ಮಂಗಳೂರು : ಬಹುಮುಖ ಪ್ರತಿಭೆಯ ಕನ್ನಡ ಕವಿ, ಸಂಗೀತಗಾರ ಹಾಗೂ ಗ್ರಾಮೀಣ ನಾಯಕ ದಿವಂಗತ ಕೇದಿಗೆ ಭಾಸ್ಕರ ರಾವ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ, ಕೇದಿಗೆ ಪ್ರತಿಷ್ಠಾನ ಮಂಗಳೂರು ಇದರ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಭಾಸ್ಕರ ಶತಾಬ್ದಿ ಸಂಸ್ಮರಣೆ’ ಮತ್ತು ‘ಲಕ್ಷ್ಮಿ ಭಾಸ್ಕರ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 16 ಆಗಸ್ಟ್ 2026ರಂದು ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ (SCI) ಮಂಗಳೂರು ಪದಾಧಿಕಾರಿಗಳು, ಕುಟುಂಬಸ್ಥರು, ಹಿತೈಷಿಗಳು ಹಾಗೂ ಸಾರ್ವಜನಿಕರು ಸೇರಿದಂತೆ 200ಕ್ಕೂ ಅಧಿಕ ಜನಸ್ತೋಮ ಪಾಲ್ಗೊಂಡಿತ್ತು.
ಕಾರ್ಯಕ್ರಮದಲ್ಲಿ ಮೊದಲಿಗೆ ಟೀಮ್ ಅರೆಹೊಳೆ ತಂಡದಿಂದ ರಂಗಗೀತೆ ಗಾಯನ ಮೂಡಿಬಂದಿತು. ತದನಂತರ ಕುಮಾರಿ ನಿಧಿ ಅವರ ಆಕರ್ಷಕ ಸ್ವಾಗತ ನೃತ್ಯ ಹಾಗೂ ಟೀಮ್ ಅರೆಹೊಳೆ ತಂಡದಿಂದ ಆಕರ್ಷಕ ಪೇಜೆಂಟ್ರಿ ಪ್ರದರ್ಶನ ನಡೆಯಿತು. ಬಳಿಕ ಗಣ್ಯರಿಂದ ಪುಷ್ಪ ನಮನ ಹಾಗೂ ದೀಪ ಪ್ರಜ್ವಲನೆ ನೆರವೇರಿತು. ವಿದ್ಯಾಶ್ರೀ ಅವರು ಪ್ರಾರ್ಥನೆಗೈದರು. ಕೇದಿಗೆ ಪ್ರತಿಷ್ಠಾನ ಮಂಗಳೂರು ಇದರ ಅಧ್ಯಕ್ಷ ಡಾ. ಕೇದಿಗೆ ಅರವಿಂದ ರಾವ್ ಅವರು ನೆರೆದಿದ್ದ ಸರ್ವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಸಾಹಿತ್ಯ ಲೋಕದ ಪ್ರಮುಖ ಮೈಲಿಗಲ್ಲಾಗಿ ದಿವಂಗತ ಕೇದಿಗೆ ಭಾಸ್ಕರ ರಾವ್ ಅವರು ರಚಿಸಿದ ಪ್ರಸಿದ್ಧ ಮಕ್ಕಳ ಕವನ ಸಂಕಲನ ‘ಕೇದಿಗೆ ಹೂವು’ ಕೃತಿಯ ಮರುಮುದ್ರಿತ ಪ್ರತಿಗಳನ್ನು ಹಿರಿಯ ಸಾಂಸ್ಕೃತಿಕ ಹರಿಕಾರ ಶ್ರೀ ಸುಧಾಕರ ಪೇಜಾವರ ಅವರು ಮುಖ್ಯ ಅತಿಥಿ ಯಾಜಿ ದಿವಾಕರ ಭಟ್ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಲೋಕಾರ್ಪಣೆಗೊಳಿಸಿದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಮುದ್ರಿತ ಬಿರುದುಗಳೊಂದಿಗೆ ಪ್ರತಿಷ್ಠಿತ ‘ಲಕ್ಷ್ಮಿ ಭಾಸ್ಕರ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಕರ್ನಲ್ ನಿತಿನ್ ಭಿಡೆ – ದೇಶರಕ್ಷಣೆ ಮತ್ತು ಅತ್ಯುನ್ನತ ಮಿಲಿಟರಿ ಸೇವೆಗಾಗಿ ‘ರಾಷ್ಟ್ರಸೇವಾ ನಿಷ್ಠ’ ಪ್ರಶಸ್ತಿ. ಪ್ರೊ. ಎಂ. ಪ್ರಭಾಕರ ಜೋಶಿ – ಯಕ್ಷಗಾನ, ಸಾಹಿತ್ಯ ಮತ್ತು ಕಲಾ ವಿಮರ್ಶೆ ಕ್ಷೇತ್ರಕ್ಕೆ ನೀಡಿದ ಮಹೋನ್ನತ ಕೊಡುಗೆಗಾಗಿ ‘ಯಕ್ಷಕಲಾ ನಿಷ್ಠ’ ಪ್ರಶಸ್ತಿ. ಪ್ರೊ. ಅನಂತ ಪದ್ಮನಾಭ ರಾವ್ – ಶೈಕ್ಷಣಿಕ ಶ್ರೇಷ್ಠತೆ, ರೇಖಾಚಿತ್ರ ಮತ್ತು ಸಾಂಸ್ಥಿಕ ನಾಯಕತ್ವಕ್ಕಾಗಿ ‘ಚಿತ್ರಕಲಾ ನಿಷ್ಠ’ ಪ್ರಶಸ್ತಿ. ಶ್ರೀ ಕೆ. ತಿರುಮಲೇಶ್ವರ ಭಟ್ – ಆದರ್ಶ ಕೃಷಿ ಚಿಂತನೆ, ಸಮಾಜ ಸೇವೆ ಮತ್ತು ಗ್ರಾಮೀಣಾಭಿವೃದ್ಧಿಗಾಗಿ ‘ಕೃಷಿಸೇವಾ ನಿಷ್ಠ’ ಪ್ರಶಸ್ತಿ. ಪ್ರಶಸ್ತಿ ಸ್ವೀಕರಿಸಿದ ಗಣ್ಯರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಕೃತಜ್ಞತೆ ಸಲ್ಲಿಸಿದರು. ಕೇದಿಗೆ ಕುಟುಂಬದ ಸಮಾಜಮುಖಿ ಮತ್ತು ಗೌರವದ ಸಂಸ್ಕಾರದಂತೆ ಕಾರ್ಯಕ್ರಮದಲ್ಲಿ ಜನಪರ ಸೇವೆ ಹಾಗೂ ಹಿರಿಯರನ್ನು ಆದರಿಸುವ ಮಹತ್ವದ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅತ್ಯಂತ ಭಾವುಕ ಮತ್ತು ಗೌರವದ ಕ್ಷಣವಾಗಿ, 103 ವರ್ಷ ಪ್ರಾಯದ ಪ್ರಸಿದ್ಧ ಮೃದಂಗ ವಿದ್ವಾಂಸರಾದ ಶತಾಯುಷಿ ವಿದ್ವಾನ್ ಬಾಬು ರೈ ಅವರ ದೈನಂದಿನ ಸುಲಭ ಓಡಾಟ ಹಾಗೂ ವಿಶ್ರಾಂತಿಯ ಸೌಕರ್ಯಕ್ಕಾಗಿ ಗೌರವಪೂರ್ವಕವಾಗಿ ಗಾಲಿಕುರ್ಚಿಯನ್ನು (ವೀಲ್ ಚೇರ್) ಕೊಡುಗೆಯಾಗಿ ಅವರ ಪುತ್ರ ಸುಭಾಷ್ ರೈ ಯವರ ಮುಖಾಂತರ ಹಸ್ತಾಂತರಿಸಲಾಯಿತು.

