ಬಂಟ್ವಾಳ : ಬಂಟ್ವಾಳ ತಾಲೂಕಿನ ನರಿಕೊಂಬು ಮಾಣಿಮಜಲು ಇಲ್ಲಿರುವ ‘ಕೀರ್ತನಾ ಸಂಗೀತ ಶಾಲೆ’ ಸುಮಾರು 20 ವರ್ಷಗಳಿಂದ ಸಂಗೀತ ತರಗತಿಗಳನ್ನು ನಡೆಸುತ್ತಾ, ಅನೇಕ ಪ್ರತಿಭಾನ್ವಿತರನ್ನು ಹಾಡುಗಾರರನ್ನಾಗಿ ಪರಿಚಯಿಸಿದ ಸಂಗೀತ ಶಾಲೆಯ ಗುರುಗಳು ವಿದ್ವಾನ್ ಶ್ರೀ ಕೃಷ್ಣ ಆಚಾರ್ಯ ಹಾಗೂ ವಿದುಷಿ ಶ್ರೀಮತಿ ರಜತಾ ಕೃಷ್ಣ ಆಚಾರ್ಯ ದಂಪತಿಗಳು. ಇವರು ತಮ್ಮ ಮನೆಯಲ್ಲಿ ‘ಕೀರ್ತನಾರೋಹಣ’ ಎನ್ನುವ ಸಂಗೀತ ಸರಣಿಯ ಮೂಲಕ ವಿದ್ಯಾರ್ಥಿಗಳಿಗೆ ವೇದಿಕೆಯನ್ನೊದಗಿಸುತ್ತಾ ಸಂಗೀತ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ಈ ಸರಣಿಯ ಐದನೆಯ ಕಾರ್ಯಕ್ರಮವು ದಿನಾಂಕ 17 ಮೇ 2026ರಂದು ಕೀರ್ತನಾಲಹರಿ ಸಭಾಂಗಣದಲ್ಲಿ ನಡೆಯಿತು.
ಮೊದಲಿಗೆ ಕಾರ್ಯಕ್ರಮ ನೀಡಿದ ಅನ್ವೇಶ್ ಅಂಬೆಕಲ್ಲು ಹಾಗೂ ಕ್ಷಿತಿ ಹಿಮಾನಿ ಇವರು ಕಚೇರಿಯನ್ನು ಅಭೋಗಿ ವರ್ಣದೊಂದಿಗೆ ಪ್ರಾರಂಭಿಸಿ, ನಂತರ ವಿವಿಧ ಕೃತಿಗಳಿಂದ ಮುಂದುವರೆಸಿ ಸುಮಾರು 45 ನಿಮಿಷಗಳ ಕಾರ್ಯಕ್ರಮವನ್ನು ದೇವರನಾಮದೊಂದಿಗೆ ಮುಕ್ತಾಯಗೊಳಿಸಿದರು. ನಂತರ ಅಭಿರಾಮ್ ಸೂರ್ಯಂಬೈಲು ಇವರು, ತನ್ನ ಒಂದೂಕಾಲು ಗಂಟೆಯ ಕಾರ್ಯಕ್ರಮದಲ್ಲಿ ಅಠಾಣ, ರೀತಿಗೌಳ, ಪಂತುವರಾಳಿ ಕೃತಿಗಳ ಪ್ರಸ್ತುತಿಯ ನಂತರ ಪ್ರಧಾನ ರಾಗವಾಗಿ ಭೈರವಿ ರಾಗದ ಬಾಲಗೋಪಾಲ ಕೃತಿಯನ್ನು ಆಯ್ದುಕೊಂಡರು. ಬಳಿಕ, ವೆಂಕಟಾಚಲ ನಿಲಯಂ ದೇವರನಾಮ, ಕೊನೆಗೆ ಬೃಂದಾವನ ಸಾರಂಗ ತಿಲ್ಲಾನದೊಂದಿಗೆ ಕಚೇರಿಯು ಮುಕ್ತಾಯಗೊಂಡಿತು. ವಿದ್ಯಾರ್ಥಿಗಳ ಪ್ರಸ್ತುತಿಯು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಹಿಮ್ಮೇಳದಲ್ಲಿ ವಿದ್ವಾನ್ ಬಾಲಕೃಷ್ಣ ಹೊಸಮನೆ ಮೃದಂಗ ಕಲಾವಿದರಾಗಿ, ಕುಮಾರಿ ಧನಶ್ರೀ ಶಬರಾಯ ಇವರು ವಯೋಲಿನ್ ಸಹಕಾರ ನೀಡಿದರು.

