ಉಪ್ಪಿನಂಗಡಿ : ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಉಪ್ಪಿನಂಗಡಿ ಹೋಬಳಿ ಘಟಕ ಇದರ ವತಿಯಿಂದ ಮಕ್ಕಳಲ್ಲಿ ಸಾಹಿತ್ಯಾಸಕ್ತಿಯನ್ನು ಮೂಡಿಸಿ ಅವರಲ್ಲಿನ ಪ್ರತಿಭೆಯನ್ನು ಅನಾವರಣಗೊಳಿಸುವ ಸಲುವಾಗಿ ‘ಕನ್ನಡ ಕಲರವ -2’ ಕಾರ್ಯಕ್ರಮವನ್ನು ದಿನಾಂಕ 09 ಆಗಸ್ಟ್ 2025ರ ಶನಿವಾರದಂದು ಮಧ್ಯಾಹ್ನ 2-00 ಗಂಟೆಗೆ ಉಪ್ಪಿನಂಗಡಿಯ ಇಂದ್ರಪ್ರಭ ಸಭಾಂಗಣದಲ್ಲಿ ನಡೆಸಲು ಸಂಕಲ್ಪಿಸಲಾಗಿದೆ.
ಇದರ ಸಲುವಾಗಿ ದಿನಾಂಕ 02 ಆಗಸ್ಟ್ 2025ರ ಶನಿವಾರದಂದು ಉಪ್ಪಿನಂಗಡಿ ಹೋಬಳಿ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ ಹಾಗೂ ಸ್ವರಚಿತ ಕವನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧೆಯು ಹಿರಿಯ ಪ್ರಾಥಮಿಕ, ಪ್ರೌಢ, ಕಾಲೇಜು ವಿಭಾಗದಲ್ಲಿ ನಡೆಯಲಿದೆ. ಭಾಗವಹಿಸಲಿಚ್ಛಿಸುವ ವಿದ್ಯಾರ್ಥಿಗಳು 20 ಜುಲೈ 2025ರ ಒಳಗಾಗಿ ತಮ್ಮ ತಮ್ಮ ಹೆಸರನ್ನು ಶಾಲಾ ಮುಖ್ಯೋಪಾಧ್ಯಾಯರ ದೃಢೀಕರಣದೊಂದಿಗೆ ಸಲ್ಲಿಸಬೇಕು.
ಪ್ರಬಂಧ ಸ್ಪರ್ಧೆಯ ವಿಷಯ ‘ನಾ ಕಂಡ ತೆರೆಮರೆಯ ಸ್ವಾತಂತ್ರ್ಯ ಯೋಧ’ (ಇತಿಹಾಸದ ಪುಟಗಳಲ್ಲಿ ದಾಖಲಾಗದೆ ಉಳಿದಿರುವ ದೇಶಕ್ಕಾಗಿ ಪ್ರಾಣಾರ್ಪಣೆ ಗೈದಿರುವ ಸ್ವಾತಂತ್ರ್ಯ ಯೋಧರ ಬಗ್ಗೆ ಬೆಳಕು ಚೆಲ್ಲುವ ಬರಹ)
ಹಿರಿಯ ಪ್ರಾಥಮಿಕ ವಿಭಾಗ ‘ಆಪರೇಷನ್ ಸಿಂಧೂರ’, ಪ್ರೌಢ ವಿಭಾಗ ‘ಜಗತ್ತಿನ ಶ್ರೇಷ್ಠ ರಾಷ್ಟ್ರವಾಗಿ ಮುನ್ನುಗ್ಗುತ್ತಿರುವ ಭಾರತ’ ಮತ್ತು ಕಾಲೇಜು ವಿಭಾಗ ‘ನವ ಭಾರತ ನಿರ್ಮಾಣದಲ್ಲಿ ದೇಶ ಎದುರಿಸುತ್ತಿರುವ ಸವಾಲುಗಳು’ ಎಂಬ ವಿಷಯದಲ್ಲಿ ಭಾಷಣ ಸ್ಪರ್ಧೆ.
ಸ್ವರಚಿತ ಕವನ ವಾಚನ ವಿಷಯ : ನಮ್ಮ ದೇಶಕ್ಕೆ ಸಂಬಂಧಿಸಿದ ಯಾವುದೇ ವಿಷಯವನ್ನು ಆಧರಿಸಿ ಸ್ವರಚಿಸಿದ ಕವನವನ್ನು ವಾಚಿಸುವುದು.
ಸ್ಪರ್ಧೆಯು ದಿನಾಂಕ 02 ಆಗಸ್ಟ್ 2025ರ ಶನಿವಾರ ಮಧ್ಯಾಹ್ನ 2-00 ಗಂಟೆಯಿಂದ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ನಡೆಯಲಿದ್ದು, ಸ್ಪರ್ಧಾ ವಿಜೇತರಿಗೆ ಬಹುಮಾನವನ್ನು ದಿನಾಂಕ 09 ಆಗಸ್ಟ್ 2025ರ ಶನಿವಾರದಂದು ಮಧ್ಯಾಹ್ನ ನಡೆಯಲಿರುವ ಕನ್ನಡ ಕಲರವ -2ರ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು. ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಗ್ರಾಮದ ವಿದ್ಯಾಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಅವಕಾಶವಿದ್ದು, ಕಾರ್ಯಕ್ರಮದ ವಿವರದೊಂದಿಗೆ ಪೂರ್ವ ಮಾಹಿತಿಯನ್ನು ಸಂಘಟಕರಿಗೆ ತಿಳಿಸಲು ಕೋರಿಕೆ. ಹೆಚ್ಚಿನ ಮಾಹಿತಿಗಾಗಿ 9743687614, 9591340959 ಸಂಪರ್ಕಿಸಬಹುದಾಗಿದೆ.