ಮಂಗಳೂರು : ಪುತ್ತೂರಿನ ಹೆಸರಾಂತ ಕಲಾ ಸಂಸ್ಥೆ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡಮಿ (ರಿ.) 30ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಮಂಗಳೂರಿನ ಸುಬ್ರಹ್ಮಣ್ಯ ಸಭಾದಲ್ಲಿ ನಡೆದ, ಕಾಪಿಕಾಡ್ ನಲ್ಲಿ ಭರತನಾಟ್ಯ ಶಿಕ್ಷಣವನ್ನು ನೀಡುತ್ತಿರುವ ಪ್ರಸಿದ್ಧ, ಕಲಾಸೂರ್ಯ ನೃತ್ಯಾಲಯ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ‘ಕಲಾಭವ’ ಸರಣಿಯ ಹನ್ನೊಂದನೇ ಸಂಚಿಕೆಯಲ್ಲಿ ವಿನೂತನ ಪ್ರಸ್ತುತಿಯ ಮೂಲಕ ಕಲಾಯೋಗಿ ಗುರು ಪುಲಕೇಶಿ ಕಸ್ತೂರಿ ಇವರ ಶಿಷ್ಯ ಬೆಂಗಳೂರಿನ ವಿದ್ವಾನ್ ಶ್ರವಣ್ ಯು.ಎಂ. ಇವರ ವಿನೂತನ ಭರತನಾಟ್ಯ ಪ್ರಸ್ತುತಿ, ಕಿರಿಯ ಹಿರಿಯ ಪ್ರೇಕ್ಷಕರ ಮನಸ್ಸಿನ ಕದ ತಟ್ಟಿ, ಚಿಂತನೆಯಲ್ಲಿ ತೊಡಗುವಂತೆ ಮಾಡಿದ್ದಂತೂ ಸತ್ಯ.

ರೋಚಕ ಕಥಾನಕವನ್ನೊಳಗೊಂಡ ‘ನಾರಾಯಣಿ’ : ವಿದ್ವಾನ್ ಶ್ರವಣ್ ಯು.ಎಂ. ಇವರು ತಮ್ಮ ವೈಚಾರಿಕ ಮನೋದೃಷ್ಟಿಯಿಂದ ಮೂಡಿ ಬಂದ ನೃತ್ಯ ರೂಪಕವೇ ‘ನಾರಾಯಣಿ’. ಇದು ಮೇಲ್ನೋಟಕ್ಕೆ ಮಹಾಭಾರತದ ಮಹಾರಥಿ ಕರ್ಣನ ವೃತ್ತಾಂತವಾಗಿದ್ದರೂ, ಹೊಸ ದೃಷ್ಟಿಕೋನದಲ್ಲಿ ಆತನ ವ್ಯಕ್ತಿತ್ವವನ್ನು ಅವಲೋಕಿಸುವಂತೆ ಮಾಡಿತು. ತಮ್ಮ ಗುರುಗಳಾದ ಕಲಾಯೋಗಿ ಗುರು ಪುಲಕೇಶಿ ಕಸ್ತೂರಿಯವರ ಸಲಹೆ ಸೂಚನೆಗಳೊಂದಿಗೆ ಈ ರಮಣೀಯ ಕಲಾ ಸೃಷ್ಟಿ ಮೂಡಿಬಂದಿದೆ ಎಂಬುದು ಗಮನಾರ್ಹ ವಿಷಯ.
