ಧಾರವಾಡ : ಮಹಾನಗರದ ಹಿರಿಯ ರಂಗ ಸಂಸ್ಥೆ, ಅಭಿನಯ ಭಾರತಿಯು, ಪ್ರತಿ ಸಲದಂತೆ ಈ ವರ್ಷವೂ ಸೆಪ್ಟೆಂಬರ್ ಮೊದಲ ವಾರದಲ್ಲಿ ಜೆ.ಎಸ್.ಎಸ್. ಕಾಲೇಜಿನ ಆವರಣದಲ್ಲಿರುವ ಸನ್ನಿಧಿ ಹಾಲ್ ದಲ್ಲಿ ‘ವಜ್ರಸಿರಿ ರಂಗೋತ್ಸವ’ವನ್ನು ಹಮ್ಮಿಕೊಂಡಿದೆ. ಈ ರಂಗೋತ್ಸವವು ಧಾರವಾಡದ ಹಿರಿಯ ಶಿಕ್ಷಣ ಪ್ರೇಮಿ, ಆಡಳಿತಗಾರ, ಶ್ರೀ ಧರ್ಮಸ್ಥಳ ಮಂಜುನಾಥ ಶಿಕ್ಷಣ ಸಂಸ್ಥೆಯ ನಿವೃತ್ತ ಕಾರ್ಯದರ್ಶಿ, ದಿ. ಎನ್. ವಜ್ರಕುಮಾರ್ ಇವರ ಸ್ವರಣಾರ್ಥ ನಡೆಯಲಿದ್ದು, ಮಹಾನಗರದ ರಸಿಕ ರಂಗಪ್ರಿಯರಿಗೆ ಸತತ 5 ದಿನಗಳ ಕಾಲ ಪ್ರಸಿದ್ಧ ರಂಜನೀಯ ನಾಟಕಗಳನ್ನು ನೋಡಿ ಕಣ್ಣು ತುಂಬಿಕೊಳ್ಳುವ ಸದವಕಾಶ ದೊರೆಯಲಿದೆ.
ದಿನಾಂಕ 02 ಸೆಪ್ಟೆಂಬರ್ 2026ರಂದು ಸಂಜೆ 6-00 ಗಂಟೆಗೆ, ವಜ್ರಸಿರಿ ರಂಗೋತ್ಸವವನ್ನು ಜನತಾ ಶಿಕ್ಷಣ ಸಮಿತಿ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಅಜಿತ್ ಪ್ರಸಾದ್ ಇವರು ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ ರಂಗಾಯಣದ ನಿರ್ದೇಶಕ ಶ್ರೀ ಝಕೀರ್ ನದಾಫ್, ಶ್ರೀಮತಿ ಸುಮನ ವಜ್ರಕುಮಾರ್ ಹಾಗೂ ಹುಬ್ಬಳ್ಳಿಯ ಗಂಗಾವತಿ ಸಿಲ್ಕ್ ಅಂಡ್ ಸ್ಯಾರೀಸ್ ಸಂಸ್ಥೆಯ ಮುಖ್ಯಸ್ಥರು ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ದಿ. ಯಶವಂತ್ ಸರದೇಶಪಾಂಡೆ ಇವರ ಪರಿಕಲ್ಪನೆಯ, ಹೆಸರಾಂತ ಕೊಳಲು ವಾದಕ, ಡಾ. ಪ್ರವೀಣ್ ಗೋಡಖಿಂಡಿಯವರ ರಚನೆ ಹಾಗೂ ನಿರ್ದೇಶನದಲ್ಲಿ, “ಕೊಳಲು.comedy” ಎಂಬ ವಿನೂತನ ಮಾದರಿಯ ಎರಡೇ ಪಾತ್ರಗಳು ಉಳ್ಳ ರಂಜನೀಯ ಹಾಸ್ಯ ನಾಟಕ ಪ್ರದರ್ಶಿತವಾಗಲಿದೆ. ಇದರಲ್ಲಿ ಹಿರಿಯ ನಟ ಶ್ರೀ ರವಿ ಕುಲಕರ್ಣಿ ಹಾಗೂ ಕೊಳಲು ಮಾಂತ್ರಿಕ ಪ್ರವೀಣ್ ಗೋಡ್ಕಿಂಡಿ ಇವರ ಹಾಸ್ಯಮಯ ಜುಗಲ್ ಬಂದಿ ಸಂಭಾಷಣೆಗಳು ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸುತ್ತದೆ.
ದಿನಾಂಕ 03 ಸೆಪ್ಟೆಂಬರ್ 2026ರಂದು ಸಂಜೆ 6-00 ಗಂಟೆಗೆ ಶ್ರೀ ಮಹಾವೀರ ಉಪಾಧ್ಯಾಯ, ಶ್ರೀ ಶಿವಾನಂದ ನಾಯಕ್ ಹಾಗೂ ಶ್ರೀ ಪ್ರದೀಪ್ ಜೈನ್ ಅವರು ಮುಖ್ಯ ಅತಿಥಿಗಳಾಗಿ ನಾಟಕಕ್ಕೆ ಚಾಲನೆ ನೀಡಲಿದ್ದಾರೆ. ಬೆಳಗಾವಿಯ ರಂಗಸಂಪದ ತಂಡದವರಿಂದ ಡಾ. ಅರವಿಂದ್ ಕುಲಕರ್ಣಿ ಅವರ ಸಮರ್ಥ ನಿರ್ದೇಶನದಲ್ಲಿ, ಶ್ರೀರಂಗರ ಪ್ರಸಿದ್ಧ ನಾಟಕ ‘ಗೆಳೆಯ ನೀನು ಹಳೆಯ ನಾನು’ ಹಿರಿಯ ರಂಗತಜ್ಞ ಶ್ರೀಪತಿ ಮಂಜನಬೈಲ್ ಇವರ ಪರಿಕಲ್ಪನೆಯಲ್ಲಿ ಮೂಡಿಬರಲಿದೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಶೋಷಣೆ ಹಾಗೂ ಸಂಕಷ್ಟಗಳನ್ನು ಅನಾವರಣಗೊಳಿಸಿ, ಪುರುಷವರ್ಗದ ಸ್ವಾರ್ಥವನ್ನು ತಮ್ಮ ಮೊನಚು ಮಾತುಗಳಿಂದ ತಿವಿದು ಬಯಲಿ ಗೆಳೆಯುತ್ತಾರೆ. ಈ ತಂಡದ ನಟ ನಟಿಯರೆಲ್ಲರೂ ನಾಟಕದ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ದಿನಾಂಕ 04 ಸೆಪ್ಟೆಂಬರ್ 2026ರಂದು ಸಂಜೆ 6-00 ಗಂಟೆಗೆ ಶ್ರೀ ಅರುಣ್ ಕುಮಾರ್ ಪಾಟೀಲ್ ಹಾಗೂ ಶ್ರೀ ಅನಿಲ್ ಗಾಸ್ತೆ ಅವರು ವಿಶೇಷ ಅತಿಥಿಗಳಾಗಿ ಚಾಲನೆ ನೀಡಲಿದ್ದಾರೆ. ಶಿವಮೊಗ್ಗದ ಹೊಂಗಿರಣ ತಂಡದವರಿಂದ ಡಾ. ಶ್ರೀಪಾದ್ ಭಟ್ ಇವರ ಸಮರ್ಥ ನಿರ್ದೇಶನದಲ್ಲಿ, ಪ್ರೊ. ಶಿವಕುಮಾರ್ ವಿರಚಿತ ವಿಭಿನ್ನ ನಾಟಕ, “ದಿ. ಪೆನ್ ” ಪ್ರದರ್ಶಿತವಾಗಲಿದೆ. ಈ ನಾಟಕವು ಒಬ್ಬ ಲೇಖಕನ ಬದುಕು ಮತ್ತು ಬರಹಗಳು ಪರಸ್ಪರ ಪ್ರಭಾವಿತಗೊಂಡು, ಜೀವನದ ಆಶಯ ಹಾಗೂ ಮೌಲ್ಯಗಳು ಏಕಾಂತದಲ್ಲಿ ಹುಟ್ಟಿ ಲೋಕಾಂತದೆಡೆಗೆ ಸಾಗುತ್ತವೆ. ಅವನ ಬರವಣಿಗೆಯೆಂದರೆ ಒಂದು ಕಾಲಮಾನದ ಅನಾವರಣವೇ. ಈ ವಿಭಿನ್ನ ಪ್ರಯೋಗದಲ್ಲಿ ಇಬ್ಬರೇ ನಟರು ಒಟ್ಟು 12 ಪಾತ್ರಗಳನ್ನು ವಿವಿಧ ಆಯಾಮದೊಂದಿಗೆ ರಂಗದ ಮೇಲೆ ತೆರೆದಿಡುತ್ತಾರೆ. ಮನುಷ್ಯನ ಕ್ರಿಯೆ ಮತ್ತು ಪ್ರತಿಕ್ರಿಯೆಗಳಲ್ಲಿ ಅವನ ಪಾಪಪ್ರಜ್ಞೆ ಅವನನ್ನು ಕೆಣುಕುತ್ತದೆ. ಕಥೆಗಳು ಬಿಡಿಬಿಡಿಯಾಗಿದ್ದರೂ, ಒಂದು ಅವ್ಯಕ್ತ ಅನುಬಂಧ, ಗಂಡು ಹೆಣ್ಣಿನ ತಾಕಲಾಟಗಳನ್ನು ಸಮರ್ಥವಾಗಿ ಬಿಂಬಿಸುತ್ತದೆ.
