ಕಾಸರಗೋಡು : ಕಲಾವಿದ -ಪ್ರೇಕ್ಷಕ -ಮಾಧ್ಯಮ- ಸಂಘಟಕ ಪ್ರಶಕ್ತ ವಿದ್ಯಾಮಾನಗಳು ಬೆಳಕಿನ ಕಿರಣ ಸಿರಿಬಾಗಿಲು ಪ್ರತಿಷ್ಠಾನ. ‘ಯಕ್ಷಗಾನ ಕಲೆಯ ದೀಪಕ್ಕೆ ತೈಲಧಾರೆಗಳಾಗೋಣ’ ಎಂಬ ಶೀರ್ಷಿಕೆಯಡಿಲ್ಲಿ ಯಕ್ಷಗಾನ ವಲಯದ ವಿದ್ವಾಂಸರು, ಸಂಘಟಕರು, ಕಲಾವಿದರು ಹಾಗೂ ಮಾಧ್ಯಮದವರು ಜೊತೆಗೂಡಿ ಪ್ರಸಕ್ತ ವಿದ್ಯಮಾನಗಳತ್ತ ‘ಬೆಳಕಿನ ಕಿರಣ’ ಎಂಬ ವಿಚಾರ ಗೋಷ್ಠಿಯನ್ನು ದಿನಾಂಕ 14 ಜೂನ್ 2026ರಂದು ಸಿರಿಬಾಗಿಲು ಪ್ರತಿಷ್ಠಾನವು ಶ್ರೀ ಕೇಶವಾನಂದ ಭಾರತಿ ಸ್ಮೃತಿ ಮಂದಿರದಲ್ಲಿ ಆಯೋಜಿಸಿರುವುದು ಸ್ತುತ್ಯರ್ಹ ಕಾರ್ಯ” ಎಂದು ಶ್ರೀ ಎಡನೀರು ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಕಾರ್ಯಕ್ರಮದ ಉದ್ಘಾಟನೆ ಹಾಗೂ ಆಶೀರ್ವಚನದೊಡನೆ ಮೆಚ್ಚುಗೆಯನ್ನು ಸೂಚಿಸಿ ಬೆಂಬಲಿಸಿದರು.
ಯಕ್ಷಗಾನ ವಲಯದ ದಿಗ್ಗಜ ವಿದ್ವಾಂಸರಾದ ಡಾ. ಎಂ. ಪ್ರಭಾಕರ್ ಜೋಶಿಯವರು, ಪ್ರಸಂಗಕರ್ತ ವಿದ್ವಾಂಸರಾದ ಡಾ. ರಾಘವನ್ ನಂಬಿಯಾರ್ ವಿಚಾರಗೋಷ್ಠಿ ಕಾರ್ಯಕ್ರಮಕ್ಕೆ ಚಾಲನೆಯ ಉಪನ್ಯಾಸ ನೀಡಿದರು. ಹಿಂದಿನ ಕಲಾಪ್ರದರ್ಶನ, ಹಿಂದಿನ ಪ್ರೇಕ್ಷಕರು, ಸ್ಪಂದನೆ, ಇಂದಿನ ಕಲಾವಿದರ ರಂಗಪ್ರಸ್ತುತಿ, ಹಾಸ್ಯವನ್ನು ಸೇರಿಸಿ ಕಲಾವಿದರ ಅಭಿಮಾನಿಗಳಾಗುವ ಪ್ರೇಕ್ಷಕರು, ಅದಕ್ಕೆ ಸ್ಪಂದಿಸುವ ಕಲಾವಿದರು, ಸಂಪ್ರದಾಯ ಮತ್ತು ನವೀನತೆಯ ನಡುವೆ ಸಮತೋಲನ ಹೇಗೆ ಸಾಧಿಸಬಹುದು? ಯುವ ಪೀಳಿಗೆ ಮತ್ತು ಯಕ್ಷಗಾನ ಯುವಕರನ್ನು ರಂಗದತ್ತ ಸೆಳೆಯುವಲ್ಲಿ ನಾವು ಯಶಸ್ವಿಯಾಗಿದ್ದೇವೆಯೇ? ಎಂಬ ವಿಷಯಗಳ ಸುತ್ತಮುತ್ತ ಶ್ರೀ ಹರಿಕೃಷ್ಣ ಹೊಳ್ಳ ಬ್ರಹ್ಮಾವರ, ಉಪನ್ಯಾಸಕರು ಹವ್ಯಾಸಿ ಬಾಗವತರು ವಿಷಯ ಮಂಡಿಸಿದರು.

