ಮುಂಬೈ : ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಮಹಾಕವಿ ಪರಮದೇವ ಸಂಸ್ಮರಣೆ ಕಾರ್ಯಕ್ರಮ ಮತ್ತು ವಿಶೇಷ ಉಪನ್ಯಾಸವನ್ನು ದಿನಾಂಕ 21 ಆಗಸ್ಟ್ 2026ರ ಶುಕ್ರವಾರದಂದು ಮಧ್ಯಾಹ್ನ ಗಂಟೆ 2-00ರಿಂದ ಸಾಂತಾಕ್ರೂಜ್(ಪೂ). ವಿದ್ಯಾನಗರಿ, ಮುಂಬೈ ವಿಶ್ವವಿದ್ಯಾಲಯದ ರಾನಡೆ ಭವನ, ಕನ್ನಡ ವಿಭಾಗದಲ್ಲಿ ಆಯೋಜಿಸಿದೆ.
ವಿಭಾಗದ ಮುಖ್ಯಸ್ಥ, ಹಿರಿಯ ಪ್ರಾಧ್ಯಾಪಕರಾದ ಪ್ರೊ. ಜಿ.ಎನ್. ಉಪಾಧ್ಯ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು, ಮೊಗವೀರ ಪತ್ರಿಕೆಯ ಸಂಪಾದಕರಾದ ಅಶೋಕ ಸುವರ್ಣ ಇವರು ‘ಸಂಪಾದಕೀಯವನ್ನು ಬರೆಯುವ ಕ್ರಮ ಮತ್ತು ಮೊಗವೀರ ಪತ್ರಿಕೆಯ ವೈಶಿಷ್ಟ್ಯ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ. ಪ್ರೊ. ಕಮಲಾ ಹಂಪನಾ ಅವರ ‘ತುರಂಗ ಭಾರತ-ಒಂದು ಅಧ್ಯಯನ’ ಕೃತಿಯ ಕುರಿತು ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಪೂರ್ಣಿಮಾ ಸುಧಾಕರ ಶೆಟ್ಟಿಯವರು ಮಾತನಾಡಲಿದ್ದಾರೆ. ತುರಂಗ ಭಾರತ- ಗಮಕ ವಾಚನ ಗಾಯನವನ್ನು ವಿಭಾಗದ ಸಂಶೋಧನ ವಿದ್ಯಾರ್ಥಿ ಕಲಾ ಭಾಗ್ವತ್ ಇವರು ನಡೆಸಿಕೊಡಲಿದ್ದಾರೆ. ಲೇಖಕಿ ಶಶಿಕಲಾ ಹೆಗಡೆಯವರು ಕರ್ಕಿ ವೆಂಕಟರಮಣ ಶಾಸ್ತ್ರಿ ಸಂಪಾದಿತ ತುರಂಗ ಭಾರತದ ಕುರಿತು ಮಾತನಾಡಲಿರುವರು. ವಿಭಾಗದ ಸಂಶೋಧನ ವಿದ್ಯಾರ್ಥಿ ಸವಿತಾ ಅರುಣ್ ಶೆಟ್ಟಿಯವರು ಕಾರ್ಯಕ್ರಮವನ್ನು ನಿರೂಪಿಸಲಿರುವರು. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಕೋರಲಾಗಿದೆ.


ತುರಂಗ ಭಾರತ : ಪರಮದೇವ ಕವಿ ವಿರಚಿತ ತುರಂಗ ಭಾರತ ಒಂದು ಮೇರುಕೃತಿ. ಇದರಲ್ಲಿ ಪೀಠಿಕೆ ಅಥವಾ ನಾಂದಿ ಭಾಗ ಸೇರಿ ಒಟ್ಟು ಹದಿನೆಂಟು ಪರ್ವಗಳಿವೆ. ತನ್ನ ಕಾವ್ಯವನ್ನು ಆತ ‘ಸಂಕ್ಷೇಪ ಭಾರತ’ ಎಂದೇ ಕರೆದಿದ್ದು ಕ್ರಮೇಣ ಈ ಕೃತಿ ತನ್ನ ತುರಂಗ ಲಯದ ಕಾರಣದಿಂದ ‘ತುರಂಗ ಭಾರತ’ ಎಂದೇ ಖ್ಯಾತಿಯನ್ನು ಪಡೆಯಿತು. ಇದು ಕನ್ನಡದ ಅಪೂರ್ವ ಮಹಾಕಾವ್ಯಗಳಲ್ಲಿ ಒಂದು. ಪಂಪ, ಕುಮಾರವ್ಯಾಸ, ಲಕ್ಷ್ಮೀಶ ಮೊದಲಾದವರು ಮಹಾಭಾರತದ ಕಥೆಯನ್ನು ಸಮಗ್ರವಾಗಿ ಹೇಳಿಲ್ಲ. ಈ ಕೊರತೆಯನ್ನು ತುಂಬಿಕೊಟ್ಟ ಏಕೈಕ ಕವಿ ಪರಮದೇವ. ಈ ತುರಂಗ ಭಾರತವನ್ನು ಮೊದಲ ಬಾರಿಗೆ ಸಂಪಾದಿಸಿ ಪ್ರಕಟಿಸಿದ ಹಿರಿಮೆ ಮುಂಬೈ ಕನ್ನಡಿಗ, ಧೀರ ಪತ್ರಿಕೋದ್ಯಮಿ ಕರ್ಕಿ ವೆಂಕಟರಮಣ ಶಾಸ್ತ್ರಿ ಅವರಿಗೆ ಸಲ್ಲುತ್ತದೆ.

