ಕಾಸರಗೋಡು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ದಿನಾಂಕ 12 ಜುಲೈ 2026ರ ಆದಿತ್ಯವಾರ ಬೆಳಗ್ಗೆ 10-00 ಗಂಟೆಗೆ ಶ್ರೀ ಕೇಶವಾನಂದ ಭಾರತೀ ಸ್ಮೃತಿ ಮಂದಿರದಲ್ಲಿ ಯಕ್ಷಗಾನ ಪ್ರಸಂಗ ರಚನೆ ಕಮ್ಮಟ ಹಾಗೂ ಯಕ್ಷಗಾನ ಪ್ರಸಂಗ ಕಾವ್ಯ ಲೋಕಾರ್ಪಣೆ ನಡೆಯಲಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ಫಣಿಗಿರಿ ಪ್ರತಿಷ್ಠಾನ ಶಿರೂರು ಇವರ ಪ್ರಕಾಶನದ ಶ್ರೀ ಶ್ರೀಧರ ಡಿ.ಎಸ್.ರವರ ವೀರ ತಪಸ್ವಿ ಪರಶುರಾಮ ಕಾದಂಬರಿ ಆಧಾರದಲ್ಲಿ ಗಡಿನಾಡು ಕಾಸರಗೋಡಿನ ಹಿರಿಯ ಪ್ರಸಂಗಕರ್ತರಾದ ಶ್ರೀ ಶೇಡಿಗುಮ್ಮೆ ವಾಸುದೇವ ಭಟ್ ವಿರಚಿಸಿದ ‘ವೀರ ತಪಸ್ವಿ ಪರಶುರಾಮ’ ಯಕ್ಷಗಾನ ಪ್ರಸಂಗ ಕಾವ್ಯ ಕೃತಿಯನ್ನು ಕರ್ನಾಟಕ ಸರಕಾರದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಡಾ. ಟಿ. ಶ್ಯಾಮ್ ಭಟ್ ಐ.ಎ.ಎಸ್. ಇವರು ಲೋಕಾರ್ಪಣೆಗೂಳಿಸಲಿದ್ದಾರೆ.
ಅಧ್ಯಕ್ಷತೆಯನ್ನು ಶ್ರೀ ಶ್ರೀಧರ ಡಿ. ಯಸ್. ಹಿರಿಯ ಪ್ರಸಂಗಕರ್ತರು ವಹಿಸಲಿದ್ದು, ಹಿರಿಯ ಪ್ರಸಂಗಕರ್ತರು. ಸಂಶೋಧಕರು ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹಿರಿಯ ಪ್ರಸಂಗಕರ್ತರು ಶ್ರೀ ಶೇಡಿಗುಮ್ಮೆ ವಾಸುದೇವ ಭಟ್, ಫಣಿಗಿರಿ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಉಮೇಶ ಶಿರೂರು ಇವರು ಉಪಸ್ಥಿತರಿರುತ್ತಾರೆ. ಆ ಬಳಿಕ ಡಾ. ಕಬ್ಬಿನಾಲೆ ವಸಂತ ಭಾರದ್ವಾಜರವರ ಮಾರ್ಗದರ್ಶನದಲ್ಲಿ ಇಡೀ ದಿನ ಯಕ್ಷಗಾನ ಪ್ರಸಂಗ ರಚನೆ ಕಮ್ಮಟ ನಡೆಯಲಿದೆ.
ಕಮ್ಮಟದ ವಿಶೇಷ ಆಹ್ವಾನಿತರಾಗಿ ಯುವ ಪ್ರಸಂಗಕರ್ತರಾಗಿರುವ ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು, ಚಂದ್ರಹಾಸ ಕಯ್ಯಾರು, ಅಮೋಘ ಶಂಕರ ಉಜಿರೆ, ರಾಜಗೋಪಾಲ್ ಕನ್ಯಾನ, ಉಮೇಶ್ ಶಿರೂರು, ಯೋಗೀಶ್ ರಾವ್ ಚಿಗುರುಪಾದೆ, ದೀವಿತ್ ಪೆರಾಡಿ, ಶ್ರೀಮತಿ ಶುಭಾಶಯ, ಮಯೂರ ನಾಯ್ಕ, ನಾಗೇಂದ್ರ ಹೆಬ್ಬಾರ್ ಮೈಸೂರು, ಡಾ. ಶ್ರೀಕೃಷ್ಣ ಭಟ್ಟ ಸುಣ್ಣಂಗುಳಿ, ಉದಯ ಕುಮಾರ್ ಕುಂಜತ್ತೂರು, ಶ್ರೀ ಗಿರೀಶ ಹೆಗ್ಡೆ ಧರ್ಮಸ್ಥಳ, ಶ್ರೀ ವರ್ಧನ್ ಎಂ. ಸುರತ್ಕಲ್ ಮುಂತಾದವರು ಭಾಗವಹಿಸಲಿದ್ದಾರೆ. ಈ ಅಧ್ಯಯನ ಯೋಗ್ಯ ಕಾರ್ಯಕ್ರಮಕ್ಕೆ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿರಿಬೇಕಾಗಿ ಸಿರಿಬಾಗಿಲು ಪ್ರತಿಷ್ಠಾನವು ತಿಳಿಸಿದೆ.

