ಬೆಂಗಳೂರು : ಬೆಂಗಳೂರಿನ ಹೆಸರಾಂತ ‘ನಟರಾಜರಂಗಂ ಸ್ಕೂಲ್ ಆಫ್ ಡ್ಯಾನ್ಸ್’ ನೃತ್ಯಸಂಸ್ಥೆಯ ಬದ್ಧತೆಯ ಉತ್ತಮ ನಾಟ್ಯಗುರು ಮತ್ತು ನೃತ್ಯಕಲಾವಿದೆ ಶ್ರೀಮತಿ ಅಭಿನಯ ನಟರಾಜನ್ ಪ್ರತಿಭಾವಂತ ಉತ್ತಮ ನೃತ್ಯ ಗುರು ಮತ್ತು ನೃತ್ಯ ಕಲಾವಿದೆ. ಇವರ ಅನುಪಮವಾದ ನೃತ್ಯ ಸಂಯೋಜನೆ ಮತ್ತು ನಾಟ್ಯ ಶಿಕ್ಷಣ ವೈಶಿಷ್ಟ್ಯ ಪೂರ್ಣವಾದದ್ದು. ನೃತ್ಯಗುರು ಶ್ರೀಮತಿ ಕಾಮಾಕ್ಷಿ ಇವರಿಂದ ಉತ್ತಮ ನೃತ್ಯ ಶಿಕ್ಷಣ ಮತ್ತು ಮಾರ್ಗದರ್ಶನವನ್ನು ಪಡೆದ ಅಭಿನಯ ತನ್ನ ನೂರಾರು ಜನ ವಿದ್ಯಾರ್ಥಿನಿಯರಿಗೆ ಬಹು ಆಸಕ್ತಿ – ಪ್ರೀತಿಯಿಂದ ಬದ್ಧತೆಯಿಂದ ನಿಸ್ವಾರ್ಥ ಮನೋಭಾವದಿಂದ ವಿದ್ಯಾಧಾರೆ ಎರೆಯುತ್ತಿದ್ದಾರೆ. ಹೊಸ ಹೊಸ ಕೃತಿಗಳಿಗೆ ಸುಂದರವಾಗಿ ನೃತ್ಯ ಸಂಯೋಜಿಸಿ, ಸೃಜನಾತ್ಮಕವಾಗಿ ಅಷ್ಟೇ ಪ್ರಯೋಗಾತ್ಮಕವಾಗಿ ರೂಪಿಸಿ, ನೃತ್ಯ ಕೃತಿಗಳನ್ನು ಪ್ರದರ್ಶನಕ್ಕೆ ಸಿದ್ಧ ಮಾಡುವುದು, ನೃತ್ಯ ಕಲಾವಿದರನ್ನು ರೂಪಿಸುವುದು ಇವರ ಅಸ್ಮಿತೆ ಎಂದರೆ ಅತಿಶಯೋಕ್ತಿಯಲ್ಲ.

ಸ್ವತಃ ಉತ್ತಮ ನೃತ್ಯಗಾರ್ತಿಯಾದ ಅಭಿನಯ, ನುರಿತ ಮನಮೋಹಕ ಅಭಿನಯಕ್ಕೆ, ಹೊಸ ವಿನ್ಯಾಸದ ನೃತ್ಯಗಳ ನಿರೂಪಣೆಗೆ ಜನಪ್ರಿಯರಾಗಿದ್ದಾರೆ. ಇವರು ತಮ್ಮ ಶಿಷ್ಯರ ಪ್ರತಿ ರಂಗಪ್ರವೇಶದಲ್ಲೂ ಹೊಸ ಮೆರುಗಿನ ನೃತ್ಯಾರ್ಪಣೆ ಮಾಡುವುದು ಅವರ ಪರಿಪಾಠ. ಇವರ ನುರಿತ ಗರಡಿಯಲ್ಲಿ ತಯಾರಾದ ಪ್ರತಿ ನೃತ್ಯಶಿಲ್ಪಗಳು ಭವಿಷ್ಯದಲ್ಲಿ ನೃತ್ಯ ಜಗತ್ತಿಗೆ ಒಂದು ಉತ್ತಮ ಕೊಡುಗೆ ಆಗಬಹುದು ಎನ್ನುವುದರಲ್ಲಿ ಅನುಮಾನವಿಲ್ಲ. ಪ್ರಸ್ತುತ ಉದಯೋನ್ಮುಖ ನೃತ್ಯಗಾರ್ತಿ ಅನನ್ಯ ಶರ್ಮ ಇವರ ಭರವಸೆಯ ಶಿಷ್ಯೆಯಾಗಿದ್ದಾಳೆ. ಪ್ರಸ್ತುತ ಉದಯೋನ್ಮುಖ ನೃತ್ಯ ಕಲಾವಿದೆ ಕುಮಾರಿ ಅನನ್ಯ ಶರ್ಮ ಸಾಕಷ್ಟು ನೃತ್ಯ ತಯಾರಿಯನ್ನು ಪಡೆದುಕೊಂಡು ರಂಗಪ್ರವೇಶ ಮಾಡಲು ಅನುವಾಗಿದ್ದಾಳೆ.