ಅಶೋಕ ಸುವರ್ಣ : ಮುಂಬೈ ಕನ್ನಡ ಪತ್ರಿಕೋದ್ಯಮಕ್ಕೆ ಅಶೋಕ ಸುವರ್ಣ ಇವರ ಕೊಡುಗೆ ಮಹತ್ತರವಾದುದು. ಅವರದು ನಾನಾ ಬಗೆಯ ವ್ಯಕ್ತಿತ್ವ ಹಾಗೂ ಬಹುಭಾಷಿಕ ಸಂವೇದನೆ. ಲೇಖಕರಾಗಿ, ಪತ್ರಕರ್ತರಾಗಿ, ಸಂಘಟಕರಾಗಿ, ‘ಮೊಗವೀರ’ ಪತ್ರಿಕೆಯ ಸಂಪಾದಕರಾಗಿ ಸೈ ಎನಿಸಿಕೊಂಡಿರುವ ಅಶೋಕ ಸುವರ್ಣ ಇವರು ಮುಂಬೈನ ತುಳು ಕನ್ನಡಿಗರ ಪ್ರೀತಿ ಆದರಗಳಿಗೆ ಪಾತ್ರರಾದವರು. ಕರ್ನಾಟಕ ಮಲ್ಲ ದೈನಿಕದ ವರದಿಗಾರರಾಗಿ ದುಡಿದ ಅವರು ಮಹಾರಾಷ್ಟ್ರ ಸರಕಾರದ ಮಾನ್ಯತೆ ಪಡೆದ ಮೊದಲ ಪತ್ರಕರ್ತರೂ ಆಗಿರುವುದು ವಿಶೇಷ. ಮುಂಬೈನ ಪ್ರಪ್ರಥಮ ಕನ್ನಡ ಮಾಸಿಕ ಮೊಗವೀರದ ಸಂಪಾದಕರಾಗಿ ಅವರು ಗೈದ ಸಾಹಿತ್ಯ ಪರಿಚಾರಿಕೆ ಉಲ್ಲೇಖನೀಯ ಅಂಶ. ಸ್ವತಃ ಬರೆಹಗಾರರಾದ ಅವರು ಬರೆಯುವ ಆಸಕ್ತಿಯುಳ್ಳವರಿಗೆ ದೊಡ್ಡ ಪ್ರಮಾಣದಲ್ಲಿ ವೇದಿಕೆಯನ್ನು ನಿರ್ಮಿಸಿಕೊಡುತ್ತಾ ಬಂದಿರುವ ಸ್ನೇಹಜೀವಿ. ಅವರದು ಅನ್ವೇಷಣಾ ಪ್ರವೃತ್ತಿ. ಬರೆಯುವ ಮೊದಲು ಅಧ್ಯಯನ ಮಾಡಿ ತಿಳಿವನ್ನು ತುಂಬಿಕೊಳ್ಳುವ ತವಕವಿರುವ ಲೇಖಕ, ಚಿಂತಕ. ಎಲ್ಲವನ್ನು ಕೂಲಂಕಷವಾಗಿ ನೋಡುವುದು ಅವರ ಸ್ವಭಾವ. ಹೀಗಾಗಿ ಅಶೋಕ ಸುವರ್ಣ ಅವರ ಕೃತಿಗಳಲ್ಲಿ, ಬರವಣಿಗೆಯಲ್ಲಿ ಒಂದು ಬಗೆಯ ಅಧಿಕೃತತೆ ಎದ್ದು ಕಾಣುತ್ತದೆ. ಯಾವ ಮುಲಾಜಿಲ್ಲದೆ ನಿರ್ಭಿಡೆಯಿಂದ ಅವರು ಬರೆಯುತ್ತಾ ಬಂದಿದ್ದಾರೆ. ‘ನಿಗೂಢ ಮಾಫಿಯಾ ಜಗತ್ತು’, ‘ಮಹಾಕಾಳಿ ಕೇವ್ನ ಮಹಾನುಭಾವ’, ‘ಮೊಗವೀರ ಮಂಡಳಿಯ ಒಂದು ಇತಿಹಾಸ’ ‘ಮುಂಬಯಿ ಪರಿಕ್ರಮಣ’ ಮೊದಲಾದವು ಅವರ ಮಹತ್ವದ ಕೃತಿಗಳು. ಮೊಗವೀರ ಪತ್ರಿಕೆಗೆ ಹೊಸ ಆಯಾಮ ನೀಡಿದ ಶ್ರೇಯಸ್ಸು ಸಹ ಅವರಿಗೆ ಸಲ್ಲುತ್ತದೆ.
