ಪುತ್ತೂರು : ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ಇಲ್ಲಿನ ಇತಿಹಾಸ ವಿಭಾಗ ಹಾಗೂ ಐ.ಕ್ಯೂ.ಎ.ಸಿ., ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘ ಹಾಗೂ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಸಹಯೋಗದೊಂದಿಗೆ ‘ಅಬ್ಬಕ್ಕ @5೦೦ ರಾಷ್ಟ್ರೀಯ ವಿಚಾರ ಸಂಕಿರಣ’ವು ದಿನಾಂಕ 16 ಫೆಬ್ರವರಿ 2026ರಂದು ಪುತ್ತೂರಿನ ವಿವೇಕಾನಂದ ಕಾಲೇಜಿನ ಆವರಣದಲ್ಲಿ ಜರಗಿತು.
ಈ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಸಚಿವೆ ಶೋಭಾ ಕರಂದ್ಲಾಜೆ “ನಾವು ಅಗತ್ಯವಾಗಿ ತಿಳಿಯಬೇಕಿದ್ದ ಹಾಗೂ ಯುವ ಜನಾಂಗ ಅರಿಯಬೇಕಾದ ಚರಿತ್ರೆಯನ್ನು ಮರೆಯಾಗಿಸಿದ್ದು ವಿಪರ್ಯಾಸ. ಪ್ರಥಮ ಸ್ವಾತಂತ್ರ್ಯತ ಸಂಗ್ರಾಮಕ್ಕೂ ಮೊದಲೇ ಪರಕೀಯರ ವಿರುದ್ಧ ಕೆಚ್ಚೆದೆಯ ಹೋರಾಟ ಪ್ರಾರಂಭಿಸಿದವಳು ಅಬ್ಬಕ್ಕ. ತಾನು ಒಬ್ಬನೇ ನಿಂತು ಬ್ರಿಟೀಷರಿಗೆ ಸವಾಲೆಸೆದ ಕಿತ್ತೂರು ಚೆನ್ನಮ್ಮನಂಥವರ ಉದಾಹರಣೆಯನ್ನು ನಾವು ಗಮನಿಸಬಹುದು. ನಮ್ಮ ಬದುಕಿಗೆ ಪ್ರೇರಣೆಯಾಗಬಲ್ಲ ನಮ್ಮ ಚರಿತ್ರೆಯನ್ನು ನಾವು ಅಗತ್ಯವಾಗಿ ತಿಳಿಯಬೇಕು” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ “ಭಾರತದಲ್ಲಿ ಮಹಿಳೆಯರಿಗೆ ದೇವತೆಯ ಸ್ಥಾನ ನೀಡಿ ಮಹತ್ವವನ್ನು ಕಲ್ಪಿಸಿದ್ದೇವೆ. ದೇಶಕ್ಕಾಗಿ ಮಹಿಳೆಯರು ಹೋರಾಡಿದ ನಿದರ್ಶನ ನಮ್ಮ ದೇಶದಲ್ಲಿದೆ. ನಮ್ಮ ದೇಶದಲ್ಲಿ ನೆಲೆ ಕಂಡುಕೊಂಡು ಸಕಲ ಸೌಲಭ್ಯಗಳನ್ನು ಪಡೆದಾಗದೇಶಕ್ಕಾಗಿ ಏನಾದರೂ ಸಲ್ಲಿಸುವ ಮನ ಮಾಡಬೇಕು” ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ದೆಹಲಿಯ ಯು.ಜಿ.ಸಿ.