‘ಮಂಟಪ ಮತ್ತು ಕಾಶಿಗಿಂಡಿ’ ಕಥೆಗಾರ್ತಿ ಸಿರಿ ಮೂರ್ತಿ ಕಾಸರವಳ್ಳಿ (ಶ್ರೀಲಕ್ಷ್ಮಿಕೆ.)ಯವರ ಇತ್ತೀಚೆಗೆ ಬಿಡುಗಡೆಯಾದ ಕಥಾ ಸಂಕಲನ. ಕೌಟುಂಬಿಕ ಕಥಾನಕಗಳನ್ನು ಬಹಳ ಗಟ್ಟಿಯಾಗಿ ಹೆಣೆಯುವ ಅವರ ನೈಪುಣ್ಯವು ಇಲ್ಲಿಯೂ ತನ್ನ ಪ್ರತಿಭೆಯನ್ನು ತೋರಿಸಿಕೊಟ್ಟಿದೆ. ಇಲ್ಲಿರುವ 25 ಕಥೆಗಳು ಕೌಟುಂಬಿಕ ಬದುಕಿನ ಚಿತ್ರಣದ ಮೂಲಕ ಸಾಮಾಜಿಕ ಸ್ಥಿತ್ಯಂತರವು ಉಂಟು ಮಾಡುತ್ತಿರುವ ಸಮಸ್ಯೆಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡಿವೆ. ಮನುಷ್ಯ ಸಂಬಂಧಗಳ ಬೇರೆ ಬೇರೆ ಆಯಾಮಗಳ ವೈವಿಧ್ಯಮಯ ಚಿತ್ರಣವು ಈ ಎಲ್ಲಾ ಕಥೆಗಳಲ್ಲಿ ಕಾಣಿಸಿಕೊಳ್ಳುತ್ತದೆ.
ಶೀರ್ಷಿಕೆಯ ಕಥೆಯು ತುಂಬಾ ಹೃದಯಸ್ಪರ್ಶಿಯಾಗಿದೆ. ಆಧುನಿಕ ಜೀವನಶೈಲಿಯಲ್ಲಿ ಫ್ಯಾಷನ್ ಮತ್ತು ಪ್ರದರ್ಶನಪ್ರಿಯತೆಯೇ ಹೆಚ್ಚು ಮುಖ್ಯವೆಂದು ತಿಳಿದುಕೊಂಡ ಆಧುನಿಕ ಮನೋಭಾವದ ದಂಪತಿಗಳು ಆಸ್ತಿ ಪಾಲಾದಾಗ ತಮ್ಮ ಪಾಲಿಗೆ ಬಂದ ಹಿರಿಯರು ಕಟ್ಟಿಸಿದ ಚಂದದ ಹಳೆಯ ಮನೆಯಲ್ಲಿದ್ದ ಎಲ್ಲ ಸಾಮಾನುಗಳನ್ಙೂ ಮಾರುತ್ತಿದ್ದಾಗ ಕೊನೆಯಲ್ಲಿ ಉಳಿಯುವ ದೇವರ ಪೂಜೆಗೆ ಬಳಸುತ್ತಿದ್ದ ದೊಡ್ಡ ಗಾತ್ರದ ಮಂಟಪ ಮತ್ತು ಅದರೊಳಗೆ ಇದ್ದ ಕಾಶಿಗಿಂಡಿಯನ್ನು ಹಿರಿಯರ ಭಯದಿಂದಾಗಿ ಹಾಗೆಯೇ ಉಳಿಸಿದರೂ ಪೇಟೆಯಲ್ಲಿ ತಾವು ಕಟ್ಟಿಸುತ್ತಿದ್ದ ಪುಟ್ಟ ಮನೆಯಲ್ಲಿ ಅದನ್ನಿಡಲು ಜಾಗವಿಲ್ಲ ಅನ್ನುತ್ತಾನೆ. ಕೊನೆಗೆ ಬಡಗಿಯು ಅಂಥ ವಸ್ತುಗಳನ್ನು ಈಗ ಪೇಟೆ ಮನೆಗಳಲ್ಲೂ ಆಂಟೀಕ್ ಪೀಸುಗಳಾಗಿ ಪ್ರದರ್ಶನಕ್ಕೆ ಇಡುವುದು ಫ್ಯಾಷನ್ ಆಗಿದೆಯೆಂದು ಹೇಳಿದಾಗ ಇಟ್ಟುಕೊಳ್ಳಲು ಒಪ್ಪುತ್ತಾನಾದರೂ ಅವನ ಹೆಂಡತಿ ಅದಕ್ಕೆ ಮನೆಯ ಒಂದು ಚಿಕ್ಕ ಮೂಲೆಯಲ್ಲಷ್ಟೇ ಜಾಗ ಕೊಡುತ್ತಾಳೆ. ಆಗ ಆ ವಸ್ತುಗಳೇ ಬಾಯಿ ತೆರೆದು ಮಾತನಾಡಿ ತಮ್ಮ ಸಂಕಟವನ್ನು ಪರಸ್ಪರ ಹೇಳಿಕೊಳ್ಳುವ ತಂತ್ರವನ್ನು ಬಳಸಿ ಲೇಖಕಿ ಇಲ್ಲಿ ಮನೋಜ್ಞವಾಗಿ ಕಟ್ಟಿ ಕೊಟ್ಟಿದ್ದಾರೆ.