ದಿನಾಂಕ 05 ಸೆಪ್ಟೆಂಬರ್ 2026ರಂದು ಸಂಜೆ 6-00 ಗಂಟೆಗೆ ನಾಟಕಕ್ಕೆ ಅತಿಥಿಗಳಾಗಿ ಶ್ರೀ ಅರಿಹಂತ್, ಶ್ರೀ ರವಿ ಕುಳೇನೂರ್ ಹಾಗೂ ಶ್ರೀ ಶಂಕರ್ ಕೋಳಿವಾಡ ಇವರು ಪಾಲ್ಗೊಂಡು ಚಾಲನೆ ನೀಡಲಿದ್ದಾರೆ. ಗಿರೀಶ್ ಕಾರ್ನಾಡರ ಪ್ರಸಿದ್ಧ ನಾಟಕ ‘ಹಯವದನ’ ಮೂಲ ಬಿ.ವಿ. ಕಾರಂತರ ನಿರ್ದೇಶನದಲ್ಲಿ, ಇದೀಗ ಟಿ.ಎಸ್. ನಾಗಾಭರಣ ಅವರ ಮರುವಿನ್ಯಾಸದಲ್ಲಿ ಬೆಂಗಳೂರಿನ ಬೆನಕ ತಂಡದವರು ಪ್ರದರ್ಶಿಸಲಿದ್ದಾರೆ. ಜಾನಪದ ಕಥಾ ಹಂದರವುಳ್ಳ ಈ ನಾಟಕದಲ್ಲಿ ಹೆಣ್ಣಿನ ಮನೋಭಿಲಾಷೆಯು ಬುದ್ಧಿವಂತಿಕೆ ಹಾಗೂ ಪೌರುಷದ ಮೇಳವಿಕೆಯನ್ನು ತನ್ನ ಪುರುಷನಲ್ಲಿ ಕಾಣುವ ಬಯಕೆಯಿಂದ ಕಪಿಲ ಮತ್ತು ದೇವದತ್ತರ ಶಿರಗಳ ಅದಲು ಬದಲು ಮಾಡಲು ಬಯಸುತ್ತದೆ. ಮಾನವ ಜೀವನವೇ ಅಪೂರ್ಣ ಆದರೆ ಅವನ ಪೂರ್ಣತ್ವದ ಕನಸು ನನಸಾಗದೆ ಉಳಿಯುತ್ತದೆ ಎಂಬ ಸಂದೇಶದೊಂದಿಗೆ ನಾಟಕ ಸುಖಾಂತ್ಯವಾಗುತ್ತದೆ. ಅನೇಕ ದಶಕಗಳಿಂದ ಬೆನಕ ತಂಡದ ಈ ಪ್ರಭುದ್ಧ ಪ್ರಯೋಗ ಇಂದಿಗೂ ಧ್ವನಿಪೂರ್ಣವಾಗಿ, ಮಧುರ ಸಂಗೀತದೊಂದಿಗೆ ರಸಿಕರ ಮನ ಸೆಳೆಯುತ್ತದೆ.
