ಭರತನಾಟ್ಯದ ಶ್ರೀಮಂತ ಪರಂಪರೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಪರಿಚಯಿಸುತ್ತಿರುವ, ನೃತ್ಯರಂಗದಲ್ಲಿ ಸುಮಾರು ಮೂರು ದಶಕಗಳ ಅನುಭವ ಹೊಂದಿರುವ ದೂರದರ್ಶನದ ‘ಬಿ ಹೈ ಗ್ರೇಡ್’ ನೃತ್ಯಕಲಾವಿದೆಯಾಗಿರುವ ನಾಟ್ಯಾಚಾರ್ಯ ವಿದುಷಿ ರಕ್ಷಿತಾ ಪ್ರಸಾದ್ ‘ಕಲಾವಸಂತಂ ಸೆಂಟರ್ ಫಾರ್ ಆರ್ಟ್ಸ್’ ಎಂಬ ತಮ್ಮ ನೃತ್ಯ ಸಂಸ್ಥೆಯ ಮೂಲಕ ನೂರಾರು ನೃತ್ಯಾಕಾಂಕ್ಷಿಗಳಿಗೆ ಬದ್ಧತೆಯಿಂದ ನೃತ್ಯಶಿಕ್ಷಣ ನೀಡುತ್ತಿರುವ ಉತ್ತಮ ಗುರು. ಇವರ ನುರಿತ ಗರಡಿಯಲ್ಲಿ ತಯಾರಾಗುತ್ತಿರುವ ನೃತ್ಯಶಿಲ್ಪ ಕುಮಾರಿ ಮಾನಸ ರಾವ್ ಬಹುಮುಖ ಪ್ರತಿಭೆ. ಬಾಲಪ್ರತಿಭೆಯಾದ ಮಾನಸ, ಸಂಗೀತ, ಕೀಬೋರ್ಡ್ ಮತ್ತು ಕೊಳಲುವಾದನದೊಡನೆ ಭರತನಾಟ್ಯವನ್ನೂ ಅಭ್ಯಾಸಮಾಡುತ್ತಿರುವ ಬಹುಮುಖ ಆಸಕ್ತಿಯ ಪ್ರತಿಭಾವಂತೆ.

ಮೂಲತಃ ಬೆಂಗಳೂರಿನವರಾಗಿದ್ದು, ಪ್ರಸ್ತುತ ಅಮೇರಿಕೆಯಲ್ಲಿ ನೆಲೆಸಿರುವ ಶ್ರೀ ಸುಧೀಂದ್ರ ಮತ್ತು ಜಯಶ್ರೀ ದಂಪತಿಗಳ ಮಗಳಾದ ಮಾನಸ ತನ್ನ 8ನೆಯ ವಯಸ್ಸಿನಲ್ಲಿ ಗ್ರೇಟರ್ ಲಾಸ್ ಏಂಜಲೀಸ್ ನಲ್ಲಿ ನೃತ್ಯ ಕಲಿಕೆ ಆರಂಭಿಸಿ, ನಂತರ ರಕ್ಷಿತಾ ಅವರಲ್ಲಿ ಹೆಚ್ಚಿನ ನೃತ್ಯಾಭ್ಯಾಸ ಮಾಡುತ್ತಿದ್ದಾಳೆ. ಕಳೆದ 8 ವರ್ಷಗಳಿಂದ ನೃತ್ಯ ಕಲಿಯುತ್ತಿರುವ ಇವಳು, ವಿದೇಶದಲ್ಲಿ ಅನೇಕ ಕಡೆ ನೃತ್ಯಪ್ರದರ್ಶನಗಳನ್ನು ನೀಡಿದ್ದು, ಓದಿನಲ್ಲೂ ಜಾಣೆಯಾಗಿರುವ ಮಾನಸ, ಪ್ರಸ್ತುತ ನ್ಯೂರೋ ಸೈನ್ಸ್ ನಲ್ಲಿ ಎರಡನೆಯ ವರ್ಷದ ಆನರ್ಸ್ ವಿದ್ಯಾರ್ಥಿನಿಯಾಗಿದ್ದಾಳೆ. ಇದೀಗ ಮಾನಸ, ತನ್ನ ನೃತ್ಯಪ್ರತಿಭೆಯ ಕಲಾಪ್ರದರ್ಶನ ನೀಡಲು ದಿನಾಂಕ 28 ಆಗಸ್ಟ್ 2026ರ ಶುಕ್ರವಾರ ಸಂಜೆ ಗಂಟೆ 5-30ಕ್ಕೆ ಬೆಂಗಳೂರಿನ ಗಾಯನ ಸಮಾಜದಲ್ಲಿ ವಿದ್ಯುಕ್ತವಾಗಿ ರಂಗಪ್ರವೇಶವನ್ನು ನೆರವೇರಿಸಿಕೊಳ್ಳಲಿದ್ದಾಳೆ. ಈಕೆಯ ಕಣ್ಮನ ತುಂಬುವ ನೃತ್ಯವಲ್ಲರಿಯನ್ನು ವೀಕ್ಷಿಸಲು ಎಲ್ಲಾ ಕಲಾ ರಸಿಕರಿಗೂ ಆದರದ ಸ್ವಾಗತ.