ಉದಯವಾಣಿ ಪತ್ರಿಕೆಯ ಶ್ರೀ ಲಕ್ಷ್ಮಿ ಮಚ್ಚಿನ ಅವರು “ಎಲ್ಲವನ್ನು ವಿಮರ್ಶಿಸುವ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್, ಫೇಸ್ ಬುಕ್, ಇನ್ಸ್ಟಾಗ್ರಾಂ ಮೂಲಕ ಯಕ್ಷಗಾನಕ್ಕೆ ಹೊಸ ಪ್ರೇಕ್ಷಕರು ದೊರೆಯುತ್ತಿದ್ದಾರೆಯೇ? ಎಂಬ ವಿಷಯದಲ್ಲಿ ಪ್ರಬಂಧ ಮಂಡಿಸಿದರು.

ಯಕ್ಷಗಾನ ಪ್ರಸಂಗಗಳ ಸಂದೇಶ, ಸಮಾಜದ ಪರಿವರ್ತನೆ ಜನಪ್ರಿಯತೆಯ ಹೆಸರಿನಲ್ಲಿ ಕಲಾತ್ಮಕ ಗುಣಕ್ಕೆ ಧಕ್ಕೆ ಉಂಟಾಗುತ್ತಿದೆಯೇ? ವೈರಲ್ ಆಗುವ ಉದ್ದೇಶದ ದೃಶ್ಯಗಳಿಗಾಗಿ ಪ್ರದರ್ಶನ ಸ್ವರೂಪ ಬದಲಾಗುತ್ತಿದೆಯೇ? ಯಕ್ಷಗಾನದ ಸಮಗ್ರತೆಯನ್ನು ಉಳಿಸಿಕೊಳ್ಳಲು ಏನು ಮಾಡಬಹುದು? ಎಂಬಿತ್ಯಾದಿ ವಿಚಾರವಾಗಿ ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನದ ಸಂಚಾಲಕರಾದ, ಕಲಾವಿದ ಶ್ರೀ ಉಜಿರೆ ಅಶೋಕ್ ಭಟ್ಟರು ವಿಚಾರ ಮಂಡಿನೆ ಮಾಡಿದರು.

ಪರಿವರ್ತನೆ, ಸ್ವೀಕರಿಸುವ ಪ್ರೇಕ್ಷಕ ವರ್ಗ, ಪ್ರೇಕ್ಷಕರ ಮೆಚ್ಚುಗೆ ಹೇಗೆ ಇರಬೇಕು?, ಅತಿರೇಕಗಳು, ಪ್ರದರ್ಶನ ಗುಣಮಟ್ಟ ವೃದ್ಧಿಸುವಲ್ಲಿ ಪ್ರೇಕ್ಷಕರ ಪಾತ್ರ, ಶಾಸ್ತ್ರೀಯ ಸಂಗೀತಕ್ಕೆ ಪ್ರೇಕ್ಷಕರ ಸ್ಪಂದನೆ, ಯಕ್ಷಗಾನಕ್ಕೆ ಮಾದರಿ, ಚಪ್ಪಾಳೆ, ಸನ್ಮಾನ, ಸಾಮಾಜಿಕ ಜಾಲತಾಣದ ಮೆಚ್ಚುಗೆ ಮತ್ತು ಅತಿರೇಕದ ಆರಾಧನೆಗಳ ನಡುವಿನ ವ್ಯತ್ಯಾಸ ಎಂಬ ವಿಷಯಗಳತ್ತ ಲೇಖಕ ಹಾಗೂ ಅರ್ಥದಾರಿಗಳಾದ ಶ್ರೀ ರಾಧಾಕೃಷ್ಣ ಕಲ್ಚಾರ್ ಅವರು ವಿಚಾರಮಂಡನೆಯಲ್ಲಿ ತಮ್ಮ ಛಾಪನ್ನು ಮೂಡಿಸಿದರು.

ಕಲಾವಿದರು ಹೇಗೆ ಎಚ್ಚರ ವಹಿಸಬೇಕು? ಪ್ರತಿಕ್ರಿಯೆ ಹೇಗಿದ್ದರೆ ಚೆನ್ನ? ಸಮಷ್ಟಿಪ್ರಜ್ಞೆಯ ಅನಿವಾರ್ಯತೆ, ಮುಂದಿನ 25 ವರ್ಷಗಳ ಯಕ್ಷಗಾನದ ಮುನ್ನಡೆಯ ಮುನ್ನೋಟ ಎಂಬ ವಿಚಾರವಾಗಿ ಕಾಸರಗೋಡು ಸರಕಾರಿ ಕಾಲೇಜಿನ ಉಪನ್ಯಾಸಕರಾದ ಡಾ. ರತ್ನಾಕರ ಮಲ್ಲಮೂಲೆ ಅವರು ಬೆಳಕು ಚೆಲ್ಲಿದರು.

