ಉಡುಪಿ : ‘ರಾಗಧನ’ ಸಂಸ್ಥೆ ನಡೆಸುತ್ತಿರುವ ‘ರಾಗರತ್ನ ಮಾಲಿಕೆ’ ಸರಣಿಯ 51 ನೆಯ ಕಾರ್ಯಕ್ರಮವು ದಿನಾಂಕ 11 ಜುಲೈ 2026ರಂದು ಶ್ರೀಮತಿ ವಿದ್ಯಾ ಸಂದೇಶ್ ದಂಪತಿಗಳ ನಿವಾಸವಾದ ‘ಸ್ಥವಿಷ್ಠ’ದಲ್ಲಿರುವ ‘ಸಾವಿತ್ರಿ ನಾಟ್ಯಶಾಲಾ’ ಸಭಾಂಗಣದಲ್ಲಿ ನಡೆಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಂತೆಯೇ ಮಂಗಳೂರಿನ ‘ನಾದ ಸುಧಾ ಸಂಗೀತ ವಿದ್ಯಾಲಯ’ದ ಸಹಯೋಗದೊಂದಿಗೆ ನಡೆದ ಕಚೇರಿಗೆ ಸ್ಥವಿಷ್ಠ ಮನೆಯವರು ಉತ್ತಮವಾದ ಆತಿಥ್ಯ ನೀಡಿದರು. ಗಿಳಿ, ಕೋಗಿಲೆ, ನವಿಲುಗಳ ಕಲರವ ಅಂತೆಯೇ ಹಚ್ಚ ಹಸುರಿನ ಶಾಂತವಾದ ಪರಿಸರದಲ್ಲಿ ಇಂದಿನ ಕಚೇರಿಗಳು ಹೆಚ್ಚು ಕಳೆಗಟ್ಟಿದವು. ಈ ದಿನ ಪ್ರಪ್ರಥಮವಾಗಿ ವೇಣುವಾದನವನ್ನು ನಡೆಸಿದ ತರುಣ ಶ್ರೀ ಶ್ರೀಕರನಾರಾಯಣ. ಇವರಿಗೆ ಕುಮಾರಿ ಧನಶ್ರೀ ಶಬರಾಯ ಒಳ್ಳೆ ಉತ್ಸಾಹದಿಂದ ವಯೊಲಿನ್ ಸಹಕಾರ ನೀಡಿದರು. ಶ್ರೀ ಶೈಲೇಶ್ ಕುಮಾರ್ ಕಟೀಲ್ ಇವರು ಹದವರಿತು ಮೃದಂಗ ಸಹವಾದನ ನೀಡಿದರು.
ಶ್ರೀ ರಾಗ ವರ್ಣದೊಂದಿಗೆ ಪ್ರಾರಂಭವಾದ ಕಚೇರಿಯಲ್ಲಿ ಬಂಗಲಾ (ಗಿರಿರಾಜಸುತ) ಕಾಪಿ ನಾರಾಯಣಿ (ಸರಸಸಾಮದಾನ) ಕೃತಿಗಳು ಹಲವಾರು ಸಂಗತಿಗಳೊಂದಿಗೆ ಮೂಡಿ ಬಂದವು. ಸರಸ್ವತಿ (ಅನುರಾಗಮು) ಮತ್ತು ಕಾಂಬೋಜಿ (ಮರಕತವಲ್ಲಿ) ರಾಗಗಳು ಪ್ರಧಾನವಾಗಿದ್ದವು. ಇವು ಎರಡೂ ಸಂಪೂರ್ಣ ರಾಗಗಳಲ್ಲ ; ಆದರೂ ಕಲಾವಿದರು ನೀಡಿದ ಸರಳವಾದ, ದೋಷರಹಿತವಾದ ರಾಗ ವಿಸ್ತಾರ, ಸ್ವರ ಕಲ್ಪನೆಗಳು ಮತ್ತು ಮುಕ್ತಾಯಗಳು ಇವರ ಸಂಗೀತ ಪ್ರೀತಿ, ಸಾಧನೆ ಮತ್ತು ಬದ್ಧತೆಗೆ ಸಾಕ್ಷಿ ನೀಡಿದವು. ಬೃಂದಾವನಿ ರಾಗದ ತಿಲ್ಲಾನದೊಂದಿಗೆ ಕಚೇರಿ ಸಂಪನ್ನಗೊಂಡಿತು. ಈ ತಂಡ ಇದೇ ರೀತಿಯ ಶ್ರದ್ಧೆ ಮತ್ತು ಪರಿಶ್ರಮವನ್ನು ಮುಂದುವರಿಸುತ್ತಾ ಭವಿಷ್ಯದಲ್ಲಿ ಉನ್ನತ ಮಟ್ಟದ ಕಲಾವಿದರಾಗಿ ಬೆಳಗಿ ಬರಲಿ ಎಂದು ‘ರಾಗಧನ’ ಶುಭ ಹಾರೈಸುಸುತ್ತಿದೆ.

