ ಕಲೆ ಪ್ರಪಂಚದ ಶ್ರೀಮಂತ ಕಲೆಯಾಗಿ ಗುರುತಿಸಿಕೊಂಡಿದೆ. ಇಂತಹ ಕಲೆಯ ಕುರಿತಾದ ಈ ಕೃತಿ ರಚನೆ ಅಭಿನಂದನಾರ್ಹ. ನೃತ್ಯ, ಅಭಿನಯ, ಸಂಗೀತ ಸೇರಿದಂತೆ ಎಲ್ಲಾ ರೀತಿಯ ಕಲಾ ಪ್ರಕಾರಗಳನ್ನು ಒಳಗೊಂಡ ಯಕ್ಷಗಾನ ಶುದ್ಧವಾದ ಕನ್ನಡವನ್ನು ಇಂದಿಗೂ ಉಳಿಸಿ, ಬೆಳೆಸುತ್ತಿದೆ. ಯಕ್ಷಗಾನ ಕಲೆಗೆ ಜಾತಿ, ಧರ್ಮ ಮೀರಿ ಕಲಾವಿದರ ಕೊಡುಗೆ ಇದೆ, ಅವರ ಪ್ರೀತಿ ಇದೆ” ಎಂದು ಹೇಳಿದ ಅವರು, ಪುಂಡು ವೇಷಧಾರಿಯಾಗಿ ಪ್ರಸಿದ್ಧಿ ಪಡೆದಿರುವ ಕ್ರಿಶ್ಚಿಯನ್ ಬಾಬು ಹಾಗೂ ಯಕ್ಷಗಾನದ ಮೇರು ಪ್ರತಿಭೆ ಜಬ್ಬಾರ್ ಸುಮೋ ಅವರನ್ನು ನೆನಪಿಸಿಕೊಂಡರು.
ಕಾಂತಾವರ ಕನ್ನಡ ಸಂಘದ ಪ್ರಕಾಶನದದಿಂದ ಹೊರತರಲಾದ ಕೃತಿಯ ಬಗ್ಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕಾರ್ಕಳ ಯಕ್ಷ ರಂಗಾಯಣದ ನಿರ್ದೇಶಕ ಬಿ.ಆರ್. ವೆಂಕಟರಮಣ ಐತಾಳ, “ಯಕ್ಷಗಾನದ ಇತಿಹಾಸದ ನೋಟ, ಕಲೆ ಸಾಹಿತ್ಯ-ಸಾಮಾಜಿಕ-ರಾಜಕೀಯ ಚಿಂತನೆಯನ್ನು ಪ್ರಸ್ತುತ ಪಡಿಸುವ ವಿಶೇಷ ರೀತಿಯ ಗ್ರಂಥ ಇದಾಗಿದೆ. ಇದು ಇತರ ಭಾಷೆಗಳಿಗೆ ತರ್ಜುಮೆ ಆಗಬೇಕಾದ ಕೃತಿ” ಎಂದು ಬಣ್ಣಿಸಿದರು.
ಸಂತ ಅಲೋಶಿಯಸ್ ವಿ.ವಿ. ಸಹ ಕುಲಪತಿ ರೆ.ಫಾ. ಡಾ. ಮೆಲ್ವಿನ್ ಡಿಕುನ್ನಾ ಅಧ್ಯಕ್ಷತೆ ವಹಿಸಿದ್ದರು. ಫ್ಯಾಮಿಲಿ ಟ್ರಸ್ಟಿನ ಪ್ರಮುಖರಾದ ಕಿರಣ್ ಮಲ್ಯ, ಪ್ರಾಧ್ಯಾಪಕರಾದ ಡಾ. ದಿನೇಶ್ ನಾಯಕ್, ಮಹಾಲಿಂಗ ಭಟ್, ಕೃತಿಕಾರ ಡಾ. ನಿತ್ಯಾನಂದ ಶೆಟ್ಟಿ ಉಪಸ್ಥಿತರಿದ್ದರು. ಅಭಿಷೇಕ್ ಕಾರ್ಯಕ್ರಮ ನಿರೂಪಿಸಿದರು. ಪುಸ್ತಕ ಬಿಡುಗಡೆ ಬಳಿಕ ‘ಹೊತ್ತಗೆಯ ಹೊತ್ತು’ ಸಂವಾದ ನಡೆಯಿತು. ಸಂತ ಅಲೋಶಿಯಸ್ ಯಕ್ಷಬಳಗದಿಂದ ಡಾ. ದಿನೇಶ್ ನಾಯಕ್ ಇವರ ವಿಶಿಷ್ಟ ಪರಿಕಲ್ಪನೆಯಲ್ಲಿ ಯಕ್ಷ-ಭಾವ-ಅಭಿವ್ಯಕ್ತಿ ಎಂಬ ವಿನೂತನ ಯಕ್ಷಗಾನ ಪ್ರದರ್ಶನಗೊಂಡಿತು.
