ಪುತ್ತೂರು : ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಹಾಗೂ ಆಪ್ತ ವರ್ಗದ ಉಪಸ್ಥಿತಿಯಲ್ಲಿ ಪುತ್ತೂರಿನ ‘ಅನುರಾಗ ವಠಾರ’ದಲ್ಲಿ ದಿನಾಂಕ 21 ಫೆಬ್ರವರಿ 2026ರಂದು ಉಪನ್ಯಾಸಕಿ ಉಷಾ ಕೆ.ವಿ. ಇವರ ‘ವೇದಾಂತ’ ಹಾಗೂ ‘ಸ್ಪಂದನ’ ಕೃತಿಗಳ ಲೋಕಾರ್ಪಣಾ ಸಮಾರಂಭವು ಅರ್ಥಪೂರ್ಣವಾಗಿ ನೆರವೇರಿತು.
ಶಿಕ್ಷಣ ಕ್ಷೇತ್ರದಲ್ಲಿ ಕಳೆದ 35 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಉಷಾ ಕೆ.ವಿ. ಅವರು ಸುಳ್ಯದ ಸರಕಾರಿ ಜೂನಿಯರ್ ಕಾಲೇಜ್ ಹಾಗೂ ಕಬಕದ ಸರಕಾರಿ ಪ್ರೌಢ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸಿದ್ದರು. ಪ್ರಸ್ತುತ ಕೋಡಿಂಬಾಡಿಯಲ್ಲಿ ವಾಸವಾಗಿರುವ ಅವರು, ವಿವೇಕಾನಂದ ಪದವಿ ಕಾಲೇಜಿನಲ್ಲಿ ಸಂಸ್ಕೃತ, ಹಿಂದಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಡಾ. ವಿಷ್ಣು ಭಟ್ ಅವರ ಪತ್ನಿ. ತಮ್ಮ ಅಧ್ಯಯನ-ಅನುಭವಗಳಸಾರವನ್ನು ಸಾಹಿತ್ಯ ರೂಪದಲ್ಲಿ ಓದುಗರಿಗೆ ಅರ್ಪಿಸಿರುವುದು ಕಾರ್ಯಕ್ರಮದಲ್ಲಿ ಸರ್ವ ಅತಿಥಿಗಳಿಂದ ವಿಶೇಷವಾಗಿ ಪ್ರಶಂಸಿಸಲಾಯಿತು.

ಲೇಖಕರ ಮೊಮ್ಮಕ್ಕಳಾದ ಸಾಧ್ವಿ ಮತ್ತು ತನಿಶಿ, ಮಾ. ಅಕ್ಷಜ್ ಹಾಗೂ 3 ವರ್ಷದ ಪುಟಾಣಿ ಅಗಸ್ತ್ಯ ಇವರ ಮಧುರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತ್ತು. ಪುಟಾಣಿ ಮಕ್ಕಳೇ ಖುಷಿ ಖುಷಿಯಾಗಿ ಕುಣಿಯುತ್ತಾ ವೇದಿಕೆಗೆ ಬಂದು ಅತಿಥಿಗಳಿಗೆ ಕನ್ನಡದ ಶಾಲು ಹೊದಿಸಿ ಸ್ಮರಣಿಕೆಗಳನ್ನು ಅರ್ಪಿಸಿರುವುದು, ಜೊತೆಗೆ ಪ್ರತಿ ಬಿಡುಗಡೆ ಸಮಾರಂಭದಲ್ಲಿ ಈ ಎಲ್ಲಾ ಪುಟಾಣಿಗಳು ನೂತನ ಕೃತಿಯನ್ನು ಹಿಡಿದು ಸಂಭ್ರಮಿಸಿದ್ದು ಸಮಾರಂಭದ ಅತ್ಯಂತ ಮನಮುಟ್ಟುವ ಕ್ಷಣವಾಗಿತ್ತು.
ಈ ಸಮಾರಂಭವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದ ಕರ್ನಾಟಕ ಸಂಘದ ಅಧ್ಯಕ್ಷ ಪುರಂದರ ಭಟ್ ಇವರು ಮಾತನಾಡಿ “ಲೇಖಕಿ ಉಷಾ ಕೆ.ವಿ. ಇವರು ಅಧ್ಯಯನಶೀಲ ವ್ಯಕ್ತಿತ್ವದವರಾಗಿದ್ದು, ಬಿಡುಗಡೆಯಾದ ಕೃತಿಗಳು ಶೈಕ್ಷಣಿಕ ಮೌಲ್ಯಗಳನ್ನು ಒಳಗೊಂಡಿವೆ. ಯಾವುದೇ ಭಯವಿಲ್ಲದೆ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಅಭಿವ್ಯಕ್ತಿಸಿರುವುದು ಪ್ರಶಂಸನೀಯ. ಈ ಕೃತಿಗಳು ಪಠ್ಯಪುಸ್ತಕ ಮಟ್ಟಕ್ಕೂ ಯೋಗ್ಯವಾಗಿವೆ” ಎಂದು ಹೇಳಿದರು.
