ಕುದ್ರೋಳಿ : ಅಖಿಲ ಭಾರತ ಬಿಲ್ಲವರ ಯೂನಿಯನ್ ಮತ್ತು ನಾರಾಯಣ ಗುರು ವಿದ್ಯಾಸಂಸ್ಥೆಗಳ ವತಿಯಿಂದ ಬೃಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಆಚರಣೆ ಪ್ರಯುಕ್ತ ಕುದ್ರೋಳಿಯ ನಾರಾಯಣ ಗುರು ವಿದ್ಯಾಸಂಸ್ಥೆಯಲ್ಲಿ ದಿನಾಂಕ 23 ಆಗಸ್ಟ್ 2026ರಂದು ಆಯೋಜಿಸಲಾದ ‘ಗುರು ಚಿತ್ತಾರ 2026’ ಚಿತ್ರಕಲಾ ಸ್ಪರ್ಧೆ ನಡೆಯಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯ ಸರಕಾರದ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿಯವರು ಮಾತನಾಡಿ “ನಾರಾಯಣ ಗುರುಗಳ ಸಂದೇಶಗಳು ಎಲ್ಲರಿಗೂ ಗೊತ್ತಿದ್ದರೂ ಆಗಾಗ್ಗೆ ನೆನಪಿಸಿಕೊಳ್ಳಬೇಕಾಗಿದೆ. ಗುರುಗಳ ಚಿತ್ರ ಬಿಡಿಸಿದಾಗ ಅವರ ನೆನವು ಮನಸ್ಸಿನಲ್ಲಿ ನಿರಂತರವಾಗಿ ಬಹಳ ಕಾಲ ಉಳಿಯುತ್ತದೆ. ಹಾಗಾಗಿ ಮಕ್ಕಳಲ್ಲಿ ಗುರುಗಳ ಚಿತ್ರ ಬಿಡಿಸಿರುವ ಸ್ಪರ್ಧೆ ಆಯೋಜಿಸುವುದು ಶ್ಲಾಘನೀಯ. ಆಗಿನ ಕಾಲದಲ್ಲಿ ಸಮಾಜದಲ್ಲಿ ಬೇರೂರಿದ್ದ ಸಾಮಾಜಿಕ ಅಸಮಾನತೆ, ಅಸ್ಪೃಶ್ಯತೆ, ಕಂದಾಚಾರ, ಮೂಢನಂಬಿಕೆ ಮೊದಲಾದವುಗಳನ್ನು ಹೋಗಲಾಡಿಸಲು ಗುರುಗಳ ಸಂದೇಶ ಕಾರಣವಾಯಿತು. ಮಕ್ಕಳ ಮೂಲಕ ಮುಂದಿನ ಜನಾಂಗಕ್ಕೂ ಗುರುಗಳ ಸಂದೇಶವನ್ನು ಕಲಿಸುವ ಕೆಲಸವಾಗಬೇಕು” ಎಂದು ಹೇಳಿದರು.

ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, “ಗುರುಗಳು ಒಂದು ಜಾತಿಗೆ ಸೀಮಿತರಾದವರಲ್ಲ ದಾರ್ಶನಿಕರು, ಸಮಾಜ ಸುಧಾರಕರನ್ನು ಒಂದು ಜಾತಿ ಸಮುದಾಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಹಿಂದುಳಿದ ವರ್ಗದವರಿಗೆ ಶಕ್ತಿ ತುಂಬಿದವರು ಗುರುಗಳು. ಅವರ ನ್ಯಾಯಕ್ಕಾಗಿ ಹೋರಾಟ ನಡೆಸಿ ಯಶಸ್ವಿಯಾದವರು, ಅವರ ಸಂದೇಶಗಳು ಸಾರ್ವಕಾಲಿಕ” ಎಂದರು.
ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನಾರಾಯಣ ಗುರು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ನವೀನ್ ಚಂದ್ರ ಡಿ. ಸುವರ್ಣ ಮಾತನಾಡಿ, “ಗುರುಗಳು ತಮ್ಮ ಸಂದೇಶ ಮೂಲಕ ಹಿಂದುಳಿದ ವರ್ಗಕ್ಕೆ ಹೊಸ ಚೈತನ್ಯ ನೀಡಿದ್ದಾರೆ. ಅಭಿವೃದ್ಧಿ ಪಥದಲ್ಲಿ ಸಾಗಲು ಗುರು ಸಂದೇಶವೇ ದಾರಿ ದೀಪವಾಯಿತು. ಮುಂದಿನ ದಿನಗಳಲ್ಲೂ ಸಾಮಾಜಿಕ ನ್ಯಾಯ, ಸಾಮರಸ್ಯದೊಂದಿಗೆ ಜೀವನ ಸಾಗಿಸಲು ಗುರು ಸಂದೇಶವೇ ಕಾರಣವಾಗಲಿದೆ” ಎಂದರು.

ಅಖಿಲ ಭಾರತ ಬಿಲ್ಲವರ ಮಹಿಳಾ ಸಂಘದ ಅಧ್ಯಕ್ಷೆ ಸುಮಲತಾ ಎನ್. ಸುವರ್ಣ, ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ರೇಣುಕಾ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಜೀವನ್ ತೊಕ್ಕೊಟ್ಟು ಪ್ರಸ್ತಾವಿಸಿ, ಸ್ವಾಗತಿಸಿ, ನಾರಾಯಣಗುರು ಪದವಿ ಕಾಲೇಜು ಪ್ರಾಂಶುಪಾಲೆ ಸೌಮ್ಯಾ ಶೆಟ್ಟಿ ವಂದಿಸಿ, ಉಪನ್ಯಾಸಕ ಕೇಶವ ಬಂಗೇರ ನಿರೂಪಿಸಿದರು. ಚಿತ್ರಕಲಾ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
