ಬೆಂಗಳೂರು : ಕಲ್ಪವೃಕ್ಷ ಟ್ರಸ್ಟ್ (ರಿ.) ಇದರ ಸಹಕಾರದೊಂದಿಗೆ ಅಂತರಂಗ ಬಹಿರಂಗ ತಂಡ ಪ್ರಸ್ತುತ ಪಡಿಸುವ ‘ಅನುಗ್ರಹ’ ಪೌರಾಣಿಕ ನಾಟಕದ ಪ್ರದರ್ಶನವನ್ನು ದಿನಾಂಕ 06 ಜುಲೈ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಬಸವನಗುಡಿಯ ವಾಡಿಯಾ ಸಭಾಂಗಣ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್)ದಲ್ಲಿ ಆಯೋಜಿಲಾಗಿದೆ. ಈ ನಾಟಕವನ್ನು ಎಚ್.ಎನ್. ರಾಮಕೃಷ್ಣಪ್ಪ ರಚಿಸಿದ್ದು, ಬಾಷ್ ರಾಘವೇಂದ್ರ ನಿರ್ದೇಶನ ಮಾಡಿದ್ದಾರೆ. ಬುಕ್ ಮೈ ಶೋನಲ್ಲಿ ಟಿಕೆಟ್ ಲಭ್ಯವಿದ್ದು, ನೇರ ಬುಕ್ಕಿಂಗ್ಗಾಗಿ 8660547776 ಸಂಖ್ಯೆಯನ್ನು ಸಂಪರ್ಕಿಸಬಹುದು.
ಅಂತರಂಗ ಬಹಿರಂಗ ತಂಡದ 7ನೇ ನಿರ್ಮಾಣ ‘ಅನುಗ್ರಹ’ ನಾಟಕ. ಈ ಹಿಂದೆ ಸಾಮಾಜಿಕ ನಾಟಕಗಳನ್ನು ನಿರ್ಮಿಸಿ ಪ್ರೇಕ್ಷಕರ ಅಪಾರ ಮೆಚ್ಚುಗೆ ಪಡೆದಿದ್ದ ತಂಡ, ಮೊದಲ ಬಾರಿಗೆ ಪೌರಾಣಿಕ ನಾಟಕವನ್ನು ಪ್ರಸ್ತುತಪಡಿಸುತ್ತಿದೆ. ಈ ನಾಟಕವು ಏಕಲವ್ಯನ ಜೀವನಾಧಾರಿತವಾಗಿದೆ. ರಚನೆಕಾರರು ಈ ನಾಟಕದಲ್ಲಿ ನಾವು ಇಲ್ಲಿಯವರೆವಿಗೂ ಕೇಳಿರುವ ಏಕಲವ್ಯನ ಕಥೆಗಿಂತ ಭಿನ್ನವಾದ ಆಯಾಮವನ್ನು ನೀಡಿದ್ದಾರೆ. ಅದು “ಯಾವುದೇ ಗುರುವು ತನ್ನ ಶಿಷ್ಯರಿಗೆ ವಿದ್ಯೆ ಕರುಣಿಸಿದ ನಂತರ ಶಿಷ್ಯರಲ್ಲಿ ಎಂದೂ ವಿದ್ಯೆಗೇ ಅಪಚಾರವಾಗುವಂತಹ ನೀಚ ಬೇಡಿಕೆಯನ್ನು ಇಡುವುದಿಲ್ಲ” ಎಂಬುದು. ಹಾಗಾದರೆ ದ್ರೋಣರು ಅಂತಹ ಬೇಡಿಕೆಯನ್ನು ಮುಂದಿಡಲಿಲ್ಲವೇ? ಏಕಲವ್ಯನು ಯಾವ ಪರಮಾರ್ಥಕ್ಕಾಗಿ ತನ್ನ ಹೆಬ್ಬರಳನ್ನು ಅವರಿಗೆ ಅರ್ಪಿಸಿದ ? ಇದರ ಹಿಂದಿನ ಸತ್ಯಾಸತ್ಯತೆಗಳನ್ನು ತಿಳಿಯಬೇಕಾದರೆ ‘ಅನುಗ್ರಹ’ ನಾಟಕವನ್ನು ತಪ್ಪದೆ ಪ್ರತಿಯೊಬ್ಬರೂ ನೋಡಬೇಕು.
ಈ ನಾಟಕದ ಕಥಾವಸ್ತುವು ‘ವ್ಯಾಸ ಮಹಾಭಾರತ’ ಮತ್ತು ‘ಕುವೆಂಪುರವರ ಬೆರಳ್ಗೆ ಕೊರಳ್’ಗಳಲ್ಲಿನ ದ್ರೋಣಾಚಾರ್ಯ ಏಕಲವ್ಯರ ಕಥಾ ಹಂದರಕ್ಕೂ ವಿರುದ್ಧ ರೂಪವನ್ನು ಹೊಂದಿದೆ. ಹಾಗಾದರೆ ರಚನೆಕಾರರು ಯಾವ ರೀತಿಯ ಕಥಾ ವಸ್ತುವನ್ನು ನಿರೂಪಿಸಿದ್ದಾರೆ, ಮೂಲ ಕಥೆಗೆ ದೋಷ ಬರದಂತೆ ಗುರು ಶಿಷ್ಯರ ಪರಂಪರೆಗೆ ಇದ್ದ ಬಹುದೊಡ್ಡ ದ್ರೋಹದ ಅಪವಾದವನ್ನು ಹೇಗೆ ನಿವಾರಿಸಿದ್ದಾರೆ ? ಈ ರೀತಿಯ ಹತ್ತು ಹಲವು ವಿಶೇಷಗಳನ್ನು ಒಳಗೊಂಡಿರುವ, ದ್ವಾಪರ ಯುಗವೇ ಕಣ್ಣ ಮುಂದೆ ಬಂದಂತೆ ಭಾಸವಾಗುವ ಈ ನಾಟಕವನ್ನು ಮನೆಯವರಲ್ಲ ಕುಳಿತು ಆಸ್ವಾದಿಸಬಹುದು.