ಹಿರಿಯ ಸಾಹಿತಿ ಪ್ರೊ. ಹರಿನಾರಾಯಣ ಮಾಡಾವು ಇವರು ‘ವೇದಾಂತ’ ಕೃತಿಯನ್ನು ಲೋಕಾರ್ಪಣೆ ಮಾಡಿ, “ವೇದಗಳ ಸಾರವನ್ನು ಹೊಸ ಓದುಗರಿಗೂ ಮನಮುಟ್ಟುವಂತೆ ವಿವರಿಸಿರುವುದು ಕೃತಿಯ ವಿಶೇಷತೆ. ‘ಆನೆಯನ್ನು ಕನ್ನಡಿಯಲ್ಲಿ ತೋರಿಸುವ ಪ್ರಯತ್ನದಂತಿದೆ ಈ ಕೃತಿ. ಇದು ವೇದಾಂತ-ಸ್ಪಂದನದ ಸಾರ್ಥಕ ಸಂವಾದ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರೊ. ಬಿ.ವಿ. ಸೂರ್ಯನಾರಾಯಣ ಅವರು ‘ಸ್ಪಂದನ’ ಕೃತಿಯನ್ನು ಬಿಡುಗಡೆಗೊಳಿಸಿ, “ಗತಕಾಲದ ವೈಭವವನ್ನು ವರ್ತಮಾನಕ್ಕೆ ಜೋಡಿಸುವ ಧೈರ್ಯ ಲೇಖಕಿಯದು ಸನಾತನ ಸಂಸ್ಕೃತಿಯ ಶ್ರೀಮಂತಿಕೆಯನ್ನು ನಿರ್ಭೀತಿಯಾಗಿ, ಮೊನಚಾದ ಮಾತುಗಳ ಮೂಲಕ ತನ್ನ ನಿಲುವನ್ನು ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಉಷಾ ಕೆ.ವಿ. ಧೈರ್ಯಶಾಲಿ ಮಹಿಳೆ” ಎಂದು ಪ್ರಶಂಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಉಮೇಶ್ ನಾಯಕ್, “ಸಾಹಿತ್ಯ ಪರಿಷತ್ತಿನ ವೇದಿಕೆ ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರನ್ನು ಒಗ್ಗೂಡಿಸುವ ಸಂವಾದ ವೇದಿಕೆಯಾಗುತ್ತಿದೆ. ಸಾಹಿತ್ಯ ಹಾಗೂ ಸಾಹಿತಿಗಳ ಸೇವೆಗೆ ಪರಿಷತ್ತು ಸದಾ ಕಟಿಬದ್ಧವಾಗಿದೆ” ಎಂದು ತಿಳಿಸಿದರು.
‘ಆಯುರ್ವೇದದಲ್ಲಿ ಯೋಗ’ ವಿಷಯದ ಕುರಿತು ಕೋಡಿಂಬಾಡಿಯ ಅತ್ರಿವನ ಆಯುರ್ವೇದಿಕ್ ಆಸ್ಪತ್ರೆಯ ಮುಖ್ಯಸ್ಥ ಹಾಗೂ ಆಯುರ್ವೇದ ವೈದ್ಯ ಡಾ. ದತ್ತಾತ್ರೇಯ ಅವರು ಉಪನ್ಯಾಸ ನೀಡಿ, “ಯೋಗ ಮತ್ತು ಆಯುರ್ವೇದ ಪರಸ್ಪರ ಪೂರಕವಾಗಿದ್ದು, ಮನುಷ್ಯನಿಗೆ ಇರುವ ವಿವೇಚನಾ ಶಕ್ತಿಯನ್ನು ಸದುಪಯೋಗಪಡಿಸಿಕೊಂಡರೆ ಮಾತ್ರ ಆರೋಗ್ಯಕರ ಜೀವನ ಸಾಧ್ಯ” ಎಂದು ವಿವರಿಸಿದರು.
ಹಿರಿಯ ಸಾಹಿತಿಗಳಾದ ಪ್ರೊ. ವಿ.ಬಿ. ಆರ್ತಿಕಜೆ, ಡಾ.ಎಚ್.ಜಿ. ಶ್ರೀಧರ್, ಡಾ. ಶ್ರೀಶ ಕುಮಾರ್, ಡಾ. ವಿಷ್ಣು ಭಟ್, ಶ್ರೀಮತಿ ಶಂಕರಿ ಶರ್ಮ, ಸುಬ್ರಹ್ಮಣ್ಯ ಶರ್ಮ, ಮಲ್ಲಿಕಾ ಜೆ. ರೈ ಉಪಸ್ಥಿತರಿದ್ದರು. ಕೃತಿಕಾರರಾದ ಉಷಾ ಕೆ.ವಿ. ಪ್ರಾಸ್ತಾವಿಸಿದರು. ಕೃತಿಕಾರರ ಪುತ್ರಿ ಡಾ. ಧೃತಿ ಸ್ವಾಗತಿಸಿ, ರಮೇಶ್ ನಾಯಕ್ ನಿಡ್ಯ ಕಾರ್ಯಕ್ರಮ ನಿರ್ವಹಿಸಿ, ವನಮಾಲಿ ಭಟ್ ವಂದನಾರ್ಪಣೆ ಸಲ್ಲಿಸಿ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಎಲ್ಲ ಅತಿಥಿಗಳು, ಸಾಹಿತ್ಯಾಸಕ್ತರು ಹಾಗೂ ಮಕ್ಕಳಿಗೆ ಕೃತಜ್ಞತೆಗಳನ್ನು ಅರ್ಪಿಸಿದರು.
‘ವೇದಾಂತ’ ಹಾಗೂ ‘ಸ್ಪಂದನ’ ಕೃತಿಗಳಿಗೆ ಲೇಖಕಿ ಉಷಾ ಕೆ.ವಿ. 8277533524 ಸಂಖ್ಯೆಯನ್ನು ಸಂಪರ್ಕಿಸಿರಿ.