ಯ ಸಹ ಕಾರ್ಯದರ್ಶಿ ಅಸೀಮಾ ಮಂಗಳ “ಅಬ್ಬಕ್ಕ ಶತ್ರುಗಳನ್ನು ಎದುರಿಸಿದ್ದರಲ್ಲಿ ನಮ್ಮವರ ಮೇಲಿನ ಕಾಳಜಿಗಾಗಿ ಎಂದು ತಿಳಿಯುತ್ತದೆ. ಐತಿಹಾಸಿಕ ಕ್ಷಣಗಳನ್ನು ನೆನಪಿಸುವ ಅಬ್ಬಕ್ಕಳ ಕುರಿತಾದ ವಿಚಾರ ಗೋಷ್ಠಿಯಲ್ಲಿ ಭಾಗವಹಿಸುವುದರ ಬಗ್ಗೆ ಹೆಮ್ಮೆ ಇದೆ. ಇಂತಹಾ ಕಾರ್ಯಕ್ರಮಗಳಿಂದ ನಾವು ನಡೆದ ಕ್ರಾಂತಿಗಳ ಬಗೆಗೂ ತಿಳಿಯುತ್ತೇವೆ. ಶಿಕ್ಷಣ ಸಂಸ್ಥೆಗಳು ದೇಶದ ಹೆಮ್ಮೆಯ ಸಂಸ್ಕೃತಿಯನ್ನು ತಿಳಿಯಪಡಿಸುವ ಕೇಂದ್ರಗಳಾಗಬೇಕು” ಎಂದು ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮೂಡುಬಿದಿರೆಯ ಚೌಟರ ಅರಮನೆಯ ಕುಲದೀಪ್ ಎಂ. ಚೌಟ “ಪ್ರಜಾಪ್ರಭುತ್ವ ಇರುವ ಈ ಕಾಲದಲ್ಲೂ ರಾಜ ಮಹಾರಾಜರ ಹೆಸರು ಅಜರಾಮರವಾಗಿರಲು ಕಾರಣ ಅವರ ಸಾಧನೆ. ಅಬ್ಬಕ್ಕ ತುಳುನಾಡಿನ ರಾಣಿ ಎನ್ನುವುದು ಹೆಮ್ಮೆಯ ಸಂಗತಿ. ಅಬ್ಬಕ್ಕಳ ಹೆಸರು ಶಾಶ್ವತವಾಗಿ ಉಳಿಯುವಂತೆ ಕ್ರಮಗಳನ್ನು ಕೈಗೊಳ್ಳಬೇಕು” ಎಂಬ ಆಶಯವನ್ನು ವ್ಯಕ್ತಪಡಿಸಿದರು.
ದೆಹಲಿಯ ಅಖಿಲ ಭಾರತೀಯ ಶೈಕ್ಷಿಕ್ ಮಹಾಸಂಘದ ರಾಷ್ಟ್ರೀಯ ಸಹಸಂಘಟನಾ ಕಾರ್ಯದರ್ಶಿ ಗುಂಟ ಲಕ್ಷ್ಮಣ್ ಮಾತನಾಡಿ “ದೇಶದಲ್ಲಿ ಮಹಿಳಾ ಸಾಧಕರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ನಮ್ಮ ದೇಶ ಸರ್ವತೋಮುಖ ಅಭಿವೃದ್ಧಿ ನಮ್ಮ ಆದ್ಯತೆಯಾಗಿರಬೇಕು. ಇತಿಹಾಸದಿಂದ ಕಲಿಯುವ ಪಾಠಗಳು ನಮ್ಮ ಭವಿಷ್ಯವನ್ನು ರೂಪಿಸಬಲ್ಲದು” ಎಂದು ನುಡಿದರು.
ಕಾಲೇಜಿನ ಸಂಚಾಲಕ ಮುರಳಿ ಕೃಷ್ಣ ಕೆ.ಎನ್. ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಮಹಿಳಾ ಸಬಲೀಕರಣ – ಶ್ರೀಮತಿ ಸುರೇಖಾ ಶೆಟ್ಟಿ, ಜಾನಪದ – ಶ್ರೀಮತಿ ಸುಂದರಿ ನಲಿಕೆ, ಸಮಾಜ ಸೇವೆ ಹಾಗೂ ಸಂಘಟನೆ – ಡಾ. ಆಶಾಜ್ಯೋತಿ ರೈ, ರುದ್ರಭೂಮಿ ಸೇವೆ – ಶ್ರೀಮತಿ ವನಜಾ ಪೂಜಾರ್ತಿ, ಪ್ರಕೃತಿ ಚಿಕಿತ್ಸೆ – ಡಾ. ಗ್ರೀಷ್ಮಾ ವಿವೇಕ್ ಆಳ್ವ, ಬಾಲ ಸಂಸ್ಕಾರ-ಸಂಘಟನೆ-ಶ್ರೀಮತಿ ಗೀತಾ ಲಕ್ಮೀಶ್, ಭಾರತೀಯ ಕಲೆಗಳು – ವಿದುಷಿ ಸುಮಂಗಲ ರತ್ನಾಕರ್ರಾವ್, ಯಕ್ಷಗಾನ – ಶ್ರೀಮತಿ ಪೂರ್ಣಿಮಾ ಯತೀಶ್ ರೈ, ನಾಟಿ ವೈದ್ಯೆ – ಶ್ರೀಮತಿ ಕೆ.ಬಿ. ಅಮ್ಮಣ್ಣಿ, ಉದ್ಯಮ ಶೀಲತೆ – ಶ್ರೀಮತಿ ಮಹಾಲಕ್ಷ್ಮೀ, ಅಂಬ್ಯುಲೆನ್ಸ್ ಚಾಲನೆ – ಶ್ರೀಮತಿ ಸಿ.ಎಸ್. ರಾಧಿಕಾ, ತುಳು ಸಾಹಿತ್ಯ – ಯಶೋಧಾ ಕೇಶವ್, ಪರಿಸರ – ಶ್ರೀಮತಿ ಸಂಧ್ಯಾ, ಯಕ್ಷಗಾನ ಪ್ರಸಂಗ ಸಾಹಿತ್ಯ – ಶ್ರೀಮತಿ ಶುಭಾಶಯ ಜೈನ್, ಉದಯೋನ್ಮುಖ ಕಲಾವಿದೆ – ಕುಮಾರಿ ಸುಶ್ರಾವ್ಯಯು, ಸಮುದಾಯ ಅಭಿವೃದ್ಧಿ – ಶ್ರೀಮತಿ ಭವ್ಯಾರಾಣಿ, ಆಯುರ್ವೇದ -ಶ್ರೀಮತಿ ರೂಪಲೇಖಾ, ಭರತನಾಟ್ಯ – ವಿದುಷಿ ಶಾಲಿನಿ ಆತ್ಮಭೂಷಣ್, ತಾಳಮದ್ದಳೆ – ಶ್ರೀಮತಿ ಶುಭಾ ಅಡಿಗ, ಪತ್ರಿಕೋದ್ಯಮ -ಕುಮಾರಿ ಶಹನಾ ಮುಮ್ತಾಜ್ ನೆಲ್ಯಡ್ಕ, ಯೋಗ – ಕುಮಾರಿ ಕೆ.ಎನ್. ದೀಪಿಕಾ ಇವರಿಗೆ ವೀರರಾಣಿ ಅಬ್ಬಕ್ಕಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕೆ.ಆರ್.ಎಮ್.ಎಸ್.ಎಸ್. ಇದರ ಅಧ್ಯಕ್ಷ ಪ್ರೊ. ಗುರುನಾಥ್ ಬಡಿಗೇರ, ಸಂಚಾಲಕಿ ಡಾ. ಆಶಾಲತಾ, ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್, ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಪ್ರಮೋದ್ಎಂ.ಜಿ. ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕೆ.ಆರ್.ಎಂ.ಎಸ್.ಎಸ್. ಇದರ ಜಂಟಿ ಕಾರ್ಯದರ್ಶಿ ಡಾ. ಮಾಧವ ಎಂ.ಕೆ. ಪ್ರಸ್ತಾವನೆಗೈದು ಸ್ವಾಗತಿಸಿದರು. ಕೆ.ಆರ್.ಎಂ.ಎಸ್.ಎಸ್. ಮಂಗಳೂರು ಘಟಕದ ಅಧ್ಯಕ್ಷೆ ವಾಣಿ ಯು. ವಂದಿಸಿದರು. ಮಾಧ್ಯಮ ಪ್ರಮುಖ್ ಮಮತಾ ಶೆಟ್ಟಿ ನಿರ್ವಹಿಸಿದರು.
