ಮಂಗಳೂರು : ಪ್ರಸಿದ್ಧ ಭರತನಾಟ್ಯ ಕಲಾವಿದೆ ವಿದುಷಿ ಅಯನಾ ಪೆರ್ಲ ಇವರು ಕೇಂದ್ರ ಸರಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ದೂರದರ್ಶನವು ಏರ್ಪಡಿಸುವ ಉನ್ನತ ಶ್ರೇಯಾಂಕದ ಭರತನಾಟ್ಯ ಪರೀಕ್ಷೆಯಲ್ಲಿ ಬಿ-ಹೈ ಸ್ಥಾನ ಪಡೆದಿದ್ದಾರೆ. ಇದೊಂದು ಪ್ರತಿಷ್ಠಿತ ಸ್ಥಾನವಾಗಿದ್ದು ಭಾರತದಾದ್ಯಂತ ಉನ್ನತ ಪ್ರದರ್ಶನಗಳನ್ನು ನೀಡಲು ಅರ್ಹತೆ ಪಡೆಯುವ ಮಾನದಂಡವಾಗಿದೆ.
ಕಳೆದ ಇಪ್ಪತ್ತೈದು ವರ್ಷಗಳಿಂದ ಭರತನಾಟ್ಯ ಕಲಿಯುತ್ತ ದೇಶಾದ್ಯಂತ ಪ್ರದರ್ಶನ ನೀಡುತ್ತಿರುವ ವಿದುಷಿ ಅಯನಾ ಪೆರ್ಲ ಮಂಗಳೂರಿನ ನೃತ್ಯವಿದುಷಿಯರಾದ ಶಾರದಾಮಣಿ ಶೇಖರ್ ಮತ್ತು ಶ್ರೀಲತಾ ನಾಗರಾಜ್ ಇವರ ಶಿಷ್ಯೆಯಾಗಿ, ಪ್ರಸ್ತುತ ಚೆನ್ನೈಯ ವರ್ಷಾ ಅಕ್ಹೌರಿ ಇವರ ಬಳಿ ಭರತನಾಟ್ಯದ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ವಿದುಷಿ ಅಯನಾ ಪೆರ್ಲ ಕವಿ – ಸಾಹಿತಿ ದಂಪತಿಗಳಾದ ಡಾ. ವಸಂತಕುಮಾರ ಪೆರ್ಲ ಮತ್ತು ಕೆ. ಶೈಲಾಕುಮಾರಿ ಇವರ ದ್ವಿತೀಯ ಪುತ್ರಿಯಾಗಿದ್ದು, ಯೋಗ ಪರಿಣಿತೆಯೂ ಆಗಿದ್ದಾರೆ. ಎಂಜಿನಿಯರಿಂಗ್ ಶಿಕ್ಷಣ ಪಡೆದು ಸದ್ಯ ಚೀನಾದಲ್ಲಿ ವೃತ್ತಿಯಲ್ಲಿದ್ದಾರೆ.