ಆ ದಿನದ ಪ್ರಧಾನ ಕಛೇರಿ ವಯೋಲಿನ್ ದ್ವಂದ್ವ ವಾದನ. ಇಡಪಳ್ಳಿ ಅಜಿತ್ ಮತ್ತು ಅವರ ಪುತ್ರಿ ಕುಮಾರಿ ಕೃಷ್ಣಾ ಅಜಿತ್ ಇವರಿಂದ; ಈ ಇಬ್ಬರು ಗುರು-ಶಿಷ್ಯೆ ಕೂಡ ಹೌದು. ಸಾಂಪ್ರದಾಯಿಕತೆ ಮತ್ತು ರಾಗ ಭಾವಕ್ಕೆ ಹೆಚ್ಚಿನ ಆದ್ಯತೆ ನೀಡಲಾದ ಕಚೇರಿ ಇದು. ಪರಸ್ಪರರಿಗೆ ಪೂರಕವಾಗಿ ಕೃತಿ, ರಾಗಗಳನ್ನು ಬೆಳೆಸುತ್ತಾ ಸಾಗಿದ ಕಲಾವಿದರು ಪ್ರಾರಂಭದಿಂದ ಕೊನೆಯವರೆಗೂ ಕಚೇರಿಯ ಬಿಗುತನವನ್ನು ಏಕಪ್ರಕಾರವಾಗಿ ಕಾದುಕೊಂಡರು. ಕಾಪಿರಾಗದ ‘ಸುಮಸಾಯಕ’ ಪದವರ್ಣದೊಂದಿಗೆ ಪ್ರಾರಂಭ ! ನಾಟ (ಶ್ರೀ ಮಹಾಗಣಪತಿ), ಮೋಹನ ಕಲ್ಯಾಣಿ (ತಾಮದಂ ತಗಾದಯ್ಯಾ), ಅಭೇರಿ (ನಗುಮೋಮು) ಶುದ್ಧ ಸಾವೇರಿ (ದೇವಿ ತ್ರಿಪುರ ಸುಂದರಿ) ಕೃತಿಗಳು ಮತ್ತು ಸುಶ್ರಾವ್ಯವಾದ ಸಂಗತಿಗಳು ಕೃತಿಗಳ ಅಂದವನ್ನು ಸೊಗಸಾಗಿ ಬಿಡಿಸಿಟ್ಟವು.

ಪ್ರಧಾನರಾಗಗಳು ‘ನಾಸಿ ಕಾಭೂಷಣಿ’ (ಮಾರವೈರಿ) ಮತ್ತು ಶಂಕರಾಭರಣ (ಸ್ವರ ರಾಗ ಸುಧಾ). ಪರ್ಯಾಯವಾಗಿ ನುಡಿಸಲಾದ ರಾಗವಿಸ್ತಾರಗಳಲ್ಲಿ ಅಬ್ಬರದ ಬಿರ್ಕಗಳಾಗಲಿ, ಪಿಟೀಲು ವಾದ್ಯಕ್ಕೆ ಮೀಸಲಾದ ಬಿಲ್ಲುಗಾರಿಕೆಯ ಚಮತ್ಕಾರಗಳಾಗಲಿ ಇರಲಿಲ್ಲ ; ಆದರೆ ಶ್ರೋತೃಗಳನ್ನು ಹಿಡಿದಿಟ್ಟುಕೊಳ್ಳುವ ಆಕರ್ಷಣೆ ಇತ್ತು. ಮುಂದೆ ನಿರೂಪಿಸಲಾದ ಸ್ವರಕಲ್ಪನೆಗಳಲ್ಲಿ ಏಕಾವರ್ತಗಳು, ಪೋರುತ್ತಂ, ಕೂರೈಪ್ಪುಗಳು ಮತ್ತು ಉತ್ತಮವಾದ ಮುಕ್ತಾಯಗಳು ಗುಣಗ್ರಾಹಿ ರಸಿಕರನ್ನು ಗೆದ್ದುಕೊಂಡವು. ಪಾರಂಪರಿಕ ಶೈಲಿಯನ್ನು ಕಾದುಕೊಳ್ಳಲಾಗಿ ಇದೊಂದು ವಿಶಿಷ್ಟವಾದ ಕಚೇರಿ ಎಂದು ಅನಿಸಿಕೊಂಡಿತು.

ಮೃದುವಾಗಿ ಮೃದಂಗ ಸಹವಾದನ ನೀಡಿದ ಶ್ರೀ ಬಾಲಕೃಷ್ಣ ಕಾಮತ್ ತನಿಯಾವರ್ತನದಲ್ಲಿ ತಮ್ಮ ಪ್ರಭುದ್ಧತೆಯ ಪರಿಚಯ ನೀಡಿದರು. ರಾಗ ಮಾಲಿಕೆ (ಆರಭಿಮಾನಮ್), ಕಾಫಿ (ಜಗದೋದ್ಧಾರನ) ಮತ್ತು ರಾಗೇಶ್ವರಿ ತಿಲ್ಲಾನ ನುಡಿಸಿದ ಕಲಾವಿದರು ಕಛೇರಿಯನ್ನು ಸಮಾಪನಗೊಳಿಸಿದರು.

– ವಿಮರ್ಶಕಿ : ಸರೋಜಾ ಆರ್. ಆಚಾರ್ಯ
