ಉಪ್ಪಿನಂಗಡಿ : ಯಕ್ಷಗಾನ ಕ್ಷೇತ್ರದ ಕಲಾ ದಿಗ್ಗಜ ಪಾತಾಳ ವೆಂಕಟರಮಣ ಭಟ್ ಸಂಸ್ಥಾಪಿತ ಪಾತಾಳ ಯಕ್ಷ ಪ್ರತಿಷ್ಠಾನದ ವತಿಯಿಂದ ಕೊಡ ಮಾಡುವ ‘ಪಾತಾಳ ಸ್ಮೃತಿ ಗೌರವ’ವನ್ನು ಯಕ್ಷಗಾನ ಸಹಿತ ವಿವಿಧ ಕ್ಷೇತ್ರಗಳಿಗೆ ಕೊಡುಗೆ ನೀಡುತ್ತಾ ಬಂದಿರುವ ಸಾಮಾಜಿಕ ಮುಂದಾಳು ಅರುಣ್ ಕುಮಾರ್ ಪುತ್ತಿಲ ಇವರಿಗೆ ದಿನಾಂಕ 06 ಆಗಸ್ಟ್ 2026ರಂದು ಪಾತಾಳ ಮನೆಯಲ್ಲಿ ಪ್ರದಾನ ಮಾಡಲಾಯಿತು.
ಕನ್ನಡ ಸಾಹಿತ್ಯ ಪರಿಷತ್ನ ಪೂರ್ವ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅಭಿನಂದನಾ ಮಾತುಗಳನ್ನಾಡಿದ ಸಾಹಿತಿ ಮುಳಿಯ ಶಂಕರ್ ಭಟ್, ಕಲಾವಿದನಿಗೆ ಸಲ್ಲುವ ಗೌರವವನ್ನು ಕಲಾರಾಧಕ-ಕಲಾಸೇವಕ-ಸಮಾಜಹಿತ ಚಿಂತಕನಿಗೆ ನೀಡುವ ಮೂಲಕ ಕಲಾ ಕ್ಷೇತ್ರ ಮತ್ತು ಸಾಮಾಜಿಕ ಕ್ಷೇತ್ರದ ಸ್ಪಂದನದ ಸಂಕೇತವಾಗಿ ಪಾತಾಳ ಸ್ಮೃತಿ ಗೌರವ ಪ್ರಶಸ್ತಿಯು ಪುತ್ತಿಲರನ್ನು ಅರಸಿ ಬಂದಿದೆ” ಎಂದರು.
‘ಪಾತಾಳರ ನೆನಪು’ ಕೃತಿಯನ್ನು ಬಿಡುಗಡೆ ಮಾಡಿದ ಕಲ್ಕೂರ ಪ್ರತಿಷ್ಠಾನದ ಪ್ರದೀಪ ಕುಮಾರ್ ಕಲ್ಕೂರ ಮಾತನಾಡಿ “ಪಾತಾಳ ಅವರ ಜೀವನ ಶೈಲಿ, ಅವರು ಸನಾತನ ಸಂಸ್ಕೃತಿ ಮತ್ತು ಆಚರಣೆಗೆ ನೀಡುತ್ತಿದ್ದ ಒತ್ತು ಅನುಕರಣೀಯವಾಗಿದೆ” ಎಂದರು.

ವಿದ್ವಾನ್ ಮೇಲುಕೋಟೆ ಉಮಾಕಾಂತ್ ಭಟ್ ಮಾತನಾಡಿ, “ಸ್ವಹಿತ, ಸ್ವಕುಟುಂಬ ಹಿತ, ಸಮಾಜ ಹಿತ ಇದಕ್ಕಾಗಿ ನಿತ್ಯಾನುಷ್ಠಾನ ಪೂಜಾ ಕಾರ್ಯಗಳನ್ನು ತಪ್ಪದೆ ನಡೆಸಿಕೊಂಡು ಬರುತ್ತಿದ್ದ ಪಾತಾಳರಿಗೆ ಅವರ ಆಧ್ಯಾತ್ಮದ ಗುರುಗಳು ದಿವ್ಯ ಪ್ರಜಾ ಎಂಬ ಹೆಸರನ್ನು ನೀಡಿದ್ದರು. ನಾವಿಂದು ಪಾತಾಳರ ಸ್ಮರಣೆ ಮಾಡುವುದೆಂದರೆ ಅವರಂತೆ ದಿವ್ಯ ಪ್ರಜೆಗಳಾಗುವ ಸಂಕಲ್ಪ ತೊಡಬೇಕು” ಎಂದರು.

ಪಾತಾಳ ವೆಂಕಟರಮಣ ಭಟ್ ಅವರೊಂದಿಗೆ ಅವರ ಮನೆಯ, ತೋಟದ ಕೆಲಸದಾಳುಗಳಾಗಿ, ಕೊನೆ ದಿನಗಳಲ್ಲಿ ಅವರ ಶುಶ್ರೂಷಕರಾಗಿ ಸೇವೆ ಸಲ್ಲಿಸುತ್ತಿದ್ದ ಏಳು ಮಂದಿಯನ್ನು ಪಾತಾಳ ವೆಂಕಟರಮಣ ಭಟ್ ಅವರ ಮಕ್ಕಳು ಗೌರವಪೂರ್ವಕ ಸನ್ಮಾನ ಮಾಡಿದಾಗ ಇಡೀ ಸಭಾಂಗಣ ತುಂಬು ಮನದ ಕರತಾಂಡನದ ಸಂಭ್ರಮವನ್ನು ವ್ಯಕ್ತಪಡಿಸಿತು.

ನಿವೃತ್ತ ಸೇನಾಧಿಕಾರಿ ಚಂದಪ್ಪ ಮೂಲ್ಯ, ಗಣ್ಯರಾದ ಡಾ. ವಸಂತ ಕುಮಾರ ತಾಳ್ತಜೆ, ವೇದವ್ಯಾಸ ರಾಮಕುಂಜ, ಕೇಶವ ಭಟ್ ಪಲ್ಲದಕೋಡಿ, ಸುಜೀರ್ ಗಣಪತಿ ನಾಯಕ್, ನರಸಿಂಹ ಭಟ್ ಮೂಡಾಜೆ, ಕಂಗ್ವೆ ವಿಶ್ವನಾಥ ಶೆಟ್ಟಿ, ಡಾ. ಎಂ.ಎನ್. ಭಟ್, ಪ್ರಶಾಂತ್ ಗಾಣಿಗ ಶಿವಾಜಿನಗರ, ಕೈಲಾರ್ ರಾಜಗೋಪಾಲ ಭಟ್, ಲೋಕೇಶ್ ಬೆತ್ತೋಡಿ ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದ ಮೊದಲು ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ‘ಶ್ರೀಕೃಷ್ಣ ಪರಂಧಾಮ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು. ಮಹಾಲಿಂಗೇಶ್ವರ ಭಟ್ ಬಿಲ್ಲಂಪದವು ನಿರೂಪಿಸಿ, ಅಂಬಾ ಪ್ರಸಾದ್ ಪಾತಾಳ ಸ್ವಾಗತಿಸಿ, ಶ್ರೀರಾಮ ಭಟ್ ಪಾತಾಳ ವಂದಿಸಿದರು.
