ಬೆಂಗಳೂರು : ನೃತ್ಯ ಕುಟೀರ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿರುವ ‘ನೃತ್ಯ ಮಿಲನ’ ವಾರ್ಷಿಕೋತ್ಸವ ಕಾರ್ಯಕ್ರಮವು ದಿನಾಂಕ 22 ಆಗಸ್ಟ್ 2026ರ ಶನಿವಾರ ಬೆಳಿಗ್ಗೆ 10-00 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.
ಕಳೆದ ಹಲವು ವರ್ಷಗಳಿಂದ ಭರತನಾಟ್ಯ ಕಲೆಯ ಪ್ರಸಾರ, ಪ್ರಚಾರ ಹಾಗೂ ಯುವ ಪ್ರತಿಭೆಗಳ ಬೆಳೆಸುವಿಕೆಯಲ್ಲಿ ತೊಡಗಿಸಿಕೊಂಡಿರುವ ನೃತ್ಯ ಕುಟೀರದ ವಾರ್ಷಿಕೋತ್ಸವವು ವಿದ್ಯಾರ್ಥಿಗಳ ಕಲಾ ಪ್ರತಿಭೆಯನ್ನು ಅನಾವರಣಗೊಳಿಸುವ ವಿಶೇಷ ವೇದಿಕೆಯಾಗಿದೆ. ಈ ವರ್ಷದ ‘ನೃತ್ಯ ಮಿಲನ’ ಕಾರ್ಯಕ್ರಮದಲ್ಲಿ ನೃತ್ಯ ಕುಟೀರದ ವಿವಿಧ ವಯೋಮಾನದ ವಿದ್ಯಾರ್ಥಿಗಳು ಭರತನಾಟ್ಯದ ವೈವಿಧ್ಯಮಯ ಪ್ರಸ್ತುತಿಗಳನ್ನು ನೀಡಲಿದ್ದಾರೆ.
ಕಾರ್ಯಕ್ರಮದ ಗೌರವ ಅತಿಥಿಗಳಾಗಿ ನವರಸ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಕಲಾತ್ಮಕ ನಿರ್ದೇಶಕಿ ವಿದುಷಿ ನಮಿತಾ ಶಂಕರ್ ಹಾಗೂ ಬೆಂಗಳೂರು ಕರ್ನಾಟಕ ಮಹಿಳಾ ಯಕ್ಷಗಾನ (ರಿ.) ಸ್ಥಾಪಕ ನಿರ್ದೇಶಕಿ ಪ್ರಸ್ತುತ ಕಾರ್ಯದರ್ಶಿ ಶ್ರೀಮತಿ ಕೆ. ಗೌರಿ ಭಾಗವಹಿಸಲಿದ್ದಾರೆ. ನೃತ್ಯ ಕುಟೀರದ ನಿರ್ದೇಶಕಿ ಹಾಗೂ ಗುರು ವಿದುಷಿ ದೀಪಾ ಭಟ್ ಇವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