ರಣರಂಗದಲ್ಲಿ ಕರ್ಣನ ಕೊನೆಯ ಕ್ಷಣದ ದೃಶ್ಯ ರೂಪಿಸಿ, ಕೃಷ್ಣನನ್ನು ‘ಕಪಟಿ’ ಎಂದು ಸಂಬೋಧಿಸಿದ್ದು, ಎಲ್ಲರ ಮನಸ್ಸಿನಲ್ಲಿ ಪ್ರಶ್ನೆ ಮೂಡಿಸಿತು. ಬಳಿಕ ರಿವರ್ಸ್ ಸ್ಕ್ರಿಪ್ಟಿಂಗ್ ಮೂಲಕ ಕರ್ಣನ ಅಂತ್ಯಕಾಲ ಅಸಹಾಯಕತೆಯ ಕಾರಣವನ್ನು ಬಿಚ್ಚಿಡುತ್ತಾ ಸಾಗುತ್ತದೆ ‘ನಾರಾಯಣಿ’. ತನ್ನ ಯೌವನದ ದಿನಗಳಲ್ಲಿ ಅಕ್ರಮವಾಗಿ ಕಲಿತ ವಿದ್ಯೆ,
ನಿರಾಯುಧ ಪಶುವೊಂದನ್ನು ಶಬ್ದವೇಧಿಯ ಮೂಲಕ ಕೊಂದ ಪರಿಣಾಮ, ಕುಖ್ಯಾತ ವಸ್ತ್ರಾಪಹಾರದ ಸಂದರ್ಭದಲ್ಲಿ ದುಶ್ಯಾಸನನಿಗೆ ಮಾಡಿದ ಪ್ರೋತ್ಸಾಹ, ಮಣ್ಣಿಗೆ ನೋವಾಗುವಂತೆ ಮಾಡಿದ ಬಲಪ್ರಯೋಗ. ಈ ಘಟನೆಗಳ ದೆಸೆಯಿಂದ ನಾಲ್ಕು ರೀತಿಯ ಶಾಪಕ್ಕೊಳಗಾಗಿ ಕರ್ಣನಿಗೆ ತನ್ನ ಶಕ್ತಿ, ಸಾಮರ್ಥ್ಯ, ಸಿದ್ಧಿ, ಆಯುಧದ ಮೇಲಿದ್ದ ಹಿಡಿತವೆಲ್ಲವೂ ಕಳಕೊಂಡು ದುರಂತ ಕರ್ಣನಾಗುತ್ತಾನೆ. ಈ ಸಂದರ್ಭದಲ್ಲಿ ಪ್ರೇಕ್ಷಕರು ಕರ್ಣನ ಜೀವನದಿಂದ ಕಲಿಯಬಹುದಾದ ಮೂರು ವಿಷಯಗಳನ್ನು ಸಭೆಯ ಮುಂದಿರಿಸಿ ಸರ್ವರ ಪ್ರಶಂಸೆಗೆ ಪಾತ್ರರಾಗುತ್ತಾರೆ, ವಿದ್ವಾನ್ ಶ್ರವಣ್ ಯು.ಎಂ.


ಕಲಾಭವದ ಪರಿಕಲ್ಪನೆ : ಆಪ್ತ ರಂಗಭೂಮಿಯ ಪರಿಕಲ್ಪನೆಯೊಂದಿಗೆ ಸಾಗುತ್ತಿರುವ ‘ಕಲಾಭವ’ ಶೀರ್ಷಿಕೆಯ ಮಾಸಿಕ ಕಲಾ ಸರಣಿ, ‘ನಾರಾಯಣಿ’ಯ ನಾಟ್ಯಕಲಾ ವಿಸ್ಮಯ ವೀಕ್ಷಿಸಲು ವೇದಿಕೆಯಿಂದ ಅನತಿ ದೂರದಿಂದಲೇ ಪ್ರೇಕ್ಷಕರು ಸಾಕ್ಷಿಯಾದುದು ವಿಶೇಷ. ಗುರು ವಿದುಷಿ ಸೌಜನ್ಯ ಪಡುವೆಟ್ಣಾಯ ಹಾಗೂ ನ್ಯಾ. ವಿಕ್ರಮ್ ಪಡುವೆಟ್ಣಾಯ ಸುಲಲಿತವಾಗಿ ಸಂಯೋಜಿಸುತ್ತಿದ್ದಾರೆ. ತಮ್ಮ ಕಲಾಸೂರ್ಯ ನೃತ್ಯಾಲಯದ ವಿದ್ಯಾರ್ಥಿ-ಪೋಷಕರ ಸಮೂಹ, ಆಹ್ವಾನಿತರ ಆತ್ಮೀಯ ಬಳಗವನ್ನೊಳಗೊಂಡ ಸೀಮಿತ ಸಂಖ್ಯೆ ಪ್ರೇಕ್ಷಕ ಗಣ, ಹಾಗೂ ಪ್ರದರ್ಶನದ ಕೊನೆಯಲ್ಲಿ ಸಾಗಿದ ‘ನಾರಾಯಣಿ’ ಪ್ರಸ್ತುತಿಯ ಚರ್ಚೆ, ಅರ್ಥಪೂರ್ಣ ಸಂಜೆಗೆ ಕಾರಣವಾಯಿತು.

ಅಭ್ಯಾಗತರಾಗಿ ಆಗಮಿಸಿದ ವಿದ್ವನ್ಮಣಿಗಳು : ಪ್ರೇಕ್ಷಕರ ಸಾಲಿನಲ್ಲಿ ಹಿರಿಯ ನೃತ್ಯ ಗುರುಗಳಾದ ಕಲಾಯೋಗಿ ಗುರು ಪುಲಕೇಶಿ ಕಸ್ತೂರಿ, ವಿದುಷಿ ರಾಜಶ್ರೀ ಉಳ್ಳಾಲ್, ವಿದುಷಿ ಶ್ರೀಲತಾ ನಾಗರಾಜ್ ಉಪಸ್ಥಿತರಿದ್ದು ಕಾರ್ಯಕ್ರಮದ ಘನತೆ ಹೆಚ್ಚಿಸಿದರು. ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡಮಿ (ರಿ.) ಪುತ್ತೂರು ಸಂಸ್ಥೆಯ ವಿದುಷಿ ಪ್ರೀತಿಕಲಾ, ಹಿರಿಯ ಮೃದಂಗ ವಾದಕರಾದ ವಿದ್ವಾನ್ ಮನೋಹರ್ ರಾವ್, ಸುಬ್ರಹ್ಮಣ್ಯ ಸಭಾದ ಅಧ್ಯಕ್ಷರಾದ ಡಾ. ಎ.ಪಿ. ಕೃಷ್ಣ ಹಾಗೂ ಅನುಪಸ್ಥಿತರಾಗಿದ್ದ ಗುರು ವಿದ್ವಾನ್ ದೀಪಕ್ ಕುಮಾರ್ ಅವರ ಬೆಂಬಲ, ಸಲಹೆ ಸಹಕಾರ ಹಾಗೂ ಕಲಾಭವದ ಹಿಂದಿರುವ ಬಹುದೊಡ್ಡ ಶಕ್ತಿ ಎಂಬುದು ಸತ್ಯ. ಇಂತಹ ವಿದ್ವನ್ಮಣಿಗಳು ಪ್ರದರ್ಶನವನ್ನು ಆಸ್ವಾದಿಸುತ್ತಿದ್ದರೆ, ಕಾರ್ಯಕ್ರಮದ ಅಭ್ಯಾಗತರಾಗಿ ಕಿರು ಅನುಭವ ಹೊತ್ತ ನನಗೆ ಗುರುತರದ ಜವಾಬ್ದಾರಿಯನ್ನು ಹೊರಿಸಿ, ಜೊತೆಗೆ ನನ್ನ ಶ್ರೀಮತಿಯೊಂದಿಗೆ ದೀಪ ಪ್ರಜ್ವಲನೆ ನೆರವೇರಿಸಿ, ಬಳಿಕ ಹಿತವಚನಗೈಯುವ ಭಾಗ್ಯ ಒದಗಿಸಿರುವುದು ಯೋಗ-ಭಾಗ್ಯವೇ ಸರಿ. ಸಂಸ್ಥೆಯವರು ನನ್ನ ಮೇಲಿಟ್ಟ ಪ್ರೀತಿ ಹಾಗೂ ಆತ್ಮೀಯತೆಯ ದ್ಯೋತಕ, ಈ ಒಂದು ಸದವಕಾಶ ಎನ್ನಬಹುದೇನೋ.


