ಕೋಟ : ಕಳೆದ 54 ವರ್ಷಗಳಿಂದ ಉಚಿತ ಯಕ್ಷಗಾನ ತರಬೇತಿ ತರಗತಿಯನ್ನು ನಡೆಸುತ್ತಾ ಬಂದಿರುವ ಸಂಸ್ಥೆ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ-ಐರೋಡಿ, ಸಂಸ್ಥೆಯ ಈ ವರ್ಷದ ಯಕ್ಷಗಾನ ತರಬೇತಿ ತರಗತಿಯು ದಿನಾಂಕ 20 ಜೂನ್ 2026ರಂದು ಶನಿವಾರ ಮಧ್ಯಾಹ್ನ ಗಂಟೆ 4-00ಕ್ಕೆ ಉಡುಪಿ ಜಿಲ್ಲೆಯ ಸಾಲಿಗ್ರಾಮದ ಗುಂಡ್ಮಿಯಲ್ಲಿರುವ ಸದಾನಂದ ರಂಗ ಮಂಟಪದಲ್ಲಿ ಉದ್ಘಾಟನೆಗೊಳ್ಳಲಿದೆ.
ಭಾಗವತಿಗೆ, ಮದ್ದಲೆ, ಚಂಡೆ ಮತ್ತು ಹೆಜ್ಜೆ ತರಗತಿಯು ಪ್ರಾರಂಭವಾಗಲಿದ್ದು, ಭಾಗವತಿಗೆಯನ್ನು ಪ್ರಾಚಾರ್ಯ ಸದಾನಂದ ಐತಾಳ, ಮದ್ದಲೆಯನ್ನು ಗಣೇಶ ಶೆಣೈ, ಕೇಶವ ಆಚಾರ್ ಚಂಡೆಯನ್ನು ಹಾಗೂ ಯಕ್ಷಗಾನ ಹೆಜ್ಜೆ ತರಗತಿಯನ್ನು ರಾಘವೇಂದ್ರ ಮಟಪಾಡಿಯವರು ನೀಡಲಿದ್ದಾರೆ. ‘ಕಲಾಕೇಂದ್ರವು ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಮಾನ್ಯತೆಯನ್ನು ಪಡೆದಿದ್ದು, ವಿಶ್ವವಿದ್ಯಾನಿಲಯದ ನಿಯಮದಂತೆ ಎಕ್ಯಾಡೆಮಿಕಲ್ ಶಿಕ್ಷಣದೊಂದಿಗೆ ಒಂದು ವರ್ಷದ ಸರ್ಟಿಫಿಕೇಟ್ ಕೋರ್ಸ್ ಮತ್ತು ಎರಡು ವರ್ಷ ಶಿಕ್ಷಣದ ಡಿಪ್ಲಮೋ ಕೋರ್ಸನ ಮಾನ್ಯತೆಯ ಸರ್ಟಿಫಿಕೇಟ್ ನೀಡಲಾಗುವುದು. ಬೆಳೆಯುತ್ತಿರುವ ಯಕ್ಷಗಾನ ಕ್ಷೇತ್ರದಲ್ಲಿ ಈ ಪದವಿಗಳು ಕಲಾವಿದರಿಗೆ ಅತೀ ಅಗತ್ಯವಾಗಲಿದ್ದು ಕಲಾವಿದರ ಕಲಾ ಗುಣಮಟ್ಟ ಹೆಚ್ಚಲಿದ್ದು ಒಂದಿಗೆ ಸರಕಾರದಿಂದ ಕಲಾವಿದರಿಗೆ ನೀಡಲ್ಪಡುವ ಸವಲತ್ತುಗಳಿಗೆ ಇದು ಸಹಕಾರಿಯಾಗಲಿದೆಯೆಂದು ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ್ ತಿಳಿಸಿದ್ದು, ಈ ಅವಕಾಶದ ಸದುಪಯೋಗ ಪಡೆಯಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9880605610 ಸಂಖ್ಯೆಯನ್ನು ಸಂಪರ್ಕಿಸಿರಿ.

