ಮಂಗಳೂರು : ತುಳು ಕೂಟ ಕುಡ್ಲ ಮತ್ತು ಸರಯೂ ಬಾಲ ಯಕ್ಷವೃಂದ ಕೋಡಿಕಲ್ ಇವರ ವತಿಯಿಂದ ನಡೆಯುತ್ತಿರುವ ಮರೋಳಿ ಬಿ. ದಾಮೋದರ ನಿಸರ್ಗ ಸಂಸ್ಮರಣೆ-ತುಳು ತಾಳಮದ್ದಳೆ ಸಪ್ತಾಹದ ಆರನೇ ದಿನದ ಕಾರ್ಯಕ್ರಮ ದಿನಾಂಕ 12 ಡಿಸೆಂಬರ್ 2025ರಂದು ಮಂಗಳೂರಿನ ಕಂಕನಾಡಿ ಗರೋಡಿ ದೇವಿ ಬೈದೆತಿ ಬಾವಡಿಯಲ್ಲಿ ನಡೆಯಿತು.
ಈ ಸಪ್ತಾಹದಲ್ಲಿ ಭಾಗವಹಿಸಿದ ವಿ.ಹಿಂ.ಪ.ನಲ್ಲಿ ರಾಜ್ಯದ ಉನ್ನತ ಹುದ್ದೆ ಹೊಂದಿರುವ, ಹಿಂದೂ ನಾಯಕ ಶರಣ್ ಪಂಪ್ ವೆಲ್ “ನಮ್ಮದು ಬಲು ಸನಾತನವಾದ ಸಂಸ್ಕೃತಿ. ಇದನ್ನು ಆಧರಿಸಿ ಹಿರಿಯರು ರಾಷ್ಟ್ರ ಕಟ್ಟಿದರು, ನಮಗೆ ಉತ್ತಮ ಪಥ ದರ್ಶಿಸಿದರು. ಹಾಗಾಗಿ ನಾವು ಹಿರಿಯರನ್ನು ಮರೆಯಲಾಗದು. ಅಂತೆಯೇ, ತುಳು ಭಾಷೆಯ ಏಳ್ಗೆಗಾಗಿ ತನ್ನ ಕೊನೆ ಉಸಿರಿನ ತನಕವೂ ಸೇವೆ ಮಾಡುತ್ತಾ ಬಂದು, ತಾನು ಅಧ್ಯಕ್ಷ ಪದವಿಯಲ್ಲಿರುತ್ತಾ ಆ ಲೋಕವನ್ನು ಕಂಡ ಮಹಾನ್ ಚೇತನ ನಿಸರ್ಗರು. ಸಂಘದ ಮಾನ್ಯ ಸಂಘ ಚಾಲಕರಾಗಿಯೂ ಜವಾಬ್ದಾರಿ ನಿರ್ವಹಿಸಿದವರು. ಗರಡಿಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ದುಡಿದವರ ಸಂಸ್ಮರಣೆ ಆಗುತ್ತಿರುವುದು ಅತ್ಯಂತ ಶ್ಲಾಘನೀಯು” ಎಂದು ಹೇಳಿದರು.

ಯಕ್ಷಗಾನ ಭಾಗವತ, ಅರ್ಥದಾರಿ ಲಯನ್ ಯೋಗೀಶ್ ಕುಮಾರ್ ಜೆಪ್ಪು ಇವರನ್ನು ಪಾಂಡೇಶ್ವರದ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿಯ ಪರವಾಗಿ ಗೌರವಿಸಲಾಯಿತು. ಖ್ಯಾತ ಯಕ್ಷ ಕಲಾವಿದ ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು, ಉದಯ ಕುಂಜತ್ತೂರು, ಹಿರಿಯರಾದ ಬೋಳಾರ ಸುಬ್ಬಯ್ಯ ಶೆಟ್ಟಿ, ಹೇಮಾ ದಾಮೋದರ ನಿಸರ್ಗ, ರವಿ ಅಲೆವೂರಾಯ, ನಾಗೇಶ್ ದೇವಾಡಿಗ ಕದ್ರಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿಯವರಿಂದ ‘ಕೋಟಿ ಚೆನ್ನಯ’ ತಾಳಮದ್ದಳೆ ನಡೆಯಿತು.