ಮಂಗಳೂರು ಲಯನ್ಸ್ ಚಾರಿಟೇಬಲ್ ಮತ್ತು ಎಜುಕೇಶನಲ್ ಟ್ರಸ್ಟ್ ಸಹಯೋಗದೊಂದಿಗೆ ಅರ್ಹ ವಿದ್ಯಾರ್ಥಿಗಳಾದ ಪರ್ಣಿಕಾ, ಮೇಘಾ ವಿ. ಶೆಟ್, ಕುಶಿತ್, ರಂಜಿತಾ ಮತ್ತು ಹರ್ಷ ಡಿ. ರಮೇಶ್ ಅವರಿಗೆ ನಾಗರಾಜ್ ಶರ್ಮ ಅವರ ಉಪಸ್ಥಿತಿಯಲ್ಲಿ ವಿದ್ಯಾರ್ಥಿವೇತನ ವಿತರಣೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀನಿವಾಸ್ ವಿಶ್ವವಿದ್ಯಾಲಯದ ಸಂಸ್ಕೃತ ಪ್ರೊಫೆಸರ್ ಯಾಜಿ ಪಾವಂಜೆ ದಿವಾಕರ ಭಟ್ ಅವರು ಕೇದಿಗೆ ಪ್ರತಿಷ್ಠಾನದ ಕಾರ್ಯವೈಖರಿಯನ್ನು ಮೆಚ್ಚುತ್ತಾ ಹೆತ್ತವರನ್ನು ವೃದ್ದಾಪ್ಯದಲ್ಲಿ ಆಶ್ರಮಗಳಿಗೆ ಕಳುಹಿಸದೆ ತಮ್ಮ ಜೊತೆಗೇ ಕೊನೆತನಕ ಆರೈಕೆ ಮಾಡಿ ಸಮಾಜಕ್ಕೆ ಮಾದರಿ ಆಗಬೇಕು ಎಂಬ ಪ್ರೇರಣಾದಾಯಿ ಸಂದೇಶ ನೀಡಿದರು. ವೇದಿಕೆಯಲ್ಲಿ ಕಾರ್ಯಕ್ರಮ ಸಂಯೋಜಕ ದತ್ತಾತ್ರೇಯ ಬಾಳ, ಎಸ್ಸಿಐ ಮಂಗಳೂರು ಅಧ್ಯಕ್ಷ ಹರೀಶ, ಲಯನ್ಸ್ ಕ್ಲಬ್ ಮಂಗಳೂರು ಅಧ್ಯಕ್ಷೆ ಹೇಮಾ ರಾವ್ ಹಾಗೂ ಕುಟುಂಬದ ಹಿರಿಯರಾದ ಹೃಷ ಕುಮಾರ್ ಕೇದಿಗೆ ಉಪಸ್ಥಿತರಿದ್ದರು.

ಲಯನ್ಸ್ ಅಧ್ಯಕ್ಷರು ಶುಭಾಶಂಸನೆ ಮಾಡಿದರು. ಮುಖ್ಯ ಅತಿಥಿ ದಂಪತಿಗಳಿಗೆ ಶಾಲು, ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ದತ್ತಾತ್ರೇಯ ಬಾಳ ಅವರು ವಂದನಾರ್ಪಣೆಗೈದರು. ಸಭಾ ಕಾರ್ಯಕ್ರಮದ ಬಳಿಕ ‘ಟೀಮ್ ಅರೆಹೊಳೆ ನಂದಗೋಕುಲ’ ತಂಡದವರು ಪ್ರಸ್ತುತಪಡಿಸಿದ ಅತ್ಯದ್ಭುತ ಸಾಂಸ್ಕೃತಿಕ ವೈಭವವು ನೆರೆದಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ಮತ್ತು ಎಸ್ಸಿಐ ಮಂಗಳೂರು ಸದಸ್ಯರು ಚೇತನಾ ದತ್ತಾತ್ರೆಯಾ ತಂಡದವರು ನೀಡಿದ ಪ್ರದರ್ಶನವು ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಿತು.
