ಮಂಗಳೂರು : ತುಳು ನಾಟಕ ಕಲಾವಿದರ ಒಕ್ಕೂಟ (ರಿ.) ಮಂಗಳೂರು ದಕ್ಷಿಣ ಕನ್ನಡ ಇದರ ವತಿಯಿಂದ ‘23ನೇ ವಾರ್ಷಿಕ ಸಂಭ್ರಮ’ ಕಾರ್ಯಕ್ರಮವನ್ನು ದಿನಾಂಕ 11 ಆಗಸ್ಟ್ 2026ರಂದು ಸಂಜೆ 4-00 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ‘ತೌಳವ ಪ್ರಶಸ್ತಿ ಪ್ರದಾನ’, ಹಿರಿಯ ಕಲಾವಿದರಿಗೆ ಸನ್ಮಾನ, ಕೀರ್ತಿಶೇಷ ಕಲಾವಿದರ ‘ನೆಂಪು’ ಕಾರ್ಯಕ್ರಮ ಹಾಗೂ ಅಶಕ್ತ ಕಲಾವಿದರಿಗೆ ಗೌರವಧನ ವಿತರಣೆ ನಡೆಯಲಿದೆ. ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ಲ. ಕಿಶೋರ್ ಡೀ. ಶೆಟ್ಟಿ ಇವರು ಸಭಾಧ್ಯಕ್ಷತೆ ವಹಿಸಲಿದ್ದು, ಆಳ್ವಾಸ್ ಎಜ್ಯುಕೇಶನ್ ಟ್ರಸ್ಟ್ ಇದರ ಚೈರ್ಮನ್ ಡಾ. ಎಂ. ಮೋಹನ ಆಳ್ವ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿರುವರು. ಹಿರಿಯ ನಾಟಕಕಾರ ರಂಗಭೂಮಿ ಕಲಾನಿರ್ದೇಶಕರಾದ ತಮ್ಮ ಲಕ್ಷ್ಮಣ ಇವರಿಗೆ ‘ತೌಳವ ಪ್ರಶಸ್ತಿ ಪ್ರದಾನ ಹಾಗೂ ಹಿರಿಯ ಹಾಸ್ಯ ಕಲಾವಿದ ತಿಮ್ಮಪ್ಪ ಶೆಟ್ಟಿ ಬೋಳಾರ, ಹಿರಿಯ ಪ್ರಸಾದನ ಕಲಾವಿದರಾದ ದಿನೇಶ್ ಮಾಸ್ಟರ್ ಬಿಜೈ, ಹಿರಿಯ ನಟ ನಾಗೇಶ ಸಾಲಿಯಾನ್,ಹಿರಿಯ ಸ್ತ್ರೀ ಪಾತ್ರ ಕಲಾವಿದ ಉಲ್ಲಾಸ್ ಕದ್ರಿ, ಹಿರಿಯ ನಾಟಕಕಾರ ವಿಶ್ವನಾಥ ಚಿತ್ರಾಪುರ ಮತ್ತು ಹಿರಿಯ ರಂಗಭೂಮಿ ಕಲಾವಿದೆ ಶ್ರೀಮತಿ ಸುಜಾತ ಶಕ್ತಿನಗರ ಇವರಿಗೆ ಸನ್ಮಾನಿಸಲಾಗುವುದು. 4-00 ಗಂಟೆಗೆ ಸುಗಮ ಸಂಗೀತ ಮತ್ತು 6-00 ಗಂಟೆಗೆ ನಮ್ಮ ಕಲಾವಿದೆರ್ ಬೆದ್ರ ಇವರಿಂದ ‘ವೈರಲ್ ವೈಶಾಲಿ’ ನಾಟಕ ಪ್ರದರ್ಶನ ನಡೆಯಲಿದೆ.