ಶ್ರೀಮತಿ ಅಭಿನಯ ನಟರಾಜನ್ ಇವರ ಬಳಿ ಕಳೆದ 10 ವರ್ಷಗಳಿಂದ ಅತ್ಯಾಸಕ್ತಿ- ಶ್ರದ್ಧೆಗಳಿಂದ ಭರತನಾಟ್ಯ ಕಲಿಯುತ್ತಿರುವ ಪ್ರತಿಭಾವಂತೆ ಕುಮಾರಿ ಅನನ್ಯಾ ಶರ್ಮ, ಶ್ರೀಮತಿ ಛಾಯಾ ಶರ್ಮ ಮತ್ತು ಶ್ರೀ ಅನಿಂದ್ಯಾ ಶರ್ಮರವರ ಪ್ರೀತಿಯ ಮಗಳು. ಅನನ್ಯಾಗೆ ನೃತ್ಯ ಬಾಲ್ಯದ ಒಲವು. ಅವಳ ನೃತ್ಯ ಪ್ರತಿಭೆಯನ್ನು ಗುರುತಿಸಿದ ಅವಳ ಹೆತ್ತವರು ಮೊದಲಿಗೆ ನೃತ್ಯಗುರು ಐಶ್ವರ್ಯ ಅವರಲ್ಲಿ ನೃತ್ಯ ಕಲಿಯಲು ಸೇರಿಸಿ, ಅನಂತರ ಅಭಿನಯ ಅವರ ಗರಡಿಯಲ್ಲಿ ರೂಪುಗೊಳ್ಳಲು ಅವಕಾಶ ಕಲ್ಪಿಸಿದರು. ಅನನ್ಯಾ ತುಂಬಾ ಶ್ರದ್ಧೆಯಿಂದ- ಪ್ರೀತಿ-ಆಸಕ್ತಿಗಳಿಂದ ಭರತನಾಟ್ಯ ಕಲಿಯಲು ಆರಂಭಿಸಿದಳು. ಅಭಿನಯ ಅಷ್ಟೇ ಮುತವರ್ಜಿಯಿಂದ ಶಿಷ್ಯೆಗೆ ವಿದ್ಯಾಧರೆ ಎರೆದರು. ತನ್ನ 7ನೆಯ ವಯಸ್ಸಿಗೇ ನೃತ್ಯಾಭ್ಯಾಸ ಆರಂಭಿಸಿದ ಅನನ್ಯಾ, ಡಾ. ಗಂಗೂಬಾಯಿ ಹಾನಗಲ್ ಮ್ಯೂಸಿಕ್ ಮತ್ತು ಪರ್ಫಾರ್ಮಿಂಗ್ ಆರ್ಟ್ಸ್ ಯೂನಿವರ್ಸಿಟಿಯಿಂದ ಜ್ಯೂನಿಯರ್ ಬೋರ್ಡ್ ಪರೀಕ್ಷೆಯಲ್ಲಿ ‘ಡಿಸ್ಟಿಂಕ್ಷನ್’ ಪಡೆದು ತೇರ್ಗಡೆಯಾಗಿದ್ದಾಳೆ.

ಬೆಂಗಳೂರಿನ ‘ಗೇರ್’ ಇನೋವೇಟಿವ್ ಇಂಟರ್ನ್ಯಾಷನಲ್ ಸ್ಕೂಲಿನಲ್ಲಿ 12ನೇ ತರಗತಿಯಲ್ಲಿ ಓದುತ್ತಿರುವ ಹದಿನೇಳು ವರ್ಷದ ಇವಳಿಗೆ ಕಂಪ್ಯೂಟರ್ ಮತ್ತು ಟೆಕ್ನಾಲಜಿಯಲ್ಲಿ ಅಪರಿಮಿತ ಆಸಕ್ತಿಯಿದ್ದು, ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಕಲಿಯುತ್ತಿದ್ದಾಳೆ. ಶಾಲೆಯ ಅನೇಕ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿರುವ ಇವಳು, ಈಗಾಗಲೇ ಅನೇಕ ದೇವಾಲಯಗಳಲ್ಲಿ, ದೇಶಾದ್ಯಂತ ಅನೇಕ ವೇದಿಕೆಗಳಲ್ಲಿ ನೃತ್ಯಪ್ರದರ್ಶನಗಳನ್ನು ನೀಡಿ ಕಲಾರಸಿಕರ ಮೆಚ್ಚುಗೆಯನ್ನು ಪಡೆದಿದ್ದಾಳೆ. ಇದೀಗ ಇವಳು, ತನ್ನ ನೃತ್ಯ ಪ್ರತಿಭೆಯನ್ನು ಪ್ರದರ್ಶಿಸಲು ದಿನಾಂಕ 18 ಜುಲೈ 2026ರ ಶನಿವಾರ ಮಧ್ಯಾಹ್ನ ಗಂಟೆ 3-30ಕ್ಕೆ ಬೆಂಗಳೂರಿನ ಮಾರುತಹಳ್ಳಿಯ ‘ನ್ಯೂ ಹೊರೈಸನ್ ಕಾಲೇಜ್ ಆಫ್ ಇಂಜಿನಿಯರಿಂಗ್ ಆಡಿಟೋರಿಯಂ’ನಲ್ಲಿ ವಿದ್ಯುಕ್ತವಾಗಿ ರಂಗಪ್ರವೇಶ ಮಾಡುತ್ತಿದ್ದಾಳೆ. ಅವಳ ಕಣ್ಮನ ಸೆಳೆಯುವ ನೃತ್ಯದ ರಸಾನುಭವ ಪಡೆಯಲು ಎಲ್ಲ ಕಲಾರಸಿಕರಿಗೂ ಆದರದ ಸ್ವಾಗತ.




* ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
