ವಿಜಯಪುರ : ಹಲಸಂಗಿ ಗೆಳೆಯರ ಪ್ರತಿಷ್ಠಾನದ ‘ವಾರ್ಷಿಕ ಗೌರವ’ ಹಾಗೂ ‘ಯುವ ಪ್ರಶಸ್ತಿ’ಗಳನ್ನು ಪ್ರತಿಷ್ಠಾನದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಡಾ. ಆನಂದ ಕೆ. ಇವರು ಪ್ರಕಟಿಸಿದ್ದಾರೆ.
ಪ್ರತಿಷ್ಠಾನದ ವಾರ್ಷಿಕ ಗೌರವ ಪ್ರಶಸ್ತಿಗೆ ಮೂವರನ್ನು ಆಯ್ಕೆ ಮಾಡಲಾಗಿದ್ದು, ಜನಪದ ಕ್ಷೇತ್ರದಲ್ಲಿ 2022ನೇ ವಾರ್ಷಿಕ ಗೌರವ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಡಾ. ಬಿ.ಎ. ವಿವೇಕ ರೈ ಪುರಸ್ಕೃತರಾಗಿದ್ದಾರೆ. ಸಮಗ್ರ ಸಾಹಿತ್ಯ ಕ್ಷೇತ್ರದಲ್ಲಿ 2023ನೇ ವಾರ್ಷಿಕ ಗೌರವ ಪ್ರಶಸ್ತಿಗೆ ಕಲಬುರಗಿ ಜಿಲ್ಲೆಯ ಪ್ರೊ. ಎಚ್.ಟಿ. ಪೋತೆ ಹಾಗೂ ಸಂಶೋಧನೆ ಮತ್ತು ವಿಮರ್ಶಾ ಕ್ಷೇತ್ರದಲ್ಲಿ 2024ರ ವಾರ್ಷಿಕ ಗೌರವ ಪ್ರಶಸ್ತಿಗೆ ಬೆಂಗಳೂರು ಜಿಲ್ಲೆಯ ನೇಮಿಚಂದ್ರ ಇವರು ಪುರಸ್ಕೃತರಾಗಿದ್ದಾರೆ.

ಪ್ರತಿಷ್ಠಾನದ ಯುವ ಪ್ರಶಸ್ತಿಗೆ ಮೂವರು ಆಯ್ಕೆಯಾಗಿದ್ದು, 2022ನೇ ಸಾಲಿನ ಯುವ ಪ್ರಶಸ್ತಿಗೆ ವಿಜಯಪುರ ಜಿಲ್ಲೆಯ ಡಾ. ವಿನಯ ನಂದಿಹಾಳ, 2023ನೇ ಸಾಲಿನ ಪ್ರಶಸ್ತಿಗೆ ತುಮಕೂರು ಜಿಲ್ಲೆಯ ಡಾ. ಗೋವಿಂದರಾಜು ಕೆ.ಎಂ. ಹಾಗೂ 2024ನೇ ಸಾಲಿನ ಬೆಂಗಳೂರಿನ ವಿಜಯನಗರ ನಿವಾಸಿ ಶಶಿ ತರೀಕೆರೆ ಇವರು ಪುರಸ್ಕೃತರಾಗಿದ್ದಾರೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಷ್ಠಾನದ ಸಭೆಯಲ್ಲಿ ಅರ್ಹರಿಗೆ ಪ್ರಶಸ್ತಿಗಳನ್ನು ಅಂತಿಮಗೊಳಿಸಲಾಗಿದೆ.
ಪ್ರತಿಷ್ಠಾನದ ಗೌರವ ವಾರ್ಷಿಕ ಪ್ರಶಸ್ತಿಯನ್ನು ಜಾನಪದ ಸಾಹಿತ್ಯ, ಸಮಗ್ರ ಸಾಹಿತ್ಯ ಹಾಗೂ ವಿಮರ್ಶೆ, ಸೃಜನಶೀಲ ಸಾಹಿತ್ಯ ಕ್ಷೇತ್ರದಲ್ಲಿ ಕೃತಿಗಳನ್ನು ಗಣನೀಯ ಸೇವೆ ಸಲ್ಲಿಸಿರುವ ಸಾಹಿತಿಗಳನ್ನು ಹಾಗೂ ಯುವ ಪ್ರಶಸ್ತಿಗೆ ಅತ್ಯುತ್ತಮ ಕೃತಿಗಳನ್ನು ರಚಿಸಿದ ಯುವ ಬರಹಗಾರರನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿದ್ದು, ವಾರ್ಷಿಕ ಗೌರವ ಪ್ರಶಸ್ತಿ ತಲಾ ರೂ.50,000/- ಹಾಗೂ ಯುವ ಪ್ರಶಸ್ತಿಗೆ ತಲಾ ರೂ.10,000/- ನಗದಿನೊಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