‘ಬೆಳೆಯುವ ಪೈರು ಮೊಳಕೆಯಲ್ಲೇ’ – ಎನ್ನುವಂತೆ ಮಾನಸ ಬಾಲಪ್ರತಿಭೆ. ಅಮೇರಿಕದಲ್ಲಿ ಹುಟ್ಟಿ ಬೆಳೆದ ಅವಳ ಕಲಾಯಾನವು ಕೇವಲ ಐದು ವರ್ಷದ ವಯಸ್ಸಿನಲ್ಲಿ ಚಿಲ್ಡ್ರನ್ಸ್ ಮ್ಯೂಸಿಕ್ ಅಕಾಡೆಮಿಯಲ್ಲಿ ಆರಂಭವಾಯಿತು. ಆರನೇ ವಯಸ್ಸಿಗೇ ಮೂರು ವರ್ಷಗಳ ಕಾಲ ಕರ್ನಾಟಕ ಶಾಸ್ತ್ರೀಯ ಗಾಯನದಲ್ಲಿ ತರಬೇತಿ ಪಡೆದ ವೈಶಿಷ್ಟ್ಯ ಅವಳದು. ಸ್ವಲ್ಪಕಾಲದಲ್ಲೇ ಅವಳ ಆಸಕ್ತಿ ವಾದನಕ್ಷೇತ್ರಕ್ಕೂ ವಿಸ್ತರಿಸಿ, ಸ್ವಯಂಪ್ರೇರಣೆಯಿಂದ ಕೀಬೋರ್ಡ್ ನುಡಿಸುವುದನ್ನು ಕಲಿತು ಸದರ್ನ್ ಕ್ಯಾಲಿಫೋರ್ನಿಯಾದ ಕರ್ನಾಟಕ ಕಲ್ಚರಲ್ ಅಸೋಸಿಯೇಷನ್ನಲ್ಲಿ ತನ್ನ ಪ್ರತಿಭೆ ಪ್ರದರ್ಶಿಸುವ ಅವಕಾಶ ಪಡೆದಳು. ಓದಿನಲ್ಲೂ ಚುರುಕಾಗಿದ್ದ ಅವಳು, ಶಾಲಾ ದಿನಗಳಲ್ಲಿಯೂ ತನ್ನ ವಾದ್ಯ ಸಂಗೀತದ ಆಸಕ್ತಿ ಮುಂದುವರಿಸಿದಳು.