‘ಹೊಸಮನೆಯಲ್ಲಿ ಬೆಳಕಿತ್ತು. ಗಾಳಿಯಿತ್ತು. ಆದರೆ ಮಂಟಪಕ್ಕಾಗಲಿ ಕಾಶಿಗಿಂಡಿಗಾಗಲಿ ಅಸ್ತಿತ್ವ ಇರಲಿಲ್ಲ. ಬೆತ್ತಲೆಯಾಗಿ ಕುಳಿತಂತೆ ಅನ್ನಿಸಿ ಎರಡೂ ತಮ್ಮ ತಮ್ಮಲ್ಲೇ ಮಾತನಾಡಿಕೊಂಡವು. ‘ಮನುಷ್ಯರು ಹೇಳುವ ಸಾವು ಎಂದರೆ ಇದೇ. ನಾವೀಗ ಜೀವಿಸಿಲ್ಲ. ಸತ್ತಿದ್ದೇವೆ’ (ಪು.38) ‘ನಡೆದು ಬಂದ ದಾರಿಯ ಅರಿವಿಲ್ಲದಿದ್ದರೆ ಮುಂದೆ ಹೆಜ್ಜೆ ಇಡಲಾಗದು’ ಎಂಬ ತತ್ವದ ಬಗ್ಗೆ ನಮ್ಮ ಮುಂದಿನ ತಲೆಮಾರು ಆಲೋಚಿಸುವುದನ್ನೇ ಬಿಟ್ಟು ಬಿಟ್ಟಿದ್ದಾರಲ್ಲ ಎಂಬ ಗಂಭೀರ ಚಿಂತನೆಯೂ ಈ ಕಥೆಯಲ್ಲಿದೆ.
‘ಗೋಡೆ ಬೆಳೆದಾಗ’ ಕಥೆ ಒಬ್ಬ ಹೆಣ್ಣು ಕರಿಯರ್ ಬಗ್ಗೆ ಅತಿಯಾಗಿ ಚಿಂತಿಸುತ್ತ ತನ್ನ ಚಿಕ್ಕ ಮಗುವನ್ನು ಕಡೆಗಣಿಸಿ ಕೆಲಸದಾಕೆಯ ಕೈಗೆ ಕೊಟ್ಟ ಪರಿಣಾಮವಾಗಿ ಮುಂದೆ ದೊಡ್ಡವನಾದಂತೆ ಅವನು ಅವಳಿಂದ ದೂರವಾಗಿ ಅವಳು ತೀವ್ರವಾಗಿ ಪರಿತಪಿಸುವ ಕಥೆ. ‘ಪ್ರಾಯಶ್ಚಿತ್ತ’ ಅಪಾರವಾಗಿ ಪ್ರೀತಿಸುವ ಅಣ್ಣ-ತಂಗಿಯರ ನಡುವೆ ವಿಧಿ ಆಡಿದ ಆಟದಿಂದಾಗಿ ಅವರ ಮಕ್ಕಳು ದೊಡ್ಡವರಾಗುವ ತನಕ ಇಬ್ಬರೂ ಪರಸ್ಪರರಿಂದ ದೂರ ಉಳಿಯುವ ಕಥೆ. ತಂಗಿ ತನಗೆ ದ್ರೋಹ ಬಗೆದಳೆಂದು ತಪ್ಪಾಗಿ ತಿಳಿದು ಅಣ್ಣ ಅವಳನ್ನು ಅಷ್ಟೇ ತೀವ್ರವಾಗಿ ದ್ವೇಷಿಸುತ್ತಾನೆ. ಕೊನೆಗೆ ಅವನ ಮಗ ಮತ್ತು ಅವಳ ಮಗಳು ಕಾಲೇಜಿನಲ್ಲಿ ಭೇಟಿಯಾಗಿ ಪ್ರೀತಿಸಿ ಮದುವೆಯಾಗುವ ನಿರ್ಧಾರ ಮಾಡುವುದರೊಂದಿಗೆ ಕಥೆ ಸುಖಾಂತ್ಯ.
