ಮಂಗಳೂರು : ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ)ದ ರಂಗ ಅಧ್ಯಯನ ಕೇಂದ್ರವು ದಿನಾಂಕ 17ರಿಂದ 19 ಜುಲೈ 2026ರವರೆಗೆ “ಮಾನ್ಸೂನ್ ರಂಗೋತ್ಸವ – 2026” ಅನ್ನು ಆಯೋಜಿಸಿದೆ. ಮೂರು ದಿನಗಳ ಈ ರಂಗೋತ್ಸವದಲ್ಲಿ ಮಕ್ಕಳ ನಾಟಕ, ನೃತ್ಯ ರೂಪಕ, ಸಂಗೀತ ನಾಟಕ ಹಾಗೂ ಸಮಕಾಲೀನ ನಾಟಕಗಳು ಪ್ರದರ್ಶನಗೊಳ್ಳಲಿವೆ.
ದಿನಾಂಕ 17 ಜುಲೈ 2026ರಂದು ಅರೆಹೊಳೆ ಪ್ರತಿಷ್ಠಾನದ ರಂಗಿನಾಟ ಶಿಬಿರಾರ್ಥಿಗಳಿಂದ ಮಕ್ಕಳ ನಾಟಕ “ಮಾನವಪುರ” ಹಾಗೂ ನಂದಗೋಕುಲ ಕಲಾವಿದರಿಂದ ನೃತ್ಯ ರೂಪಕ “ಬಾರ್ಕೂರಿನ ಹಡ್ಗ್” ಪ್ರದರ್ಶನಗೊಳ್ಳಲಿದೆ.
ದಿನಾಂಕ 18 ಜುಲೈ 2026ರಂದು ಡಾ. ರವೀಂದ್ರ ಗುರುರಾಜ ಕಾಟೋಟಿ ಅವರ ಪರಿಕಲ್ಪನೆಯ “ರಾಗಸಂಧಾನ” ಸಂಗೀತ ನಾಟಕ ಪ್ರದರ್ಶನವಾಗಲಿದ್ದು, ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರ ನಿರ್ದೇಶನವಿದೆ. ಈ ನಾಟಕದಲ್ಲಿ ಪ್ರಸಿದ್ಧ ಹಿಂದೂಸ್ತಾನಿ ಗಾಯಕರಾದ ಶ್ರೀ ಸಿಧಾರ್ಥ ಬೆಳ್ಮಣ್ಣು ಇವರು ಹಾಡಿ ನಟಿಸಲಿದ್ದಾರೆ.
ದಿನಾಂಕ 19 ಜುಲೈ 2026ರಂದು ಪುನಃ ಥಿಯೇಟರ್, ಮಣಿಪಾಲ ತಂಡವು ಉಷಾ ಕಟ್ಟೆಮನೆ ಅವರ ರಚನೆಯ “ಅಂಗಾರ” ನಾಟಕವನ್ನು ಅಭಿನವ್ ಗ್ರೋವರ್ ಅವರ ನಿರ್ದೇಶನದಲ್ಲಿ ಪ್ರಸ್ತುತಪಡಿಸಲಿದೆ.
ಎಲ್ಲಾ ಕಾರ್ಯಕ್ರಮಗಳು LCRI ಆಡಿಟೋರಿಯಂ, ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಮಂಗಳೂರು ಇಲ್ಲಿ ಪ್ರತಿದಿನ ಸಂಜೆ 6-30 ಗಂಟೆಗೆ ನಡೆಯಲಿದ್ದು, ಎಲ್ಲಾ ಪ್ರದರ್ಶನಗಳಿಗೆ ಉಚಿತ ಪ್ರವೇಶ ಇರಲಿದೆ. ಈ ರಂಗೋತ್ಸವವನ್ನು ಅರೆಹೊಳೆ ಪ್ರತಿಷ್ಠಾನ, ಅಸ್ತಿತ್ವ (ರಿ.) ಮಂಗಳೂರು, ಕನ್ನಡ ವಿಭಾಗ ಹಾಗೂ ಭಾಷೆ ಮತ್ತು ಸಂಸ್ಕೃತಿ ಅಧ್ಯಯನ ನಿಕೇತನ ಸಹಯೋಗದಲ್ಲಿ ಆಯೋಜಿಸಲಾಗಿದೆ. ರಂಗಾಸಕ್ತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ರಂಗ ಅಧ್ಯಯನ ಕೇಂದ್ರವು ಕೋರಿದೆ.

