ಉಡುಪಿ : ಶ್ರೀ ಭ್ರಾಮರೀ ನಾಟ್ಯಾಲಯ (ರಿ.) ಅಮ್ಮುಂಜೆ ರಜತ ವರ್ಷದ ‘ಗೆಜ್ಜೆಯೊಂದಿಗೆ ಬೆಳ್ಳಿ ಹೆಜ್ಜೆ-11’ ಕಾರ್ಯಕ್ರಮವು ಶ್ರೀ ಸಾಯಿ ನಮನ ಏಕವ್ಯಕ್ತಿ ಪ್ರಸ್ತುತಿ ಶಿರ್ಡಿ ಸಾಯಿಬಾಬಾ ಮಂದಿರ ಕೊಡಂಕೂರು, ಉಡುಪಿ ಇವರ ಸಹಯೋಗದೊಂದಿಗೆ ದಿನಾಂಕ 30 ಜುಲೈ 2026ರ ಗುರುವಾರ ಸಂಪನ್ನಗೊಂಡಿತು.

ಬಹುಮುಖ ಪ್ರತಿಭೆ ಸಾನ್ವಿ ಎಂ. ಸುವರ್ಣ ಭರತನಾಟ್ಯ, ಕೂಚಿಪುಡಿ, ಕೀಬೋರ್ಡ್, ವಯೋಲಿನ್, ಕರ್ನಾಟಕ ಸಂಗೀತ, ಕರೋಕೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಮೂಡಿಬಂದಿತು. ಶಿರ್ಡಿ ಸಾಯಿಬಾಬಾ ಮಂದಿರ ಕೊಡಂಕೂರು, ಉಡುಪಿ ಇದರ ಮ್ಯಾನೇಜಿಂಗ್ ಟ್ರಸ್ಟಿ ಕೆ. ದಿವಾಕರ್ ಶೆಟ್ಟಿ ಇವರು ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.



ಉದ್ಘಾಟನೆಯ ನಂತರ ನಾಟ್ಯಾಲಯದ ವಿದ್ಯಾರ್ಥಿನಿ ವಿದ್ವಾನ್ ಕೆ. ಭವಾನಿ ಶಂಕರ್ ಇವರ ಶಿಷ್ಯ ಸಾನ್ವಿ ಎಂ. ಸುವರ್ಣ ಇವರಿಂದ ಸುಮಾರು ಒಂದುವರೆ ಗಂಟೆಗಳ ಕಾಲ ನೃತ್ಯ ಕಾರ್ಯಕ್ರಮ ನೆರವೇರಿತು. ಈ ಸಂದರ್ಭ ಕಲಾವಿದೆಯ ಯಕ್ಷಗಾನ ಗುರುಗಳಾದ ಶ್ರೀ ರತ್ನಾಕರ ಆಚಾರ್ಯ, ಭರತನಾಟ್ಯ ಹಾಗೂ ಕೂಚಿಪುಡಿ ಗುರುಗಳಾದ ವಿದ್ವಾನ್ ಕೆ. ಭವಾನಿ ಶಂಕರ್, ಸಂಗೀತ ಗುರುಗಳಾದ ಶ್ರೀ ಸತೀಶ್ ಬನ್ನಂಜೆ, ಕರ್ನಾಟಕ ಸಂಗೀತ ಗುರುಗಳು ಶ್ರೀಮತಿ ಸಹನ ಭಟ್ ಇವರಿಗೆ ಗುರುವಂದನೆ ಸಲ್ಲಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಉಧ್ಘಾಟಕರಾದ ತೋಟದಮನೆ ದಿವಾಕರ್ ಶೆಟ್ಟಿ, ಹಿರಿಯರಾದ ಸದಾಶಿವ ಕೆ. ಸುವರ್ಣ, ಶಾರದಾ ತಾರಾನಾಥ್, ಸಾನ್ವಿಯವರ ಮಾತಾಪಿತರಾದ ಮುರಳೀಧರ ಸುವರ್ಣ, ಭವ್ಯ ಮುರಳೀಧರ್ ಉಪಸ್ಥಿತರಿದ್ದರು. ಗುರುಗಳಾದ ವಿದ್ವಾನ್ ಕೆ. ಭವಾನಿಶಂಕರ್ ಪ್ರಸ್ತಾವಿಕದೊಂದಿಗೆ ಎಲ್ಲರನ್ನೂ ಸ್ವಾಗತಿಸಿ, ಮುರಳೀಧರ ಸುವರ್ಣ ವಂದನಾರ್ಪಣೆಗೈದು, ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು.



