ಸುಳ್ಯ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ಅಭಿವೃದ್ದಿ ಪ್ರಾಧಿಕಾರ ಇವರ ವತಿಯಿಂದ ಸುಳ್ಳದ ನೆಹರೂ ಸ್ಮಾರಕ ಕಾಲೇಜಿನ ಸುವರ್ಣ ಮಹೋತ್ಸವ ಸಂಭ್ರಮಾಚರಣೆಯ ಪ್ರಯುಕ್ತ ದಿನಾಂಕ 24 ಫೆಬ್ರವರಿ 2026ರಂದು ನೆಹರೂ ಸ್ಮಾರಕ ಕಾಲೇಜಿನ ಕೆವಿಜಿ ಷಷ್ಪ್ಯಬ್ಧ ರಂಗ ಮಂದಿರದಲ್ಲಿ ಅರೆಭಾಷೆ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಭಾಷಾ ಪರಂಪರೆ ವಿಚಾರಗೋಷ್ಠಿ ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ “ನಮ್ಮ ಭಾಷೆಗಳು ನಶಿಸಿ ಹೋಗದಂತೆ ಉಳಿಸಿ ಬೆಳೆಸಿ ಅಭಿವೃದ್ಧಿಪಡಿಸಬೇಕು. ಜೊತೆಗೆ ಭಾಷೆಯ ಬೆಳವಣಿಗೆಗೆ ಸಾಹಿತ್ಯವನ್ನು ಪ್ರೋತ್ಸಾಹಿಸಬೇಕು. ಅರೆಭಾಷೆ ಅಕಾಡೆಮಿ ಸ್ಥಾಪನೆಯಾದ ಬಳಿಕ ಭಾಷೆಯ ವೈಭವ ಹೆಚ್ಚಿದೆ. ಅರೆಭಾಷೆಯ ಸೊಗಡು ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಉಳಿಸಿ ಬೆಳೆಸಬೇಕಿದೆ. ಈ ನಿಟ್ಟಿನಲ್ಲಿ ಇಂತಹ ವಿಚಾರ ಸಂಕಿರಣ ಅವಶ್ಯಕ. ಅಲ್ಲದೇ ಮುಂದಿನ ಪೀಳಿಗೆಗೆ ಭಾಷೆಯನ್ನು ಪರಿಚಯಿಸುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ತರ ಪಾತ್ರ ವಹಿಸುತ್ತವೆ” ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ, “ಅರೆಭಾಷೆಯು ರಾಜ್ಯದ ಗಡಿ ಮೀರಿ ದೇಶದೆಲ್ಲೆಡೆ ಪಸರಿಸಬೇಕು ಎಂಬುದು ಅಕಾಡೆಮಿಯ ಆಶಯ. ಅದಕ್ಕಾಗಿ ಅಕಾಡೆಮಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಭಾಷೆ ಸಂಸ್ಕೃತಿಯನ್ನು ಬೆಳೆಸಿ ಮುಂದಿನ ತಲೆಮಾರಿಗೆ ಹಸ್ತಾಂತರ ಆಗಬೇಕು” ಎಂದು ಹೇಳಿದರು.



ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಮುಖ್ಯ ಅತಿಥಿಯಾಗಿದ್ದರು. ಅರೆಭಾಷೆ ಅಕಾಡೆಮಿ ಸದಸ್ಯರಾದ ಡಾ. ಎನ್.ಎ. ಜ್ಞಾನೇಶ್, ಚಂದ್ರಶೇಖರ ಪೇರಾಲು, ಗೋಪಾಲ ಪೆರಾಜೆ, ಚಂದ್ರಾವತಿ ಬಡ್ಡಡ್ಕ, ಕುದ್ಲಾಜೆ ಪ್ರಕಾಶ್, ತೇಜಕುಮಾರ್ ಬಡ್ಡಡ್ಕ, ಲತಾ ಪ್ರಸಾದ್ ಕುದ್ಪಾಜೆ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಿಥಾಲಿ ಪಿ. ರೈ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಟಿ. ವಿಶ್ವನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮ ಸದಸ್ಯ ಸಂಚಾಲಕ ಚಂದ್ರಶೇಖರ ಪೇರಾಲು ಸ್ವಾಗತಿಸಿ, ನೆಹರೂ ಸ್ಮಾರಕ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರುದ್ರ ಕುಮಾರ್ ಎಂ.ಎಂ. ವಂದಿಸಿದರು. ಉಪನ್ಯಾಸಕಿ ಡಾ. ಅನುರಾಧಾ ಕುರುಂಜಿ ನಿರ್ವಹಿಸಿದರು.



