ಕಾಸರಗೋಡು : ಕನ್ನಡ ಭವನ ಕಾಸರಗೋಡು ವತಿಯಿಂದ ಇತ್ತೀಚೆಗೆ ನಡೆದ ರಜತ ಸಂಭ್ರಮ ಹಾಗೂ ಗಡಿನಾಡು ಕನ್ನಡ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅನಿವಾರ್ಯ ಕಾರಣಗಳಿಂದ ಪ್ರಶಸ್ತಿ ಸ್ವೀಕರಿಸಲು ಆಗದ ಸಾಧಕರಿಗೆ ದಿನಾಂಕ 02 ಆಗಸ್ಟ್ 2026ರಂದು ಕನ್ನಡ ಭವನದಲ್ಲಿ ಆಯೋಜಿಸಿದ್ದ ವಿಶೇಷ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಸರಗೋಡು ಜಿಲ್ಲಾ ರಾಮರಾಜ ಕ್ಷತ್ರಿಯ ಸಂಘದ ಜಿಲ್ಲಾಧ್ಯಕ್ಷ ಪ್ರದೀಪ್ ಬೇಕಲ್, “ಕನ್ನಡ ಭವನವು ಹಲವು ವರ್ಷಗಳಿಂದ ಗಡಿನಾಡಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯ ಸಂರಕ್ಷಣೆಗೆ ನಿರಂತರವಾಗಿ ಶ್ರಮಿಸುತ್ತಿದೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿಯೂ ತನ್ನ ಚಟುವಟಿಕೆಗಳನ್ನು ಸ್ಥಗಿತಗೊಳಿಸದೆ, ಆನ್ಲೈನ್ ಮೂಲಕ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಕನ್ನಡದ ಮನಸ್ಸುಗಳನ್ನು ತಲುಪುವ ಕಾರ್ಯ ಮಾಡಿದೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 900ಕ್ಕೂ ಅಧಿಕ ಸಾಧಕರನ್ನು ಗುರುತಿಸಿ ಗೌರವಿಸಿರುವುದು ಕನ್ನಡ ಭವನದ ಹೆಮ್ಮೆಯ ಸಾಧನೆ. ಗಡಿನಾಡಿನಲ್ಲಿ ಕನ್ನಡದ ಅಸ್ತಿತ್ವ ಹಾಗೂ ಪ್ರಭಾವವನ್ನು ಉಳಿಸುವ ನಿಟ್ಟಿನಲ್ಲಿ ಸಂಸ್ಥೆ ನಿರಂತರ ಸೇವೆ ಸಲ್ಲಿಸುತ್ತಿದೆ” ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಮಾತನಾಡಿ, “ಕಳೆದ ವಾರ ನಡೆದ ಕನ್ನಡ ಭವನದ ರಜತ ಸಂಭ್ರಮ ಕಾರ್ಯಕ್ರಮದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ 140ಕ್ಕೂ ಅಧಿಕ ಕನ್ನಡಾಭಿಮಾನಿಗಳು ಭಾಗವಹಿಸಿದ್ದರು. ಪ್ರಶಸ್ತಿಗಳ ಮೂಲಕ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಗಡಿನಾಡು ಕಾಸರಗೋಡಿಗೆ ಆಗಮಿಸಿದ ಕನ್ನಡಿಗರು ಇಲ್ಲಿ ಇಂದಿಗೂ ಕನ್ನಡ ಭಾಷೆ ಜೀವಂತವಾಗಿರುವುದನ್ನು ಕಂಡು ಸಂತಸ ಹಾಗೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ವಿವಿಧ ಭಾಗಗಳ ಗಣ್ಯರನ್ನು ಆಹ್ವಾನಿಸಿ, ಅವರ ಸಮ್ಮುಖದಲ್ಲಿ ಸಾಧಕರನ್ನು ಗೌರವಿಸುವ ಮೂಲಕ ಗಡಿನಾಡಿನ ಕನ್ನಡಿಗರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕಾರ್ಯವನ್ನು ಕನ್ನಡ ಭವನ ಮಾಡುತ್ತಿದೆ. ತೌಳವ ನಾಡಿನಲ್ಲಿ ಕೆಳದಿ ಸಾಮ್ರಾಜ್ಯದ ಕಾಲದಿಂದಲೇ ಕನ್ನಡ ಭಾಷೆ ಪಸರಿಸಿದ್ದು, ನಮ್ಮ ಪೂರ್ವಜರು ಬೆಳೆಸಿದ ಕನ್ನಡದ ಬೇರುಗಳನ್ನು ಇಂದಿಗೂ ಉಳಿಸಿಕೊಂಡು ಬರುತ್ತಿದ್ದೇವೆ. ಕಾಸರಗೋಡಿನಲ್ಲಿ ಕನ್ನಡದ ರಕ್ಷಣೆಯೇ ನನ್ನ ಕರ್ತವ್ಯ. ನನ್ನ ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ಸಾಗುತ್ತಾ ಕನ್ನಡದ ಸೇವೆ ಮಾಡುವುದು ನನ್ನ ಜವಾಬ್ದಾರಿ” ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಕನ್ನಡ ಭವನದ ನಿರ್ದೇಶಕ ಡಾ. ಕೆ.ಎನ್. ವೆಂಕಟರಮಣ ಹೊಳ್ಳ “ಕನ್ನಡ ಭವನದ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ಹಾಗೂ ಅರ್ಥಪೂರ್ಣವಾಗಿ ನಡೆಯುತ್ತಿವೆ. ಪ್ರಶಸ್ತಿ ಪಡೆಯುವುದಕ್ಕಾಗಿ ಮಾತ್ರವಲ್ಲ, ಕನ್ನಡದ ಮೇಲಿನ ಅಭಿಮಾನದಿಂದ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಮತ್ತು ಕಲಾವಿದರು ಭಾಗವಹಿಸಿದ್ದರೂ, ಸ್ಥಳೀಯ ಕನ್ನಡಾಭಿಮಾನಿಗಳ ಭಾಗವಹಿಸುವಿಕೆ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ ಎಂಬುದು ಬೇಸರದ ಸಂಗತಿ. ಮಕ್ಕಳು ಮುಂದಿನ ದಿನಗಳಲ್ಲಿ ಉತ್ತಮ ಸಾಧನೆ ಮಾಡಿ ಕನ್ನಡ ಭವನದ ಹೆಮ್ಮೆಯಾಗಬೇಕು. ಗಡಿನಾಡಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯ ಉಳಿವಿಗಾಗಿ ಕನ್ನಡ ಭವನದ ಸೇವೆ ಇನ್ನಷ್ಟು ವಿಸ್ತರಿಸಲಿ” ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ‘ಭರವಸೆಯ ಬೆಳಕು – ಲೈಟ್ ಆಫ್ ಹೋಪ್ಸ್’ ‘ಯುವ ಪ್ರತಿಭಾ ಪ್ರಶಸ್ತಿ’, ‘ಸ್ಟೂಡೆಂಟ್ ಅಚೀವ್ಮೆಂಟ್ ಅವಾರ್ಡ್’ ಹಾಗೂ ‘ಭರವಸೆಯ ಶಿಕ್ಷಣ ರತ್ನ – ಟೀಚರ್ಸ್ ಅಚೀವ್ಮೆಂಟ್ ಅವಾರ್ಡ್’ ಪ್ರದಾನ ಮಾಡಲಾಯಿತು. ಇದೇ ವೇಳೆ ಕಾಸರಗೋಡಿನ ಯುವ ಗಾಯಕಿ ಅನ್ವಿತಾ ಕಾಮತ್ ಇವರಿಗೆ ‘ನಾದರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯೆಯರಾದ ಸುಧಾರಾಣಿ ಅನಂಗೂರ್, ದಿವ್ಯಾ ಸಂದೀಪ್ ನಾಗರಕಟ್ಟೆ, ಶ್ರುತಿ ವಿಕಾಸ್ ಕೋಟೆಕಣಿ, ಮಾಜಿ ನಗರಸಭಾ ಸದಸ್ಯ ವರಪ್ರಸಾದ್ ಕೋಟೆಕಣಿ, ರಾಮರಾಜ ಕ್ಷತ್ರಿಯ ಕೂಡ್ಲು ಉಪಸಂಘದ ಅಧ್ಯಕ್ಷ ಸತೀಶ್ ಕೆ., ವಜ್ರ ಗೋಲ್ಡ್ ಮಾಲಕಿ ಶಾಂತೇರಿ ಕಾಮತ್, ಪ್ರದೀಪ್ ನಾಯ್ಕ್ ನಾಗರಕಟ್ಟೆ, ಶರತ್ ಅನಂಗೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಂಧ್ಯಾರಾಣಿ ಟೀಚರ್ ಸ್ವಾಗತಿಸಿ. ವಸಂತ್ ಕೆರೆಮನೆ ವಂದಿಸಿ, ರೇಖಾ ಸುದೇಶ್ ರಾವ್ ಹಾಗೂ ಗಿರೀಶ್ ಪಿ.ಎಂ. ಕಾರ್ಯಕ್ರಮ ನಿರ್ವಹಣೆ ಮಾಡಿದರು.