‘ಆಸರೆ’ ಕೊನೆಯ ಕಥೆ. ಅಜ್ಜ-ಅಜ್ಜಿಯನ್ನು ನೋಡಲು ಬೆಂಗಳೂರಿನಿಂದ ಹಳ್ಳಿಗೆ ಬಂದ ಮಕ್ಕಳು, ಅವರ ನಡುವಣ ಗಾಢವಾದ ಪ್ರೀತಿ, ಅಜ್ಜನ ಶಿಸ್ತು, ಹಳ್ಳಿಯ ಬದುಕನ್ನು ಇಷ್ಟ ಪಡುವ ಮಕ್ಕಳು, ಆಲೆಮನೆಯ ರಾಮಪ್ಪ ಗೌಡರೊಂದಿಗೆ ಶೇಷಾದ್ರಿಯವರ ಸ್ನೇಹಸಂಬಂಧ, ಮಕ್ಕಳನ್ನು ಆಲೆಮನೆಗೆ ಕರೆದುಕೊಂಡು ಹೋಗಿ ತೃಪ್ತಿಯಾಗುವಷ್ಟು ಜೋನಿಬೆಲ್ಲ ಕೊಡಿಸುವುದು, ಕೊನೆಯಲ್ಲಿ ಬರುವ ಆಘಾತಕಾರಿ ಸುದ್ದಿ, ಕೊರೋನಾ ಗುಣವಾದರೂ ವ್ಯಾಕ್ಸಿನ್ ತೆಗೆದುಕೊಳ್ಳುವ ಬಗ್ಗೆ ಅಸಡ್ಡೆ ತೋರಿಸಿದ ಮಗನ ಸಾವು, ಅಜ್ಜ-ಅಜ್ಜಿ ಬೆಂಗಳೂರಿಗೆ ಶಿಫ್ಟ್ ಆದಾಗ ಹಳ್ಳಿಯಲ್ಲಿರುವ ಆಸ್ತಿಯನ್ನು ಜೋಪಾನವಾಗಿ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊರುವ ಗೌಡರು- ಇಂಥ ಸಂಬಂಧಗಳ ಬಗ್ಗೆ ಎಣಿಸುವಾಗ ಮನಸ್ಸು ತುಂಬಿ ಬರುತ್ತದೆ.
ಎಲ್ಲವೂ ಚಿಕ್ಕ ಚಿಕ್ಕ ಕಥೆಗಳು. ಖುಷಿಯಿಂದ ಓದಿಸಿಕೊಂಡು ಹೋಗುವ ಕಥೆಗಳು. ಬಹಳ ಸರಳವೂ ಸುಂದರವೂ ಆದ ಶೈಲಿಯಲ್ಲಿ ಸಿರಿಯವರು ಓದುಗರ ಮನಮುಟ್ಟುವಂತೆ, ಓದಿದವರ ಮನಸ್ಸನ್ನು ಕಾಡುವಂತೆ ಆಕರ್ಷಕವಾಗಿ ಬರೆಯಬಲ್ಲರು ಅನ್ನುವುದಕ್ಕೆ ಇಲ್ಲಿರುವ 25 ಕತೆಗಳೇ ಸಾಕ್ಷಿ. ಹಿರಿಯ ಪತ್ರಕರ್ತರಾದ ದು.ಗು. ಲಕ್ಷ್ಮಣ ಅವರು ಇದಕ್ಕೊಂದು ಅಂದವಾದ ಮುನ್ನುಡಿ ಬರೆದಿದ್ದಾರೆ.
ಕೃತಿಯ ಹೆಸರು : ‘ಮಂಟಪ ಮತ್ತು ಕಾಶಿಗಿಂಡಿ’ (ಸಣ್ಣ ಕಥೆಗಳು)
ಲೇಖಕರು : ಸಿರಿ ಮೂರ್ತಿ ಕಾಸರವಳ್ಳಿ
ಪ್ರ. : ಸಾಧನಾ ಪಬ್ಲಿಕೇಶನ್ಸ್, ಬೆಲೆ : ರೂ.200/-, ಪುಟಗಳು : 192

-ಡಾ. ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.

ಲೇಖಕಿ ಸಿರಿಮೂರ್ತಿ ಕಾಸರವಳ್ಳಿ