ಸಭಾ ಕಾರ್ಯಕ್ರಮದ ಬಳಿಕ ಸುಳ್ಯ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ‘ಗಡಿನಾಡು ಸುಳ್ಯ ಪರಿಸರದ ಭಾಷಾ ವಿಚಾರ ಸಂಕಿರಣ’ವನ್ನು ಉದ್ಘಾಟಿಸಲಾಯಿತು. ಈ ಕಾರ್ಯಕ್ರಮದಲ್ಲಿ ‘ಪ್ರಾದೇಶಿಕ ಭಾಷೆಗಳು ಎದುರಿಸುತ್ತಿರುವ ಸವಾಲುಗಳು’ ವಿಷಯದ ಕುರಿತು ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಮಾತನಾಡಿ “ಭಾರತವು ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತಿದ್ದು ಪ್ರತಿಯೊಂದು ಭಾಷೆ ರಾಷ್ಟ್ರೀಯ ಭಾಷೆಗಳೇ ಆಗಿವೆ. ಅಲ್ಲದೆ, ಒಂದು ಭಾಷೆಯಲ್ಲಿಯೇ ವಿವಿಧ ಬದಲಾವಣೆಗಳು ಕಾಣಿಸುತ್ತಿದ್ದು ಇಂತಹ ಒಂದೊಂದು ಗೋಷ್ಠಿ ಹಾಗೂ ಅಕಾಡೆಮಿಗಳ ಮೂಲಕ ಭಾಷೆ ಸಂಸ್ಕೃತಿಗಳನ್ನು ಉಳಿಸಲು ಸಾಧ್ಯ” ಎಂದು ಹೇಳಿದರು.

ಭಾಷಾ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ವಿಶ್ರಾಂತ ಉಪ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ವಹಿಸಿದ್ದರು. ‘ಜಾಗತೀಕರಣ ಮತ್ತು ಸಾಂಸ್ಕೃತಿಕ ಪಲ್ಲಟಗಳು’ ವಿಷಯದ ಕುರಿತು ಮಾತನಾಡಿದ ವಿಶ್ರಾಂತ ಪ್ರಾಧ್ಯಾಪಕ ಡಾ. ನರೇಂದ್ರ ರೈ ದೇರ್ಲ, “ಇಂದು ತಂತ್ರಜ್ಞಾನಗಳು ಬಂದ ಬಳಿಕ ಎಲ್ಲಾ ವಿಚಾರಗಳು ಪಲ್ಲಟಗೊಂಡಿದೆ. ಈ ಹಿಂದೆ ಹಾಸನ ಜಿಲ್ಲೆಯಲ್ಲಿ 35 ಕುಟುಂಬಗಳು ಹಿಂದಿನ ಕಾಲದ ಪದ್ಧತಿಯ ಎತ್ತಿನ ಗೆಜ್ಜೆ ನೃತ್ಯಕ್ಕೆ ಬೇಕಾಗುವ ಗೆಜ್ಜೆಗಳನ್ನು ತಯಾರಿಸುತ್ತಿದ್ದವು. ಆಗ ಅವರು ಕಲಾವಿದರಾಗಿದ್ದರು. ಆದರೆ, ಗೆಜ್ಜೆಗಳನ್ನು ಯಂತ್ರಗಳ ಮೂಲಕ ತಯಾರಿಸಲು ಆರಂಭಿಸಿದ ಬಳಿಕ ಅವರು ಬಿದಿರಿನ ಬುಟ್ಟಿಯನ್ನು ಹೆಣೆಯುವ ಮೂಲಕ ವೃತ್ತಿ ನಡೆಸಿದರು. ಆ ಬಳಿಕ ಇದೀಗ ಅವರು ಗಾರೆ ಕೆಲಸಕ್ಕೆ ಹೋಗುತ್ತಿದ್ದು ಇದೀಗ ಕಾರ್ಮಿಕರಾಗಿ ಬದಲಾವಣೆಗೊಂಡಿದ್ದಾರೆ. ಇದು ಪಲ್ಲಟಗಳ ಉದಾಹರಣೆಗೆಯಾಗಿದ್ದು ತಂತ್ರಜ್ಞಾನ ಬೆಳೆದಂತೆ ಮೂಲವನ್ನು ಮರೆಯುವಂತಾಗಿದೆ” ಎಂದರು.