ಗೋಷ್ಠಿಯ ವಿಶೇಷ ಆಹ್ವಾನಿತರಾದ ಶ್ರೀ ಸತೀಶ ಅಡಪ್ಪ ಸಂಕಬ್ಯೆಲು, ಶ್ರೀ ಯೋಗೀಶ ರಾವ್ ಚಿಗುರುಪಾದೆ, ಶ್ರೀ ವೆಂಕಟೇಶ ನಾವಡ ಪೊಳಲಿ, ಶ್ರೀ ಧನಂಜಯ ನೆಲ್ಯಾಡಿ ಮೈಸೂರು, ಶ್ರೀ ವಿ. ರಾಘವೇಂದ್ರ ಉಡುಪ ನೇರಳೆಕಟ್ಟೆ, ಶ್ರೀ ನಿತ್ಯಾನಂದರಾವ್ ಪೇಜಾವರ, ಶ್ರೀಮತಿ ಪದ್ಮ ಆಚಾರ್ ಪುತ್ತೂರು, ಶ್ರೀ ಮಹೇಶ ಮಣಿಯಾಣಿ ದೊಡ್ಡತೋಟ, ಶ್ರೀ ದೇವಕಾನ ಶ್ರೀಕೃಷ್ಣ ಭಟ್, ಶ್ರೀ ದಿವಾಣ ದುರ್ಗಾ ಪ್ರಸಾದ್ ಕಟೀಲು, ಶ್ರೀ ದಿನೇಶ ಉಪ್ಪೂರ, ಶ್ರೀ ಸದಾಶಿವ ನಲ್ಲಿಮಾರು ಮೂಡುಬಿದರೆ, ಶ್ರೀ ವಿಷ್ಣುಶರ್ಮ ವಾಟೆಪಡುಪು, ಶ್ರೀ ರವಿ ಅಲೆವೂರಾಯ, ಶ್ರೀ ದೇವಾನಂದ ಭಟ್ ಬೆಳುವಾಯಿ, ಶ್ರೀ ಸಿತ್ಲಾ ರಂಗನಾಥರಾವ್, ಶ್ರೀ ರಾಜಾರಾಮರಾವ್ ಮೀಯಪದವು, ಶ್ರೀ ಸುಬ್ಬಪ್ಪ ಕೈಕಂಬ, ಶ್ರೀ ಭುಜಬಲಿ ಧರ್ಮಸ್ಥಳ, ಅಮ್ಮುಂಜೆ ಜನಾರ್ದನ, ಶ್ರೀ ಶ್ಯಾಮ್ ಕುಂಚಿನಡ್ಕ ಮುಂತಾದ ಗಣ್ಯರು ಗೋಷ್ಠಿಯಲ್ಲಿ ಪಾಲ್ಗೊಂಡು ಅನಿಸಿಕೆಗಳನ್ನು ಹಂಚಿಕೊಂಡರು.

ಡಾ. ಶ್ರುತಿಕೀರ್ತಿರಾಜ ಉಜಿರೆ, ಶ್ರೀ ಹರೀಶ ಬಳಂತಿಮುಗರು ಕಾರ್ಯಕ್ರಮವನ್ನು ನಿರ್ವಹಿಸಿದರು. ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಅತಿಥಿಗಳನ್ನು ಸ್ವಾಗತಿಸಿದರು. ಶ್ರೀ ವಿಜ್ಞೇಶ ಕಾರಂತ ಕೂಡ್ಲು, ಉದಯ ಕಂಬಾರು ಪ್ರಾರ್ಥನೆಯ ಮೂಲಕ ಚಾಲನೆ ಕೊಟ್ಟರು. ಪಣಂಬೂರು ವೆಂಕಟರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಇದರ ಅಧ್ಯಕ್ಷರಾದ ಶ್ರೀಮತಿ ಗೋಪಿಕಾ ಸತೀಶ ಮಯ್ಯ ಉಪಸ್ಥಿತರಿದ್ದರು. ತದನಂತರ ಪಣಂಬೂರು ವೆಂಕಟರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ‘ಗುರುದಕ್ಷಿಣೆ – ಅಸಿಕಾ ಪರಿಣಯ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು. ಯಕ್ಷಗಾನ ವಲಯದಲ್ಲಿ ಒಂದು ದಿನದ ಇದೊಂದು ಚರಿತ್ರಾರ್ಹ ಕಾರ್ಯಕ್ರಮವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
