ಮುಲ್ಕಿ : ಕಿಲ್ಪಾಡಿಯ ಆದಿ ಕಿಲ್ಲಾಡಿ ಬಬ್ಬುಸ್ವಾಮಿ ಯುವಕ ಮಂಡಲ ಮತ್ತು ಮಹಿಳಾ ಮಂಡಲ ಮತ್ತು ದ.ಕ. ಕನ್ನಡ ಸಾಹಿತ್ಯ ಪರಿಷತ್ತು ಮುಲ್ಕಿ ತಾಲೂಕು ಘಟಕದ ಜಂಟಿ ಆಶ್ರಯದಲ್ಲಿ ಕವಿ ಹಾಗೂ ಲೇಖಕ ಶಂಕರ್ ಪಡಂಗ ಕಿಲ್ಪಾಡಿಯವರ ‘ಕಾಣೆಯಾದಳು ಹುಡುಗಿ ಹಗಲುಗನಸಿನಲ್ಲಿ’ ಕವನ ಸಂಕಲನ ಬಿಡುಗಡೆ ಹಾಗೂ ಕವಿಗೋಷ್ಠಿಯು ದಿನಾಂಕ 08 ಫೆಬ್ರವರಿ 2026ರಂದು ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ವಾಮನ ನಡಿಕುದ್ರು ವಹಿಸಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜೀ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ “ಮಕ್ಕಳಲ್ಲಿ ಮೊಬೈಲ್ ಬಂದ ನಂತರ ಓದುವ ಹವ್ಯಾಸ ಕಡಿಮೆಯಾಗಿದೆ, ಕನ್ನಡಮ್ಮನ ಸೇವೆ ಮಾಡುವ ಮೂಲಕ ಮಾತೃಭಾಷೆಗೆ ಪ್ರೋತ್ಸಾಹ ನೀಡಬೇಕು ಕನ್ನಡ ಉಳಿಸಿ ಬೆಳೆಸಬೇಕು” ಎಂದರು.

ಕುಂಜಾರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಶ್ರೀಕಾಂತ ಭಟ್ ಪರೆಂಕಿಲ ಆಶೀರ್ವಚನ ನೀಡಿದರು. ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿಯವರು ‘ಕಾಣೆಯಾದಳು ಹುಡುಗಿ ಹಗಲುಗನಸಿನಲ್ಲಿ’ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು. ದ.ಕ. ಜಿಲ್ಲಾ ಕ.ಸಾ.ಪ. ಮುಲ್ಕಿ ತಾಲೂಕು ಘಟಕದ ಅಧ್ಯಕ್ಷ ಮಿಥುನ್ ಕೊಡೆತ್ತೂರು ಮಾತನಾಡಿ “ಮಾರ್ಚ್ 1ರಂದು ಕಟೀಲಿನಲ್ಲಿ ಮುಲ್ಕಿ ತಾಲೂಕು ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಕವಿಗಳಿಗೆ ಮುಕ್ತ ಅವಕಾಶವಿದೆ. ಪುಸ್ತಕಗಳನ್ನು ಕೊಂಡು ಓದಿ” ಎಂದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಗಿರೀಶ್, ಮುಲ್ಕಿ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ, ಅತಿಕಾರಿಬೆಟ್ಟು ಗ್ರಾ. ಪಂ. ಉಪಾಧ್ಯಕ್ಷ ಮನೋಹರ್ ಕೋಟ್ಯಾನ್, ಮುಲ್ಕಿ ನ. ಪಂ. ಮಾಜೀ ಅಧ್ಯಕ್ಷ ಸತೀಶ್ ಅಂಚನ್, ಮಾಜೀ ಸದಸ್ಯ ಪುತ್ತು ಬಾವ, ಬಬ್ಬುಸ್ವಾಮಿ ಯುವಕ ಮಂಡಲದ ಅಧ್ಯಕ್ಷ ರಂಜನ್ ಬಿ. ಶೆಟ್ಟಿ, ಕಿಲ್ಪಾಡಿ ಶ್ರೀ ಕೋರ್ದಬ್ಬು ದೈವಸ್ಥಾನದ ಗುರಿಕಾರ ವಸಂತ ವಿ.ಎಸ್., ಬಬ್ಬುಸ್ವಾಮಿ ಮಹಿಳಾ ಮಂಡಲದ ಅಧ್ಯಕ್ಷೆ ಭಾರತಿ ವಿ. ಪೂಜಾರಿ, ಕವಿ ಹಾಗೂ ಲೇಖಕ ಶಂಕರ್ ಪಡಂಗ ಉಪಸ್ಥಿತರಿದ್ದರು. ಗೋಪಿನಾಥ ಪಡಂಗ ಸ್ವಾಗತಿಸಿ, ಕವಿ ಪ್ರೇಮಾ ಆರ್. ಶೆಟ್ಟಿ ಧನ್ಯವಾದ ಅರ್ಪಿಸಿ, ಚಿದಾನಂದ ಕೊಲಕಾಡಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕವನ ಸಂಕಲನ ಪ್ರಕಟಣೆಗೆ ಸಹಕಾರ ನೀಡಿದ ಕವಿ ಹಾಗೂ ಲೇಖಕರಾದ ಡಾ. ಹರಿಶ್ಚಂದ್ರ ಪಿ. ಸಾಲ್ಯಾನ್, ಅಶೋಕ್ ಸುವರ್ಣ, ಪ್ರೇಮಾ ಶೆಟ್ಟಿಯವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಮೊದಲು ವಿವಿಧ ಕವಿಗಳಿಂದ ಕವಿಗೋಷ್ಠಿ ನಡೆಯಿತು.

