ಧಾರವಾಡ ಜಿಲ್ಲೆಯ ಗದಗ ತಾಲೂಕು ಹೊಂಬಳ ಗ್ರಾಮದಲ್ಲಿ 1928ರ ಜೂನ್ 28ರಂದು ಜನಿಸಿದ ಚೆನ್ನವೀರ ಕಣವಿಯವರು ನವೋದಯ ಹಾಗೂ ನವ್ಯಸಾಹಿತ್ಯಗಳೆರಡರಲ್ಲೂ ಸಕ್ರಿಯವಾಗಿ ಪಾಲುಗೊಂಡವರು. ತಂದೆ ಸಕ್ರಪ್ಪ ಹಾಗೂ ತಾಯಿ ಪಾರ್ವತವ್ವ. ಕಣವಿಯವರು ಶಿರುಂಡ, ಗರಗಗಳಲ್ಲಿ ವಿದ್ಯಾಭ್ಯಾಸ ಆರಂಭಿಸಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ಗಳಿಸಿದರು.
ಕಣವಿ ಕನ್ನಡದ ಹೋರಾಟದ ಕವಿ. ಅರ್ಥ ಕಳೆದುಕೊಂಡ ಸಂಪ್ರದಾಯಗಳನ್ನು ಮೀರಿ ನಿಂತು ಹೊಸ ಪರಂಪರೆ ಅನುಕರಿಸುವ ಸುಧಾರಣಾವಾದಿಯಾಗಿದ್ದರು. ಕನ್ನಡ ನಾಡಿಗಾಗಿ ಚಳುವಳಿಗಳಲ್ಲಿ ಭಾಗಿಯಾಗಿದ್ದರು. ಅವರು ಕವಿತೆ, ವಿಮರ್ಶೆ ಕ್ಷೇತ್ರಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಕಾವ್ಯ ಸಂಕಲನಗಳು ಹಲವು. ‘ಕಾವ್ಯಾಕ್ಷಿ’, ‘ಭಾವಜೀವಿ’, ‘ಆಕಾಶಬುಟ್ಟಿ’, ‘ಮಧುಚಂದ್ರ’ ಪ್ರಮುಖವಾದವುಗಳು. ‘ಸಾಹಿತ್ಯ ಚಿಂತನ’, ‘ಕಾವ್ಯಾನುಸಂಧಾನ’, ‘ಸಮಾಹಿತ’, ‘ಸಮತೋಲನ’ ಇತ್ಯಾದಿ ವಿಮರ್ಶಾ ಗ್ರಂಥಗಳು. ‘ಹಕ್ಕಿಪುಕ್ಕ’, ‘ಚಿನ್ನರ ಲೋಕವ ಹೈಕು’ ಮಕ್ಕಳ ಕವಿತೆಗಳು.
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕರ್ತವ್ಯ ಆರಂಭಿಸಿದ ಕಣವಿಯವರು ಅದರ ನಿರ್ದೇಶಕರಾಗಿಯೂ ದುಡಿದಿದ್ದಾರೆ. ‘ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’, ‘ಪಂಪ ಪ್ರಶಸ್ತಿ’, ‘ರಾಜ್ಯೋತ್ಸವ ಪ್ರಶಸ್ತಿ’, ‘ಬಸವ ಗುರು ಕಾರುಣ್ಯ ಪ್ರಶಸ್ತಿ’, ‘ನಾಡೋಜ ಪ್ರಶಸ್ತಿ’ ಹೀಗೆ ಚೆನ್ನವೀರ ಕಣವಿಯವರಿಗೆ ಸಂದ ಪ್ರಶಸ್ತಿ ಗೌರವಗಳು ಹಲವಾರು.
– ಶ್ರೀಮತಿ ಮಾಧರಿ ಶ್ರೀರಾಮ್
ಅಧ್ಯಾಪಕಿ, ಮಂಗಳೂರು