ಮುಂಬೈ : ಮುಂಬೈ ವಿಶ್ವವಿದ್ಯಾಲಯ ತನ್ನ 170ರ ಸಂಭ್ರಮದ ಅಂಗವಾಗಿ ಪ್ರಕಟಿಸಿದ ಭಾರತೀಯ ಜ್ಞಾನ ಪರಂಪರೆ ಮಾಲಿಕೆ ಕನ್ನಡವೂ ಸೇರಿದಂತೆ ಹನ್ನೊಂದು ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ದಿನಾಂಕ 29 ಜುಲೈ 2026ರ ಬುಧವಾರದಂದು ಮಧ್ಯಾಹ್ನ 3-00 ಗಂಟೆಗೆ ಆಯೋಜಿಸಿದೆ.
ಕಲಿನಾ ಕ್ಯಾಂಪಸ್ ನ ಮರಾಠಿ ಭಾಷಾ ಭವನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಬೈ ವಿವಿ ಉಪಕುಲಪತಿ ಪ್ರೊ. ರವೀಂದ್ರ ಕುಲಕರ್ಣಿ ಇವರು ವಹಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮಕ್ಕೆ ಗೌರವ ಅತಿಥಿಗಳಾಗಿ ಸರ್ ಜೆ.ಜೆ. ಸ್ಕೂಲ್ ಆಫ್ ಆರ್ಟ್ಸ್, ಆರ್ಕಿಟೆಕ್ಟರ್ ಆಂಡ್ ಡಿಸೈನ್ ಇದರ ಕುಲಪತಿಗಳಾದ ಡಾ. ಎ.ಪಿ. ಜಮ್ಖೇಡ್ಕರ್, ಭಾರತೀಯ ಜ್ಞಾನ ಪರಂಪರೆ (IKS) ವಿಭಾಗ, ಶಿಕ್ಷಣ ಸಚಿವಾಲಯ ಭಾರತ ಸರ್ಕಾರ ಐಐಟಿ, ಇಂದೋರ್, ರಾಷ್ಟ್ರೀಯ ಸಂಯೋಜಕರು ಪ್ರೊ. ಗಂಟಿ ಎಸ್. ಮೂರ್ತಿ, ಏಷಿಯಾಟಿಕ್ ಸೊಸೈಟಿ ಆಫ್ ಇಂಡಿಯಾ ಅಧ್ಯಕ್ಷರು ಡಾ. ವಿನಯ್ ಸಹಸ್ರಬುದ್ಧೆ ಇವರು ಪಾಲ್ಗೊಳ್ಳಲಿದ್ದಾರೆ.
ಭಾರತೀಯ ಜ್ಞಾನಪರಂಪರೆ ಮೊದಲು ಇಂಗ್ಲೀಷ್ನಲ್ಲಿ ಪ್ರಕಟವಾಗಿದ್ದು, ಆ ಬಳಿಕ ಮರಾಠಿ ಆವೃತ್ತಿಯ ಕೃತಿ ಬೆಳಕು ಕಂಡಿತ್ತು. ಮೈಸೂರು ಅಸೋಸಿಯೇಷನ್ ಪ್ರಾಯೋಜಕತ್ವದಲ್ಲಿ ಕನ್ನಡ ಆವೃತ್ತಿ ಈಗಾಗಲೇ ಬಿಡುಗಡೆಗೊಂಡಿದೆ. ಇದೀಗ ಹಿಂದಿ, ಗುಜರಾತಿ, ಸಿಂಧಿ, ಬಂಗಾಳಿ, ಮಲಯಾಳಂ, ತಮಿಳು ಮೊದಲಾದ ಸಂಪುಟಗಳು ಗುರುಪೂರ್ಣಿಮೆಯ ಸಂದರ್ಭದಲ್ಲಿ ಬಿಡುಗಡೆಯಾಗಲಿವೆ ಎಂಬುದಾಗಿ ಮುಂಬೈ ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.
ಭಾರತದ ಭವ್ಯ ಪ್ರಾಚೀನ ಪರಂಪರೆಯನ್ನು ಬಿಂಬಿಸುವ ಈ ಕೃತಿಯಲ್ಲಿ 22 ವೈವಿಧ್ಯಮಯವಾದ ಲೇಖನಗಳಿದ್ದು, ಇದನ್ನು ಪ್ರಾಚಾರ್ಯ ಡಾ. ಮಾಧವ ರಾಜವಾಡೆಯವರು ಸಂಪಾದಿಸಿ ಕೊಟ್ಟಿದ್ದಾರೆ. ಪ್ರಕಾಶ್ ಮಸರಾಂ ಇವರು ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಕನ್ನಡ ಆವೃತ್ತಿಯನ್ನು ಕನ್ನಡ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಪ್ರೊ. ಜಿ.ಎನ್. ಉಪಾಧ್ಯ ಇವರು ಸಂಪಾದಿಸಿ ಕೊಟ್ಟಿದ್ದು ಅನುವಾದ ಕಾರ್ಯದಲ್ಲಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಪೂರ್ಣಿಮಾ ಶೆಟ್ಟಿ, ಸಂಶೋಧನ ಸಹಾಯಕರಾದ ಕಲಾಭಾಗ್ವತ್, ಸವಿತಾ ಅರುಣ್ ಶೆಟ್ಟಿ ಇವರು ಸಹಕರಿಸಿದ್ದಾರೆ. ಇದರ ಮೌಲ್ಯಮಾಪನ ಕಾರ್ಯದಲ್ಲಿ ಕನ್ನಡ ವಿಭಾಗದ ಸಂದರ್ಶಕ ಪ್ರಾಧ್ಯಾಪಕರಾದ ಡಾ. ಉಮಾ ರಾಮರಾವ್ ಸಹಕರಿಸಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಪ್ರಾಯೋಜಕತ್ವವನ್ನು ವಹಿಸಿಕೊಂಡ ಮೈಸೂರು ಅಸೋಸಿಯೇಷನ್ ಅನ್ನು ಗೌರವಿಸಲಾಗುವುದು ಎಂದು ವಿಶ್ವವಿದ್ಯಾಲಯದ ಸುತ್ತೋಲೆ ತಿಳಿಸಿದೆ.