ಕಲಾಭವದ ವಿಶೇಷತೆ : ಕೊನೆಯಲ್ಲಿ ಹೃದ್ಯವೆನಿಸಿದ ನೃತ್ಯ ವಿದ್ಯಾರ್ಥಿನಿ ಕುಮಾರಿ ಸನ್ನಿಧಿ ಔಷಧೀಯ ಗುಣಗಳನ್ನು ವಿವರಿಸಿ ನನಗೆ ಸ್ಮರಣಿಕೆಯಾಗಿ ನೀಡಿದ ದಾಸವಾಳ ಹೂವಿನ ಗಿಡ, ಆರಂಭದಲ್ಲಿ ಮೊಳಗಿದ ಶಂಖನಾದ, ಮಾಸ್ಟರ್ ಶ್ಯಾಮ್ ಪಡುವೆಟ್ಣಾಯ ಇವರಿಂದ ಹರಿದ ಓಂಕಾರ ಹಾಗೂ ವಿದ್ಯಾರ್ಥಿನಿ ಕುಮಾರಿ ಮಾನ್ವಿತಾ ಇವರಿಂದ ನಡೆದ ಪಂಚಾಂಗ ಶ್ರವಣ, ವಿದ್ಯಾರ್ಥಿಗಳಿಗೆ ನೃತ್ಯದ ಜೊತೆಜೊತೆಗೆ ಸಂಸ್ಕಾರದ ಪಾಠವೂ ಕಲಾಭವದ ಕಲಾ ಭೂಷಣವಾಯಿತು. ಈ ಕಲಾಭವದ ಕಲಾಕಂಪು ಕರಾವಳಿಯ ಎಲ್ಲೆಡೆ ಹರಡಲಿ, ನಾರಾಯಣಿ ಮತ್ತಷ್ಟು ಮನಸ್ಸಲ್ಲಿ ಪ್ರಶ್ನೆ ಮೂಡಿಸಲಿ ಹಾಗೂ ನೃತ್ಯ ವಿದ್ಯಾರ್ಥಿಗಳು ಆಗುವುದರೊಂದಿಗೆ ಕಲಾ ಪ್ರೇಕ್ಷಕರಾಗಿ ನೈಜ ಕಲಾಪೋಷಣೆಗೆ ಕಾರಣವಾಗಲಿ ಎಂಬ ಸದಾಶಯನ್ನು ವ್ಯಕ್ತಪಡಿಸುತ್ತ, ಏರ್ಪಡಿಸಿದ ಲಘು ಉಪಹಾರವನ್ನು ಸವಿದು ಮನೆಗೆ ತೆರಳಿದೆವು. ಸಾಗಿದ ದಾರಿಯುದ್ದಕ್ಕೂ ರಿಂಗಣಿಸುತ್ತಿತ್ತು, ‘ನಾರಾಯಣಿ’. ಮನಸ್ಸಿಗೆ ಒದಗಿದ ಉತ್ತರ, ಆತ ಧರ್ಮದ ಕಡೆ ಸಾಗುತ್ತಿದ್ದರೆ ಖಳನಾಯಕನಾಗದೇ, ಖಲು-ನಾಯಕನಾಗಿರುತ್ತಿದ್ದ!

ರಾಕೇಶ್ ಹೊಸಬೆಟ್ಟು
ಬಹು ತಾಳವಾದ್ಯ ವಾದಕರು
