ಕಾರ್ಕಳ : ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಇವುಗಳ ಸಹಭಾಗಿತ್ವದಲ್ಲಿ 2026ರ ವರ್ಷಪೂರ್ತಿ ಪ್ರತೀ ತಿಂಗಳು ನಡೆಯುತ್ತಿರುವ ಮಹಾಭಾರತ ಭಾವದೀಪ ಎಂಬ ಉಪನ್ಯಾಸ ಮಾಲೆಯ ಸಪ್ತಮ ಸೋಪಾನ ಉಪನ್ಯಾಸ ಕಾರ್ಯಕ್ರಮವು ದಿನಾಂಕ 25 ಜುಲೈ 2026ರಂದು ಕಾರ್ಕಳದ ಪ್ರಕಾಶ್ ಹೋಟೆಲ್ ಇದರ ‘ಸಂಭ್ರಮ’ ಸಭಾಂಗಣದಲ್ಲಿ ನಡೆಯಿತು.
ಈ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದ್ವಾಂಸರಾದ ಡಾ. ವಿನಾಯಕ ಭಟ್ ಗಾಳಿಮನೆಯವರು ‘ಕೃಷ್ಣ ಮತ್ತು ಕೃಷ್ಣೆ’ ಎಂಬ ಕುರಿತಾಗಿ ಮಾತನಾಡಿ “ಏಕಚಕ್ರಾ ನಗರದಲ್ಲಿ ಕುಂತಿ ತನ್ನ ಐವರು ಮಕ್ಕಳೊಂದಿಗೆ ಒಂದು ಬ್ರಾಹ್ಮಣರ ಮನೆಯಲ್ಲಿ ವಾಸವಿದ್ದ ಸಂದರ್ಭ. ಆ ಊರಿನಲ್ಲಿರುವ ಬಕಾಸುರನೆಂಬ ರಾಕ್ಷಸನಿಗೆ ಆಹಾರವಾಗುವುದಕ್ಕಾಗಿ ಮನೆಯಲ್ಲಿ ಪೈಪೋಟಿ ಮತ್ತು ರೋದನ ನಡೆಯುತ್ತಿರುವುದನ್ನು ಗಮನಿಸಿದ ಕುಂತಿ ಅವರ ಕೂಗು ಅರಣ್ಯರೋದನವಾಗದಂತೆ ಆಕೆ ಅಲ್ಲಿ ನಿರ್ವಹಿಸಿದ ಪಾತ್ರ ನಿರ್ಣಾಯಕವಾಗಿತ್ತು. ಕುಂತಿ ಅವರನ್ನು ಯಾರನ್ನೂ ಕಳಿಸದೆ ಆಕೆ ಅವರಿಗೆ ಅಭಯ ನೀಡಿ ತನ್ನ ಮಗ ಭೀಮನನ್ನು ಕಳಿಸುತ್ತಾಳೆ. ಭೀಮನಿಂದ ರಾಕ್ಷಸ ಬಕಾಸುರನ ವಧೆಯಾಗಿ ಊರಿಗೆ ಕ್ಷೇಮವಾಗುತ್ತದೆ. ಇಲ್ಲಿ ಕುಂತಿ ತನ್ನ ಮಕ್ಕಳ ಬಗ್ಗೆ ಮಾತ್ರ ಯೋಚಿಸದೆ ಆಕೆಯ ಸೂಕ್ಷ್ಮತೆ ಮತ್ತು ಧರ್ಮಪ್ರಜ್ಞೆ ಲೋಕಹಿತಕ್ಕೂ ವಿಸ್ತ್ರತವಾಯಿತು. ಯಜ್ಞದಿಂದಲೇ ಹುಟ್ಟಿದ ದ್ರೌಪದಿಯ ಬದುಕೆಲ್ಲ ಅಗ್ನಿಮಯ. ಕೃಷ್ಣ ವರ್ಣದವಳಾಗಿ ಮತ್ತು ಶ್ರೀಕೃಷ್ಣ ಅವಳನ್ನು ರಕ್ಷಿಸಿದ್ದರಿಂದಲೂ ಆಕೆ ಕೃಷ್ಣೆ ಎನಿಸಿಕೊಂಡವಳು. ದ್ರೌಪದೀ ಸ್ವಯಂವರದ ಸನ್ನಿವೇಶದಲ್ಲಿ ಕೃಷ್ಣ ಕೃಷ್ಣೆಯರ ಹಾಗೂ ಪಾಂಡವರ ಸಮಾಗಮವಾಗುತ್ತದೆ. ಅದಕ್ಕೂ ಮಿಗಿಲಾಗಿ ಕೌರವರ ಲೆಕ್ಕದಲ್ಲಿ ಕೊಲ್ಲಲ್ಪಟ್ಟಂತಹ ಪಾಂಡವರು ಸಾಯದೆ ಬದುಕಿ ಬಂದಿದ್ದಾರೆ ಅನ್ನುವುದನ್ನು ತಿಳಿದ ಧೃತರಾಷ್ಟ್ರ ಕೌರವರಿಗೆ ಮುಂದೇನು ಅನ್ನುವ ಮಹಾಭಾರತದ ಸನ್ನಿವೇಶ ತೆರೆದುಕೊಳ್ಳುತ್ತದೆ” ಎಂದರು.
ಅ.ಭಾ.ಸಾ.ಪ.ದ ಗೌರವಾಧ್ಯಕ್ಷರಾದ ನಿತ್ಯಾನಂದ ಪೈ, ಅಧ್ಯಕ್ಷರಾದ ಮಿತ್ರಪ್ರಭಾ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೈ. ಅನಂತಪದ್ಮನಾಭ ಭಟ್ ಪ್ರಾರ್ಥಿಸಿದರು. ಶ್ರೀಮತಿ ಸುಲೋಚನಾ ಬಿ.ವಿ. ಕಾರ್ಯಕ್ರಮ ನಿರ್ವಹಿಸಿದರು. ಸದಾನಂದ ನಾರಾವಿ ಸ್ವಾಗತಿಸಿ ಜಗದೀಶ ಗೋಖಲೆ ವಂದಿಸಿದರು.
