ಧಾರವಾಡ : ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ದಿನಾಂಕ 13 ಜೂನ್ 2026ರಂದು ಮನೋಹರ ಗ್ರಂಥಮಾಲೆಯ ಅಟ್ಟದಲ್ಲಿ ಮಾತುಕತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಪದ್ಮಶ್ರೀ ಪುರಸ್ಕೃತ, ಪುಸ್ತಕಮನೆಯ ಅಂಕೆಗೌಡ “ಕನ್ನಡ ಭಾಷೆಯ ಬಗ್ಗೆ, ನಾಡು, ಸಂಸ್ಕೃತಿಯ ಕುರಿತು ಪ್ರತಿಯೊಬ್ಬ ಕನ್ನಡಿಗ ಹೆಮ್ಮೆ ಪಡಬೇಕು. ನಾಡಿನ ಜನ ತಮ್ಮ ಮುಂದಿನ ತಲೆಮಾರಿನ ಮಕ್ಕಳಿಗೆ ನಾಡಿನ ಪ್ರಾಚೀನ ಸಾಹಿತ್ಯ, ಸಂಸ್ಕೃತಿಗಳನ್ನು, ನುಡಿಯನ್ನು ಪ್ರಾಮಾಣಿಕವಾಗಿ ಕಲಿಸಬೇಕು. ಇಡೀ ಜಗತ್ತಿನ ಎಲ್ಲಾ ಜ್ಞಾನ ಒಂದೇ ಸೂರಿನಡಿ ಲಭಿಸಬೇಕೆಂಬ ಉದ್ದೇಶದಿಂದ ಕಳೆದ 54 ವರ್ಷಗಳಿಂದ ಪುಸ್ತಕ ಸಂಗ್ರಹಿಸುತ್ತಿದ್ದೇನೆ ಮತ್ತು ನನ್ನ ಜೀವಿತದ ಕೊನೆಯ ತನಕ ಈ ಕಾಯಕವನ್ನು ಅತ್ಯಂತ ನಿಷ್ಠೆ ಮತ್ತು ಶ್ರದ್ಧೆಯಿಂದ ಮಾಡುತ್ತೇನೆ. ಈವರೆಗೆ ಪಾಂಡವಪುರ ತಾಲೂಕಿನ ಹರಳಹಳ್ಳಿಯ ಪುಸ್ತಕಮನೆಯಲ್ಲಿ 20 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿದ್ದು, ಸಹಸ್ರಾರು ಜನರು ‘ಪುಸ್ತಕಮನೆ’ಗೆ ಭೇಟಿ ನೀಡಿ ಅಮೂಲ್ಯ ಪುಸ್ತಕಗಳನ್ನು ಕಣ್ತುಂಬಿಕೊಂಡಿದ್ದಾರೆ. ಅನೇಕರು ಓದಿ ಖುಷಿ ಪಟ್ಟಿದ್ದಾರೆ. ಸಂಶೋಧನಾ ವಿದ್ಯಾರ್ಥಿಗಳು, ಪುಸ್ತಕ ಪ್ರೇಮಿಗಳು, ಶಾಲಾ ಮಕ್ಕಳು ನಿರಂತರ ಭೇಟಿ ನೀಡುತ್ತಿರುವುದರಿಂದ ಪುಸ್ತಕಮನೆ ಪುಣ್ಯಕ್ಷೇತ್ರದಂತಾಗಿದೆ ಮತ್ತು ಶಾರದೆಯ ಮನೆಯಾಗಿದೆ. ನನ್ನ ಪುಸ್ತಕ ಮನೆ ನಲಂದಾ ವಿಶ್ವವಿದ್ಯಾಲಯ ಮಾದರಿ ಎನ್ನಿಸಿಕೊಳ್ಳಬೇಕು. ಮಕ್ಕಳಿಗೆ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಬೇಕು. ಇದರಿಂದ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ತಿಳಿಯಲು ಸಾಧ್ಯವಾಗುತ್ತದೆ. ನಮ್ಮ ಮಕ್ಕಳನ್ನು ನಿರ್ಲಕ್ಷ ಮಾಡಿದರೆ ಕನ್ನಡ ಭಾಷೆ ಉಳಿವು ಕಷ್ಟವಾಗುತ್ತದೆ. ಇತರ ಭಾಷೆಗಳನ್ನು ಕಲಿಯೋಣ. ಮಾತೃಭಾಷೆ ಮರೆಯದಿರೋಣ. ಪುಸ್ತಕ ರಕ್ಷಣೆ ಎಲ್ಲರ ಹೊಣೆ. ಅಮೂಲ್ಯ ಪುಸ್ತಕಗಳನ್ನು ರಕ್ಷಿಸುವ ದಿಸೆಯಲ್ಲಿ ದಾನಿಗಳ ಸಹಕಾರ ಬೇಕಿದೆ. ಪುಸ್ತಕಗಳನ್ನು ನೀಡುವವರಿದ್ದರೆ ಪಡೆಯಲು ನಾನು ಸಿದ್ಧನಿದ್ದೇನೆ. ಪುಸ್ತಕಗಳು ಬಂದರೆ ಅವುಗಳನ್ನು ಇಡಲು ವ್ಯವಸ್ಥೆ ಆಗುತ್ತದೆ. ನನಗಾಗಿ ಮತ್ತು ನನ್ನ ಕುಟುಂಬಕ್ಕೆ ಏನೂ ಬೇಡ. ಎಲ್ಲಾ ಸಹಕಾರ ಪುಸ್ತಕಗಳ ರಕ್ಷಣೆಗಾಗಿ ಬೇಕು. ನಮ್ಮ ಪುಸ್ತಕ ಮನೆಯಲ್ಲಿ 2500 ಭಗವದ್ಗೀತೆ, 3500ಕ್ಕೂ ಹೆಚ್ಚು ರಾಮಾಯಣ, 2500 ಮಹಾತ್ಮಾ ಗಾಂಧಿ ಕುರಿತ ಪುಸ್ತಕಗಳಿವೆ. 100 ವರ್ಷಕ್ಕಿಂತ ಹಳೆಯದಾದ 10,000 ಪುಸ್ತಕಗಳು ನಮ್ಮಲ್ಲಿವೆ. ಕೇವಲ ಕನ್ನಡವಷ್ಟೇ ಅಲ್ಲ, ವಿವಿಧ ಭಾಷೆಗಳ ವಿಶೇಷ ಪುಸ್ತಕಗಳು ಸಂಗ್ರಹದಲ್ಲಿವೆ. ನೀವೆಲ್ಲರೂ ಬರಬೇಕು. ಪುಸ್ತಕಗಳನ್ನು ನೋಡಬೇಕು. ನಿಮಗೆ ಸದಾ ನನ್ನಿಂದ, ನನ್ನ ಕುಟುಂಬದಿಂದ ಸದಾ ಸ್ವಾಗತ. ಸಾಕಷ್ಟು ಜನರು ನನ್ನ ಬಗ್ಗೆ ಟೀಕಿಸಿದರು. ಹುಚ್ಚ ಎಂದು ಮೂದಲಿಸಿದರು. ಆದರೂ ನಾನು ನನ್ನ ಕಾರ್ಯ ಮುಂದುವರೆಸಿದ್ದರಿಂದ ಈಗ ದೊಡ್ಡ ಗ್ರಂಥಾಲಯ ರೂಪಗೊಂಡಿದೆ. 78ರ ವಯಸ್ಸಿನಲ್ಲಿಯೂ ಪುಸ್ತಕಗಳ ಕಾಯಕದಲ್ಲಿಯೇ ಸಮಯ ಕಳೆಯುತ್ತೇನೆ. ಮುಂದಿನ ಜನ್ಮದಲ್ಲಿಯೂ ಪುಸ್ತಕ ಸಂಗ್ರಹ ಕಾಯಕವನ್ನೇ ಮಾಡಲು ಬಯಸಿದ್ದೇನೆ. ಅದು ನನ್ನ ಆಶಯ ಕೂಡ” ಎಂದು ಹೇಳಿದರು.

ಡಾ. ಹ.ವೆಂ. ಕಾಖಂಡಿಕಿ ನಿರೂಪಿಸಿದರು. ವೇದಿಕೆ ಮೇಲೆ ಸಮೀರ ಜೋಶಿ ಇದ್ದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಶ್ರೀನಿವಾಸ ವಾಡಪ್ಪಿ, ಡಾ. ಕೃಷ್ಣ ಕಟ್ಟಿ, ಹರ್ಷ ಡಂಬಳ, ಡಾ. ಶಶಿಧರ ನರೇಂದ್ರ, ರಾಘವೇಂದ್ರ ತಿಕೋಟ, ವಿಜಯ ಕುಲಕರ್ಣಿ, ಡಾ. ಶರಬೇಂದ್ರಸ್ವಾಮಿ, ವೆಂಕಟೇಶ, ಅರವಿಂದ ಕುಲಕರ್ಣಿ, ಶಿವು ಹಿರೇಮಠ, ರವೀಂದ್ರ, ವಿಷಯಾ ಜೇವೂರ, ಶಿಲ್ಪಾ ಪಾಂಡೆ ಮೊದಲಾದವರು ಉಪಸ್ಥಿತರಿದ್ದರು.