ಬಳಿಕ ನಡೆದ ಅರೆಭಾಷಾ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಹಿರಿಯ ಚಿಂತಕ ಕೆ.ಇ. ರಾಧಾಕೃಷ್ಣ ಬೆಂಗಳೂರು ವಹಿಸಿದ್ದರು. ‘ಅರೆ ಭಾಷೆ-ಪ್ರಾದೇಶಿಕ ಭಿನ್ನತೆಗಳು’ ವಿಷಯದ ಕುರಿತು ಪ್ರಾಂಶುಪಾಲ ಡಾ. ಪುರುಷೋತ್ತಮ ಕರಂಗಲ್ಲು ಮಾತನಾಡಿ, ಪ್ರದೇಶಗಳಿಗೆ ಅನುಗುಣವಾಗಿ ಅರೆ ಭಾಷೆ ಬದಲಾವಣೆಗಳು ಆಗುತ್ತಿದ್ದು, ಸಂಸ್ಕೃತಿಗಳು ಮತ್ತು ಸುಲಲಿತವಾಗಿ ಮಾತನಾಡಬಲ್ಲ ಭಾಷೆಯಾಗಿದೆ” ಎಂದು ಹೇಳಿದರು.


‘ಅರೆ ಭಾಷೆಯ ಅನನ್ಯತೆಗಳು’ ವಿಷಯದ ಬಗ್ಗೆ ವಿಶ್ರಾಂತ ಪ್ರಾಂಶುಪಾಲ ಕೆ.ಆರ್ಾ. ಗಂಗಾಧರ ಮಾತನಾಡಿದರು. ಅರೆಭಾಷೆ ಸಂಸ್ಕೃತಿ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಪ್ರಾಧ್ಯಾಪಕ ಪಟ್ಟಡ ಶಿವಕುಮಾರ್ ವಹಿಸಿದ್ದರು. ‘ಅರೆ ಭಾಷಿಗರ ಮದುವೆ ಪದ್ಧತಿಯಲ್ಲಿ ಬದಲಾವಣೆಗಳು’ ವಿಷಯದ ಕುಂತು ಮಾತನಾಡಿದ ದೊಡ್ಡಣ್ಣ ಬರೆಮೇಲು “ಈ ಹಿಂದೆ ಅರೆ ಭಾಷಿಗರ ಮದುವೆಯು ಸಂಪೂರ್ಣವಾಗಿ ಪದ್ಧತಿಗಳ ಪ್ರಕಾರ ಮನೆಯಲ್ಲಿ ನಡೆಯುತ್ತಿದ್ದರೆ ಇಂದು ಸಭಾಂಗಣದಲ್ಲಿ ಕೇವಲ ಕೆಲವೊಂದು ವಿಧಿ ವಿಧಾನಗಳನ್ನು ಕಟ್ಟಕಟ್ಟಳೆಯಾಗಿ ಮಾಡಲಾಗುತ್ತಿದೆ. ಆಡಂಬರವನ್ನು ಕಡಿತಗೊಳಿಸಿ ಸಂಸ್ಕೃತಿ, ಸಂಪ್ರದಾಯಗಳ ಮೂಲಕ ಮದುವೆಗಳಿಗೆ ಒತ್ತು ನೀಡಬೇಕಿದೆ” ಎಂದು ಹೇಳಿದರು. ‘ಕೊಡಗಿನ ಅರೆ ಭಾಷಿಕರ ಹಬ್ಬ ಹರಿದಿನಗಳು’ ವಿಷಯದ ಕುರಿತು ಪ್ರಾಧ್ಯಾಪಕ ಡಾ. ದಯಾನಂದ ಕೂಡಕಂಡಿ ಮಾತನಾಡಿದರು. ‘ಸಿದ್ದ ವೇಷ-ಅರೆಭಾಷಿಕರ ಜಾನಪದ ನೃತ್ಯ’ ವಿಷಯದ ಕುರಿತು ಜಯಪ್ರಕಾಶ್ ಕುಕ್ಕೆಟ್ಟಿ ವಿಚಾರ ಮಂಡಿಸಿದರು.