ಈ ಸಂದರ್ಭದಲ್ಲಿ ‘ಸಮಕಾಲೀನ ಸಂದರ್ಭದಲ್ಲಿ ರಾಣಿ ಅಬ್ಬಕ್ಕಳ ಪ್ರಸ್ತುತತೆ’ ಇದರ ಕುರಿತು ವಾಗ್ಮಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹಾಗೂ ‘ಭಾರತದ ಇತಿಹಾಸ-ರಾಣಿ ಅಬ್ಬಕ್ಕಳ ಕೊಡುಗೆ’ ಇದರ ಬಗ್ಗೆ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಸಂಚಯಗಿರಿ ಇದರ ಅಧ್ಯಕ್ಷರಾದ ಡಾ. ತುಕರಾಂ ಪೂಜಾರಿ ಗೋಷ್ಟಿಯನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಕಲಾ ಸಾರಥಿತೋನ್ಸೆ ಪುಷ್ಕಳ ಕುಮಾರ್ ಇವರಿಂದ ‘ವೀರರಾಣಿ ಅಬ್ಬಕ್ಕ’ ಕಥಾಕೀರ್ತನೆ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಎ.ಬಿ.ಆರ್.ಎಸ್.ಎಂ. ನವದೆಹಲಿ ಲಕ್ಷ್ಮಣಗುಂಟ ಮಾತಾಡಿ, “ಇಂತಹ ಕಾರ್ಯಕ್ರಮಗಳಿಂದ ನಾವುಗಳು ಹಲವಾರು ವಿಷಯಗಳನ್ನು ತಿಳಿದುಕೊಳ್ಳಬಹುದು. ಕೇವಲ ಶಿಕ್ಷಣಕ್ಕೆ ಮಾತ್ರ ನಮ್ಮನ್ನು ಸೀಮಿತವಾಗಿರಿಸದೆ ಹೊರಗಿನ ಶೈಕ್ಷಣಿಕೇತರ ಕಾರ್ಯಗಳಲ್ಲಿ ನಾವು ತೊಡಗಿಸಿಕೊಳ್ಳಬೇಕಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ.) ಪುತ್ತೂರು ಇದರ ಕಾರ್ಯದರ್ಶಿ ಹಾಗೂ ಇಂದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಕೆ.ಎಂ. ಕೃಷ್ಣ ಭಟ್ ಮಾತನಾಡಿ, “ಇತಿಹಾಸದ ಪುಟದಿಂದ ವಿಸ್ಮೃತಿಗೊಂಡ ಅಬ್ಬಕ್ಕನನ್ನು ನೆನಪಿಸಿಕೊಳ್ಳುವಂತಹ ಈ ಕಾರ್ಯಕ್ರಮ ವಿಶೇಷವಾದದ್ದು” ಎಂದು ಹೇಳಿದರು. ಈ ಸಂದರ್ಭದಲ್ಲಿ ಯೋಗ ಮತ್ತು ಧ್ಯಾನ ಇದರಲ್ಲಿ ಸಾಧನೆಗೈದ ಶಾರ್ಟ್ಆಫ್ ಲಿವಿಂಗ್ ಮಂಗಳೂರು ಇಲ್ಲಿನ ಶಿಕ್ಷಕಿ ಕುಮಾರಿ ಕೆ.ಎನ್. ದೀಪಿಕಾ, ಕರ್ನಾಟಕ ಶಿಕ್ಷಕ ಸಂಘದ ಪ್ರತಿನಿಧಿ ಮತ್ತು ಜಂಟಿ ಕಾರ್ಯದರ್ಶಿ ಮಾಧವ ಕೆ. ಇವರನ್ನು ಸನ್ಮಾನಿಸಲಾಯಿತು.
ಎ.ಬಿ.ಆರ್.ಎಸ್.ಎಂ. ಸಂಚಾಲಕ ಶಿವಪೂಜಿ ಕೋಟಿ, ಬೆಂಗಳೂರು ಕೆ.ಆರ್.ಎಂ.ಎಸ್.ಎಸ್. ಪ್ರಧಾನ ಕಾರ್ಯದರ್ಶಿ ಪ್ರೊ. ರೋಹಿಣಿ ಕುಮಾರ್ ಹಿಲ್ಲಿ, ಬೆಂಗಳೂರು ಕೆ.ಆರ್.ಎಂ.ಎಸ್.ಎಸ್. ಸಂಘಟನಾ ಕಾರ್ಯದರ್ಶಿ ಡಾ. ಸಿ.ವಿ. ಮರಿದೇವರ ಮಠ, ಉಡುಪಿ ಕೆ.ಆರ್.ಎಂ.ಎಸ್.ಎಸ್. ಅಧ್ಯಕ್ಷರಾದ ಪ್ರೊ. ಸುರೇಂದ್ರ ಶೆಟ್ಟಿ, ಪ್ರೊ. ವಾಣಿ ಅಧ್ಯಕ್ಷರು ಮಂಗಳೂರು, ಕಾರ್ಯಕ್ರಮ ಸಂಯೋಜಕಿ ಡಾ. ಆಶಾಲತಾ ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ರಾಜೇಶ್ ವಂದಿಸಿ, ಮಂಗಳಗಂಗೋತ್ರಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಶಿಕ್ಷಕಿ ಕಾಜಲ್ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ರೂಪಿಸಿದ ‘ವಿಕಸನ’ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

