ಹಾಸನ : ಮಾಣಿಕ್ಯ ಪ್ರಕಾಶನ (ರಿ.) ಹಾಸನ ಇದರ ವತಿಯಿಂದ ದಿನಾಂಕ 11 ಅಕ್ಟೋಬರ್ 2026 ಭಾನುವಾರ ಹಾಸನದ ಸಂಸ್ಕೃತ ಭವನದಲ್ಲಿ ಹಮ್ಮಿಕೊಳ್ಳುವ ‘ಮಾಣಿಕ್ಯ ಸಂಭ್ರಮ 2026’ ಹಾಗೂ ರಾಜ್ಯಮಟ್ಟದ ಕವಿ-ಕಾವ್ಯ ಸಂಭ್ರಮದ ಸರ್ವಾಧ್ಯಕ್ಷರನ್ನಾಗಿ ಸಾಹಿತಿ, ಸಂಘಟಕಿ ಹಾಗೂ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಉಪನ್ಯಾಸಕಿ ಡಾ. ಎಚ್.ಕೆ. ಹಸೀನಾ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಪ್ರಕಾಶಕಿ ದೀಪಾ ಉಪ್ಪಾರ್ ತಿಳಿಸಿದ್ದಾರೆ.
ನಿಕಟಪೂರ್ವ ಸಂಭ್ರಮಗಳ ಸರ್ವಾಧ್ಯಕ್ಷರಾದ ಡಾ. ವಿಶ್ವೇಶ್ವರ ಎನ್. ಮೇಟಿ, ಡಾ. ಅಮರೇಶ್ ಪಾಟೀಲ, ವಾಣಿ ಶೆಟ್ಟಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್, ಸಾಹಿತಿಗಳಾದ ನಾಗರಾಜ್ ದೊಡ್ಡಮನಿ, ಎಚ್.ಎಸ್. ಬಸವರಾಜ್, ವಾಸು ಸಮುದ್ರವಳ್ಳಿ, ಡಾ. ಪಿ. ದಿವಾಕರ ನಾರಾಯಣ, ದೇಸು ಆಲೂರು ಇವರನ್ನೊಳಗೊಂಡ ಸಮಿತಿ ಕನ್ನಡ ಸಾಹಿತ್ಯ ಮತ್ತು ಸಂಘಟನೆಗೆ ಸಲ್ಲಿಸುತ್ತಿರುವ ಅನುಪಮ ಸೇವೆಯನ್ನು ಪರಿಗಣಿಸಿ ಮಾಣಿಕ್ಯ ಸಂಭ್ರಮ 2026ರ ಸರ್ವಾಧ್ಯಕ್ಷರನ್ನಾಗಿ ಡಾ. ಎಚ್.ಕೆ. ಹಸೀನಾ ಇವರನ್ನು ಆಯ್ಕೆ ಮಾಡಲಾಗಿದೆ.

ಶಿವಮೊಗ್ಗೆಯ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಹಸೀನಾ ಹೆಚ್.ಕೆ. ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಸೀಬಿನಕೆರೆಯಲ್ಲಿ ಜನಿಸಿದವರು. ದಿವಂಗತ ಹೆಚ್.ಎ. ಖಾಸೀಂಸಾಬ್ ಮತ್ತು ಖೈರುನ್ನೀಸಾರವರ ಎರಡನೇ ಪುತ್ರಿ. ವೃತ್ತಿಯಲ್ಲಿ ಬೋಧಕಿಯಾದರೂ ಪ್ರವೃತ್ತಿಯಲ್ಲಿ ಪ್ರತಿಭಾನ್ವಿತ ಸಾಹಿತಿಯಾಗಿ, ಉತ್ತಮ ಸಂಘಟಕಿಯಾಗಿ, ಹಾಡುಗಾರ್ತಿಯಾಗಿ ಗುರುತಿಸಿಕೊಂಡವರು. ಕಳೆದ ಎರಡು ದಶಕಗಳಿಂದ ಕನ್ನಡ ಸಾಹಿತ್ಯ ಮತ್ತು ಸಂಘಟನಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಇವರು ಈಗಾಗಲೇ ‘ಒಲವ ಗಂಧ’ (ಕವನ ಸಂಕಲನ), ‘ಗುಲಾಬಿ ಮತ್ತು ಪ್ರೇಮ ಪತ್ರ’ (ಪ್ರಬಂಧ ಸಂಕಲನ), ‘ಮುಸ್ಲಿಮರ ಹಬ್ಬಗಳು ಮತ್ತು ಉರುಸುಗಳು’ ಪ್ರಬಂಧ ಸಂಕಲನಗಳನ್ನು ಕನ್ನಡ ಸಾರಸ್ವತಲೋಕಕ್ಕೆ ನೀಡಿದ್ದಾರೆ. ‘ಭಾರತ ಇತಿಹಾಸ’, ‘ಕರ್ನಾಟಕ ಇತಿಹಾಸ’, ‘ತಲಾಖ್ ತಲಾಖ್ ತಲಾಖ್’ ನವಸಾಕ್ಷರ ಕೈಪಿಡಿ, ‘ಅಕ್ಷರ ಅರಿವು ಮತ್ತು ಮಹಿಳೆ’ ಸಂಶೋಧನಾ ಕೃತಿ, ‘ಹದಿಹರೆಯ-ಸವಾಲುಗಳು ಮತ್ತು ಮಾರ್ಗೋಪಾಯಗಳು’, ‘ಶಿವಮೊಗ್ಗ ಜಿಲ್ಲೆಯ ಸಾಮರಸ್ಯದ ತಾಣಗಳು’ ಮುಂತಾದ ಮಹತ್ತರ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ನಾಡು-ನುಡಿಯ ಬಗ್ಗೆ ಅಪಾರ ಪ್ರೀತಿ ಮತ್ತು ಕಾಳಜಿ ಹೊಂದಿರುವ ಇವರು ಉತ್ತಮ ವಾಗ್ಮಿಯೂ ಹೌದು. ಕಾವ್ಯ, ಕಥೆ, ಲಲಿತ ಪ್ರಬಂಧ, ಲೇಖನ ಹೀಗೇ ಸಾಹಿತ್ಯದ ಅನೇಕ ಮಜಲುಗಳಲ್ಲಿ ಕಾರ್ಯಪ್ರವೃತ್ತರಾಗಿರುವ ಇವರ ಸಾಧನೆಗಾಗಿ ಹಾಸನದ ಮಾಣಿಕ್ಯ ಪ್ರಕಾಶನದ ‘ಅಲ್ಲಮ ಸಾಹಿತ್ಯ ಪ್ರಶಸ್ತಿ’, ತುಮಕೂರಿನ ಮಾತೃಭೂಮಿ ಸಂಸ್ಥೆಯ ‘ಡಾ. ಅಬ್ದುಲ್ ಕಲಾಂ ರಾಷ್ಟ್ರ ಪ್ರಶಸ್ತಿ’, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಧಾರವಾಡದ ‘ನಾಡೋಜ ಪಾಟೀಲ ಪುಟ್ಟಪ್ಪ ಸಾಹಿತ್ಯ ಪುರಸ್ಕಾರ’, ಮಾಣಿಕ್ಯ ಪ್ರಕಾಶನದ ‘ಜನ್ನ ಕಾವ್ಯ ಪ್ರಶಸ್ತಿ’, ‘ಹೊಯ್ಸಳ ಸಾಂಸ್ಕೃತಿಕ ಪ್ರಶಸ್ತಿ’, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ‘ಡಾ. ಎಂ.ಎಂ. ಕಲಬುರ್ಗಿ ಸಂಶೋಧನಾ ರಾಷ್ಟ್ರೀಯ ಪ್ರಶಸ್ತಿ’, ‘ಮೌಲಾನ ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿ’, ‘ಬಸವ ಕಾಯಕ ಪ್ರಶಸ್ತಿ’, ‘ಹೆಮ್ಮೆಯ ಕನ್ನಡತಿ ರಾಷ್ಟ್ರೀಯ ಪ್ರಶಸ್ತಿ’, ‘ರಾಷ್ಟ್ರೀಯ ಗಜಲ್ ರತ್ನ ಪ್ರಶಸ್ತಿ’ ಸೇರಿದಂತೆ ಹಲವಾರು ಗೌರವ ಸನ್ಮಾನಗಳು ಸಂದಿವೆ.
