ಜಿ. ಕೆ. ಐತಾಳ್ ಎಂದೆ ಪ್ರಸಿದ್ಧರಾದ ಗೋಪಾಲಕೃಷ್ಣ ಐತಾಳರು 1951ರ ಜೂನ್ 25ರಂದು ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ಜನಿಸಿದರು. ಇವರು ಸಾಹಿತ್ಯ, ಜಾನಪದ, ರಂಗಭೂಮಿಗಳಲ್ಲಿ ಸಕ್ರಿಯರಾಗಿದ್ದ ವಿಶಿಷ್ಟ ವ್ಯಕ್ತಿ. ತಾಯಿ ಲಕ್ಷ್ಮೀದೇವಿ, ತಂದೆ ಸೂರ್ಯನಾರಾಯಣ ಐತಾಳ್. ರಂಗ ಕಲೆಯ ಬಗ್ಗೆ ವಿಶೇಷ ಆಸಕ್ತಿ, ಪ್ರೀತಿ, ಗೌರವಗಳನ್ನು ಹೊಂದಿದ್ದ ನಾರಾಯಣ ಐತಾಳರು ಕೋಟೇಶ್ವರದ ‘ಶ್ರೀ ಲಲಿತಾ ಕಲಾ ಪ್ರೇಮಿ ನಾಟಕ ಮಂಡಲಿ’ ಹಾಗೂ ಕುಂದಾಪುರದ ‘ರೂಪರಂಗ’ ಸಂಸ್ಥೆಗಳ ಸ್ಥಾಪಕರು. ತಂದೆಯಿಂದ ಬಳುವಳಿಯಾಗಿ ಪಡೆದ ರಂಗಪ್ರೀತಿ, ಸಾಹಿತ್ಯದ ಅಭಿರುಚಿ, ಕಲೆಯ ಒಲವು ಜಿ.ಕೆ. ಐತಾಳ್ ಅವರನ್ನು ಅನನ್ಯ ಸಾಹಿತ್ಯಿಯನ್ನಾಗಿ ಮಾಡಿದ್ದು ಈಗ ಇತಿಹಾಸ.
ಕರ್ನಾಟಕ ಬ್ಯಾಂಕ್ ಉದ್ಯೋಗಿಯಾಗಿದ್ದ ಐತಾಳರು ಹವ್ಯಾಸಿ ಬರಹಗಾರರಾಗಿ ಬೀರಿದ ಪರಿಣಾಮ ಮಹತ್ವದ್ದು. ಹಲವು ನಿರ್ಲಕ್ಷಿತ ವಿಚಾರಗಳನ್ನು ಬೆಳಕಿಗೆ ತಂದು ಅನೇಕ ಅಭಿವೃದ್ಧಿಗಳನ್ನು ಮಾಡುವಲ್ಲಿ ಇವರ ಲೇಖನಗಳು ಸಹಕಾರಿಯಾದವು. ಹಲವು ಕಲಾವಿದರ ಬಗ್ಗೆ ಬರೆದ ಲೇಖನಗಳಿಂದ ಆ ಕಲಾವಿದರಿಗೆ ಪ್ರೋತ್ಸಾಹ ದೊರಕಿತು – ಮಾನ್ಯತೆ ಸಿಕ್ಕಿತು. ಸಣ್ಣ ಕಥೆಗಳ ಸ್ಪರ್ಧೆಯಲ್ಲಿ ಐತಾಳರಿಗೆ ಬಹುಮಾನಗಳು ಸಂದವು. ಇವರ ಆಯ್ದ ಕಥಾಸಂಕಲನ ‘ಕಡಲ ತಡಿಯ ಕಥೆಗಳು’ ಜನ ಮೆಚ್ಚುಗೆ ಪಡೆಯಿತು. ‘ಸಮರ್ಪಣೆ’, ‘ಕಾಟುಮೂಲೆ ಎಸ್ಟೇಟ್’ ಬಹುಚರ್ಚಿತ ಕಾದಂಬರಿಯಾದ ‘ಶೋಭಾಡೇ’, ‘ಸ್ಟಾರೀ ನೈಟ್ಸ್ ಮಿನುಗೆಲೆ ಮಿನುಗೆಲೆ ನಕ್ಷತ್ರ’, ‘ಮೇರಾ ಭಾರತ್ ಮಹಾನ್’ ಇತ್ಯಾದಿ ಕಾದಂಬರಿಗಳು ಕನ್ನಡ ಪತ್ರಿಕೆಗಳಲ್ಲಿ ಧಾರವಾಹಿಗಳಾಗಿ ಪ್ರಕಟಗೊಂಡಿವೆ. ಇವರ ‘ಕುಜ’ ಕಾದಂಬರಿಯು ಅ.ನ.ಕೃ. ಹೆಸರಲ್ಲಿ ಸ್ಥಾಪನೆಗೊಂಡ ಮೊತ್ತ ಮೊದಲ ಪ್ರಶಸ್ತಿಯನ್ನು ಬಾಚಿಕೊಂಡಿತು. ನಾಟಕ ನಿರ್ದೇಶನದಲ್ಲಿಯೂ ಜಿ.ಕೆ. ಐತಾಳರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಲವು ಕೃತಿಗಳ ಸಂಪಾದಕರಾಗಿ ಕರ್ತವ್ಯ ನಿರ್ವಹಿಸಿರುವ ಐತಾಳರು ಸಮಾಜ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದರು. ಇವರ ಜೀವಮಾನದ ಸಾಧನೆಗಾಗಿ 2002ರಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ಪ್ರತಿಷ್ಠಾನ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿ, ಗೌರವ, ಸನ್ಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅನನ್ಯ ರಂಗಕರ್ಮಿ ಹಾಗೂ ಖ್ಯಾತ ಬರಹಗಾರರಾದ ಜಿ.ಕೆ. ಐತಾಳ್ ಇವರು 2019ರ ಸಪ್ಟೆಂಬರ್ ತಿಂಗಳಲ್ಲಿ ಸಾಹಿತ್ಯ ಶಾರದೆಯ ಪಾದ ಸೇರಿದರು.
-ಅಕ್ಷರೀ