ಆಲೂರು : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಆಲೂರು ವತಿಯಿಂದ ವಿಶ್ವೇಶ್ವರಯ್ಯ ಪಬ್ಲಿಕ್ ಶಾಲೆಯಲ್ಲಿ ದಿನಾಂಕ 18 ಜುಲೈ 2026ರಂದು ಹಮ್ಮಿಕೊಂಡ ತಾಲೂಕು ಮಟ್ಟದ ದೇಶಭಕ್ತಿ ಗೀತ ಗಾಯನ ಸ್ಪರ್ಧೆ ನಡೆಯಿತು.
ಈ ಕಾರ್ಯಕ್ರಮಕ್ಕೆ ಗಿಡಕ್ಕೆ ನೀರೇರೆಯುವದರ ಮೂಲಕ ಉದ್ಘಾಟಿಸಿದ ಸ್ಥಳೀಯ ಸಂಸ್ಥೆಯ ಅಧ್ಯಕ್ಷರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಜೆ. ಕೃಷ್ಣೇಗೌಡ ಮಾತನಾಡಿ “ಸ್ಕೌಟ್ಸ್ ಗೈಡ್ಸ್ ಮಕ್ಕಳಲ್ಲಿ ಶಿಸ್ತು ಸಂಯಮ ಸೇವೆ ಮುಂತಾದ ಮಹತ್ತರ ಮೌಲ್ಯಗಳ ಜೊತೆಗೆ ದೇಶಭಕ್ತಿ ರಾಷ್ಟ್ರ ಪ್ರೇಮ ನಾಡು ನುಡಿ ಬಗೆಗಿನ ಗೌರವವನ್ನು ವೃದ್ಧಿಸುವ ನಿಟ್ಟಿನಲ್ಲಿ ಶ್ಲಾಘನೀಯ ಕಾರ್ಯ ಮಾಡುತ್ತಿದೆ. ನಮ್ಮ ತಾಲೂಕಿನಲ್ಲಿ ಸ್ಕೌಟ್ಸ್ ಗೈಡ್ಸ್ ಉತ್ತಮ ಕಾರ್ಯವನ್ನು ಮಾಡುತ್ತಿದೆ. ದೇಶಭಕ್ತಿ ಗೀತ ಗಾಯನ ಸ್ಪರ್ಧೆಯನ್ನು ಹಮ್ಮಿಕೊಂಡಿರುವುದು ಉತ್ತಮ ಕಾರ್ಯ. ಮಕ್ಕಳು ಗೀತೆಯನ್ನು ಕಲಿಯುವ ಹಂತದಲ್ಲಿ ಗೀತೆಯ ಗೀತೆಯ ಆಶಯವನ್ನು ಆಸ್ವಾದಿಸಿ ಆನಂದಿಸಿ ಹಾಡುವುದರಿಂದ ಕವಿಯ ಮೂಲ ಉದ್ದೇಶವಾದ ರಾಷ್ಟ್ರಭಕ್ತಿ ದೇಶಪ್ರೇಮ ಮುಂತಾದ ಅಂಶಗಳನ್ನು ಮಕ್ಕಳು ಸಹಜವಾಗಿಯೇ ಅಳವಡಿಸಿಕೊಳ್ಳುತ್ತಾರೆ. ಮಕ್ಕಳಿಗೆ ಚಿಕ್ಕ ವಯೋಮಾನದಿಂದಲೇ ತಂದೆ ತಾಯಿಗೆ, ಗುರುಹಿರಿಯರಿಗೆ, ನಾಡು ನುಡಿಗೆ ಗೌರವವನ್ನು ಕೊಡುವ ಹಾಗೂ ಸೇವೆ ಮಾಡುವ ಮನೋಭಾವನೆಯನ್ನು ಮೂಡಿಸಬೇಕಾಗಿದೆ. ಈ ಕಾರ್ಯವನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಾಲಾ ಹಂತದಿಂದ ತಾಲೂಕು ಜಿಲ್ಲೆ ರಾಜ್ಯದಾದ್ಯಂತ ಮಾಡುತ್ತಿದೆ. ಸ್ಪರ್ಧೆಯಲ್ಲಿ ಸೋಲು ಗೆಲುವು ಸಹಜ. ಸೋತವರು ಕುಗ್ಗದೆ, ಗೆದ್ದವರು ಹಿಗ್ಗದೇ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಬೇಕಿದೆ. ತಾಲೂಕು ಹಂತದಲ್ಲಿ ಪ್ರಥಮ ಸ್ಥಾನ ಪಡೆದ ಮಕ್ಕಳು ಮುಂದೆ ಜಿಲ್ಲಾ ಹಂತದಲ್ಲಿ ಸ್ಪರ್ಧೆಯನ್ನು ಮಾಡಲಿದ್ದಾರೆ. ಅಂತಹ ಮಕ್ಕಳು ಉತ್ತಮವಾಗಿ ಅಭ್ಯಾಸ ಮಾಡಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ತಾಲೂಕಿಗೆ ಒಳ್ಳೆಯ ಹೆಸರನ್ನು ತರಬೇಕು” ಎಂದು ಆಶಯ ವ್ಯಕ್ತಪಡಿಸಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರಾದ ಸಿ.ಎಸ್. ಪೂರ್ಣಿಮಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ “ಸ್ಪರ್ಧೆಯಲ್ಲಿ ಸೋಲು ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಎರಡನ್ನು ಸಮಾನವಾಗಿ ಸ್ವೀಕರಿಸಬೇಕು. ಸೋತವರು ಮುಂದಿನ ಹಂತದಲ್ಲಿ ಗೆಲ್ಲಲು ಸಿದ್ಧತೆ ಮಾಡಿಕೊಳ್ಳಬೇಕು. ಗೆದ್ದವರು ಹಿಗ್ಗದೇ ಇನ್ನೂ ಉತ್ತಮ ರೀತಿಯಲ್ಲಿ ಸಿದ್ದಗೊಳ್ಳಬೇಕು. ಇಂದಿನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಂತ ಮಕ್ಕಳು, ಜಿಲ್ಲಾ ಹಂತದಲ್ಲಿಯೂ ಬಹುಮಾನಗಳಿಸಿ ತಾಲೂಕಿಗೆ ತಮ್ಮ ತಮ್ಮ ಶಾಲೆಗೆ ಒಳ್ಳೆಯ ಕೀರ್ತಿಯನ್ನು ತರಬೇಕು” ಎಂದು ಶುಭ ಕೋರಿದರು.


ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಸಹಾಯಕ ಆಯುಕ್ತರಾದ ಎಂ. ಬಾಲಕೃಷ್ಣ ಮಾತನಾಡಿ “ಸ್ಕೌಟ್ಸ್ ಗೈಡ್ಸ್ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ವೃದ್ಧಿಸುವುದರ ಜೊತೆಗೆ ಕೌಟುಂಬಿಕ, ಸಾಮಾಜಿಕ, ಸಾಂಸ್ಕೃತಿಕ ಚಿಂತನೆಗಳನ್ನು ಹೆಚ್ಚಿಸುತ್ತದೆ. ಆಲೂರು ತಾಲೂಕಿನಲ್ಲಿ ಕೊಟ್ರೇಶ್ ಎಸ್. ಉಪ್ಪಾರ್ ಅವರು ಕಾರ್ಯದರ್ಶಿ ಆದ ನಂತರ ಬಹುತೇಕ ಶಾಲೆಗಳಲ್ಲಿ ಸ್ಕೌಟ್ಸ್ ಗೈಡ್ಸ್ ದಳಗಳು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿವೆ. ತಾಲೂಕು ಆಡಳಿತವನ್ನು, ಶಿಕ್ಷಣ ಇಲಾಖೆಯನ್ನು, ಖಾಸಗಿ ಶಾಲೆಗಳ ಮುಖ್ಯಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ರಿಯಾಶೀಲವಾಗಿ ಕಾರ್ಯ ಮಾಡುತ್ತಿದ್ದಾರೆ” ಎಂದರು.


ಕಬ್ಸ್ ವಿಭಾಗದಲ್ಲಿ ಆಲೂರಿನ ವಿಶ್ವೇಶ್ವರಯ್ಯ ಪಬ್ಲಿಕ್ ಶಾಲೆಯ ಮಕ್ಕಳು ಪ್ರಥಮ ಸ್ಥಾನ, ಬುಲ್ ಬುಲ್ಸ್ ವಿಭಾಗದಲ್ಲಿ ಬೈರಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಪ್ರಥಮ ಸ್ಥಾನ, ಸ್ಕೌಟ್ಸ್ ವಿಭಾಗದಲ್ಲಿ ಬೈರಾಪುರ ಎಸ್.ವಿ. ಪಬ್ಲಿಕ್ ಶಾಲೆಯ ಮಕ್ಕಳು ಪ್ರಥಮ ಸ್ಥಾನ, ಗೈಡ್ಸ್ ವಿಭಾಗದಲ್ಲಿ ಮರಸು ಹೊಸಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.

ಕಾರ್ಯಕ್ರಮಕ್ಕೂ ಮುನ್ನ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಕೊಟ್ರೇಶ್ ಎಸ್. ಉಪ್ಪಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೈರಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೈಡ್ ಕ್ಯಾಪ್ಟನ್ ಅಶ್ವಿನಿ, ಲೇಡಿ ಸ್ಕೌಟ್ ಮಾಸ್ಟರ್ ರೇಣುಕಾ, ಬೆಥಸ್ಧ ಆಂಗ್ಲ ಮಾಧ್ಯಮ ಶಾಲೆಯ ಗೈಡ್ ಕ್ಯಾಪ್ಟನ್ ಶಿಲ್ಪ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಿರಣ್ ಕುಮಾರ್ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ಬೈರಾಪುರ ಎಸ್.ವಿ. ಪಬ್ಲಿಕ್ ಶಾಲೆಯ ಸ್ಕೌಟ್ ಮಾಸ್ಟರ್ ಸತೀಶ್, ಗೈಡ್ ಕ್ಯಾಪ್ಟನ್ ಚೈತ್ರ, ಆಲೂರಿನ ವಿಶ್ವೇಶ್ವರಯ್ಯ ಪಬ್ಲಿಕ್ ಶಾಲೆಯ ಗೈಡ್ ಕ್ಯಾಪ್ಟನ್ ರೂಹಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯ ಪಬ್ಲಿಕ್ ಶಾಲೆಯ ಲೇಡಿ ಸ್ಕೌಟ್ ಮಾಸ್ಟರ್ ಶಕುಂತಲಾ ನಿರೂಪಿಸಿ, ಲೇಡಿ ಸ್ಕೌಟ್ ಮಾಸ್ಟರ್ ಜ್ಯೋತಿ ಸ್ವಾಗತಿಸಿ, ಗೈಡ್ ಕ್ಯಾಪ್ಟನ್ ರೋಹಿಣಿ ವಂದಿಸಿದರು.