ದಿನಾಂಕ 06 ಸೆಪ್ಟೆಂಬರ್ 2026ರಂದು ಮುಂಜಾನೆ 10-30 ಗಂಟೆಗೆ ರಂಗ ಭೀಷ್ಮ ಬಿ.ವಿ. ಕಾರಂತರ ಜೀವನವನ್ನಾಧರಿಸಿದ ‘ಬಾಬಾ ಕಾರಂತ್’ ಎಂಬ ರೂಪಕವನ್ನು ಶ್ರೀಪತಿ ಮಂಜನಬೈಲು ಇವರ ವಿನ್ಯಾಸ ಹಾಗೂ ಶ್ರೀ ಟಿ.ಎಸ್. ನಾಗಾಭರಣ ಇವರ ನಿರ್ದೇಶನದಲ್ಲಿ ಬೆನಕ ತಂಡದವರು ಪ್ರಯೋಗಿಸಲಿದ್ದಾರೆ. ನಾಟಕಕ್ಕೆ ಅತಿಥಿಗಳಾಗಿ ಶ್ರೀ ರಾಜಣ್ಣ ಕೊರವಿ ಹಾಗೂ ಶ್ರೀಮತಿ ಸುನಂದ ಅವರು ಚಾಲನೆ ನೀಡಲಿದ್ದಾರೆ. ಸಂಜೆ 6-00 ಗಂಟೆಗೆ ರಂಗೋತ್ಸವದ ಕೊನೆಯ ಪ್ರಯೋಗ, ಡಾ. ಚಂದ್ರಶೇಖರ್ ಕಂಬಾರರ ‘ಜೋಕುಮಾರಸ್ವಾಮಿ’ ಎಂಬ ಪ್ರಸಿದ್ಧ ಜಾನಪದ ನಾಟಕವನ್ನು ಬೆನಕ ಬೆಂಗಳೂರು ತಂಡವು ಪ್ರಯೋಗಿಸಲಿದೆ. ಈ ನಾಟಕವಂತೂ ಗ್ರಾಮೀಣ ಪರಿಸರದ ಪುರುಷರ ದಬ್ಬಾಳಿಕೆಯನ್ನು ನಿಸರ್ಗದ ಭೂಮಿ ಮಳೆ ಬೆಳೆ ಮುಂತಾದ ರೂಪಕಗಳೊಂದಿಗೆ ಸಮೀಕರಿಸಿ ಪ್ರಸ್ತುತಪಡಿಸಲಿದೆ. ಇದು ಬೆನಕ ತಂಡದ ಅತ್ಯಂತ ಯಶಸ್ವಿ ಪ್ರಯೋಗ ಎನಿಸಿದೆ. ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಡಾ. ಸಿ.ಎಚ್. ವಿ.ಎಸ್.ವಿ. ಪ್ರಸಾದ್ ಹಾಗೂ ಶ್ರೀ ವಿಜಯಕುಮಾರ್ ಡಿ.ಎಸ್. ಇವರು ಭಾಗವಹಿಸಲಿದ್ದಾರೆ.
ಈ ರಂಗೋತ್ಸವದ ಸವಿಯನ್ನು ಅಭಿನಯ ಭಾರತಿ ಸಂಸ್ಥೆಗೆ ಚಂದಾದಾರರಾಗಿ ಒಂದು ಸಾವಿರ ರೂಪಾಯಿ ನೀಡಿದರೆ, ಈ ನಾಟಕಗಳನ್ನಲ್ಲದೆ ಇಡೀ ವರ್ಷ ಇತರ ರಂಗ ಪ್ರಯೋಗಗಳನ್ನು ಹಾಗೂ ಮಾಸಿಕ ಉಪನ್ಯಾಸಗಳನ್ನು ಉಚಿತವಾಗಿ ವೀಕ್ಷಿಸಬಹುದು. ಇಲ್ಲವೇ ಪ್ರತಿ ನಾಟಕಕ್ಕೂ ರೂ.500/- ರೂ.300/- ಪ್ರತ್ಯೇಕ ಟಿಕೆಟ್ ಪಡೆದು ವೀಕ್ಷಿಸಬಹುದು. ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ರೂ.100/- ಪ್ರವೇಶ ಧನ ಪ್ರತಿ ನಾಟಕಕ್ಕೆ ನಿಗದಿಪಡಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಐಡಿ ಕಾರ್ಡ್ ತೋರಿಸಿ ಈ ಸೌಲಭ್ಯ ಪಡೆದು ನಾಟಕಗಳನ್ನು ವೀಕ್ಷಿಸಬಹುದು ಎಂದು ಅಧ್ಯಕ್ಷ ಶ್ರೀ ಅರವಿಂದ್ ಕುಲಕರ್ಣಿ ಅವರು ತಿಳಿಸುತ್ತಾರೆ. ಮಹಾನಗರದ ರಂಗಾಸಕ್ತರು ಈ ಅಪರೂಪದ ನಾಟಕೋತ್ಸವದ ಸವಿಯನ್ನು ಉಂಡು ಆನಂದ ಪಡಬೇಕು ಎಂದು ಆಶಿಸುತ್ತಾರೆ.
ಹೆಚ್ಚಿನ ಮಾಹಿತಿಗಾಗಿ : 8073479394, 9480737338
