ಉರ್ವ : ಕಲಾಮೃತ ಮಂಗಳೂರು ಇದರ ವತಿಯಿಂದ ಶಾರದಾ ವಿದ್ಯಾಲಯದ ಸಹಕಾರದೊಂದಿಗೆ ದಿನಾಂಕ 18, 19 ಹಾಗೂ 26 ಜುಲೈ 2026ರಂದು ‘ಭಾವಸಂಗಮ’ ಜಿಲ್ಲಾ ಮಟ್ಟದ ಭಕ್ತಿಗೀತೆ, ಭಾವಗೀತೆ ಹಾಗೂ ದೇಶಭಕ್ತಿಗೀತೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ದ.ಕ. ಜಿಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸಂಗೀತ ಪ್ರತಿಭೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಕಲೆ ಮೂಲ ವ್ಯಕ್ತಿತ್ವ ವಿಕಾಸ, ಆತ್ಮವಿಶ್ವಾಸ, ಧೈರ್ಯ, ವೇದಿಕೆ ನಿಭಾಯಿಸುವ ಸಾಮರ್ಥ್ಯ, ದೇಶಭಕ್ತಿ ಹಾಗೂ ಸೃಜನಾತ್ಮಕ ಅಭಿವ್ಯಕ್ತಿಯನ್ನು ಉತ್ತೇಜಿಸುವ ಉದ್ದೇಶವಿದೆ.
ಸ್ಪರ್ಧೆಯ ಪ್ರಥಮ ಹಂತವು ದಿನಾಂಕ 18 ಮತ್ತು 19 ಜುಲೈ 2026ರಂದು ಹಂಪನಕಟ್ಟೆಯ ನವರತ್ನ ಪ್ಯಾಲೇಸ್ನ ಎರಡನೇ ಮಹಡಿಯಲ್ಲಿ ನಡೆಯಲಿದ್ದು, ದ್ವಿತೀಯ ಹಂತವಾದ ಸೆಮಿಫೈನಲ್ ಹಾಗೂ ಫೈನಲ್ ದಿನಾಂಕ 26 ಜುಲೈ 2026ರಂದು ಶಾರದಾ ವಿದ್ಯಾಲಯದಲ್ಲಿ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿ ಸ್ಪರ್ಧಿಗಳಿಗೆ ಪ್ರಶಂಸಾ ಪತ್ರ ಹಾಗೂ ಪದಕ ನೀಡಲಾಗುವುದು. ವಿಜೇತರಿಗೆ ಚಿನ್ನ ಹಾಗೂ ಬೆಳ್ಳಿ ಪದಕ ಮತ್ತು ಪ್ರಮಾಣ ಪತ್ರ ನೀಡಲಾಗುವುದು. ನೋಂದಣಿ ಪ್ರಕ್ರಿಯೆ ಗೂಗಲ್ ಫಾರ್ಮ ಮೂಲಕ ನಡೆಯುತ್ತಿದ್ದು, ಆಸಕ್ತರು ತಮ್ಮ ವಿವರಗಳನ್ನು ಸೂಕ್ತವಾಗಿ ಭರ್ತಿ ಮಾಡಬೇಕು. ವಿದ್ಯಾರ್ಥಿಗಳಿಗೆ ಶಾಲಾ ಗುರುತಿನ ಚೀಟಿ ಹಾಗೂ ಇತರರಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು, ದಿನಾಂಕ 15 ಜುಲೈ 2026 ನೋಂದಣಿಗೆ ಕೊನೆಯ ದಿನವಾಗಿರುತ್ತದೆ.
ವೈಯುಕ್ತಿಕ ಗೀತೆ ಪ್ರಥಮ ಹಂತದ ಆಡಿಷನ್ ಗೆ ಭಕ್ತಿ ಗೀತೆ ಮಾತ್ರ ಹಾಡಬಹುದು, ದ್ವಿತೀಯ ಹಂತದಲ್ಲಿ ಭಾವಗೀತೆ ಮಾತ್ರ ಹಾಡಲು ಅವಕಾಶವಿದೆ. ಸಮೂಹ ಗಾಯನ ದಿನಾಂಕ 26 ಜುಲೈ 2026ರಂದು ನಡೆಯಲಿದ್ದು ದೇಶಭಕ್ತಿ ಗೀತೆಗೆ ಮಾತ್ರ ಅವಕಾಶ. ಹೆಚ್ಚಿನ ಮಾಹಿತಿಗೆ ಸಂತೋಷ್ ಅಮೀನ್ : 9880584366 ಇವರನ್ನು ಸಂಪರ್ಕಿಸಬಹುದು.