ಜೊತೆಗೆ ತನ್ನ ಮಿಡ್ಲ್ ಸ್ಕೂಲ್ ಬ್ಯಾಂಡ್ಗಾಗಿ ಫ್ಲೂಟ್ ನುಡಿಸಲು ಆರಂಭಿಸಿದ ನಂತರ ಪ್ರೌಢಶಾಲೆಯ ಆರ್ಕೆಸ್ಟ್ರಾ ಬ್ಯಾಂಡ್ನಲ್ಲಿಯೂ ಫ್ಲೂಟ್ ವಾದನವನ್ನು ಮುಂದುವರಿಸಿದ್ದು ಅವಳ ಅಗ್ಗಳಿಕೆ. ಅವಳ ಪ್ರಮುಖ ಕಲಾಭಿರುಚಿಗೆ ನಿಜವಾದ ನೆಲೆ ದೊರೆತದ್ದು ಭಾರತೀಯ ಶಾಸ್ತ್ರೀಯ ನೃತ್ಯದಲ್ಲಿ. ಎಂಟನೇ ವಯಸ್ಸಿನಲ್ಲಿ ಭರತನಾಟ್ಯಕ್ಕೆ ಪರಿಚಯವಾದ ಮಾನಸಾ, ಗ್ರೇಟರ್ ಲಾಸ್ ಏಂಜಲೀಸ್ ಪ್ರದೇಶದ ಖ್ಯಾತ ನೃತ್ಯಗುರುವಿನ ಮಾರ್ಗದರ್ಶನದಲ್ಲಿ ಎಂಟು ವರ್ಷಗಳ ಕಾಲ ಭರತನಾಟ್ಯದ ಮೂಲಭೂತ ತಂತ್ರಗಳನ್ನು ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿದಳು. ನಂತರ ಹೆಚ್ಚಿನ ಕಲಿಕೆಗಾಗಿ, ‘ಕಲಾಕ್ಷಿತಿ’ ಖ್ಯಾತಿಯ ಪ್ರೊ. ಎಂ.ಆರ್. ಕೃಷ್ಣಮೂರ್ತಿ ಇವರ ಗರಡಿಯಲ್ಲಿ ನುರಿತ ನೃತ್ಯ ಕಲಾವಿದೆಯಾಗಿ ಸಾಧನೆ ಮಾಡಿರುವ ವಿದುಷಿ ರಕ್ಷಿತಾ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಉನ್ನತ ಮಟ್ಟದ ಕಲಿಕೆ ಮುಂದುವರೆಸಿದಳು. ಕಳೆದ ನಾಲ್ಕು ವರ್ಷಗಳಿಂದ ಅವರಲ್ಲಿ ಭರತನಾಟ್ಯದ ಸೂಕ್ಷ್ಮವಾದ ಉನ್ನತ ಮಟ್ಟದ ಅಡವುಗಳು, ಸಂಕೀರ್ಣ ಪಾದಚಲನೆಗಳು ಹಾಗೂ ಅಭಿನಯದ ಆಳ ವಿಸ್ತಾರಗಳನ್ನು ಕಲಿಯುತ್ತಿದ್ದಾಳೆ.
ಹೀಗಾಗಿ ಮಾನಸ, ಬಾಲ್ಯದಿಂದಲೇ ಸಂಗೀತ, ನೃತ್ಯ ಮತ್ತು ಶೈಕ್ಷಣಿಕ ಕ್ಷೇತ್ರಗಳೊಂದಿಗೆ ಅವಿನಾಭಾವ ಸಂಬಂಧ ಬೆಳೆಸಿಕೊಂಡಿದ್ದಾಳೆ. ಈಗಾಗಲೇ ಲಾಸ್ ಏಂಜಲೀಸ್ ಪ್ರದೇಶದ ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ಇವಳು, ನೃತ್ಯ ಪ್ರದರ್ಶನ ನೀಡಿದ್ದು, ಅವುಗಳಲ್ಲಿ ನ್ಯೂಬರಿ ಪಾರ್ಕ್ ಹಿಂದೂ ಟೆಂಪಲ್ ಮತ್ತು ಬ್ರಿಯಾ ಭಾರತ್ ಸೇವಾಶ್ರಮ ಸಂಘ ಪ್ರಮುಖವಾಗಿವೆ. ಪ್ರಸ್ತುತ ಎರಡನೆಯ ವರ್ಷದ (ನ್ಯೂರೋ ಸೈನ್ಸ್) ಆನರ್ಸ್ ನಲ್ಲಿ ಓದುತ್ತಿದ್ದು ಭವಿಷ್ಯದಲ್ಲಿ ನ್ಯೂರೋಸರ್ಜನ್ ಆಗುವ ಗುರಿಯನ್ನು ಹೊಂದಿದ್ದಾಳೆ ಮಾನಸ.
ಸ್ಪರ್ಧಾತ್ಮಕ ಶೈಕ್ಷಣಿಕ ಅಂಕಗಳನ್ನು ಕಾಯ್ದುಕೊಂಡಿರುವುದರ ಜೊತೆಗೆ ವೈಜ್ಞಾನಿಕ ಸಂಶೋಧನಾ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಅವಳ ವಿಶೇಷತೆ. ಸಮಾಜ ಸೇವೆಯಲ್ಲಿ ಅತ್ಯಂತ ಅಸಕಿಯುಳ್ಳ ಇವಳು, ಕರುಣೆ ಹಾಗೂ ಅಪಾರ ಶಿಸ್ತು, ಮಾನವೀಯ ಗುಣಗಳನ್ನು ಹೊಂದಿರುವ ಇವಳಿಗೆ, ನೃತ್ಯರಂಗದಲ್ಲಿ ಸಾಧನೆ ಮಾಡುವ ಕನಸಿದೆ.


*** ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
